ಹಂಪನಕಟ್ಟೆಯಲ್ಲಿ ಮತ್ತೆ ಬ್ಯಾರಿಕೇಡ್ ಪ್ರಯೋಗ ; ಸಿಗ್ನಲ್ ಬದಲು ಸುತ್ತು ಬಳಸಿ ಸಂಚಾರಕ್ಕೆ ವ್ಯವಸ್ಥೆ !

04-03-23 10:21 pm       Mangalore Correspondent   ಕರಾವಳಿ

ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಿದ್ದಾರೆ. ಆ ಪ್ರಯುಕ್ತ ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ವಾಹನಗಳ ಸರಾಗ ಚಾಲನೆ ನೆಪದಲ್ಲಿ ಸಿಗ್ನಲ್ ತೆಗೆದು ಹಾಕಿದ್ದಾರೆ.

ಮಂಗಳೂರು, ಮಾ.4: ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಿದ್ದಾರೆ. ಆ ಪ್ರಯುಕ್ತ ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ವಾಹನಗಳ ಸರಾಗ ಚಾಲನೆ ನೆಪದಲ್ಲಿ ಸಿಗ್ನಲ್ ತೆಗೆದು ಹಾಕಿದ್ದಾರೆ.

 ಇದರಂತೆ, ಕ್ಲಾಕ್ ಟವರ್ ಕಡೆಯಿಂದ ಹಂಪನಕಟ್ಟೆ, ಬಾವುಟಗುಡ್ಡೆಯ ಕಡೆಗೆ ಬರುವ ವಾಹನಗಳು ನೇರವಾಗಿ ಬರುವುದು ಮತ್ತು ಮಿಲಾಗ್ರಿಸ್, ಫಳ್ನೀರ್ ಕಡೆಗೆ ತೆರಳಬೇಕಾದವರು ಆಲುಕ್ಕಾಸ್ ಬಳಿಯ ಸುಂದರರಾಮ್ ಶೆಟ್ಟಿ ರಸ್ತೆ ಫಲಕದ ಬಳಿಯಿಂದ ಯು ಟರ್ನ್ ಮಾಡಿ ವೆನ್ಲಾಕ್ ಮುಂಭಾಗದ ರಸ್ತೆಗೆ ಫ್ರೀ ಟರ್ನ್ ತೆಗೆದುಕೊಳ್ಳುವುದು. ಮಿಲಾಗ್ರಿಸ್, ಫಳ್ನೀರ್ ರಸ್ತೆಯ ಕಡೆಯಿಂದ ಕೆ.ಎಸ್ ರಾವ್ ರಸ್ತೆಯತ್ತ ತೆರಳಬೇಕಾದವರು ಹಂಪನಕಟ್ಟೆ ವೃತ್ತದಲ್ಲಿ ಎಡಕ್ಕೆ ಚಲಿಸಿ ಕ್ಲಾಕ್ ಟವರ್ ವೃತ್ತದಲ್ಲಿ ಯು ಟರ್ನ್ ಹೊಡೆದು ಮುಂದೆ ಚಲಿಸುವುದು.

ನವಭಾರತ ಸರ್ಕಲ್, ಕೆಎಸ್ ರಾವ್ ರಸ್ತೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುವ ವಾಹನ ಸವಾರರು ಹಿಂದಿನ ರೀತಿಯಲ್ಲೇ ಕೃಷ್ಣ ಭವನ ರಸ್ತೆಯಿಂದಾಗಿ ಗಣಪತಿ ಹೈಸ್ಕೂಲ್ ರಸ್ತೆಗೆ ಬಂದು ಹಂಪನಕಟ್ಟೆ ಮೂಲಕ ಚಲಿಸುವುದು. ಫಳ್ನೀರ್ ಕಡೆಗೆ ತೆರಳುವವರು ಹಂಪನಕಟ್ಟೆ ವೃತ್ತದಲ್ಲಿ ಎಡಕ್ಕೆ ತಿರುಗಿ ಆಲುಕ್ಕಾಸ್ ಬಳಿಯಿಂದ ಯು ಟರ್ನ್ ಹೊಡೆದು ಫಳ್ನೀರ್ ಕಡೆಗೆ ಹೋಗುವುದು. ಇದಲ್ಲದೆ, ಸ್ಟೇಟ್ ಬ್ಯಾಂಕ್ ಕಡೆಯಿಂದ ಜ್ಯೋತಿ ವೃತ್ತದ ಕಡೆಗೆ ತೆರಳುವ ಬಸ್ ಗಳು ಲೇಡಿಗೋಷನ್, ಕ್ಲಾಕ್ ಟವರ್ ಬಿಟ್ಟರೆ ಮುಂದೆ ಆಲುಕ್ಕಾಸ್ ಬಳಿಯಲ್ಲಿ ಮಾತ್ರ ಜನರನ್ನು ಹತ್ತಿಸಬೇಕು. ನಡುವೆ, ಹಂಪನಕಟ್ಟೆಯಲ್ಲಿ ನಿಲ್ಲಿಸಿ ಜನರನ್ನು ಹತ್ತಿಸಿದರೆ ಬಸ್ಸಿನವರಿಗೆ ದಂಡ ವಿಧಿಸಲು ಕಮಿಷನರ್ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದ್ದಾರೆ.

ಹಿಂದೆ ಇದೇ ರೀತಿ ಎಡವಟ್ಟು ಇತ್ತು !

ಈ ಹಿಂದೆಯೂ ಇದೇ ರೀತಿಯ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದರಿಂದ ಸುತ್ತು ಬಳಸಿ ಸಾಗುವ ವಾಹನಗಳ ಕಾರಣದಿಂದಾಗಿಯೇ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿತ್ತು. ಫಳ್ನೀರ್ ಕಡೆಯಿಂದ ಕೆಎಸ್ ರಾವ್ ರಸ್ತೆಗೆ ತೆರಳುವ ಆಟೋ, ಇನ್ನಿತರ ಖಾಸಗಿ ವಾಹನಗಳು ವಿನಾಕಾರಣ ಎಡಬದಿಗೆ ಚಲಿಸಿ ಕ್ಲಾಕ್ ಟವರ್ ವೃತ್ತದಿಂದ ಸುತ್ತು ಬಳಸಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಬೀಳುವ ಸ್ಥಿತಿ ಉಂಟಾಗಿತ್ತು. ವೆನ್ಲಾಕ್ ಆಸ್ಪತ್ರೆಗೆ ಬರುವ ಪ್ರಯಾಣಿಕರು, ಖಾಸಗಿ ವಾಹನಗಳಲ್ಲಿ ಬಂದು ಕೆಎಸ್ ರಾವ್ ರಸ್ತೆಯ ಕಡೆಗೆ ತೆರಳುವ ಮಂದಿ ಸುಖಾಸುಮ್ಮನೆ ಒಂದು ಕಿಮೀ ಉದ್ದಕ್ಕೆ ಸುತ್ತಿ ಬಳಸಿ ಬರಬೇಕಾಗುತ್ತದೆ. ಇದರಿಂದ ಸ್ಟೇಟ್ ಬ್ಯಾಂಕ್ ವೃತ್ತದ ಕಡೆಯಿಂದ ಬರುವ ಬಸ್ ಗಳ ಜೊತೆಗೆ ಇತರೇ ವಾಹನಗಳು ಪರದಾಡುವ ಸ್ಥಿತಿ ಎದುರಾಗಿತ್ತು.

ಸ್ಮಾರ್ಟ್ ಸಿಟಿ ಯೋಜನೆಯಡಿ ಹಂಪನಕಟ್ಟೆ ವೃತ್ತದ ಪರಿಸರವನ್ನು ನವೀಕರಣ ಮಾಡಿದ ನಂತರ ಕಳೆದ ಎಂಟು ತಿಂಗಳಿನಿಂದ ಸಿಗ್ನಲ್ ಬಳಸಿ ವಾಹನಗಳನ್ನು ನಾಲ್ಕು ಕಡೆಗೂ ಚಲಿಸುವಂತೆ ಮಾಡಲಾಗಿತ್ತು. ಇದರಿಂದ ವಾಹನಗಳು ಸಿಗ್ನಲ್ ಕಾರಣಕ್ಕೆ ಒಂದಷ್ಟು ಹೊತ್ತು ನಿಂತರೂ, ನೇರವಾಗಿ ಸಾಗಲು ಅವಕಾಶ ಇತ್ತು. ಸದ್ಯಕ್ಕೆ ಹಂಪನಕಟ್ಟೆಯಲ್ಲಿ ಬಸ್ ಗಳು ನಿಲ್ಲುವುದರಿಂದ ಆ ರಸ್ತೆಯಲ್ಲಷ್ಟೇ ಟ್ರಾಫಿಕ್ ಇರುವುದು ಬಿಟ್ಟರೆ ಉಳಿದ ರಸ್ತೆಗಳಲ್ಲಿ ಫ್ರೀಯಾಗಿ ಸಂಚರಿಸಲು ಅವಕಾಶ ಇರುತ್ತದೆ. ಹಂಪನಕಟ್ಟೆಯಲ್ಲಿ ಯಾವುದೇ ಬಸ್ ಗಳನ್ನು ನಿಲ್ಲಲು ಬಿಡದೇ ಇದ್ದರೆ, ಅಲ್ಲಿನ ವ್ಯವಸ್ಥೆ ಒಂದಷ್ಟು ಸರಿ ಹೋಗುತ್ತಿತ್ತು. ಈಗ ಹೊಸ ಕಮಿಷನರ್ ಕುಲದೀಪ್ ಜೈನ್ ಪ್ರಾಯೋಗಿಕವಾಗಿ ಹಂಪನಕಟ್ಟೆಯನ್ನು ಬ್ಯಾರಿಕೇಡ್ ಇಟ್ಟು ಬ್ಲಾಕ್ ಮಾಡಿಸಿ, ಟ್ರಾಫಿಕ್ ಬ್ಲಾಕ್ ಆಗುತ್ತಾ ನೋಡಲಿದ್ದಾರೆ.

Mangalore Hampankatta traffic diversion ordered to control traffic , here is the latest route map.