ಬ್ರೇಕಿಂಗ್ ನ್ಯೂಸ್
16-11-22 10:09 pm Giridhar Shetty, Mangaluru ಕರಾವಳಿ
ಮಂಗಳೂರು, ನ.16: ಮಂಗಳೂರು- ಮೂಡುಬಿದ್ರೆ- ಸಾಣೂರು (ರಾಷ್ಟ್ರೀಯ ಹೆದ್ದಾರಿ 169) ಚತುಷ್ಪಥ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೀತಿ ನಿಮಯಗಳನ್ನೇ ಗಾಳಿಗೆ ತೂರಿ ಖಾಸಗಿ ವ್ಯಕ್ತಿಗಳಿಗೆ ಬೇಕಾದಂತೆ ರೋಡ್ ಮ್ಯಾಪನ್ನು ಬದಲಾವಣೆ ಮಾಡಲಾಗಿದೆ. ಯಾರದ್ದೋ ಖಾಸಗಿ ವ್ಯಕ್ತಿಗಳ ದರ್ಬಾರಿಗೆ ಮಣಿದು ರಾಜಕಾರಣಿಗಳು ರಾಷ್ಟ್ರೀಯ ಹೆದ್ದಾರಿಯನ್ನೇ ಐದು ಕಿಮೀ ಸುತ್ತುಬಳಸಿ ರಸ್ತೆ ನಿರ್ಮಾಣಕ್ಕೆ ಮಾರ್ಗಸೂಚಿ ರೆಡಿ ಮಾಡಿದ್ದಾರೆ.
ಮಂಗಳೂರು- ಮೂಡುಬಿದ್ರೆ ಹೆದ್ದಾರಿ ಮೊದಲಿನಿಂದಲೂ ಹತ್ತಾರು ತಿರುವುಗಳಿಂದ ಕೂಡಿದ ರಸ್ತೆ. ಆದರೆ, ಚತುಷ್ಪಥ ಹೆದ್ದಾರಿ ನಿರ್ಮಾಣಗೊಳ್ಳುವ ವೇಳೆ ಆ ತಿರುವುಗಳನ್ನು ಸರಿಪಡಿಸಿ ನೇರ ಮಾಡಬೇಕಿತ್ತು. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಾಜಕಾರಣಿಗಳು ಮತ್ತು ಖಾಸಗಿ ವ್ಯಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲಸ ಮಾಡಿದ್ದಾರೆ. ವಾಮಂಜೂರು ಕಳೆದ ಬಳಿಕ ಹೆದ್ದಾರಿಯು ಹಾಲಿ ಇರುವ ಗುರುಪುರ ಸೇತುವೆ ಮೂಲಕ ಸಾಗುವ ಬದಲು ಸುತ್ತುಬಳಸಿ, ಅಲ್ಲಿಂದ ನಾಲ್ಕು ಕಿಮೀ ದೂರದ ಅಡ್ಡೂರಿಗೆ ತೆರಳುವಂತೆ ಮಾಡಲಾಗಿದೆ. ಇದಕ್ಕಾಗಿ ಹಾಲಿ ಇರುವ ಗುರುಪುರ ಸೇತುವೆಯನ್ನೇ ನಿರ್ಲಜ್ಜವಾಗಿ ನಿಷ್ಪ್ರಯೋಜಕ ಮಾಡಲಾಗಿದೆ.
ಅಡ್ಡೂರಿನಲ್ಲಿ ಖಾಸಗಿ ಕುಳಗಳ 150 ಎಕ್ರೆ ಭೂಮಿ
ಹೊಸ ಮಾರ್ಗಸೂಚಿಯಲ್ಲಿ ಫಲ್ಗುಣಿ ನದಿಗೆ ಹೊಸತಾಗಿ ಸೇತುವೆಯನ್ನು ಮಾಡಬೇಕಾಗುತ್ತದೆ. ಜನರ ದುಡ್ಡನ್ನು ಬೇಕಾಬಿಟ್ಟಿಯಾಗಿ ಸುರಿದು ಇನ್ಯಾರಿಗೋ ಒಳಿತಾಗುವಂತೆ ಹೆದ್ದಾರಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಮಾಹಿತಿ ಪ್ರಕಾರ, ಅಡ್ಡೂರಿನಲ್ಲಿ 150 ಎಕ್ರೆ ಭೂಮಿಯನ್ನು ನಾಲ್ಕು ಮಂದಿ ಖಾಸಗಿ ವ್ಯಕ್ತಿಗಳು ಖರೀದಿಸಿಟ್ಟಿದ್ದಾರೆ ಎನ್ನಲಾಗುತ್ತಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿಗೆ ನೋಟಿಫಿಕೇಶನ್ ಆಗುವ ಮೊದಲೇ ಕನ್ವರ್ಷನ್ ಮಾಡಿದ್ದಾರೆ. ಇದೀಗ ಗುರುಪುರದಲ್ಲಿ ಸಾಗುವ ರಸ್ತೆಯನ್ನು ತಿರುವೈಲ್ ಬಳಿಯಿಂದ ತಿರುಗಿಸಿ ಅಡ್ಡೂರು, ಪೊಳಲಿಗೆ ಒಯ್ದು ಖಾಸಗಿ ವ್ಯಕ್ತಿಗಳ ಹತ್ತು ಎಕ್ರೆ ಜಾಗದಲ್ಲಿ ಸಾಗುವಂತೆ ಮಾಡಿದ್ದಾರೆ. ಅಲ್ಲಿಂದ ರಸ್ತೆಯು ಗುರುಪುರ ಪೇಟೆಗೆ ಬಾರದೆ ನೇರವಾಗಿ ಪೊಳಲಿ ದ್ವಾರದ ಮೂಲಕ ಕೈಕಂಬ ಸೇರಲಿದೆ. ಆಮೂಲಕ ಕನ್ವರ್ಷನ್ ಆಗಿರುವ ಖಾಸಗಿ ವ್ಯಕ್ತಿಗಳ ಭೂಮಿಗೆ ಚಿನ್ನದ ದರ ಬರುವಂತೆ ಮಾಡಿದ್ದು ಒಂದೆಡೆಯಾದರೆ, ಆಸುಪಾಸಿನಲ್ಲಿರುವ ಅದೇ ವ್ಯಕ್ತಿಗಳ ಭೂಮಿಗೆ ಇನ್ನಿಲ್ಲದ ದರ ಬರುವಂತಾಗಿದೆ. ಆಮೂಲಕ ಪ್ರಭಾವಿ ವ್ಯಕ್ತಿಗಳು ರಾಷ್ಟ್ರೀಯ ಹೆದ್ದಾರಿಯನ್ನೇ ತಮ್ಮ ಜಾಗದತ್ತ ಸೆಳೆದುಕೊಂಡು ಭಾರೀ ಭ್ರಷ್ಟಾಚಾರಕ್ಕೆ ವೇದಿಕೆ ಒದಗಿಸಿದ್ದಾರೆ. ಹತ್ತು ಎಕರೆ ಜಾಗ ಹೆದ್ದಾರಿಗೆ ಹೋದಲ್ಲಿ ಇಡೀ 150 ಎಕ್ರೆ ಭೂಮಿಯ ಬೆಲೆ ಅದರಲ್ಲೇ ಬರುತ್ತದೆ ಎನ್ನುವ ಲೆಕ್ಕಾಚಾರ ಇದರ ಹಿಂದಿದೆ.
ಖಾಸಗಿ ವ್ಯಕ್ತಿಗಳ ಪರ ಲಾಬಿ, ಹೆದ್ದಾರಿಗೇ ತಿರುವು
ನಾಲ್ಕು ಖಾಸಗಿ ವ್ಯಕ್ತಿಗಳು ಸೇರಿಕೊಂಡು ಹತ್ತು ವರ್ಷಗಳ ಹಿಂದೆಯೇ ಕಂಪನಿಯೊಂದನ್ನು ಮಾಡಿಕೊಂಡಿದ್ದು, ಆ ಕಂಪನಿ ಹೆಸರಲ್ಲಿ ಅಲ್ಲಿನ ಭೂಮಿ ಇದೆ ಎನ್ನಲಾಗುತ್ತಿದೆ. ಅದರಲ್ಲಿ ಒಬ್ಬರು ಬಂಟ ಸಮುದಾಯದ ವ್ಯಕ್ತಿಯಿದ್ದರೆ, ಮೂವರು ಮುಸ್ಲಿಂ ವ್ಯಕ್ತಿಗಳು ಇದ್ದಾರೆ. ಅದರಲ್ಲೊಬ್ಬರು ಮಂಗಳೂರಿನಲ್ಲಿ ಪ್ರಭಾವಿ ಉದ್ಯಮ ಸಮೂಹವನ್ನು ಹೊಂದಿದ್ದಾರೆ. ರಾಷ್ಟ್ರೀಯ ಪಕ್ಷದ ಕರಾವಳಿಯ ಪ್ರಭಾವಿ ಜನಪ್ರತಿನಿಧಿಯೊಬ್ಬರನ್ನು ಮುಂದಿಟ್ಟು ಸಾರ್ವಜನಿಕರ ವಿರೋಧ ಲೆಕ್ಕಿಸದೆ ರಾಷ್ಟ್ರೀಯ ಹೆದ್ದಾರಿಯನ್ನು ಐದು ಕಿಮೀ ಒಳಕ್ಕೆ ತಿರುಗಿಸಲಾಗಿದೆ ಅನ್ನುವ ಆರೋಪವನ್ನು ಜನರು ಮಾಡುತ್ತಿದ್ದಾರೆ. ಇದರ ಬ್ರೋಕರ್ ಕೆಲಸವನ್ನು ಪ್ರಭಾವಿ ಜನಪ್ರತಿನಿಧಿಗೆ ಖಾಸಾ ದೋಸ್ತ್ ಆಗಿರುವ ಗುರುಪುರದ ವ್ಯಕ್ತಿಯೊಬ್ಬರು ಮಾಡಿದ್ದಾರೆ ಎನ್ನುವ ಮಾಹಿತಿಗಳಿವೆ. ರಾಷ್ಟ್ರೀಯ ಹೆದ್ದಾರಿಯನ್ನು ನಿಯಮ ಬಾಹಿರವಾಗಿ ತಿರುಗಿಸಿದ್ದಕ್ಕೆ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಮೊತ್ತವನ್ನೂ ಪಡೆದಿರುವ ಸಾಧ್ಯತೆಯಿದೆ. ಅಲ್ಲದೆ, ಆ ಭಾಗದಲ್ಲಿ ಖುದ್ದು ಆ ಜನಪ್ರತಿನಿಧಿಯೇ ಬೇನಾಮಿ ಹೆಸರಲ್ಲಿ ಜಾಗ ತೆಗೆದಿಟ್ಟಿದ್ದಾರೆಂಬ ಮಾತುಗಳೂ ಕೇಳಿಬರುತ್ತಿದೆ.
ಗುರುಪುರ ಸೇತುವೆಯೇ ನಿಷ್ಪ್ರಯೋಜಕ !
ಎರಡು ವರ್ಷಗಳ ಹಿಂದಷ್ಟೇ ಗುರುಪುರದಲ್ಲಿ ಬ್ರಿಟಿಷರ ಕಾಲದ ಸೇತುವೆ ಇನ್ನೇನು ಕುಸಿದು ಬೀಳುತ್ತೆ ಎನ್ನುವಾಗ ತರಾತುರಿಯಲ್ಲಿ ಹೊಸ ಸೇತುವೆ ನಿರ್ಮಿಸಲಾಗಿತ್ತು. ಒಂದೇ ವರ್ಷದಲ್ಲಿ ಸೇತುವೆ ಕಾಮಗಾರಿ ನಡೆಸಿದ್ದಕ್ಕಾಗಿ ಜನಪ್ರತಿನಿಧಿಯ ಹಿಂದೆ ಮುಂದೆ ಓಡಾಡುವ ಬೆಂಬಲಿಗರು, ಅದು ನಮ್ಮಣ್ಣನ ಸಾಧನೆಯೆಂದೇ ಹೇಳಿಕೊಂಡಿದ್ದರು. ಆದರೆ ಇದೀಗ ಹೊಸ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ ಸೇತುವೆಯನ್ನೇ ನಿಷ್ಪ್ರಯೋಜಕ ಎನ್ನುವ ರೀತಿ ತೋರಿಸಲಾಗಿದೆ. ಆ ಸೇತುವೆಗೆ ಭರಿಸಿದ ಜನರ ದುಡ್ಡು, ಐದು ಕಿಮೀ ಹೆಚ್ಚುವರಿಯಾಗಿ ನಿರ್ಮಾಣಗೊಳ್ಳುವ ರಸ್ತೆಯ ದುಡ್ಡನ್ನು ಜನಪ್ರತಿನಿಧಿ ಮತ್ತು ಹೆದ್ದಾರಿ ಅಧಿಕಾರಿಗಳು ಭರಿಸುತ್ತಾರೆಯೇ ಎಂಬ ಪ್ರಶ್ನೆಯನ್ನು ಜನರು ಮುಂದಿಟ್ಟಿದ್ದಾರೆ. ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ಹತ್ತಾರು ವರ್ಷಗಳ ಕಾಲ ಟೋಲ್ ಗೇಟ್ ಮಾಡುವ ಮೂಲಕ ಜನರಿಂದಲೇ ಹಣವನ್ನು ಲೂಟಿ ಮಾಡಲಾಗುತ್ತದೆ. ಕೆಲವರ ಭ್ರಷ್ಟಾಚಾರಕ್ಕೆ ಇಡೀ ಹೆದ್ದಾರಿಯೇ ಬಲಿಯಾಗ ಬೇಕಾದ ಸ್ಥಿತಿ ಎದುರಾಗಿದೆ.
ಜನರ ಕಣ್ಣಿಗೆ ಮಣ್ಣೆರಚಲು ಕಾಮಗಾರಿ ಟೆಂಡರ್
ಈಗಾಗಲೇ ಮಂಗಳೂರನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ಬಗ್ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಅವೈಜ್ಞಾನಿಕ ಫ್ಲೈ ಓವರ್ ಗಳು, ಅದಕ್ಕಾಗಿ ಜನರು ಶುಲ್ಕ ಕಟ್ಟಬೇಕಾದ ದುಸ್ಥಿತಿ ಇದೆ. ಇದೀಗ ಮಂಗಳೂರು- ಮೂಡುಬಿದ್ರೆ– ಸಾಣೂರು ಹೆದ್ದಾರಿ ನಿರ್ಮಾಣಕ್ಕಾಗಿ 2-3 ಬಾರಿ ನಕ್ಷೆ ಬದಲಾಯಿಸಿ, ಕೊನೆಗೆ ಖಾಸಗಿ ವ್ಯಕ್ತಿಗಳ ದರ್ಬಾರಿಗೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಇದರ ಮಧ್ಯೆಯೇ, ಹೆದ್ದಾರಿ ಕಾಮಗಾರಿಯನ್ನು ಮುಂಬೈ ಮೂಲದ ಡಿಬಿಎಲ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಾಗಿ ಒಟ್ಟು 272 ಹೆಕ್ಟೇರ್ ಭೂಮಿಯನ್ನು ಗುರುತಿಸಲಾಗಿದ್ದು, ಆ ಪೈಕಿ 184 ಹೆಕ್ಟೇರ್ ಖಾಸಗಿ ಆಗಿದ್ದರೆ, 88 ಹೆಕ್ಟೇರ್ ಸರಕಾರಿ ಜಾಗ ಇದೆ. ಖಾಸಗಿ ಜಾಗದ ಪೈಕಿ 10 ಶೇಕಡ ಭೂಮಿಯನ್ನೂ ಹೆದ್ದಾರಿ ಪ್ರಾಧಿಕಾರದಿಂದ ಸ್ವಾಧೀನ ಪಡಿಸಿಲ್ಲ. ಭೂಸ್ವಾಧೀನ ಆಗದೇ ಇದ್ದರೂ, ಜನರ ಕಣ್ಣಿಗೆ ಮಣ್ಣೆರಚಲು ಕಾಮಗಾರಿ ಟೆಂಡರ್ ಕೊಡಲಾಗಿದೆ.
ಭೂಸ್ವಾಧೀನ ಆಗದಿದ್ದರೂ ಮರಗಳಿಗೆ ಕೊಡಲಿ
ಭೂಸ್ವಾಧೀನಕ್ಕೆ ತಡೆ ಕೋರಿ ಒಟ್ಟು 30 ಹೆಕ್ಟೇರ್ ಭೂಮಿಯ ಮಾಲಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕನ್ವರ್ಷನ್ ಭೂಮಿಗೆ ಸೆಂಟ್ಸ್ ಗೆ 19 ಲಕ್ಷ ಆಗಿದ್ದರೆ, ಕನ್ವರ್ಷನ್ ಆಗದೇ ಇರುವ ಭೂಮಿಗೆ 1.75 ಲಕ್ಷ ರೂಪಾಯಿ ಎಂದು ಹೆದ್ದಾರಿ ಅಧಿಕಾರಿಗಳು ನಿಗದಿ ಪಡಿಸಿದ್ದಾರೆ. ಇದರ ಪ್ರಕಾರ, ಮೊದಲೇ ಭೂಮಿ ಕನ್ವರ್ಷನ್ ಮಾಡಿಟ್ಟವರು ಭರಪೂರ ಲಾಭ ಪಡೆಯುಯುತ್ತಾರೆ. ಇಷ್ಟೆಲ್ಲ ಗೊಂದಲ ಇದ್ದರೂ ಹೆದ್ದಾರಿ ಟೆಂಡರನ್ನು ತರಾತುರಿಯಲ್ಲಿ ಮಾಡಿದ್ದಾರೆ. ಈ ಬಗ್ಗೆ ಪ್ರತಿ ಬಾರಿ ಜಿಲ್ಲಾಧಿಕಾರಿ, ಸಂಸದರು ಸಭೆ ಕರೆದರೂ ಕಾನೂನು ಪ್ರಕಾರ ಭೂಮಿಗೆ ಬೆಲೆ ನಿಗದಿಪಡಿಸಲು ಸಾಧ್ಯವಾಗಿಲ್ಲ. ಇಂಥ ಸ್ಥಿತಿಯಲ್ಲಿ ಹತ್ತು ವರ್ಷ ಹೋದರೂ ಹೆದ್ದಾರಿ ಮಾಡಲು ಸಾಧ್ಯವಿಲ್ಲ ಎಂದು ಕುಲಶೇಖರದಲ್ಲಿ ಭೂಮಿ ಕಳಕೊಳ್ಳುವ ಮರಿಯಮ್ಮ ಥೋಮಸ್ ಹೇಳುತ್ತಾರೆ. ಇದಲ್ಲದೆ, ಹೆದ್ದಾರಿ ವಿಚಾರ ಕೋರ್ಟಿನಲ್ಲಿ ಜಟಾಪಟಿ ಇದ್ದರೂ, ಸರಕಾರಿ ಭೂಮಿಯಲ್ಲಿದ್ದ ದೊಡ್ಡ ದೊಡ್ಡ ಮರಗಳನ್ನು ತರಾತುರಿಯಲ್ಲಿ ಕಡಿಯಲಾಗಿದೆ. ಕಾಮಗಾರಿಯನ್ನೇ ಮಾಡಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಮರ ಕಡಿದು ಪರಿಸರ ನಾಶ ಮಾಡಿದ್ದಾರೆ. ಹೆದ್ದಾರಿ ಹೆಸರಲ್ಲಿ ನಡೆಯುವ ಭ್ರಷ್ಟಾಚಾರ, ಹಗರಣಕ್ಕೆ ಬೃಹತ್ ಮರಗಳನ್ನು ಬಲಿ ಕೊಟ್ಟಿದ್ದೂ ಸಾಕ್ಷಿ ಎಂದು ಹೇಳುತ್ತಾರೆ.
ಹಣ ಸಿಗದೇ ಒಂದಿಂಚು ಭೂಮಿ ಬಿಟ್ಟುಕೊಡಲ್ಲ
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಹೆದ್ದಾರಿಗೆ ಭೂಮಿ ಕಳಕೊಳ್ಳುವ ಸಮಿತಿಯ ಬೃಜೇಶ್ ಶೆಟ್ಟಿ ಮಿಜಾರ್, ರತ್ನಾಕರ ಶೆಟ್ಟಿ ಬೆಳುವಾಯಿ, ಮರಿಯಮ್ಮ ಥೋಮಸ್, ನಾವು ಭೂಮಿ ಕಳಕೊಳ್ಳುವ ಮಂದಿ ಸಮಿತಿ ಮಾಡಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಭೂಮಿಗೆ ಸೂಕ್ತ ಬೆಲೆ ಸಿಗದೆ ಒಂದಿಂಚು ಭೂಮಿ ಬಿಟ್ಟು ಕೊಡಲ್ಲ ಎಂದು ಹೇಳಿದ್ದಾರೆ. ಹೆದ್ದಾರಿ ಹೆಸರಲ್ಲಿ ಅಧಿಕಾರಿಳೆಲ್ಲ ಭಾರೀ ಹಗರಣವನ್ನೇ ನಡೆಸಿದ್ದಾರೆ. ಕುಲಶೇಖರದಿಂದ ಸಾಣೂರಿಗೆ ಈಗ 41 ಕಿಮೀ ಇದ್ದರೆ, ಮುಂದೆ 46 ಕಿಮೀ ಆಗಲಿದೆ. ಇದರರ್ಥ ಇವರು ಜನರಿಗಾಗಿ ಹೆದ್ದಾರಿ ಮಾಡೋದಲ್ಲ. ಇವರು ಯಾರದ್ದೋ ಖಾಸಗಿಯವರ ಲಾಭಕ್ಕೆ ರಸ್ತೆ ಮಾಡುತ್ತಿದ್ದಾರೆ ಎಂದು ಬೃಜೇಶ್ ಶೆಟ್ಟಿ ಹೇಳಿದ್ದಾರೆ.
Big kickback exposed in Mangalore - Moodbidri Karkala Highway project via Gurupura. Instead of Highway passing on Gurupura Bridge the highway will be connected via Adduru village because of which 5kms will be extended in order to profit those Men who have purchased 150 acres of land.
09-02-25 07:58 pm
Bangalore Correspondent
Renukacharya, Yatnal: ನೀನು ಜೆಡಿಎಸ್ ಸೇರಿ ಬಿರಿಯ...
09-02-25 06:58 pm
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕಾರ ; ರಾಜ್ಯ...
09-02-25 05:28 pm
Somanna, Viyayendra, BJP President; ರೆಬಲ್ ನಾಯ...
07-02-25 11:00 pm
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
09-02-25 09:32 pm
HK News Desk
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
09-02-25 11:03 pm
Mangalore Correspondent
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
Job News, Yaticorp, Mangalore, AI; ಎಐ ಕ್ಷೇತ್...
08-02-25 10:46 pm
Mines, Krishnaveni Mangalore, Dinesh gundrao;...
08-02-25 01:08 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm