ಸರ್ವರ್ ನೆಪದಲ್ಲಿ ಪಡಿತರಕ್ಕೂ ಕನ್ನ ! ತೊಕ್ಕೊಟ್ಟಿನಲ್ಲಿ ಜನರ ಪರದಾಟ ; ಆಹಾರ ಇಲಾಖೆ ನಿರ್ಲಕ್ಷ್ಯ !

21-10-20 02:03 pm       Mangalore Correspondent   ಕರಾವಳಿ

ತೊಕ್ಕೊಟ್ಟಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಪಡಿತರ ಅಂಗಡಿಯಲ್ಲಿ ದಿನನಿತ್ಯವೂ ಸರ್ವರ್ ಸ್ಥಗಿತಗೊಳ್ಳುತ್ತಿದ್ದು ಇದರಿಂದ ಪಡಿತರಕ್ಕಾಗಿ ಆಗಮಿಸುವ ಜನರು ಸಂಕಷ್ಟ ಎದುರಿಸುವಂತಾಗಿದೆ.

ಉಳ್ಳಾಲ, ಅಕ್ಟೋಬರ್, 21: ತೊಕ್ಕೊಟ್ಟಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಪಡಿತರ ಅಂಗಡಿಯಲ್ಲಿ ದಿನನಿತ್ಯವೂ ಸರ್ವರ್ ಸ್ಥಗಿತಗೊಳ್ಳುತ್ತಿದ್ದು ಇದರಿಂದ ಪಡಿತರಕ್ಕಾಗಿ ಆಗಮಿಸುವ ಜನರು ಸಂಕಷ್ಟ ಎದುರಿಸುವಂತಾಗಿದೆ. ನಿತ್ಯ ಸಂಕಷ್ಟ ಎದುರಾದ್ರೂ ಆಹಾರ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ. 

ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆಯ ವ್ಯಾಪ್ತಿಯ ಕುಟುಂಬಗಳಿಗೆ ತೊಕ್ಕೊಟ್ಟು ಒಳಪೇಟೆಯ ಕೋಟೆಕಾರು ವ್ಯ.ಸೇ.ಸ. ಸಂಘದ ಕಟ್ಟಡದಲ್ಲಿ ಎರಡು ಪಡಿತರ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ರೇಷನ್ ಖರೀದಿಗಾಗಿ ದೂರದಿಂದ ಆಟೋ ರಿಕ್ಷಾದಲ್ಲಿ ಬರುವ ಜನಸಾಮಾನ್ಯರು ನಿತ್ಯ ಸರ್ವರ್ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸುವಂತಾಗಿದೆ. ಅಲ್ಲಿನ ಸಿಬಂದಿ, ಸರ್ವರ್ ಪ್ರತಿ ದಿನವೂ ನಿಧಾನಗತಿ ಅಥವಾ ಸ್ಥಗಿತಗೊಂಡಿದೆ ಎಂಬ ಕಾರಣ ನೀಡುತ್ತಿದ್ದಾರೆ. ಇದರಿಂದ ಜನರು ಮೈಲುದ್ದ ಸರತಿ ಸಾಲಲ್ಲಿ ನಿಂತು ಗಂಟೆಗಟ್ಟಲೆ ಕಾದರೂ ಸರ್ವರ್ ಸ್ಥಗಿತದಿಂದ ಕೊನೆಗೆ ಪಡಿತರ ಸಿಗದೆ ಹಿಂದಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. 

ಸಾಮಾನ್ಯವಾಗಿ ಇಲ್ಲಿ ಪ್ರತಿ ತಿಂಗಳ 10ನೇ ತಾರೀಖಿನಿಂದ 25 ರ ತನಕ  ಪಡಿತರ ವಿತರಿಸಲಾಗುತ್ತದೆ. ಆರಂಭದಲ್ಲಿ ಜನಸಂದಣಿ‌ ಜಾಸ್ತಿ ಇರುವುದರಿಂದ ಕೆಲವರಿಗೆ ಪಡಿತರ ದೊರಕುವುದಿಲ್ಲ. ತಿಂಗಳ ಕೊನೆಗೆ ಬಂದರೂ ಸರ್ವರ್ ಸಮಸ್ಯೆಯಿಂದ ಜನರು ಪಡಿತರ ವಂಚಿತರಾಗುತ್ತಿದ್ದಾರೆ. ಕೆಲವರ ಹೆಬ್ಬೆರಳು(ಥಂಬ್) ಅಚ್ಚು ಹೋಲಿಕೆ ಆಗದೆ ತಾಂತ್ರಿಕ ತೊಂದರೆಗಳು ಉಂಟಾಗಿ ಪಡಿತರ ಸಿಗದಂತಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಆಹಾರ ಇಲಾಖೆಯ ಅಧಿಕಾರಿಗಳು ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎನ್ನುತ್ತಾರೆ ಜನ. 

ಈ ಹಿಂದೆ ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ಆಹಾರ ಇಲಾಖೆಯ ಸಚಿವರಾಗಿದ್ದಾಗ ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಎದುರಾದಾಗ ಪರ್ಯಾಯವಾಗಿ ಜನಸಾಮಾನ್ಯರಿಗೆ ರಶೀದಿ ನೀಡಿ ರೇಶನ್ ವಿತರಿಸಲು ಆದೇಶಿಸಿದ್ದರು. ಆದರೆ ಇದೀಗ ಸರ್ವರ್ ಕೈಕೊಟ್ಟರೆ ಜನರು ಬರಿಗೈಯಲ್ಲಿ ಮನೆಗೆ ಹಿಂದಿರುಗುವ ಸ್ಥಿತಿ ಎದುರಾಗಿದೆ.

ಕೊರೊನ ಸಂಕಷ್ಟ ಕಾಲದಲ್ಲಿ ಕೆಲವು ಬಡ ಜನರು ಪಡಿತರ ಅಕ್ಕಿ, ವಸ್ತುಗಳನ್ನೇ ಅವಲಂಬಿಸಿದ್ದು , ಸಂಕಷ್ಟ ಕಾಲದಲ್ಲೂ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸರ್ವರ್ ನೆಪದಲ್ಲಿ ಜನರು ಕಳಕೊಳ್ಳುವಂತಾಗಿದೆ.