ಸ್ವತಂತ್ರ ಭಾರತದಲ್ಲಿ ಸಿದ್ದರಾಮಯ್ಯ ಕ್ರಾಂತಿ ಎಬ್ಬಿಸಿದ್ದಾರೆ, ಸಾವಿರಾರು ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿದಾಗ ದೇಶ ದಿವಾಳಿ ಆಗಿಲ್ಲವೇ ?

03-06-23 08:09 pm       Mangalore Correspondent   ಕರಾವಳಿ

ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಬಿಜೆಪಿಯದ್ದು ವಚನ ಭ್ರಷ್ಟ ಸರಕಾರ. ಕೊಟ್ಟ ಮಾತನ್ನು ಉಳಿಸಿಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ.

ಮಂಗಳೂರು, ಜೂನ್ 3: ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಬಿಜೆಪಿಯದ್ದು ವಚನ ಭ್ರಷ್ಟ ಸರಕಾರ. ಕೊಟ್ಟ ಮಾತನ್ನು ಉಳಿಸಿಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಸರಕಾರ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು, ಯಾವುದೇ ಕಠಿಣ ಷರತ್ತುಗಳನ್ನು ವಿಧಿಸದೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿ ಕೇಂದ್ರದ ವರಿಷ್ಠರಿಗೆ ಮತ್ತು ಸಿದ್ದರಾಮಯ್ಯ ಅವರಿಗೆ ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ ರೈ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಉಚಿತ ಯೋಜನೆಗಳಿಗೆ ದೇಶ ದಿವಾಳಿಯಾಗುತ್ತದೆ ಎಂದು ಪ್ರಧಾನಿಯವರು ಹೇಳಿದ್ದರು. ಸರಕಾರ ಬಂದ ತಕ್ಷಣ ಯಾಕೆ ಕೊಟ್ಟಿಲ್ಲ ಎಂದು ಪ್ರತಿಪಕ್ಷದ ನಾಯಕರು ಕೇಳಿದ್ದರು. ಯಾವುದೇ ಷರತ್ತಿಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು ಎಂದು ಹೇಳಿದ್ದರು. ಇದು ಬಿಜೆಪಿ ನಾಯಕರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದರು.

ಏಳು ಕೆಜಿ ಅಕ್ಕಿ ಕೊಡುವಾಗ ಜನರನ್ನು ಸೋಮಾರಿ ಮಾಡುವ ಯತ್ನ ಎಂದು ಹೇಳಿದ್ದರು. ಹಿಂದೆ ಜನಾರ್ದನ ಪೂಜಾರಿ ಸಾಲಮನ್ನಾ ಮಾಡಿದಾಗಲೂ ಇದೇ ರೀತಿ ದೇಶ ದಿವಾಳಿಯಾಗತ್ತೆ ಎಂದಿದ್ದರು. ಬಿಜೆಪಿಯವರು ಕಾರ್ಪೊರೇಟ್ ಕಂಪನಿಗಳ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿದಾಗ ದೇಶ ದಿವಾಳಿ ಆಗಿಲ್ಲವೇ.. ಸಾವಿರಾರು ಕೋಟಿ ಸಾಲ ಬಾಕಿಯಿರಿಸಿ ದೇಶ ಬಿಟ್ಟು ಓಡಿದಾಗ ದೇಶ ದಿವಾಳಿ ಆಗಲ್ಲವೇ ಎಂದು ಪ್ರಶ್ನಿಸಿದ ರಮಾನಾಥ ರೈ, ಬಿಜೆಪಿಯವರು ಬಡವರಿಗೆ ಯಾವುದನ್ನೂ ಕೊಟ್ಟಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಯೋಜನೆಗಳನ್ನು ಜಾರಿಗೊಳಿಸಿದರೆ ದೇಶ ದಿವಾಳಿಯಾಗುತ್ತದೆ. ಬಡವರಿಗೆ ಮಾಸಾಶನ, ಪಿಂಚಣಿ, ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ನೋಟ್ ಬುಕ್ ವಿತರಣೆ ಇತ್ಯಾದಿ ವ್ಯವಸ್ಥೆಯನ್ನು ತಂದಿದ್ದು ಇಂದಿರಾ ಗಾಂಧಿ ಸರ್ಕಾರ. ಅದನ್ನೇ ನಾವು ಫಾಲೋ ಮಾಡುತ್ತೇವೆ ಎಂದರು.

2014ರ ಚುನಾವಣೆಯಲ್ಲಿ ವಿದೇಶದಿಂದ ಕಪ್ಪು ಹಣ ತರುತ್ತೇವೆ, ಅದನ್ನು ದೇಶಕ್ಕೆ ತಂದಲ್ಲಿ ಪ್ರತಿ ಪ್ರಜೆಯ ಖಾತೆಗೆ 15 ಲಕ್ಷ ಹಾಕಬಹುದು ಎಂದಿದ್ದು ಬಿಜೆಪಿಯವರು. ಆರು ತಿಂಗಳಲ್ಲಿ ಕಪ್ಪು ಹಣ ತರುತ್ತೇವೆ ಎಂದಿದ್ದನ್ನು ನಂಬಿ ಜನ ಮತ ನೀಡಿದ್ದರು. ಈಗ 9 ವರ್ಷ ಆಯ್ತು, ಯಾಕೆ ಅದು ಸಾಧ್ಯವಾಗಿಲ್ಲ ಎಂದು ಕೇಳಿದರೆ ಉತ್ತರ ಇಲ್ಲ. ಕೋವಿಡ್ ಸಂದರ್ಭದಲ್ಲಿ 75 ಲಕ್ಷ ಕೋಟಿ ಪ್ಯಾಕೇಜ್ ಎಂದು ಹೇಳಿದ್ದರು ಮೋದಿ.. ಯಾರಿಗಾದರೂ ಅದರ ಲಾಭ ಸಿಕ್ಕಿದೆಯಾ ಎಂದು ಕೇಳಿದ ರಮಾನಾಥ ರೈ, ಕಾಂಗ್ರೆಸ್ ಕೈಗೆ ಹಾಕಿದ ಶಾಯಿ ಮಾಸುವ ಮೊದಲೇ ಭರವಸೆಯನ್ನು ಈಡೇರಿಸಿದೆ. ರೈತರ ಸಾಲಮನ್ನಾ ಆಗಲೀ, ಹೇಳಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಅಪ್ಪಿ, ಉದಯ ಆಚಾರ್, ಪ್ರಕಾಶ್ಚಂದ್ರ ಶೆಟ್ಟಿ ಮತ್ತಿತರರಿದ್ದರು.

CM Siddaramaiah has created revolution, has fullied all gaurnatees as promises says Congress leader Ramanth Rai in Mangalore.