ಕೇರಳ ಲಾಟರಿಯಲ್ಲಿ 70 ಲಕ್ಷ ರೂ. ಬಂಪರ್ ; ತಲಪಾಡಿಯಲ್ಲಿ ಟಿಕೆಟ್ ಖರೀದಿಸಿದ ಈ ಅದೃಷ್ಟಶಾಲಿ ಯಾರು?!  

18-05-23 01:00 pm       Mangalore Correspondent   ಕರಾವಳಿ

ಕೆಲವರು ದಿಢೀರ್ ಶ್ರೀಮಂತರಾಗಲು ಬಯಸಿ ಲಾಟರಿ ಟಿಕೆಟ್ ತೆಗೆದು ಬಂಪರ್ ಬಂದಿದೆಯಾ ಎಂದು ಜಾತಕಪಕ್ಷಿಯಂತೆ ಕಾಯುತ್ತ ಇರೋರಿದ್ದಾರೆ.

ಉಳ್ಳಾಲ, ಮೇ 18: ಕೆಲವರು ದಿಢೀರ್ ಶ್ರೀಮಂತರಾಗಲು ಬಯಸಿ ಲಾಟರಿ ಟಿಕೆಟ್ ತೆಗೆದು ಬಂಪರ್ ಬಂದಿದೆಯಾ ಎಂದು ಜಾತಕಪಕ್ಷಿಯಂತೆ ಕಾಯುತ್ತ ಇರೋರಿದ್ದಾರೆ. ಆದರೆ ಇಲ್ಲೊಬ್ಬರಿಗೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೂ, ವಿಜೇತ ಅದೃಷ್ಟವಂತ ಈವರೆಗೂ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಹೀಗಾಗಿ ಏಜೆನ್ಸಿಯವರೇ ಬಂಪರ್ ಗೆದ್ದ ವಿಜೇತನಿಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ.

ತಲಪಾಡಿಯ ಅಮಲ್ ಕನಕದಾಸ ಅವರಿಗೆ ಸೇರಿದ ತಲಪಾಡಿಯ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮಾರಾಟವಾದ ಟಿಕೆಟಿಗೆ ಕೇರಳ ರಾಜ್ಯದ ಅಕ್ಷಯ ಲಾಟರಿಯ ಬಂಪರ್ ಬಹುಮಾನ ಬಂದಿದೆ, ಕೇರಳ ಗಡಿಭಾಗ ಕರ್ನಾಟಕದ ಮಂಗಳೂರು, ಮಂಜೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರನ್ನು ಹೊಂದಿರುವ ಈ ಏಜೆನ್ಸಿಯಲ್ಲಿ ಮಾರಾಟವಾದ ಮೇ 7ರ ಅಕ್ಷಯಾ ಲಾಟರಿ ಎ.ಟಿ. 317545  ಟಿಕೆಟಿಗೆ ಎಪ್ಪತ್ತು ಲಕ್ಷ ಬಂಪರ್ ಬಹುಮಾನ ಬಂದಿದ್ದು, ಈ ಟಿಕೆಟ್ ಪಡೆದುಕೊಂಡ ಅದೃಷ್ಟ ಶಾಲಿಗೆ ಹುಡುಕಾಟ ನಡೆಯುತ್ತಿದೆ.

ಕನಕದಾಸ ಅವರ ಏಜೆನ್ಸಿಗೆ ಕೆಲ ತಿಂಗಳ ಹಿಂದೆ ಕೆ.ಸಿ. ರೋಡ್‍ನ ವ್ಯಕ್ತಿಯೊಬ್ಬರಿಗೆ 75 ಲಕ್ಷ ರೂ. ಮತ್ತು  ಕೋಟೆಕಾರು ಒಲವಿನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೆಕ್ಯುರಿಟಿ ಗಾರ್ಡ್ ಗೆ ಒಂದು ಕೋಟಿ ರೂ. ಬಹುಮಾನ ಬಂದಿದ್ದು, ಒಟ್ಟು ನಾಲ್ಕು ಬಾರಿ ಬಂಪರ್ ಬಹುಮಾನ ಬಂದಿತ್ತು. ಇದೀಗ ಅದೃಷ್ಟಶಾಲಿಯ ಹುಡುಕಾಟ ನಡೆಯುತ್ತಿದ್ದು, ಕರ್ನಾಟಕ - ಕೇರಳ ಗಡಿಭಾಗದವರೇ ಈ ವಿಜೇತರು ಇರಬಹುದು ಎಂದು ಅಮಲ್ ಕನಕದಾಸ್ ತಿಳಿಸಿದ್ದಾರೆ.

Mangalore Kerala lottery Man wins 70 lakhs lottery, doesn't Appear to collect money, Talapady Jayamma lottery frim requests to collect money.