ನೈತಿಕ ಪೊಲೀಸ್ ಗಿರಿ ; ಐವರು ಆರೋಪಿಗಳ ಬಂಧನ, ಉಳ್ಳಾಲ ಠಾಣೆಗೆ ಕಮೀಷನರ್ ಭೇಟಿ, ಅಮಾಯಕರ ಬಂಧಿಸದಂತೆ ಬಿಜೆಪಿ ಮುಖಂಡರ ಆಗ್ರಹ

02-06-23 02:15 pm       Mangaluru Correspondent   ಕರಾವಳಿ

ಸೋಮೇಶ್ವರ ಬೀಚಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಒಬ್ಬ ಅಪ್ರಾಪ್ತ ಸೇರಿ ಐವರು ಆರೋಪಿಗಳನ್ನ ಬಂಧಿಸಲಾಗಿದ್ದು ಘಟನೆ ಸಂಬಂಧಿಸಿ ಮತ್ತಷ್ಟು ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಉಳ್ಳಾಲ, ಜೂ.2: ಸೋಮೇಶ್ವರ ಬೀಚಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಒಬ್ಬ ಅಪ್ರಾಪ್ತ ಸೇರಿ ಐವರು ಆರೋಪಿಗಳನ್ನ ಬಂಧಿಸಲಾಗಿದ್ದು ಘಟನೆ ಸಂಬಂಧಿಸಿ ಮತ್ತಷ್ಟು ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಉಳ್ಳಾಲ ಠಾಣೆಗೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನೈತಿಕ ಪೊಲೀಸ್ ಗಿರಿ ನಡೆಸಿದವರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನ ರಚಿಸಿದ್ದೆವು. ಈಗಾಗಲೇ ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್, ಉಚ್ಚಿಲದ ಸಚಿನ್, ತಲಪಾಡಿ ನಿವಾಸಿಗಳಾದ ಸುಹಾನ್ ,ಅಖಿಲ್ ಮತ್ತು ಓರ್ವ ಅಪ್ರಾಪ್ತನನ್ನ ಬಂಧಿಸಲಾಗಿದೆ.

ಕೇರಳದ ಚೆರ್ಕಳ ಮೂಲದ ಜಾಫರ್ ಶರೀಫ್, ಮಂಜೇಶ್ವರ ಮೂಲದ ಮುಜೀಬ್ ಮತ್ತು ಆಶಿಕ್ ಹಲ್ಲೆಗೊಳಗಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿದ್ದಾರೆ. ಮಂಗಳೂರಿನ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಮೂವರು ಸಹಪಾಠಿ ಹಿಂದೂ ವಿದ್ಯಾರ್ಥಿನಿಯರ ಜೊತೆಯಲ್ಲಿ ಈ ವಿದ್ಯಾರ್ಥಿಗಳು ಸೋಮೇಶ್ವರ ಬೀಚಲ್ಲಿ ಸುತ್ತಾಡುತ್ತಿದ್ದಾಗ ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಘಟನೆ ನಡೆದಿದೆ ಎಂದರು.

ಠಾಣೆಗೆ ಹಿಂದೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಅಮಾಯಕರನ್ನ ಬಂಧಿಸದಂತೆ ಕಮಿಷನರ್ ಅವರಲ್ಲಿ ಮನವಿ ಮಾಡಿದ್ದಾರೆ. ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2013 ರಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆದ ಬೆನ್ನಲ್ಲೇ ತಲಪಾಡಿಯಲ್ಲಿ ಅಹಿತಕರ ಘಟನೆ ನಡೆದಿತ್ತು. ಈಗ ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿದ್ದು ಅವರ ಆಡಳಿತದಲ್ಲಿ ಇಂತಹ ಘಟನೆಗಳು ನಿರೀಕ್ಷಿತ ಎಂದರು.

ನಿನ್ನೆ ನಡೆದ ನೈತಿಕ ಪೊಲೀಸ್ ಗಿರಿ ಖಂಡನೀಯ. ಆದರೆ ಸೋಮೇಶ್ವರದಂತಹ ಪುಣ್ಯ ಕ್ಷೇತ್ರದ ಕಡಲ ಕಿನಾರೆಯಲ್ಲಿ ಸಾರ್ವಜನಿಕವಾಗಿ ಅನ್ಯಧರ್ಮೀಯ ಯುವಕರು ಹಿಂದೂ ಯುವತಿಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವದನ್ನ ಕಂಡ ಯುವಕರು ನೋವಲ್ಲಿ ಉದ್ರೇಕಗೊಳ್ಳುವುದು ಸಹಜ. ಉಳ್ಳಾಲದ ಎಲ್ಲಾ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಲ್ಲಿನ ಭಾವನೆ, ಸೂಕ್ಷ್ಮ ಸ್ಥಿತಿಯನ್ನ ಆಯಾ ಕಾಲೇಜುಗಳ ಮುಖ್ಯಸ್ಥರು ತಿಳಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ನೈತಿಕ ಪೊಲೀಸ್ ಗಿರಿ ಆರೋಪಿಗಳನ್ನ ಕ್ಷಿಪ್ರವಾಗಿ ಬಂಧಿಸಿರುವ ಪೊಲೀಸರು ನಾಲ್ಕೈದು ದಿವಸಗಳ ಹಿಂದೆ ಉಳ್ಳಾಲದಲ್ಲಿ ಹಿಂದೂ ಯುವತಿಯ ಮಾನಭಂಗಕ್ಕೆ ಯತ್ನಿಸಿದವನನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

Also Read: ಸೋಮೇಶ್ವರ ಬೀಚಲ್ಲಿ ನೈತಿಕ ಪೊಲೀಸ್ ಗಿರಿ ; ವಿಹಾರಕ್ಕೆ ಬಂದಿದ್ದ ಮೂವರು ಅನ್ಯಮತೀಯ ವಿದ್ಯಾರ್ಥಿಗಳಿಗೆ ಹಲ್ಲೆ ! 

ಸೋಮೇಶ್ವರ ನೈತಿಕ ಪೊಲೀಸ್ ಗಿರಿ ; ವಿದ್ಯಾರ್ಥಿಗಳಿಗೆ ಥಳಿಸಿದ್ದ ನಾಲ್ವರು ಹಿಂದು ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ

Moral policing of Three students at the beach in Mangalore, Police Commissioner Kuldeep Jain visits Ullal police station. So far police have arrested 5 perosns in connection to this case. A gang assaulted three male students who were in the company of three female students on an outing at Ullal beach. The incident took place at Someshwar sea shore, Ullal police station limits in the evening on Thursday June 1.