ಆಧಾರ್ ಇಲ್ಲದ ನೆಪದಲ್ಲಿ ಶಾಲೆಗೆ ತೆರಳುವ ಪುಟಾಣಿ ಬಾಲಕಿಯರನ್ನ ಅರ್ಧಕ್ಕೆ ಇಳಿಸಿದ ಕಂಡಕ್ಟರ್ ; ಬಸ್ ತಡೆದು ಸ್ಥಳೀಯರ ಪ್ರತಿಭಟನೆ 

24-08-23 07:43 pm       Mangalore Correspondent   ಕರಾವಳಿ

ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ನರ್ಮ್ ಬಸ್ಸಲ್ಲಿ ಪ್ರಯಾಣಿಸಿದ ಐವರು ಪ್ರೈಮರಿ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ಸನ್ನ ತಡೆದ ಸ್ಥಳೀಯರು ನಿರ್ವಾಹಕನನ್ನ ತರಾಟೆಗೆತ್ತಿಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ.

ಉಳ್ಳಾಲ, ಆ.24: ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ನರ್ಮ್ ಬಸ್ಸಲ್ಲಿ ಪ್ರಯಾಣಿಸಿದ ಐವರು ಪ್ರೈಮರಿ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ಸನ್ನ ತಡೆದ ಸ್ಥಳೀಯರು ನಿರ್ವಾಹಕನನ್ನ ತರಾಟೆಗೆತ್ತಿಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ.

ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಸರಕಾರಿ ನರ್ಮ್ ಬಸ್ಸಿನ ನಿರ್ವಾಹಕ ಹುಸೇನ್ ಸಾಬ್ ಹಳ್ಳೂರ ಎಂಬಾತ ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ ಉಚಿತ ಪ್ರಯಾಣವಿಲ್ಲವೆಂದು ಹಣ ಕೇಳಿದ್ದು ಹಣ ನೀಡದ್ದಕ್ಕೆ ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿ ಅಮಾನವೀಯತೆ ಮರೆದಿದ್ದಾನೆ. 

ಕುಂಪಲ ಸರಕಾರಿ ಶಾಲೆಯ ಎರಡನೇ ಮತ್ತು ಮೂರನೇ ತರಗತಿಯ ಐವರು ವಿದ್ಯಾರ್ಥಿನಿಯರು ಇಂದು ಶಾಲೆ ಮಗಿಸಿ ಸರಕಾರಿ ಬಸ್ಸು ಹತ್ತಿದ್ದಾರೆ. ಬಸ್ಸಿನ ಎಂದಿನ ನಿರ್ವಾಹಕ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಕೇಳುತ್ತಿರಲಿಲ್ಲವಂತೆ. ಹಾಗಾಗಿ ವಿದ್ಯಾರ್ಥಿನಿಯರು ಆಧಾರ್ ತಂದಿರಲಿಲ್ಲ. ಇಂದು‌ ಖಾಯಂ ನಿರ್ವಾಹಕ ರಜೆ ಮಾಡಿದ್ದು ಹುಸೇನ್ ಸಾಬ್ ಬದಲಿ ಕರ್ತವ್ಯದಲ್ಲಿದ್ದ. ಹುಸೇನ್ ಎಳೆಯ ವಿದ್ಯಾರ್ಥಿಗಳೆಂದು ಕರುಣೆ ತೋರದೆ ಜೇಬಲ್ಲಿ ಹಣ ಇಲ್ಲದೆ ಕುಂಪಲದ ಬಗಂಬಿಲಕ್ಕೆ ತೆರಳಲಿದ್ದ ಐವರು ಮಕ್ಕಳನ್ನ ಮೂರುಕಟ್ಟೆ ಎಂಬಲ್ಲೇ ಕೆಳಗಿಳಿಸಿ ತೆರಳಿದ್ದಾನೆ.

ಈ ವಿದ್ಯಮಾನವನ್ನ ಬಸ್ಸಲ್ಲೇ ಇದ್ದ ಕುಂಪಲ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ‌ ಗುಲಾಬಿ ಅವರು ಗಮನಿಸಿದ್ದಾರೆ.
ಸಂಜೆ ಸ್ಥಳೀಯರು ಕುಂಪಲ ಶಾಲೆಯ ಎದುರೇ ಬಸ್ಸನ್ನ ತಡೆದು ನಿಲ್ಲಿಸಿದ್ದು ನಿರ್ವಾಹಕನನ್ನ ತರಾಟೆಗೆತ್ತಿದ್ದಾರೆ. ಸ್ಥಳೀಯರಾದ ಯಶವಂತ್ ಅವರು ಕೆಎಸ್ ಆರ್ ಟಿಸಿ ಅಧಿಕಾರಿ ರಮ್ಯ ಅವರನ್ನ ಸಂಪರ್ಕಿಸಿ ಎಳೆಯ ಮಕ್ಕಳನ್ನ ಮಾವೀಯತೆ ತೋರಿಸದೆ ಬಸ್ಸಿನಿಂದ ಕೆಳಗಿಳಿಸಿದ ತಪ್ಪಿತಸ್ಥ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

No Aaadhar card conductor forces school student to get down from bus at Kumpala in Mangalore.