Sowjanya rape case protest, Mahesh Shetty: ಸೌಜನ್ಯಾ ಪರ ಸುಳ್ಯದಲ್ಲಿ ಮೊಳಗಿದ ಘರ್ಜನೆ ; ನಿಮ್ಮೆಲ್ಲರ ಶಕ್ತಿಯೇ ಅಣ್ಣಪ್ಪ ಸ್ವಾಮಿ, ನಾರಿ ಶಕ್ತಿಯೇ ಚಾಮುಂಡಿ ಎಂದ ಮಹೇಶ್ ಶೆಟ್ಟಿ ತಿಮರೋಡಿ 

08-08-23 06:22 pm       Mangalore Correspondent   ಕರಾವಳಿ

ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು ನ್ಯಾಯಕ್ಕಾಗಿ ಹೋರಾಟ ಎಂಬ ಘೋಷಣೆ ಮೊಳಗಿಸಿದ್ದಾರೆ. 

ಸುಳ್ಯ, ಆಗಸ್ಟ್ 8: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು ನ್ಯಾಯಕ್ಕಾಗಿ ಹೋರಾಟ ಎಂಬ ಘೋಷಣೆ ಮೊಳಗಿಸಿದ್ದಾರೆ. 

ಸುಳ್ಯ ತಾಲೂಕಿನ ನಿಂತಿಕಲ್ಲಿನಿಂದ ಸುಮಾರು 25 ಕಿಲೋಮೀಟರ್ ವಾಹನ ಜಾಥಾ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ಚೆನ್ನಕೇಶವ ದೇವಸ್ಥಾನದ ಬಳಿ ಜಮಾಯಿಸಿ ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರತಿಭಟನೆ ಉದ್ಧೇಶಿಸಿ ಮಾತನಾಡಿದ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಹನ್ನೊಂದು ವರ್ಷಗಳ ನಂತರ ಸೌಜನ್ಯಾಳ ಪರವಾಗಿ ಹೋರಾಟ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಇಷ್ಟೆಲ್ಲ ಕಾನೂನು, ನಮ್ಮ ದುಡ್ಡಿನಲ್ಲಿ ಪೊಲೀಸ್ ಎಲ್ಲ ವ್ಯವಸ್ಥೆ ಇದ್ದರೂ, ನಾವು ನ್ಯಾಯಕ್ಕಾಗಿ ಬೀದಿಗಿಳಿದು ಒಂದು ಹೆಣ್ಮಗಳ ಪರವಾಗಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಸಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ‌ ಎಂದರು.

ಸೌಜನ್ಯ ಕೊಲೆಗಾರ ಯಾರೇ ಆಗಿರಲಿ. ಆರೋಪಿ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಅಥವಾ ಸಾಮಾನ್ಯ ವ್ಯಕ್ತಿಯೇ ಆಗಿರಲಿ. ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಈ ಹೋರಾಟ ಯಾವುದೇ ಕ್ಷೇತ್ರದ, ಧರ್ಮದ ಅಥವಾ ಜಾತಿಯ ವಿರುದ್ಧವಲ್ಲ. ಒಬ್ಬ ಅಪ್ರಾಪ್ತ ಬಾಲಕಿಯನ್ನು ಪೈಶಾಚಿಕವಾಗಿ ತಿಂದು ಮುಕ್ಕಿದ್ದರಲ್ಲ. ಅಂತಹ ಘಟನೆ ಆಗಿದ್ದು ಹೌದಲ್ಲವೇ.. ಹಾಗಾಗಿ ಆರೋಪಿ ಯಾರೆಂದು ಸಮಾಜಕ್ಕೆ ತಿಳಿಯಬೇಕು. ಅದು ಯಾವ ಮುಂಡಾಸುಧಾರಿಯೇ ಆಗಿರಲಿ ಅಥವಾ ಆತನ ಮಗನೇ ಆಗಿರಲಿ. ಆತನಿಗೆ ಶಿಕ್ಷೆ ಆಗಲೇಬೇಕು. ಅಣ್ಣಪ್ಪ ಸ್ವಾಮಿ, ಮಂಜುನಾಥ ಅಂದರೆ ಬೇರೆ ಯಾರೂ ಅಲ್ಲ‌. ನಿಮ್ಮೆಲ್ಲರ ಶಕ್ತಿಯೇ ಅಣ್ಣಪ್ಪ ಸ್ವಾಮಿ. ಇಲ್ಲಿ ಸೇರಿದ ನಾರಿ ಶಕ್ತಿಯೇ ಚಾಮುಂಡಿ. ಈಗ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂತಹ ಧ್ವನಿ ಮೊಳಗಿದೆ‌. ಈ ಧ್ವನಿ ಏಳಲೇಬೇಕಿತ್ತು. ಯಾಕಂದ್ರೆ, ಧರ್ಮಸ್ಥಳ ಗ್ರಾಮದಲ್ಲಿ ಇಂತಹ ಅವೆಷ್ಟೋ ಘಟನೆಗಳು ನಡೆದಿವೆ. ಸಾವಿರ ಸಂಖ್ಯೆಯಲ್ಲಿ ಅತ್ಯಾಚಾರ, ಕೊಲೆಗಳಾಗಿವೆ. ಇದಕ್ಕೆಲ್ಲ ಕೊನೆ ಆಗಬೇಕಲ್ಲವೇ.. ಆರೋಪಿಗಳಿಗೆ ಯಾರು ರಕ್ಷಣೆ ಕೊಟ್ಟಿದ್ದಾರೋ, ಯಾರೆಲ್ಲ ಪೊಲೀಸರು ಕೇಸ್ ಮುಚ್ಚಿ ಹಾಕಲು ಯತ್ನ ಮಾಡಿದ್ದಾರೋ ಅವರೆಲ್ಲರಿಗೂ ಅಣ್ಣಪ್ಪ ಸ್ವಾಮಿ ಶಾಸ್ತಿ ಮಾಡಲಿದ್ದಾನೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಅಬ್ಬರಿಸಿದ್ದಾರೆ.

Sullia Massive protest held demanding Justice for Sowjanya rape case. The protesters urged the arrest of real accused under the leadership of Mahesh Shetty Thimarody.