ಮೋದಿ ಮೋದಿ ಕೂಗಿಗೆ ಕಾಂಗ್ರೆಸ್ ಜೈಕಾರ ; ಮಿಥುನ್ ರೈ ಕಾರಿಗೆ ಕಲ್ಲು, ಮೂಡುಶೆಡ್ಡೆ ಉದ್ವಿಗ್ನ  

10-05-23 09:03 pm       Mangalore Correspondent   ಕರಾವಳಿ

ಚುನಾವಣೆ ಬೆನ್ನಲ್ಲೇ ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಮೂಡುಬಿದ್ರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ.

ಮಂಗಳೂರು, ಮೇ 10: ಚುನಾವಣೆ ಬೆನ್ನಲ್ಲೇ ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಮೂಡುಬಿದ್ರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಸ್ಥಳದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸೇರಿದ್ದು ಉದ್ವಿಗ್ನ ಸ್ಥಿತಿ ನೆಲೆಯಾಗಿದೆ. 

ಮಾಹಿತಿ ಪ್ರಕಾರ, ಸಂಜೆ ಹೊತ್ತಿಗೆ ಮೂಡುಶೆಡ್ಡೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಈ ವೇಳೆ, ಮಿಥುನ್ ರೈ ಮತ್ತು ಬೆಂಬಲಿಗರಿದ್ದ ಕಾರು ಆ ದಾರಿಯಲ್ಲಿ ಬಂದಿದ್ದು ಬಿಜೆಪಿಯವರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಮಿಥುನ್ ರೈ ಮತ್ತು ಬೆಂಬಲಿಗರು ಕಾರು ನಿಲ್ಲಿಸಿ ಕಾಂಗ್ರೆಸ್ ಜೈ ಎಂದು ಘೋಷಣೆ ಕೂಗಿದ್ದಾರೆ. 

ಎರಡೂ ತಂಡಗಳ ಜೈಕಾರದ ನಡುವೆಯೇ ಮಿಥುನ್ ರೈ ಕಾರಿಗೆ ಕಲ್ಲು ತೂರಾಟ ಆಗಿದೆ. ಇಬ್ಬರು ಕಾರ್ಯಕರ್ತರು ಸಣ್ಣ ಮಟ್ಟಿಗೆ ಗಾಯಗೊಂಡಿದ್ದಾರೆ. ತರುವಾಯ ಎರಡೂ ಪಕ್ಷಗಳ ಕಾರ್ಯಕರ್ತರು ಸೇರಿದ್ದು ಪರಸ್ಪರ ಘೋಷಣೆ ಕೂಗಿದ್ದಾರೆ.‌ ಅಷ್ಟರಲ್ಲಿ ಪೊಲೀಸರು ತಂಡಗಳನ್ನು ಅಡ್ಡ ಹಾಕಿದ್ದು ಗುಂಪನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ನಕಲಿ ಮತದಾನ ಆರೋಪ ; ಪ್ರತಿಭಟನೆ 

ತೋಡಾರಿನಲ್ಲಿ ವ್ಯಕ್ತಿಯೊಬ್ಬ ನಕಲಿ ಮತದಾನ ಮಾಡಿದ್ದಾನೆಂಬ‌ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಮೂಡುಬಿದ್ರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Moodbidri MLA Candidate Mithun Rai car attacked, stone pelted in Moodushedde, police deploy security in Mangalore.