‘’ಸ್ಮಾರ್ಟ್ ಎಂಡಿ’’ ದಿಢೀರ್ ಎತ್ತಂಗಡಿ ಆಗಿದ್ದು ಯಾಕೆ ಗೊತ್ತಾ...? ಪನಿಶ್ಮೆಂಟ್ !

20-10-20 02:57 pm       Mangalore Correspondent   ಕರಾವಳಿ

ಮಂಗಳೂರಿನ ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕರಾಗಿದ್ದ ಮಹಮ್ಮದ್ ನಜೀರ್ ಅವರನ್ನು ದಿಢೀರ್ ಆಗಿ ವರ್ಗ ಮಾಡಲಾಗಿದೆ.

ಮಂಗಳೂರು, ಅಕ್ಟೋಬರ್ 20: ಮಂಗಳೂರಿನ ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕರಾಗಿದ್ದ ಮಹಮ್ಮದ್ ನಜೀರ್ ಅವರನ್ನು ದಿಢೀರ್ ಆಗಿ ವರ್ಗ ಮಾಡಲಾಗಿದೆ. ಆದರೆ ಈ ಸ್ಥಾನಕ್ಕೆ ಬೇರೆ ಯಾರನ್ನೂ ಸರಕಾರ ನೇಮಕ ಮಾಡಿಲ್ಲ. ಹೀಗಾಗಿ ಯಾವುದೇ ಒಬ್ಬ ಅಧಿಕಾರಿಯನ್ನು ಒಂದು ಹುದ್ದೆಯಿಂದ ದಿಢೀರ್ ಎಂದು ವರ್ಗಾಯಿಸುವುದನ್ನು ಸರಕಾರಿ ವಲಯದಲ್ಲಿ ‘’ಪನಿಶ್ಮೆಂಟ್ ಟ್ರಾನ್ಸ್ ಫರ್ ’’ ಅಂತಲೇ ಕರೆಯುವುದು. ನಜೀರ್ ಅವರನ್ನು ಕೂಡ ದಿಢೀರ್ ಆಗಿ ಬೆಂಗಳೂರಿಗೆ ಎತ್ತಂಗಡಿ ಮಾಡಿದ್ದರ ಹಿಂದೆ ಹಿರಿಯಧಿಕಾರಿಗಳ ಅಸಮಾಧಾನ ವರ್ಕ್ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಎರಡು ವರ್ಷಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಆಗಿದ್ದ ಮಹಮ್ಮದ್ ನಜೀರ್ ಅವರನ್ನು ಸ್ಮಾರ್ಟ್ ಸಿಟಿ ಎಂಡಿ ಆಗಿ ನಿಯೋಜಿಸಲಾಗಿತ್ತು. ಕೆಲವು ಮಾಹಿತಿ ಪ್ರಕಾರ, ಮಹಮ್ಮದ್ ನಜೀರ್ ಅವರೇ ಮೇಲಿನಿಂದ ಪ್ರಭಾವ ಬೀರಿ ಸ್ಮಾರ್ಟ್ ಸಿಟಿಗೆ ಬಂದಿದ್ದರು ಎನ್ನಲಾಗಿತ್ತು. ಸ್ಮಾರ್ಟ್ ಸಿಟಿಗೆ ಮುಖ್ಯಸ್ಥರಾಗಿ ಐಎಎಸ್ ದರ್ಜೆಯ ಅಧಿಕಾರಿಯನ್ನೇ ನಿಯೋಜಿಸಬೇಕೆಂದು ಪ್ರಧಾನಿ ಮೋದಿ ಸೂಚನೆಯಿದ್ದರೂ, ಕೆಎಎಸ್ ಅಧಿಕಾರಿಯೂ ಅಲ್ಲದ ವ್ಯಕ್ತಿಯನ್ನು ನಿಯೋಜನೆ ಮಾಡಿದ್ದರ ಹಿಂದೆ ಕಾಣದ ಕೈಗಳು ಕೈಯಾಡಿಸಿದ್ದವು ಅನ್ನೋದಕ್ಕೆ ಪುರಾವೆ ಬೇಕಿಲ್ಲ. ಏನೇ ಇದ್ದರೂ, ಎರಡು ವರ್ಷಗಳಿಂದ ನಜೀರ್ ಸ್ಮಾರ್ಟ್ ಸಿಟಿ ಎಂಡಿ ಹುದ್ದೆಯಲ್ಲಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ನಡೆಯುವ ಪ್ರಮುಖ ಯೋಜನೆ. ಮಂಗಳೂರು ಸ್ಮಾರ್ಟ್ ಸಿಟಿಗೆ ಒಂದೂವರೆ ಸಾವಿರ ಕೋಟಿಗೂ ಹೆಚ್ಚು ಹಣ ಬಂದಿದೆ ಎನ್ನೋ ಮಾಹಿತಿಯಿದೆ. ಆದರೆ, ಈ ಬಗ್ಗೆ ಯಾರೂ ಅಧಿಕೃತ ಮಾಹಿತಿ ನೀಡುವುದಿಲ್ಲ. ಕಳೆದ ಎರಡು ವರ್ಷಗಳಲ್ಲಿ ಮಂಗಳೂರಿನಲ್ಲಿ ಬೇಕಾಬಿಟ್ಟಿ ಕೆಲಸಗಳೂ ನಡೆದಿವೆ. ರಸ್ತೆ ಬದಿಯ ಚರಂಡಿಯಿಂದ ಹಿಡಿದು ಫುಟ್ ಪಾತ್, ಬಸ್ ನಿಲ್ದಾಣ, ರಸ್ತೆಗಳ ಕಾಂಕ್ರೀಟೀಕರಣ ಹೀಗೆ ಭರದ ಕಾಮಗಾರಿಗಳು ನಡೆಯುತ್ತಿವೆ. ಯಾವೆಲ್ಲ ಕಾಮಗಾರಿ ಆಗುತ್ತಿದೆ ಅನ್ನೋದ್ರ ಬಗ್ಗೆ ಸ್ವತಃ ಸ್ಮಾರ್ಟ್ ಸಿಟಿ ಕಚೇರಿಯಲ್ಲೇ ಲೆಕ್ಕ ಇದೆಯೋ ಇಲ್ಲವೋ.. ಆದರೆ, ಇವೆಲ್ಲದಕ್ಕೂ ಲೆಕ್ಕಾಚಾರ, ಫೈಲ್ ಅಟ್ ಟು ಡೇಟ್ ಇಟ್ಕೊಳ್ಳೋದು ಸ್ಮಾರ್ಟ್ ಸಿಟಿ ಎಂಡಿ ಕೆಲಸ. ಎಂಡಿ ಆಗಿದ್ದ ಮಹಮ್ಮದ್ ನಜೀರ್ ಈ ಮೂಲಭೂತ ಕೆಲಸವನ್ನೇ ಮಾಡಿಕೊಂಡಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿರುವ ಪೊನ್ನುರಾಜ್, ಮಂಗಳೂರಿಗೆ ಬಂದಿದ್ದರು. ಸ್ಮಾರ್ಟ್ ಸಿಟಿ ಸೇರಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಯೋಜನೆ, ಕಾಮಗಾರಿ ವಿಚಾರಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ನಡೆಸುವುದು ಉಸ್ತುವಾರಿ ಕಾರ್ಯದರ್ಶಿ ಜವಾಬ್ದಾರಿ. ಉಸ್ತುವಾರಿ ಪರಿಶೀಲನೆ ಸಂದರ್ಭ ಫೈಲ್ ರೆಡಿ ಮಾಡಿಟ್ಟುಕೊಳ್ಳದ ಬಗ್ಗೆ ಈ ಹಿಂದೆಯೂ ಗದರಿದ್ದ ಪೊನ್ನುರಾಜ್, ಈ ಬಾರಿ ಗರಂ ಆಗಿದ್ದರು. ಕೋಟಿಗಟ್ಟಲೆ ವೆಚ್ಚದ ಪ್ರಾಜೆಕ್ಟ್ ಗಳ ಬಗ್ಗೆ ಲೆಕ್ಕಾಚಾರ ಇಟ್ಟುಕೊಳ್ಳದ ಸ್ಮಾರ್ಟ್ ಸಿಟಿ ಎಂಡಿಯನ್ನು ಈಗ ಉಸ್ತುವಾರಿ ಕಾರ್ಯದರ್ಶಿಯೇ ಎತ್ತಂಗಡಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ, ಕಾಮಗಾರಿ ವೆಚ್ಚ ಮತ್ತು ಅದನ್ನು ಪಾಸ್ ಮಾಡುವ ಜವಾಬ್ದಾರಿ ಹೊತ್ತಿದ್ದ ಸ್ಮಾರ್ಟ್ ಎಂಡಿ, ಅದಕ್ಕೆ ಅಗತ್ಯವುಳ್ಳ ಲೆಕ್ಕಾಚಾರವನ್ನೂ ಇಟ್ಟುಕೊಳ್ಳಬೇಕು. ಈ ಲೆಕ್ಕದಲ್ಲಿ ಎಡವಿದ್ದು ಮತ್ತು ಕಾಮಗಾರಿಯಲ್ಲಿ ಅವ್ಯವಹಾರದ ವಾಸನೆ ಬಂದಿದ್ದರಿಂದಲೇ ಈಗ ಮಹ್ಮದ್ ನಜೀರ್ ಅವರನ್ನು ದಿಢೀರ್ ವರ್ಗಾಯಿಸಿದ್ದಾರೆ ಎನ್ನಲಾಗುತ್ತಿದೆ.

ಅಲ್ಲದೆ, ಇತ್ತೀಚೆಗೆ ಮಿನಿ ವಿಧಾನಸೌಧ ಬಳಿ ಸರಕಾರಿ ನೌಕರರ ಸಂಘದ ಆಸ್ತಿಯಲ್ಲಿ ಅಕ್ರಮವಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಸ್ಮಾರ್ಟ್ ಸಿಟಿ ವಿರುದ್ಧ ಛೀಮಾರಿ ಹಾಕಿಸಿಕೊಂಡಿದ್ದು ಆಗಿತ್ತು. ಖಾಸಗಿ ಆಸ್ತಿಯನ್ನು ಕೆಡವಿ ಕಾಮಗಾರಿ ನಡೆಸಿದ್ದರ ವಿಚಾರದಲ್ಲಿ ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಕೋರ್ಟ್ ಗರಂ ಆಗಿದ್ದು ಜಿಲ್ಲಾಡಳಿತಕ್ಕೆ ನೋಟೀಸ್ ಹೋಗುವಂತಾಗಿತ್ತು. ಈ ವಿಚಾರವೂ ಎಂಡಿ ವೈಫಲ್ಯಕ್ಕೆ ಮತ್ತೊಂದು ಸಾಕ್ಷಿಯಾಗಿತ್ತು.  

ಇನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಪಾಲಿಕೆಯ ಮೇಯರ್, ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳು ಸಮಾನ ಹೊಣೆ ಹೊತ್ತಿದ್ದಾರೆ. ಇವರೆಲ್ಲ ಸ್ಮಾರ್ಟ್ ಸಿಟಿ ಸಮಿತಿಯ ಸದಸ್ಯರಾಗಿದ್ದು ಯಾವುದೇ ಯೋಜನೆ ಪಾಸ್ ಮಾಡಬೇಕಿದ್ದರೂ ಸಭೆಯಲ್ಲಿ ಪಾಸ್ ಆಗಬೇಕು. ಆದರೆ, ಮಂಗಳೂರಿನ ಸ್ಮಾರ್ಟ್ ಸಿಟಿಯಲ್ಲಿ ಈ ಸದಸ್ಯರು ತಮ್ಮ ಹೊಣೆ ನಿಭಾಯಿಸಿದ್ದಾರೆಯೇ ಅನ್ನೋದನ್ನು ಅವರೇ ಹೇಳಬೇಕಷ್ಟೆ. 

Mangalore smart city project MD Mohammed Nazir is suddenly transferred to Bangalore. As of now, no one is placed to his position. It is said that he was transferred due to punishment.