ನವರಾತ್ರಿ ಹುಲಿವೇಷಕ್ಕೆ ಅನುಮತಿ ; ಷರತ್ತು ಉಲ್ಲಂಘಿಸಿದ್ರೆ ದೇವಸ್ಥಾನ ಆಡಳಿತ ಹೊಣೆ ! 

14-10-20 12:57 pm       Mangaluru Correspondent   ಕರಾವಳಿ

ಸಾಂಪ್ರದಾಯಿಕ ಹುಲಿ ವೇಷಕ್ಕೆ ಅವಕಾಶ ನೀಡಬೇಕೆಂಬ ಒತ್ತಡಕ್ಕೆ ಜಿಲ್ಲಾಡಳಿತ ಕೊನೆಗೂ ಮಣಿದಿದೆ. ನವರಾತ್ರಿ ವೇಳೆ ಸಾಂಪ್ರದಾಯಿಕ ಹುಲಿ ವೇಷಕ್ಕೆ ಒಪ್ಪಿಗೆ ನೀಡಲಾಗಿದೆ.

ಮಂಗಳೂರು, ಅಕ್ಟೋಬರ್ 14: ಸಾಂಪ್ರದಾಯಿಕ ಹುಲಿ ವೇಷಕ್ಕೆ ಅವಕಾಶ ನೀಡಬೇಕೆಂಬ ಒತ್ತಡಕ್ಕೆ ಜಿಲ್ಲಾಡಳಿತ ಕೊನೆಗೂ ಮಣಿದಿದೆ. ನವರಾತ್ರಿ ವೇಳೆ ಸಾಂಪ್ರದಾಯಿಕ ಹುಲಿ ವೇಷಕ್ಕೆ ಒಪ್ಪಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಧಾರ್ಮಿಕ ಪರಿಷತ್ ಸಭೆಯಲ್ಲಿ ಹುಲಿ ವೇಷಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. 

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಧಾರ್ಮಿಕ ಪರಿಷತ್ ಸದಸ್ಯರ ಸಭೆಯಲ್ಲಿ ಈ ಬಾರಿ ಹುಲಿ ವೇಷಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿತ್ತು. ಆದರೆ ಸಾರ್ವಜನಿಕರು ಮತ್ತು ನವರಾತ್ರಿ ಉತ್ಸವ ಸಮಿತಿಗಳು ಈ ಬಗ್ಗೆ ಪ್ರಬಲ ಒತ್ತಾಯ ಮುಂದಿಟ್ಟಿದ್ದರಿಂದ ಕೆಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಲಾಗಿದೆ. 

ದೇವಸ್ಥಾನದ ಆವರಣದಲ್ಲಿ ಮಾತ್ರ ಗರಿಷ್ಠ 10 ಹುಲಿ ವೇಷಧಾರಿಗಳಿಗೆ ನಿಗದಿತ ಕಾಲಮಿತಿಯೊಳಗೆ ಹರಕೆ ಅರ್ಪಿಸಲು ಅನುಮತಿ ನೀಡಲಾಗಿದೆ. ಆದರೆ, ಈ ರೀತಿ ಹರಕೆ ಸಲ್ಲಿಸುವಾಗ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವಂತೆ ನೋಡಿಕೊಳ್ಳಬೇಕು. ಈ ನಿಯಮ ಪಾಲನೆ ಮಾಡುವುದು ಸಂಬಂಧಪಟ್ಟ ದೇವಸ್ಥಾನ ಆಡಳಿತದ ಜವಾಬ್ದಾರಿ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 

ಈ ವೇಳೆ, ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಮತ್ತು ಅಹಿತಕರ ಘಟನೆ ಸಂಭವಿಸಿದಲ್ಲಿ ಸಂಬಂಧಪಟ್ಟ ದೇವಳದ ಆಡಳಿತ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಣಯಿಸಲಾಗಿದೆ. ಅಲ್ಲದೆ, ಹುಲಿ ವೇಷಧಾರಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಸುಡುಮದ್ದು , ಪಟಾಕಿ ಸಿಡಿಸುವುದನ್ನೂ ಸಂಪೂರ್ಣ ನಿಷೇಧಿಸಲು ಸಭೆಯಲ್ಲಿ  ನಿರ್ಣಯ ಕೈಗೊಳ್ಳಲಾಗಿದೆ.

Mangalore DC Dr K V Rajendra allowed permission for troupes to perform Pili Vesha within temple premises during Dasara with orders to be followed.