Puttur News, Arun Puthila, Dk Sp Rishyanth: ಜಾಗದ ತಕರಾರಿನಲ್ಲಿ ಹಲ್ಲೆ ಕೃತ್ಯ ; ಪುತ್ತಿಲ ಪರಿವಾರದಿಂದ ಹಲ್ಲೆಯೆಂಬುದು ಸುಳ್ಳು ಸುದ್ದಿ- ಎಸ್ಪಿ ಸ್ಪಷ್ಟನೆ, ಕಾನೂನು ಕ್ರಮಕ್ಕೆ ಪುತ್ತಿಲ ಪರಿವಾರ ಆಗ್ರಹ  

16-01-24 10:00 pm       Mangalore Correspondent   ಕರಾವಳಿ

ಜಾಗದ ತಕರಾರಿನಲ್ಲಿ ನಡೆದ ಗಲಾಟೆಯನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಅಯೋಧ್ಯೆ ಅಕ್ಷತೆ ಹಂಚುವ ವಿಚಾರದಲ್ಲಿ ಹಿಂದು ಸಂಘಟನೆ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿದ ಘಟನೆ ನಡೆದಿದ್ದು, ಕೊನೆಗೆ ಖುದ್ದು ಎಸ್ಪಿ ಸಿಬಿ ರಿಷ್ಯಂತ್ ಅವರೇ ಹಾಗೇನೂ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಪ್ರಸಂಗ ನಡೆದಿದೆ.

ಪುತ್ತೂರು, ಜ.16: ಜಾಗದ ತಕರಾರಿನಲ್ಲಿ ನಡೆದ ಗಲಾಟೆಯನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಅಯೋಧ್ಯೆ ಅಕ್ಷತೆ ಹಂಚುವ ವಿಚಾರದಲ್ಲಿ ಹಿಂದು ಸಂಘಟನೆ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿದ ಘಟನೆ ನಡೆದಿದ್ದು, ಕೊನೆಗೆ ಖುದ್ದು ಎಸ್ಪಿ ಸಿಬಿ ರಿಷ್ಯಂತ್ ಅವರೇ ಹಾಗೇನೂ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಪ್ರಸಂಗ ನಡೆದಿದೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಜ.15ರಂದು ಮುಂಡೂರು ಗ್ರಾಮದ ಬರೆಕೊಲಾಡಿ ಎಂಬಲ್ಲಿನ ಅಕ್ಕಪಕ್ಕದ ನಿವಾಸಿಗಳು ಜಾಗದ ತಕರಾರಿನಲ್ಲಿ ಹಲ್ಲೆ, ಜೀವ ಬೆದರಿಕೆ ಒಡ್ಡಿದ ಬಗ್ಗೆ ದೂರು, ಪ್ರತಿದೂರು ನೀಡಿದ್ದರು. ಮುಂಡೂರು ಗ್ರಾಮದ ಸಂತೋಷ್ ಎಂಬವರು ಜ.15ರಂದು ರಾತ್ರಿ ತಾನು ಮನೆಗೆ ತೆರಳುತ್ತಿದ್ದಾಗ ಕೇಶವ, ಧನಂಜಯ, ಜಗದೀಶ್ ಎಂಬವರು ಹಲ್ಲೆ ನಡೆಸಿದ್ದಾಗಿ ಮತ್ತು ಹಲ್ಲೆ ತಡೆಯಲು ಬಂದ ತಾಯಿ ಸವಿತಾ ಅವರಿಗೂ ಹಲ್ಲೆ ನಡೆಸಿದ್ದಾರೆಂದು ದೂರು ನೀಡಿದ್ದರು. ಹಲ್ಲೆಯಿಂದ ಗಾಯಗೊಂಡ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಪ್ರತಿದೂರಿನಲ್ಲಿ ಕೇಶವ ನಾಯ್ಕ್ ಎಂಬವರು ದೂರು ನೀಡಿದ್ದು, ಜ.15ರಂದು ರಾತ್ರಿ ಸಂದೀಪ ಮತ್ತು ಸಂತೋಷ್ ಅವರ ಪತ್ನಿಯರು ತಮ್ಮ ಜಮೀನಿನ ತಂತಿ ಬೇಲಿಯನ್ನು ಕಿತ್ತು ಹಾಕಲು ಆರಂಭಿಸಿದ್ದು, ಈ ಬಗ್ಗೆ ಕೇಳಿದಾಗ ಅವಾಚ್ಯವಾಗಿ ಬೈದಿರುತ್ತಾರೆ. ಆ ಬಗ್ಗೆ ದೂರು ನೀಡಲೆಂದು ಸಂಬಂಧಿಕ ಧನಂಜಯ ಅವರ ಜೊತೆಗೆ ಪೊಲೀಸ್ ಠಾಣೆಗೆ ತೆರಳುವ ಸಂದರ್ಭದಲ್ಲಿ ಸಂತೋಷ್ ಹೆಲ್ಮೆಟ್ ನಲ್ಲಿ ಹಲ್ಲೆ ಮಾಡಿದ್ದಾನೆ. ಗಲಾಟೆ ಸಂದರ್ಭದಲ್ಲಿ ಕೇಶವರ ತಾಯಿ ಸ್ಥಳಕ್ಕೆ ಬಂದಿದ್ದು, ಅವರ ಮೇಲೆಯೂ ಸಂತೋಷ್ ಮತ್ತು ಇನ್ನಿತರರು ಹಲ್ಲೆ ನಡೆಸಿದ್ದಾರೆ. ಆಬಳಿಕ ಹಲ್ಲೆಗೀಡಾದ ಕೇಶವ ಮತ್ತು ಅವರ ತಾಯಿ ಜಯಂತಿಯನ್ನು ಮಹಾವೀರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಬಗ್ಗೆಯೂ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆದರೆ ಹಲ್ಲೆ, ನಿಂದನೆ, ಬೆದರಿಕೆ ಘಟನೆಯನ್ನು ಪುತ್ತಿಲ ಪರಿವಾರದವರು ಹಲ್ಲೆ ನಡೆಸಿದ್ದಾರೆಂದು ತಿರುಚಿ ವರದಿ ಮಾಡಲಾಗಿತ್ತು. ಅಯೋಧ್ಯೆ ಅಕ್ಷತೆ ಹಂಚುವ ವಿಚಾರದಲ್ಲಿ ಹಲ್ಲೆ ನಡೆಸಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಸುದ್ದಿ ಬರುತ್ತಿದ್ದಂತೆ ಬಿಜೆಪಿ ನಾಯಕರು ಸಂತೋಷ್ ಮತ್ತು ತಾಯಿ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ, ಪುತ್ತಿಲ ಪರಿವಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜಕೀಯ ಮೈಲೇಜ್ ತೆಗೆದುಕೊಳ್ಳಲು ನೋಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಕಿಶೋರ್ ಬೊಟ್ಯಾಡಿ, ಪುತ್ತಿಲ ಪರಿವಾರದ ವಿರುದ್ಧ ಯುದ್ಧ ಸಾರುವುದಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಸಂತೋಷ್ ಮನೆಗೆ ಪುತ್ತಿಲ ಪರಿವಾರದಿಂದಲೇ ಅಕ್ಷತೆ

ಹಲ್ಲೆ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಎಸ್ಪಿ ರಿಷ್ಯಂತ್ ಪ್ರಕಟಣೆ ನೀಡಿದ್ದು, ಅಕ್ಷತೆ ವಿಚಾರದಲ್ಲಿ ಹಲ್ಲೆ ಎನ್ನುವುದು ಸುಳ್ಳು ಸುದ್ದಿ. ಅಕ್ಕಪಕ್ಕದ ನಿವಾಸಿಗಳು ಜಾಗದ ವಿಚಾರದಲ್ಲಿ ಹಲ್ಲೆ ಮಾಡಿಕೊಂಡಿದ್ದಾರೆ. ಪುತ್ತಿಲ ಪರಿವಾರದಿಂದ ಹಲ್ಲೆ ಎನ್ನುವುದು ಸುಳ್ಳು ಸುದ್ದಿ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಪುತ್ತಿಲ ಪರಿವಾರದಿಂದ ಪ್ರಕಟಣೆ ನೀಡಲಾಗಿದ್ದು, ನಾವು ಅಯೋಧ್ಯೆ ರಾಮಮಂದಿರದ ಬಗ್ಗೆ ಅತೀವ ಗೌರವ ಭಾವನೆ ಹೊಂದಿದ್ದೇವೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ಅಯೋಧ್ಯೆ ರೀತಿ ದೀಪಾಲಂಕಾರ ಮಾಡಿದ್ದೇವೆ. ವಿಶೇಷ ಅಂದ್ರೆ, ಹಲ್ಲೆಗೀಡಾದ ಸಂತೋಷ್ ಅವರ ಮನೆಗೆ ಅರುಣ್ ಕುಮಾರ್ ಪುತ್ತಿಲರ ನೇತೃತ್ವದಲ್ಲಿಯೇ ಅಯೋಧ್ಯೆ ಅಕ್ಷತೆ ಹಂಚಲಾಗಿತ್ತು. ಇದರ ಫೋಟೋ, ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ. ಹಾಗಿದ್ದರೂ, ಪುತ್ತಿಲ ಪರಿವಾರದ ಬಗ್ಗೆ ದ್ವೇಷ ಭಾವನೆ ಹುಟ್ಟುವಂತೆ ಅಪಪ್ರಚಾರ ಮತ್ತು ಸಂಘಟನೆ ಬಗ್ಗೆ ತೇಜೋವಧೆ ಆಗುವ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇಂತಹ ಕೃತ್ಯ ಎಸಗಿದವರ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Land dispute Arun Puthila members assult man in puttur is fake says Dakshina Kannada  SP C B Rishyanth.