Dharmasthala Protest, Saujanya rape case: ಸೌಜನ್ಯಾ ಪ್ರಕರಣ ; ಧರ್ಮಸ್ಥಳ ಕ್ಷೇತ್ರದ ಪರವಾಗಿ ಉಜಿರೆಯಲ್ಲಿ ಶಕ್ತಿ ಪ್ರದರ್ಶನ, ಬೃಹತ್ ಸಾರ್ವಜನಿಕ ಸಭೆ, ವಿನಾಕಾರಣ ಆರೋಪ ಮಾಡಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ

04-08-23 03:56 pm       Mangalore Correspondent   ಕರಾವಳಿ

ಸೌಜನ್ಯಾ ಅತ್ಯಾಚಾರ ಪ್ರಕರಣದಲ್ಲಿ ಧರ್ಮಸ್ಧಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಆರೋಪ ಮಾಡುವುದನ್ನು ಖಂಡಿಸಿ ಉಜಿರೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗಿದೆ. ಧರ್ಮಸ್ಥಳ ಕ್ಷೇತ್ರದ ಪರವಾಗಿ ಹತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕ್ಷೇತ್ರದ ವಿವಿಧ ಸಂಸ್ಥೆಗಳ ಸದಸ್ಯರು, ಭಕ್ತರು ಸೇರಿ ಹಕ್ಕೊತ್ತಾಯ ಮಾಡಿದ್ದಾರೆ.

ಬೆಳ್ತಂಗಡಿ, ಆಗಸ್ಟ್ 4: ಸೌಜನ್ಯಾ ಅತ್ಯಾಚಾರ ಪ್ರಕರಣದಲ್ಲಿ ಧರ್ಮಸ್ಧಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಆರೋಪ ಮಾಡುವುದನ್ನು ಖಂಡಿಸಿ ಉಜಿರೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗಿದೆ. ಧರ್ಮಸ್ಥಳ ಕ್ಷೇತ್ರದ ಪರವಾಗಿ ಹತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕ್ಷೇತ್ರದ ವಿವಿಧ ಸಂಸ್ಥೆಗಳ ಸದಸ್ಯರು, ಭಕ್ತರು ಸೇರಿ ಹಕ್ಕೊತ್ತಾಯ ಮಾಡಿದ್ದಾರೆ.

ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿಯಿಂದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಮುಂದಿನ ರಸ್ತೆಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು ರಸ್ತೆಯಲ್ಲೇ ಬೃಹತ್ ಸಾರ್ವಜನಿಕ ಸಭೆ ನಡೆಸಿದ್ದಾರೆ. ಬಿಜೆಪಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಸೇರಿದಂತೆ ಹಲವಾರು ಸಾಮಾಜಿಕ ಮುಖಂಡರು ಸೇರಿದ್ದರು. ಜನಜಾಗೃತಿ ವೇದಿಕೆ, ಗ್ರಾಮಾಭಿವೃದ್ಧಿ ವೇದಿಕೆಯ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸೇವಾ ನಿರತರು ಪ್ರತಿಭಟನೆಗೆ ಆಗಮಿಸಿದ್ದರು.

ಸಭೆಯಲ್ಲಿ ಮಾತನಾಡಿದ ಗ್ರಾಮಾಭಿವೃದ್ಧಿ ವೇದಿಕೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಎಚ್ ಮಂಜುನಾಥ್, ನಾವು ಸೌಜನ್ಯಾ ಪರ ಇದ್ದೇವೆ, ಬಾಲಕಿಯ ಸಾವಿಗೆ ನ್ಯಾಯಕ್ಕಾಗಿ ಧ್ವನಿ ಎತ್ತುತ್ತೇವೆ. ಆದರೆ, ಅದಕ್ಕಿಂತ ಹೆಚ್ಚು ವೀರೇಂದ್ರ ಹೆಗ್ಗಡೆ ಪರವಾಗಿದ್ದೇವೆ. ನಾವೆಲ್ಲ ಧರ್ಮಸ್ಥಳ ಕ್ಷೇತ್ರದ ಭಕ್ತರು. ವಿನಾಕಾರಣ ಕ್ಷೇತ್ರ ಮತ್ತು ಹೆಗ್ಗಡೆ ಕುಟುಂಬದ ವಿರುದ್ಧ ಆರೋಪ ಮಾಡುವುದನ್ನು ಸಹಿಸುವುದಿಲ್ಲ. ಅಂಥ ಸಾಕ್ಷಿಗಳೇನಾದರೂ ಇದ್ದರೆ ತೋರಿಸಿ, ತನಿಖೆಗೆ ಸಹಕರಿಸಿ. ಆರೋಪ ಮಾಡುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, 11 ವರ್ಷಗಳ ಹಿಂದೆ ಕೊಲೆಯಾದ ಬಾಲಕಿ ಸೌಜನ್ಯಾ ಪರ ನಾವಿದ್ದೇವೆ. ಆಕೆಯ ಸಾವಿಗೆ ನ್ಯಾಯ ಸಿಗಲೇಬೇಕು. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಸೂಕ್ತ ಮರು ತನಿಖೆಗೆ ಆಗ್ರಹಿಸಿದ್ದೇನೆ. ಆದರೆ 11 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ನ್ಯಾಯ ಸಿಗುವುದಲ್ಲ. ಒಂದೆರಡು ತಿಂಗಳಲ್ಲಿ ನ್ಯಾಯ ದೊರಕಿಸಬೇಕು. ಯಾರು ಆರೋಪಿಗಳಿದ್ದಾರೆ ಅವರನ್ನು ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ಹೇಳಿದರು.

ಸೌಜನ್ಯಾ ತಾಯಿಗೆ ಮುತ್ತಿಗೆ, ಆಕ್ರೋಶ

ಪ್ರತಿಭಟನೆ ಸಭೆ ನಡೆಯುತ್ತಿದ್ದಲ್ಲಿಗೆ ಸೌಜನ್ಯಾ ತಾಯಿ ಕುಸುಮಾವತಿ ಮತ್ತು ಸೌಜನ್ಯಾಳ ಇಬ್ಬರು ತಂಗಿಯಂದಿರು ಮತ್ತು ಒಬ್ಬ ತಮ್ಮ ಆಗಮಿಸಿದ್ದರು. ಜಸ್ಟಿಸ್ ಫಾರ್ ಸೌಜನ್ಯಾ ಹೆಸರಲ್ಲಿ ಭಿತ್ತಿಪತ್ರ ಹಿಡಿದು ಸ್ಥಳಕ್ಕೆ ಬಂದ ಇವರ ತಂಡಕ್ಕೆ ಸೇರಿದ್ದ ಜನರು ಮುತ್ತಿಗೆ ಹಾಕಿದರು. ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಸೌಜನ್ಯಾ ತಮ್ಮ ಅಳಲು ಹೇಳಿಕೊಂಡಾಗ ಪ್ರತಿಭಟನಾಕಾರರು ತಳ್ಳಿಕೊಂಡು ಬಂದಿದ್ದಾರೆ. ಆನಂತರ, ಸೌಜನ್ಯಾ ತಾಯಿಗೆ ವೇದಿಕೆ ಹತ್ತುವುದಕ್ಕೂ ಅಲ್ಲಿದ್ದವರು ಅವಕಾಶ ನೀಡಲಿಲ್ಲ. ಪ್ರತಿಭಟನೆ ಸೇರಿದ್ದವರ ಆಕ್ರೋಶ, ಧಿಕ್ಕಾರ ಹೆಚ್ಚುತ್ತಿದ್ದಂತೆ ಪೊಲೀಸರೇ ಅಡ್ಡಗಟ್ಟಿ ಕುಸುಮಾವತಿ ಮತ್ತು ಅವರ ಕುಟುಂಬವನ್ನು ದೂರಕ್ಕೆ ಒಯ್ದರು. ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಸೌಜನ್ಯಾ ತಾಯಿ ಅಳುತ್ತಾ ಸಾಗಿದ್ದು ಮಾರ್ಮಿಕ ಅನ್ನುವಂತಿತ್ತು.

Massive protest held at Dharmasthala for misusing name of the temple in Saujanya rape case. Thousands of people gather to protest against people misusing the name of the temple with the name of Sowjanya rape case in Mangalore.