'ಬಂಡೆ' ಒಡೆಯಲು ನಿಮ್ಮಿಂದಲೇ ಬಂದ ಡೈನಮೈಟ್ ಗಳಿದ್ದಾರೆ ; ಡಿಕೆಶಿಗೆ ಕುಟುಕಿದ ನಳಿನ್

18-10-20 07:49 pm       Headline Karnataka News Network   ಕರಾವಳಿ

ನಿಮ್ಮ ಬಳಿ ಬಂಡೆ ಇದ್ದರೆ ನಮ್ಮ ಬಳಿ ಬಂಡೆ ಒಡೆಯುವ ಡೈನಮೈಟ್‍ ಗಳಿವೆ ಎಂದು ಹೇಳುವ ಮೂಲಕ ನಳಿನ್ ಕುಮಾರ್ ಕಟೀಲ್ ರವರು ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್ .18 : ನಿಮ್ಮ ಬಳಿ ಬಂಡೆ ಇರಬಹುದು. ಆದರೆ, ನಮ್ಮ ಬಳಿ ನಿಮ್ಮ ಕಡೆಯಿಂದಲೇ ಬಂದಿರುವ ಬಂಡೆ ಒಡೆಯುವ ಡೈನಮೈಟ್‍ಗಳು ಇವೆ. ಒಂದೊಂದು ಡೈನಮೈಟ್‍ ನಿಮ್ಮ ಬಂಡೆಯನ್ನು ಪುಡಿ ಪುಡಿ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕನಕಪುರ ಬಂಡೆ ಎಂದೇ ಹೆಸರು ಗಳಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಕುಟುಕಿದ್ದಾರೆ. 

ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್, ಕನಕಪುರದಿಂದ ಬಂದು ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದೀರಿ. ಮಾಧ್ಯಮದಲ್ಲಿ ನಿಮ್ಮನ್ನ ಬಂಡೆ ಎಂದು ಕರೆಯುತ್ತಾರೆ. ನಿಮ್ಮ ಬಳಿ ಬಂಡೆ ಇರಬಹುದು. ಆದರೆ ನಮ್ಮ ಬಳಿ ನಿಮ್ಮಿಂದ ಬಂದಿರುವ ಡೈನಾಮೈಟ್‍ಗಳಿವೆ. ಒಂದೊಂದು ಡೈನಮೈಟ್‍ ಗಳು ನಿಮ್ಮನ್ನು ಪುಡಿಪುಡಿ ಮಾಡುತ್ತಾರೆ ಎಂದರು.

ತಿಹಾರ್ ಜೈಲಿಗೆ ಹೋದಾಗ ಮೆರವಣಿಗೆ, ಜೈಲಿನಿಂದ ಹೊರಬಂದಾಗ ಮೆರವಣಿಗೆಯನ್ನು ಜನ ನೋಡಿದ್ದಾರೆ. ನಿಮ್ಮ ಮೆರವಣಿಗೆಯಿಂದ ಜನ ಬೇಸತ್ತಿದ್ದಾರೆ. ನೀವು ಮನೆಯಲ್ಲಿ ಕೂರುವ ವ್ಯವಸ್ಥೆ ಮಾಡುತ್ತಾರೆ. ಡಿಕೆಶಿ ಅವರೇ ನಿಮ್ಮ ಜಾತಿ ರಾಜಕೀಯ ಇನ್ನು ನಡೆಯಲ್ಲ. ಅಭಿವೃದ್ಧಿ ರಾಜಕೀಯದಿಂದ ಮುನಿರತ್ನ ಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಸಚಿವ ಆರ್.ಅಶೋಕ್ ಮತ್ತು ಅರವಿಂದ ಲಿಂಬಾವಳಿ ಜೋಡೆತ್ತುಗಳು. ಈ ಜೋಡೆತ್ತು ಸೇರಿ ಮುನಿರತ್ನರನ್ನು ಗೆಲ್ಲಿಸಲಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಗೆಲ್ಲುವ ಮೂಲಕ ದಾಖಲೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಕಾರ್ಪೊರೇಟರ್ ಗಳು ಕಮಲ ಪಾಳಯಕ್ಕೆ ಬರುತ್ತಿದ್ದಾರೆ. ಎಚ್‍ಎಂಟಿ ವಾರ್ಡ್ ಕಾಂಗ್ರೆಸ್ ಕಾರ್ಪೋರೇಟರ್ ಆಶಾ ಸುರೇಶ್ ಅಧಿಕೃತವಾಗಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು ನಳಿನ್. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಉಪಾಧ್ಯಕ್ಷ ಲಿಂಬಾವಳಿ, ಸಚಿವ ಆರ್. ಅಶೋಕ್ ಹಾಗೂ ಆರ್.ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಹ ಭಾಗಿಯಾಗಿದ್ದರು.

ಕಾಂಗ್ರೆಸ್ ಮುಖಂಡರಾದ ಮಾಜಿ ಮೇಯರ್ ನಾರಾಯಣಸ್ವಾಮಿ, ಕಾಂಗ್ರೆಸ್ ಕಾರ್ಪೋರೇಟರ್ ಗಳಾದ ಜಾಲಹಳ್ಳಿಯ ಶ್ರೀನಿವಾಸ್, ಯಶವಂತಪುರದ ಜಿ.ಕೆ.ವೆಂಕಟೇಶ್, ಹೆಚ್‍ಎಂಟಿ ವಾರ್ಡ್ ನ ಆಶಾ ಸುರೇಶ್, ಲಕ್ಷ್ಮೀದೇವಿನಗರದ ವೇಲು ನಾಯ್ಕರ್, ಕೊಟ್ಟಿಗೆಪಾಳ್ಯ ವಾರ್ಡ್ ಮೋಹನ್ ಕುಮಾರ್, ಲಗ್ಗೆರೆ ವಾರ್ಡ್ ನಾಮನಿರ್ದೇಶಿತ ಬಿಬಿಎಂಪಿ ಸದಸ್ಯ ಸಿದ್ದೇಗೌಡ ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

BJP Naleen Kumar Kateel slams Kanakapura Bande Congress Kpcc President DK Shivakumar over RR Nagar Byelections in Bangalore.