ಬೆದರಿಕೆ, ಟೀಕೆ ಮಧ್ಯೆ ಮತ್ತೊಮ್ಮೆ ಸುಂಕದಕಟ್ಟೆ ಕ್ಷೇತ್ರಕ್ಕೆ ಭೇಟಿಯಿತ್ತ ಮೊಯ್ದೀನ್ ಬಾವಾ !

24-10-20 02:45 pm       Mangalore Correspondent   ಕರಾವಳಿ

ಬೆದರಿಕೆಗೆ ಗುರಿಯಾಗಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿಯುದ್ದಿನ್ ಬಾವ ಮತ್ತೆ ದೇವಸ್ಥಾನಕ್ಕೆ ಭೇಟಿಯಿತ್ತು ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ. 

ಮಂಗಳೂರು, ಅಕ್ಟೋಬರ್ 24: ಇತ್ತೀಚೆಗೆ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕೊಪ್ಪರಿಗೆಗೆ ಅಕ್ಕಿ ಹಾಕುವ ವಿಚಾರದಲ್ಲಿ ಟೀಕೆ, ಬೆದರಿಕೆಗೆ ಗುರಿಯಾಗಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿಯುದ್ದಿನ್ ಬಾವ ಮತ್ತೆ ದೇವಸ್ಥಾನಕ್ಕೆ ಭೇಟಿಯಿತ್ತು ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ. 

ಘಟನೆ ಬಗ್ಗೆ ಮುಂಬೈಯಿಂದ ಬೆದರಿಕೆ ಕರೆ ಬಂದಿದ್ದ ವಿಚಾರದಲ್ಲಿ ಮೊಯ್ದೀನ್ ಬಾವಾ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಪರ - ವಿರೋಧ ಚರ್ಚೆಗಳ ನಡುವೆಯೂ ಶ್ರೀ ಕ್ಷೇತ್ರದ  ಆಡಳಿತ ಮಂಡಳಿಯ ಮೊಕ್ತೇಸರ ನಾರಾಯಣ ಎನ್ . ಪೂಜಾರಿಯವರ ಆಹ್ವಾನದ ಮೇರೆಗೆ ಮೊಯ್ದೀನ್ ಬಾವಾ ಮತ್ತೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 

ಬಾವಾ ಅವರನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಸ್ವತಃ ಆಡಳಿತ ಮೊಕ್ತೇಸರರೇ ಸ್ವಾಗತಿಸಿ ಬರಮಾಡಿಕೊಂಡರು. ಶ್ರೀ ಕ್ಷೇತ್ರದ ವತಿಯಿಂದ ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬಾವಾರವರಿಗೆ ಇದೇ ಸಂದರ್ಭದಲ್ಲಿ ಆಡಳಿತ ಕಮಿಟಿಯಿಂದ ಆಹ್ವಾನ ನೀಡಲಾಯಿತು. 

ಇದೇ ವೇಳೆ, ಶ್ರೀ ಕ್ಷೇತ್ರ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬಾವಾರವರು ವೈಯುಕ್ತಿಕವಾಗಿ ದೇಣಿಗೆ ನೀಡಿದರು. ಬೆದರಿಕೆ ಕರೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರಿಗೆ ದೇವರು ಒಳ್ಳೆಯ ಸದ್ಬುದ್ಧಿಯನ್ನು  ನೀಡಲಿ ಎಂದು  ಪ್ರಾರ್ಥಿಸಿದ್ದಾಗಿ ಬಾವಾರವರು ಇದೇ ವೇಳೆ ಅಲ್ಲಿದ್ದ ಜನರಲ್ಲಿ ಹೇಳಿಕೊಂಡಿದ್ದಾರೆ.

Amid life threat former MLA Mohiuddin Bava visits temple again to perform religious activity at Shri Shethra Temple in Mangaluru.