ಮಂಗಳೂರು ಏರ್ಪೋರ್ಟಿನಲ್ಲಿ ಹಕ್ಕಿ ಡಿಕ್ಕಿ ; ದುಬೈ ಹೊರಟಿದ್ದ ಇಂಡಿಗೋ ವಿಮಾನ ಸ್ತಬ್ಧ, ಭಯಕ್ಕೊಳಗಾದ ಪ್ರಯಾಣಿಕರು

25-05-23 12:47 pm       Mangalore Correspondent   ಕರಾವಳಿ

ದುಬೈಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

ಮಂಗಳೂರು, ಮೇ 25 : ದುಬೈಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

ಇಂದು ಬೆಳಗ್ಗೆ 8.30ರ ವೇಳೆಗೆ ಮಂಗಳೂರಿನಿಂದ ದುಬೈಗೆ ಹೊರಡಲು ಅನುವಾಗಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದೆ. ಪ್ರಯಾಣಿಕರನ್ನು ಹೊತ್ತುಕೊಂಡು ವಿಮಾನ ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದಾಗಲೇ ಹಕ್ಕಿಯೊಂದು ಹಾರಿ ಬಂದು ವಿಮಾನದ ರೆಕ್ಕೆಗೆ ಬಡಿದಿದೆ. ಏಕಾಏಕಿ ರೆಕ್ಕೆಯ ಭಾಗಕ್ಕೆ ಡಿಕ್ಕಿಯಾಗಿದ್ದರಿಂದ ತಕ್ಷಣ ಅಪಾಯದ ಸೂಚನೆ ಅರಿತ ಪೈಲಟ್, ನಿಲ್ದಾಣದ ಮಾಹಿತಿ ಕೇಂದ್ರಕ್ಕೆ ಸೂಚನೆ ರವಾನಿಸಿದ್ದಾರೆ. ಅಲ್ಲದೆ, ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಾಪಸ್ ಬಂದಿದ್ದು ಕೂಡಲೇ ಭದ್ರತಾ ಸಿಬಂದಿ ತಪಾಸಣೆ ನಡೆಸಿದ್ದಾರೆ. 

ಆನಂತರ, ಎಲ್ಲ ಪ್ರಯಾಣಿಕರನ್ನ ಇಳಿಸಿ ತಪಾಸಣೆ ಕೈಗೊಂಡಿದ್ದು ಅದೇ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ಇಂಡಿಗೋ ವಿಮಾನದಲ್ಲಿ ದುಬೈ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಕ್ಕಿ ಡಿಕ್ಕಿಯಿಂದ ಯಾವುದೇ ಅಪಾಯ ಸಂಭವಿಸಿಲ್ಲವಾದರೂ, ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಕಾರಣವಾಯಿತು.

Major tragedy was averted at the Mangaluru International Airport in Karnataka's Dakshina Kannada district when a Dubai-bound Indigo flight suffered a bird hit while taking off on Thursday.