ಪುತ್ತೂರಿನಲ್ಲಿ 'ಪುತ್ತಿಲ ಪರಿವಾರ' ಹೊಸ ವೇದಿಕೆ ಅಸ್ತಿತ್ವಕ್ಕೆ ; ಸಾವಿರಾರು ಕಾರ್ಯಕರ್ತರ ಕಾಲ್ನಡಿಗೆ ಜಾಥಾ, ಬೃಹತ್ ಸಾರ್ವಜನಿಕ ಸಭೆ 

21-05-23 10:56 pm       Mangalore Correspondent   ಕರಾವಳಿ

ಬಿಜೆಪಿ ವಿರುದ್ಧ ಬಂಡಾಯ ಎದ್ದು ಸಂಚಲನ ಎಬ್ಬಿಸಿರುವ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರವಾಗಿ ಮತ್ತೊಮ್ಮೆ ಭಾರೀ ಸಂಖ್ಯೆಯ ಅಭಿಮಾನಿಗಳು ಸೇರಿ ತೊಡೆ ತಟ್ಟಿದ್ದಾರೆ.

ಪುತ್ತೂರು, ಮೇ 21 : ಬಿಜೆಪಿ ವಿರುದ್ಧ ಬಂಡಾಯ ಎದ್ದು ಸಂಚಲನ ಎಬ್ಬಿಸಿರುವ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರವಾಗಿ ಮತ್ತೊಮ್ಮೆ ಭಾರೀ ಸಂಖ್ಯೆಯ ಅಭಿಮಾನಿಗಳು ಸೇರಿ ತೊಡೆ ತಟ್ಟಿದ್ದಾರೆ. ಅರುಣ್ ಪುತ್ತಿಲ ಕೃತಜ್ಞತಾ ಸಭೆಯ ರೂಪದಲ್ಲಿ ದರ್ಬೆಯಿಂದ ಕಾಲ್ನಡಿಗೆಯಲ್ಲಿ ಬಂದ ಕಾರ್ಯಕರ್ತರ ಪಡೆ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸೇರಿತು. ಮೆರವಣಿಗೆ ಉದ್ದಕ್ಕೂ ಸಾಗರದೋಪಾದಿಯಲ್ಲಿ ಕೇಸರಿ ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಪಾದಯಾತ್ರೆಯಲ್ಲಿ ಬಂದ ಅರುಣ್ ಪುತ್ತಿಲ ಮೆರವಣಿಗೆ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನರಿಗೆ ಕೈಮುಗಿಯುತ್ತಾ ಸಾಗಿದರು. ಹಿರಿಯರ ಕಾಲು ಮುಟ್ಟಿ ನಮಸ್ಕರಿಸುತ್ತಾ ಸಾಗಿದ್ದು ವಿಶೇಷವಾಗಿತ್ತು. ಕಾರ್ಯಕರ್ತರು ಮೆರವಣಿಗೆ ಉದ್ದಕ್ಕೂ ಮಹಾಲಿಂಗೇಶ್ವರನಿಗೆ ಜೈಕಾರ ಕೂಗುತ್ತಾ ಸಾಗಿದರು. ಕೊನೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಪ್ರಮುಖರು ವಿವರಣೆ ನೀಡಿದ್ದಾರೆ. 

ಇದೇ ವೇಳೆ, ಸಂಘ ಪರಿವಾರಕ್ಕೆ ಪರ್ಯಾಯ ಎನ್ನುವಂತೆ 'ಪುತ್ತಿಲ ಪರಿವಾರ' ಹೆಸರಿನಲ್ಲಿ ಅರುಣ್ ಪುತ್ತಿಲ ಅಭಿಮಾನಿಗಳು ವೇದಿಕೆ ಕಟ್ಟಿಕೊಂಡಿರುವುದನ್ನು ಘೋಷಣೆ ಮಾಡಿದ್ದಾರೆ. ಸೇರಿದ್ದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಪುತ್ತಿಲ ಪರಿವಾರ ಹೆಸರಲ್ಲಿ ಲೋಗೊ ಬಿಡುಗಡೆ ಮಾಡಲಾಗಿದ್ದು ಸಂಘಟನೆಯ ರೂಪುರೇಷೆ ಬಗ್ಗೆ ಹೇಳಿಕೊಂಡಿದ್ದಾರೆ. ‌ನಮಗೆ ಚುನಾವಣೆಯೇ ಆದ್ಯತೆಯಲ್ಲ. ಹಿಂದುತ್ವ, ಆರೆಸ್ಸೆಸ್ ಆಶಯ ಈಡೇರಿಸುವುದೇ ನಮ್ಮ ಗುರಿ. ಅದಕ್ಕಾಗಿ ನಾವು ಸದಾ ಸನ್ನದ್ಧ ಆಗಿರುತ್ತೇವೆ ಎಂದು ಸಭೆಯಲ್ಲಿ ಮಾತನಾಡಿದ ಅರುಣ್ ಪುತ್ತಿಲ ತಂಡದ ಶ್ರೀಕೃಷ್ಣ ಉಪಾಧ್ಯಾಯ ಹೇಳಿದ್ದಾರೆ. 

ಅರುಣ್ ಪುತ್ತಿಲ ಮಾತನಾಡಿ, ನಮ್ಮ ಹೋರಾಟ ಚುನಾವಣೆಗೆ ಸೀಮಿತವಾಗುವುದಿಲ್ಲ. ಹಿಂದುತ್ವ, ಹಿಂದುಗಳ ಶೋಷಣೆ ವಿರುದ್ಧ ನಮ್ಮ ಧ್ವನಿ ಸದಾ ಇರಲಿದೆ. ಹಿಂದುತ್ವಕ್ಕೆ ಧಕ್ಕೆಯಾದಾಗ ಅವರ ಕಣ್ಣೀರು ಒರೆಸುವ ಕಾರ್ಯ ಮಾಡಲಿದ್ದೇವೆ. ಕೇವಲ 20 ದಿವಸಗಳಲ್ಲಿ 62 ಸಾವಿರ ಜನ ನಮ್ಮ ಜೊತೆಗೆ ಕೈಜೋಡಿಸಿದ್ದಾರಂದ್ರೆ, ಸಣ್ಣ ಮಾತಲ್ಲ. ನಿಮ್ಮ ಪ್ರೀತಿ, ಬೆಂಬಲಕ್ಕೆ ಚಿರ ಋಣಿಯಾಗಿರುತ್ತೇನೆ. ನೀವಿಟ್ಟಿರುವ ನಂಬಿಕೆಯನ್ನು ಕೊನೆ ಉಸಿರು ಇರೋ ವರೆಗೂ ಉಳಿಸಿಕೊಳ್ಳುತ್ತೇನೆ. ನನ್ನ ಮೇಲೆ ಬಂದಿರುವ ಆರೋಪಗಳಿಗೆ ಮಹಾಲಿಂಗೇಶ್ವರನೇ ಉತ್ತರ ಕೊಡುತ್ತಾನೆ. ಯಾರೆಲ್ಲ ಆರೋಪ ಮಾಡಿದ್ದಾರೋ ಅವರಿಗೆಲ್ಲ ಈ ನಾಡಿನ ಕೊರಗಜ್ಜ, ಪಣೋಳಿಬೈಲಿನ ಕಲ್ಲುರ್ಟಿ, ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಒಳ್ಳೆಯ ಬುದ್ಧಿ ಕೊಟ್ಟು ಸರಿದಾರಿಯಲ್ಲಿ ನಡೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.  ಜನಸೇವೆಗಾಗಿ ಪುತ್ತಿಲ ಪರಿವಾರ ಎಂಬ ವೇದಿಕೆ ಕಟ್ಟಿಕೊಂಡಿದ್ದೇವೆ. ಇದು ಯಾವುದಕ್ಕೂ ಪರ್ಯಾಯ ಅಲ್ಲ. ವೇದಿಕೆಯ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತಾ ಮತ್ತು ಕಾರ್ಯದರ್ಶಿಯಾಗಿ ಉಮೇಶ್ ಗೌಡ ವೀರಮಂಗಲ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

Large number or people throng to the Thanksgiving meet of Arun Puthila in Puttur.