ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿಯಬೇಕಿದೆ ; ಉಳ್ಳಾಲದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ತಾರನಾಥ ಗಟ್ಟಿ ಅಭಿಮತ 

08-07-26 06:53 pm       HK News Desk   ಕರಾವಳಿ

ಉಳ್ಳಾಲ, ಜು.07 ಅಪರಾಧ ಸುದ್ದಿಗಳನ್ನ ಜನರಲ್ಲಿ ಭೀತಿ ಮೂಡಿಸುವ ರೀತಿಯಲ್ಲಿ ವಿಜೃಂಭಿಸಿದ ಪರಿಣಾಮ 24×7 ವಾಹಿನಿಗಳ ಜನಪ್ರಿಯತೆ ಉತ್ತುಂಗಕ್ಕೆ ಹೋದಷ್ಟೆ ಇಳಿಮುಖವೂ ಕಂಡಿದೆ. ಕರ್ನಾಟಕದ ಸುದ್ದಿ ವಾಹಿನಿಗಳು ಜನರ ಸಲಹೆಗಳನ್ನ ಪರಿಗಣಿಸದೆ, ವೀಕ್ಷಕರ ಪ್ರಶ್ನೆಗಳಿಗೆ ಮನ್ನಣೆಯನ್ನೂ ನೀಡದೆ ಇಂದು ಟಿಆರ್ ಪಿಯನ್ನೇ ಕಳಕೊಂಡಿವೆ. ನೆರೆಯ ಕೇರಳದ ಮಾಧ್ಯಮಗಳು ವೀಕ್ಷಕರು ಸ್ವೀಕರಿಸದ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ, ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದು, ಅಂತಹ ಚಿಂತನೆ ನಮ್ಮಲ್ಲಿಯೂ ಬೆಳೆಯಬೇಕಿದೆ ಎಂದು ಹಿರಿಯ ಪತ್ರಕರ್ತ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟರು.klkl06666

ಉಳ್ಳಾಲ, ಜು.07 ಅಪರಾಧ ಸುದ್ದಿಗಳನ್ನ ಜನರಲ್ಲಿ ಭೀತಿ ಮೂಡಿಸುವ ರೀತಿಯಲ್ಲಿ ವಿಜೃಂಭಿಸಿದ ಪರಿಣಾಮ 24×7 ವಾಹಿನಿಗಳ ಜನಪ್ರಿಯತೆ ಉತ್ತುಂಗಕ್ಕೆ ಹೋದಷ್ಟೆ ಇಳಿಮುಖವೂ ಕಂಡಿದೆ. ಕರ್ನಾಟಕದ ಸುದ್ದಿ ವಾಹಿನಿಗಳು ಜನರ ಸಲಹೆಗಳನ್ನ ಪರಿಗಣಿಸದೆ, ವೀಕ್ಷಕರ ಪ್ರಶ್ನೆಗಳಿಗೆ ಮನ್ನಣೆಯನ್ನೂ ನೀಡದೆ ಇಂದು ಟಿಆರ್ ಪಿಯನ್ನೇ ಕಳಕೊಂಡಿವೆ. ನೆರೆಯ ಕೇರಳದ ಮಾಧ್ಯಮಗಳು ವೀಕ್ಷಕರು ಸ್ವೀಕರಿಸದ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ, ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದು, ಅಂತಹ ಚಿಂತನೆ ನಮ್ಮಲ್ಲಿಯೂ ಬೆಳೆಯಬೇಕಿದೆ ಎಂದು ಹಿರಿಯ ಪತ್ರಕರ್ತ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟರು.

ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ನಡೆದ ಪತ್ರಿಕಾ ದಿನಾಚರಣೆ–2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಮಾಹಿತಿ ಸಂಗ್ರಹಿಸಲು ಇಂದಿನಂತೆ ತಂತ್ರಜ್ಞಾನ ಅಥವಾ ಸಾಮಾಜಿಕ ಜಾಲತಾಣಗಳ ಮೂಲಗಳು ಇರಲಿಲ್ಲ. ಆದರೂ ಅಧಿಕೃತ ಹಾಗೂ ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಪತ್ರಿಕೆಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದವು. ಅಪರಾಧಗಳ ಜೊತೆಗೆ ಅಪರಾಧಿಗಳಿಗೆ ಸಿಗುವ ಶಿಕ್ಷೆಯ ಪ್ರಮಾಣದ ವರದಿಯನ್ನೂ ಪ್ರಕಟಿಸುವ ಮೂಲಕ ಅಪರಾಧ ಎಸಗುವವರಿಗೆ ಭಯ ಮೂಡಿಸಲಾಗುತ್ತಿತ್ತು. ಕೋವಿಡ್ ನಂತರ ಡಿಜಿಟಲ್ ಮಾಧ್ಯಮಕ್ಕೆ ನಮ್ಮನ್ನ ನಾವು ಅರ್ಪಣೆ ಮಾಡಿದ್ದು, ಟಿವಿ ವಾಹಿನಿಗಳ ಟಿಆರ್ ಪಿಯೂ ಇಳಿಕೆಯಾಗಿದೆ. ಹಾಗಂತ ಡಿಜಿಟಲ್ ಮೀಡಿಯಾವೇ ಪರ್ಯಾಯ ಅಥವಾ ಅಂತಿಮವೆಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆಯಾಗಿ ನಾವು ಹಾಕಿಕೊಂಡಿರುವ ಲಕ್ಷ್ಮಣ ರೇಖೆಯ ಬಗ್ಗೆ ವಿಮರ್ಶೆ ಮಾಡಿಕೊಳ್ಳಬೇಕಿದೆಯೆಂದರು.

ಇಂದು ಪತ್ರಿಕೆಗಳ ಕಂಪನಿಗಳು  ವಿಲೀನಗೊಂಡ ಪರಿಣಾಮದಿಂದ ಉದ್ಯೋಗ ಕಡಿತದಿಂದಾಗಿ ಪತ್ರಕರ್ತರಿಗೆ ವೃತ್ತಿ ಅಭದ್ರತೆ ಕಾಡುತ್ತಿದೆ. ಕೋವಿಡ್ ಕಾಲಘಟ್ಟದಲ್ಲಿ ಸುಮಾರು ಐವತ್ತು ಸಾವಿರಕ್ಕಿಂತಲೂ ಅಧಿಕ ಪತ್ರಿಕೆ ಮುಚ್ಚಲ್ಪಟ್ಟು ಬಹುತೇಕ ಪತ್ರಿಕೆಗಳ ಗಾತ್ರವೂ ಸಣ್ಣದಾಗಿವೆ. ಪಸ್ತುತ ಕಾಲ ಘಟ್ಟದಲ್ಲಿ ಪತ್ರಿಕಾ ಮಾಧ್ಯಮಗಳು ಬಹಳಷ್ಟು ಸವಾಲುಗಳನ್ನ ಎದುರಿಸುತ್ತಿವೆಯೆಂದು ತಾರಾನಾಥ್ ಗಟ್ಟಿ ಕಳವಳ ವ್ಯಕ್ತಪಡಿಸಿದರು.

ನಿಟ್ಟೆ ಪರಿಗಣಿತ ವಿವಿಯ ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ.ಸಾಯಿಗೀತಾ ಹೆಗ್ಡೆ ಮಾತನಾಡಿ ಕನ್ನಡದ ಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ' 1843ರಲ್ಲಿ ಆರಂಭವಾಗಿ 1845ರ ವರೆಗೆ ಒಟ್ಟು 39 ಸಂಚಿಕೆಗಳನ್ನು ಪ್ರಕಟಿಸಿತು. ಅಂದಿನ ಪತ್ರಿಕೆಯಲ್ಲಿ ಊರ ವರ್ತಮಾನ, ಸರ್ಕಾರದ ಪ್ರಕಟಣೆಗಳು, ದೇಶ- ವಿದೇಶದ ಸುದ್ದಿಗಳು, ಆಶ್ಚರ್ಯಕರ ಘಟನೆಗಳು, ಕಥೆಗಳು ಹಾಗೂ ಸಾರ್ವಜನಿಕರಿಂದ ಬಂದ ಮಾಹಿತಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಜಾಹೀರಾತು, ಚಿತ್ರಗಳು ಅಥವಾ ಲೇಖಕರ ಹೆಸರಿಗಿಂತ ಜನರಿಗೆ ವಿಶ್ವ ಜ್ಞಾನ ಮತ್ತು ನಿಖರ ಮಾಹಿತಿಯನ್ನು ತಲುಪಿಸುವುದೇ ಪತ್ರಿಕೆಯ ಮುಖ್ಯ ಉದ್ದೇಶವಾಗಿತ್ತು. ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ ಹಾಗೂ ಮಾಧ್ಯಮ ಅಧ್ಯಯನಕ್ಕೆ ಈ ಪತ್ರಿಕೆ ಇಂದಿಗೂ ಅಮೂಲ್ಯ ದಾಖಲೆಯಾಗಿದೆ ಎಂದರು.

ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ ಮುಖ್ಯಸ್ಥರಾದ ಡಾ.ಮೌಲ್ಯ ಬಾಲಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ಘಟಕದ ಅಧ್ಯಕ್ಷ ಶಶಿಧರ್ ಪೊಯ್ಯತ್ತಬೈಲ್, ನಿಕಟಪೂರ್ವ ಅಧ್ಯಕ್ಷ ವಸಂತ್ ಕೊಣಾಜೆ, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಉಪಾಧ್ಯಕ್ಷರಾದ ಸತೀಶ್ ಕುಮಾರ್ ಪುಂಡಿಕಾಯಿ, ಕಾರ್ಯದರ್ಶಿ ಡಾ.ಸತೀಶ್ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.