ದೇವಸ್ಥಾನಕ್ಕೆ ತೆರಳಿ ಧಾರ್ಮಿಕ ಕಾರ್ಯ ; ಮೊಯ್ದೀನ್ ಬಾವಾಗೆ ತರಾಟೆ, ಬೆದರಿಕೆ ! ಪೊಲೀಸ್ ದೂರು

22-10-20 11:45 am       Mangalore Correspondent   ಕರಾವಳಿ

ಮಾಜಿ ಶಾಸಕ ಮೊಯ್ದೀನ್ ಬಾವಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ.

ಮಂಗಳೂರು, ಅಕ್ಟೋಬರ್ 22: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಮೊಯ್ದೀನ್ ಬಾವಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ. ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೊಯ್ದೀನ್ ಬಾವಾ ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. 

ಮಂಗಳೂರು ಹೊರವಲಯದ ಬಜ್ಪೆ ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ನವರಾತ್ರಿ ಉತ್ಸವ ಏರ್ಪಡಿಸಲಾಗಿತ್ತು. ಮೊದಲ ದಿನದ ಉತ್ಸವಕ್ಕೆ ಮೊಯ್ದೀನ್ ಬಾವಾರನ್ನು ದೇವಸ್ಥಾನ ಆಡಳಿತದವರು ಕರೆದಿದ್ದರು. ದೇವಸ್ಥಾನಕ್ಕೆ ಆಗಮಿಸಿದ್ದ ಮೊಯ್ದೀನ್ ಬಾವಾ ಕೈಯಲ್ಲಿ ಕೊಪ್ಪರಿಗೆ ಇಳಿಸುವ ಧಾರ್ಮಿಕ ಕಾರ್ಯವನ್ನು ಮಾಡಿಸಲಾಗಿತ್ತು. ಅಕ್ಕಿ ಸುರಿಯುವ ಸಂಪ್ರದಾಯವನ್ನು ಮುಸ್ಲಿಂ ಆಗಿರುವ ಮೊಯ್ದೀನ್ ಬಾವಾ ನೆರವೇರಿಸಿದ್ದು ಕಟ್ಟರ್ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಹಿಂದು ಸಂಘಟನೆಯ ಕಾರ್ಯಕರ್ತರು ದೇವಸ್ಥಾನದ ಕಮಿಟಿಯವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ, ಕರಾವಳಿ ಮೂಲದ ಮುಂಬೈನಲ್ಲಿ ನೆಲೆಸಿರುವ ಅನಿಲ್ ಎಂಬ ವ್ಯಕ್ತಿ ಮೊಯ್ದೀನ್ ಬಾವಾಗೆ ಕರೆ ಮಾಡಿ, ಬೆದರಿಕೆ ಹಾಕಿದ್ದಾನೆ. ದನದ ಮಾಂಸ ತಿನ್ನುವ ನೀವು ದೇವಸ್ಥಾನದ ಸಂಪ್ರದಾಯ ಕಾರ್ಯ ನೆರವೇರಿಸಿದ್ದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾನೆ. ಇದು ನೆಹರು ದೇಶವಲ್ಲ. ಮೋದಿ ದೇಶ. ಇದಕ್ಕೆಲ್ಲ ಅವಕಾಶ ಇಲ್ಲ ಎಂದು ವ್ಯಕ್ತಿ ಹೇಳಿದ್ದಾನೆ. ಅದಕ್ಕೆ ಪ್ರತಿಯಾಗಿ ಮೊಯ್ದೀನ್ ಬಾವಾ, ಮೋದಿಯೇನು ಈ ದೇಶವನ್ನು ಕ್ರಯಕ್ಕೆ ತಗೊಂಡಿದ್ದಾರೆಯೇ ಎಂದು ಕೇಳಿ ಫೋನ್ ಇಡುವಂತೆ ಹೇಳಿದ್ದಾರೆ. ತುಳುವಿನಲ್ಲಿ ಸಂಭಾಷಣೆ ನಡೆದಿದ್ದು ಕೊನೆಗೆ ಮುಂದೆಯೂ ನೀನು ಹೀಗೆ ಮಾಡಿದರೆ ನೋಡಿಕೊಳ್ತೇವೆ ಎಂದು ವ್ಯಕ್ತಿ ಹೇಳಿದ್ದಾನೆ. ಬಾವಾ ಮತ್ತು ವ್ಯಕ್ತಿಯ ನಡುವಿನ ಸಂಭಾಷಣೆಯ ಆಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾವಾ ಪೊಲೀಸರಿಗೆ ದೂರು ನೀಡಿದ್ದಾರೆ. 

ಇದೇ ವೇಳೆ, ಮೊಯ್ದೀನ್ ಬಾವಾಗೆ ಮುಸ್ಲಿಂ ಮೂಲಭೂತವಾದಿಗಳಿಂದಲೂ ಬೆದರಿಕೆ ಕರೆಗಳು ಬಂದಿವೆ. ಅಲ್ಲಾಹನನ್ನು ಮಾತ್ರ ನಂಬುವ ಮುಸ್ಲಿಂ ವ್ಯಕ್ತಿಯಾಗಿ ನೀವು ದೇವಸ್ಥಾನಕ್ಕೆ ಹೋಗಿದ್ದು ಯಾಕೆ..? ದೇವಸ್ಥಾನಕ್ಕೆ ಹೋಗಬಾರದು. ಅಲ್ಲಿ ಹೋಗಿ ಸಂಪ್ರದಾಯ ನೆರವೇರಿಸಿದ್ದು ದೇವರಿಗೆ ಕೈಮುಗಿದಿದ್ದು ತಪ್ಪೆಂದು ಕರೆ ಮಾಡಿದ ವ್ಯಕ್ತಿಗಳು ತರಾಟೆಗೆತ್ತಿಕೊಂಡಿದ್ದಾರೆ. ಆದರೆ, ಮೊಯ್ದೀನ್ ಬಾವಾ ಈ ಬಗ್ಗೆ ಪೊಲೀಸ್ ದೂರಿನಲ್ಲಿ ಉಲ್ಲೇಖ ಮಾಡಿಲ್ಲ ! 

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊಯ್ದೀನ್ ಬಾವಾ, ದೇವಸ್ಥಾನಕ್ಕೆ ಕರೆದಿದ್ದರು, ಹೋಗಿದ್ದೆ‌. ಅಲ್ಲಿ ಪ್ರತಿ ವರ್ಷ ಕರೆಯುತ್ತಾರೆ. ಈ ಬಾರಿ ಹೊಸತಲ್ಲ. ನಾನು ಹೋದ ಸಂದರ್ಭದಲ್ಲಿ ಕೊಪ್ಪರಿಗೆಗೆ ಅಕ್ಕಿ ಸುರಿಯುವ ಸಂಪ್ರದಾಯ ಆಗ್ತಿತ್ತು. ಅಕ್ಕಿ ಹಾಕಲು ಹೇಳಿದ್ದಾರೆ. ಅದನ್ನು ಮಾಡಿದ್ದೇನೆ. ನಾನು ಜಾತ್ಯತೀತ ವ್ಯಕ್ತಿಯಾಗಿದ್ದು ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ. ಅಲ್ಲಿನವರು ಈ ಕಾರ್ಯವನ್ನು ಮಾಡಲು ಹೇಳಿದಾಗ ಮಾಡಬಾರದಿತ್ತೇ ? ನಿರಾಕರಿಸಬೇಕಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.

Video: 

Former Congress MLA, B.A. Mohiuddin Bava, has recieved a threat call from an alleged right-wing supporter for participating in a temple ritual in his constituency on Wednesday.