ಬಡವರ ಅಕ್ಕಿ ಉಳ್ಳವರ ಪಾಲು ; 16 ಲಕ್ಷ ಮೌಲ್ಯದ ಅನ್ನಭಾಗ್ಯ ದಾಸ್ತಾನು ಪತ್ತೆ !! 

02-11-20 10:02 pm       Udupi Reporter   ಕರಾವಳಿ

ಅಕ್ರಮವಾಗಿ ದಾಸ್ತಾನು ಇರಿಸಿದ್ದ ಅನ್ನಭಾಗ್ಯ ಯೋಜನೆಯ 600ಕ್ಕೂ ಅಧಿಕ ಕ್ವಿಂಟಾಲ್ ಅಕ್ಕಿಯನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

ಉಡುಪಿ, ನ. 2: ಶಿರಿಯಾರ ಗ್ರಾಪಂ ವ್ಯಾಪ್ತಿಯ ಕಲ್ಮರ್ಗಿ ಎಂಬಲ್ಲಿನ ರೈಸ್‌ಮಿಲ್ ಒಂದಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಅನ್ನಭಾಗ್ಯ ಯೋಜನೆಯ 600ಕ್ಕೂ ಅಧಿಕ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು, ದಾಳಿ ನಡೆಸಿದ್ದಾರೆ. ಈ ಅಕ್ಕಿಯನ್ನು ಮನೆ ಮನೆಗಳಿಂದ ಸಂಗ್ರಹಿಸಿ ತಂದು ಇಲ್ಲಿ ದಾಸ್ತಾನು ಇರಿಸಲಾಗಿತ್ತು. ಈ ಅಕ್ಕಿಯನ್ನು ಲಾರಿಗಳಿಗೆ ಲೋಡ್ ಮಾಡಿ ಹಾವೇರಿ ಸೇರಿದಂತೆ ಹೊರಜಿಲ್ಲೆಗಳಿಗೆ ಸಾಗಾಟ ಮಾಡಲು ಯತ್ನ ನಡೆದಿತ್ತು. ದಾಳಿ ವೇಳೆ ಮಿಲ್‌ ಮಾಲಕ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ಅಕ್ಕಿಯ ಒಟ್ಟು ಮೌಲ್ಯ 16.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಕ್ಕಿ ತುಂಬಲು ಬಂದಿದ್ದ ಮೂವರು ಲಾರಿ ಚಾಲಕರು ಮತ್ತು ಕ್ಲೀನರ್ ಸೇರಿದಂತೆ, 6 ಲಾರಿಗಳು, ಎರಡು 407 ಟೆಂಪೋ, ಒಂದು ಟಾಟಾ ಹಾಗೂ ಮಾರುತಿ ಇಕೋ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಕಾರ್ಯಾಚರಣೆಯಲ್ಲಿ ಉಡುಪಿ ಆಹಾರ ಇಲಾಖೆಯ ಉಪನಿರ್ದೇಶಕ ಗಜೇಂದ್ರ ವಿ., ಉಡುಪಿ ಆಹಾರ ನಿರೀಕ್ಷಕಿ ಪಾರ್ವತಿ, ಕುಂದಾಪುರ ನಿರೀಕ್ಷಕ ಸುರೇಶ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಮೊದಲಾದವರು ಹಾಜರಿದ್ದರು.

ಬಡವರ ಅಕ್ಕಿ ಉಳ್ಳವರ ಪಾಲು ! 

ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು, ಮಾರಾಟ ಮಾಡುವ ಜಾಲ ಸಕ್ರಿಯವಾಗಿದ್ದು, ಕಳೆದ ತಿಂಗಳು ಕುಂದಾಪುರ ತಾಲೂಕಿನಲ್ಲಿ ಈ ಜಾಲವನ್ನು ಪತ್ತೆ ಮಾಡಲಾಗಿತ್ತು. ಈಗ ಅಕ್ಕಿಯನ್ನು ಮಾರಾಟ ಮಾಡುವ ಜಾಲ ಪತ್ತೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಪಡಿತರ ಅಕ್ಕಿಯ ಅಕ್ರಮ ದಾಸ್ತಾನು, ಸಾಗಾಟ ಕುರಿತು ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ತಿಳಿಸಬೇಕು. ಆಗ ಮಾತ್ರ ಇಂತಹ ಜಾಲದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

Officials on Monday November 2 seized several quintals of rice that was being sold illegally at Udupi. The rice was part of the ration under the Anna Bhagya scheme