ಕುಕ್ಕೆ ; ಹಳೆಕಾಲದ ವಿಗ್ರಹ, ಆಭರಣಗಳು ನಾಪತ್ತೆ ! ಎಸಿಬಿ ದೂರು ; ಅಧಿಕಾರಿಗಳ ನಿರ್ಲಕ್ಷ್ಯ !   

22-10-20 11:10 pm       Mangaluru Correspondent   ಕರಾವಳಿ

ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಇರುವ ದೇಗುಲ ಎಂದು ಪ್ರಸಿದ್ಧಿ ಗಳಿಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣಗಳು ನಾಪತ್ತೆ.

ಪುತ್ತೂರು, ಅಕ್ಟೋಬರ್ 22: ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಇರುವ ದೇಗುಲ ಎಂದು ಪ್ರಸಿದ್ಧಿ ಗಳಿಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಪ್ರಾಚೀನ ಕಾಲದ ವಿಗ್ರಹ ಮತ್ತು ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಶಂಕೆ ಕೇಳಿಬಂದಿದೆ.

ದೇವಸ್ಥಾನದ ಗರ್ಭಗುಡಿ ಒಳಗಿದ್ದ ವಜ್ರದ ಕಂಠಿಹಾರ, ಆಭರಣಗಳು, ಸತ್ಯನಾರಾಯಣ ದೇವರ ಬೆಳ್ಳಿಯ ಫಲಕ, ಕುಕ್ಕೆ ಲಿಂಗ ದೇವಳದ ಬಳಿಯಿದ್ದ ಬೆಳ್ಳಿಯ ಆಭರಣಗಳು, ಪ್ರಾಚೀನ ಕಾಲದ ಪಂಚಲೋಹದ ವಿಗ್ರಹಗಳು ನಾಪತ್ತೆಯಾಗಿವೆ ಎನ್ನಲಾಗುತ್ತಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ದಳಕ್ಕೆ ಸ್ಥಳೀಯ ಭಕ್ತರು ದೂರು ನೀಡಿದ್ದಾರೆ.

ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಟ್ರಸ್ಟಿ ಆಗಿರುವ ಮೋನಪ್ಪ ಮಾನಾಡು, ಬೆಳ್ಳಿಯ ಆಭರಣಗಳು, ಪ್ರಾಚೀನ ವಿಗ್ರಹಗಳು ನಾಪತ್ತೆಯಾಗಿರುವುದನ್ನು ಗಮನಿಸಿದ್ದು, ಅರ್ಚಕರಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ದೊರಕಿರಲಿಲ್ಲ. ಈ ಬಗ್ಗೆ 2019ರ ನವೆಂಬರ್ ತಿಂಗಳ 22ರಂದು ದೇಗುಲದ ಆಡಳಿತಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿಗೆ ಮೋನಪ್ಪ ಮಾನಾಡು ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಕೋಟ್ಯಂತರ ಮೌಲ್ಯದ ವಿಗ್ರಹ ನಾಪತ್ತೆ ವಿಚಾರದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಪ್ರಕರಣ ಭಾರೀ ಸಂಶಯಕ್ಕೆ ಕಾರಣವಾಗಿದೆ.  

ಆಬಳಿಕ ಕಳೆದ ಆಗಸ್ಟ್ ತಿಂಗಳಲ್ಲಿ ಒಡವೆ, ವಿಗ್ರಹ ನಾಪತ್ತೆ ವಿಚಾರದಲ್ಲಿ ಸ್ಥಳೀಯರಾದ ಶ್ರೀನಾಥ್ ಟಿ.ಎಸ್. ಆರ್ಟಿಐ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಆರ್ಟಿಐ ಅರ್ಜಿಗೂ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ನೋಡಿದರೆ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡ ಇರುವ ಶಂಕೆ ಮೂಡಿದೆ. ದೇವಸ್ಥಾನದ ಅರ್ಚಕರು ಮತ್ತು ಅಧಿಕಾರಿಗಳ ಶಾಮೀಲಾತಿಯಲ್ಲಿ ವಿಗ್ರಹ ನಾಪತ್ತೆಯಾಗಿದೆಯೇ ಅಥವಾ ಕಳವು ಮಾಡಲಾಗಿದೆಯೇ ಎನ್ನುವ ಶಂಕೆಯಿದೆ. ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀನಾಥ್ ಟಿ.ಎಸ್ ಒತ್ತಾಯಿಸಿದ್ದಾರೆ.

ರಾಜ್ಯ ಮಾನವ ಹಕ್ಕುಗಳ ಸಮಿತಿಯ ನಿರ್ದೇಶಕರೂ ಆಗಿರುವ ಶ್ರೀನಾಥ್, ಅಧಿಕಾರಿಗಳ ಶಾಮೀಲಾತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾದ ಬೆಳ್ಳಿಯ ಫಲಕದ ಜಾಗಕ್ಕೆ ಹೊಸತಾಗಿ ಮಾಡಿಸಲು ಅರ್ಚಕರು ಮತ್ತು ಸಿಬಂದಿ ಹುನ್ನಾರ ನಡೆಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದರೆ, ಸಿಬಂದಿಯೊಬ್ಬರ ಅಸಹಕಾರದಿಂದಾಗಿ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ ಎನ್ನುವುದನ್ನು ಶ್ರೀನಾಥ್ ಹೇಳುತ್ತಾರೆ. ಪ್ರಾಚೀನ ಕಾಲದ ಕಂಚಿನ, ಪಂಚಲೋಹದ ವಿಗ್ರಹಗಳು, ಆಭರಣಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಟ್ಟಲಾಗದ ಕೋಟ್ಯಂತರ ರೂಪಾಯಿ ಮೌಲ್ಯವಿದೆ. ಇಂಥ ಗಂಭೀರ ವಿಚಾರದ ಬಗ್ಗೆ ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ದ.ಕ. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮತ್ತು ದೇಗುಲದ ಸಿಇಓ ಆಗಿರುವ ರವೀಂದ್ರ ನಿರ್ಲಕ್ಷ್ಯ ವಹಿಸಿದ್ದು ಯಾಕೆ ಎನ್ನುವ ಅನುಮಾನ ಕೇಳಿಬಂದಿದೆ. 

Video Report:

The Former Trustee of the Kukke Subramanya Temple Monappa Manadu has alleged that many Antique idols from the temple are missing. A case has been registered at the Acb office he added.