Mangalore Nanthoor Accident today, Sameeth Shetty; ನಂತೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ; ಡಿವೈಡರ್ ಏರಿದ ಕಾರು ಅಪ್ಪಚ್ಚಿ ! ತೊಕ್ಕೊಟ್ಟಿನ‌ ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಮೊಮ್ಮಗ ಬಲಿ 

23-03-24 10:21 am       Mangaluru Correspondent   ಕರಾವಳಿ

ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪ್ಪಚ್ವಿಯಾದ ಘಟನೆ ನಂತೂರಿನಲ್ಲಿ ತಡರಾತ್ರಿ ಸಂಭವಿಸಿದ್ದು ಭೀಕರ ರಸ್ತೆ ಅಪಘಾತಕ್ಕೆ ತೊಕ್ಕೊಟ್ಟಿನ ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಬಲಿಯಾಗಿದ್ದಾನೆ.

ಮಂಗಳೂರು, ಮಾ.23: ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪ್ಪಚ್ವಿಯಾದ ಘಟನೆ ನಂತೂರಿನಲ್ಲಿ ತಡರಾತ್ರಿ ಸಂಭವಿಸಿದ್ದು ಭೀಕರ ರಸ್ತೆ ಅಪಘಾತಕ್ಕೆ ತೊಕ್ಕೊಟ್ಟಿನ ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಬಲಿಯಾಗಿದ್ದಾನೆ.

ತೊಕ್ಕೊಟ್ಟಿನ ಹಿರಿಯ ಬಿಜೆಪಿ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ(29) ಯಾನೆ ಬಂಟಿ ಸಾವನ್ನಪ್ಪಿರುವ ಯುವಕ. ಶಮಿತ್ ನಿನ್ನೆ ರಾತ್ರಿ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ನಡೆದಿದ್ದ ದೈವದ ಕೋಲದಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. 

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ. ಕಾರಿನ ಮುಂಭಾಗ ಯಾವುದೆಂದು ತಿಳಿಯಲಾಗದಷ್ಟು ನಜ್ಜುಗುಜ್ಜಾಗಿದ್ದು ತಡೆಬೇಲಿಯ ಮೇಲೆ ಸಿಕ್ಕಿಕೊಂಡಿತ್ತು. ಬೆಳಗ್ಗೆ ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಗಿತ್ತು. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಲಲಿತಾ ಸುಂದರ್ ಅವರು ಬಿಜೆಪಿಯ ಹಿರಿಯ ನಾಯಕಿಯಾಗಿದ್ದು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಆಶೀರ್ವಾದ್ ಕಾಂಪ್ಲೆಕ್ಸ್ ಹೆಸರಿನ ಬೃಹತ್ ವಾಣಿಜ್ಯ ಕಟ್ಟಡ ಮತ್ತು ಹೊಟೇಲ್ ಹೊಂದಿದ್ದಾರೆ. ಲಲಿತಾ ಅವರ ಏಕೈಕ ಮಗ ಸಂತೋಷ್ ಯಾನೆ ಸಂತು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮೊಮ್ಮಗ ಶಮಿತ್ ಬಾಲ್ಯದಿಂದಲೇ ತಾಯಿ, ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ದ. ಶಮಿತ್  ಮದುವೆ ಮಾಡಲು ವಧುವಿನ ಅನ್ವೇಷಣೆಯನ್ನೂ ಪೋಷಕರು ನಡೆಸುತ್ತಿದ್ದರು.

ಲಲಿತಾ ಸುಂದರ್ ಅವರು ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ನ ಕೊರಗಜ್ಜ ಸೇವಾ ಸಮಿತಿಯ ಗೌರವಾಧ್ಯಕ್ಷೆ ಆಗಿದ್ದು ಕುಟುಂಬವು ಕಳೆದ ಎರಡು ವರುಷದ ಹಿಂದೆ ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಾಲೆ, ದಂಟೆಯನ್ನ ಹರಕೆ ರೂಪದಲ್ಲಿ ಸಮರ್ಪಿಸಿತ್ತು. ಶಮಿತ್ ಅವರ ಅಕಾಲಿಕ ಅಗಲಿಕೆಗೆ ಬಿಜೆಪಿ ಜಿಲ್ಲಾ ಮತ್ತು ಮಂಗಳೂರು ಮಂಡಲದ ನಾಯಕರು ಶೋಕ ವ್ಯಕ್ತ ಪಡಿಸಿದ್ದಾರೆ. ಮೃತ ಶಮಿತ್ ತಾಯಿ, ಸಹೋದರಿ, ಅಜ್ಜಿಯನ್ನು ಅಗಲಿದ್ದಾರೆ.

Mangalore car accident in Nanthoor, a 29-year-old youth from Thokottu was killed. The deceased has been identified as Sameeth Shetty, the grandson of BJP leader Lalitha Sunder.