Supreeth Kumar Poojary: ದಕ್ಷಿಣ ಕನ್ನಡ, ಉಡುಪಿ ಎರಡು ಕ್ಷೇತ್ರದಲ್ಲೂ ಸುಪ್ರೀತ್ ಪೂಜಾರಿ ಸ್ಪರ್ಧೆ, 16 ವರ್ಷಗಳ ನಿರಂತರ ಹೋರಾಟ, ಜೆಡಿಯು ಕೈಕೊಟ್ಟರೆ ಪಕ್ಷೇತರ !

10-04-24 10:11 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವೇರುತ್ತಿದ್ದು, ಬಿಜೆಪಿ- ಕಾಂಗ್ರೆಸ್ ನೇರ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಈ ಬಾರಿ ನಾಮಪತ್ರ ಪರಿಶೀಲನೆಯ ಬಳಿಕ ಒಟ್ಟು ಒಂಬತ್ತು ಮಂದಿ ಕಣದಲ್ಲಿದ್ದಾರೆ. ಅದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಪ್ರೀತ್ ಕುಮಾರ್ ಪೂಜಾರಿ ಒಬ್ಬರು.

ಮಂಗಳೂರು, ಎ.10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವೇರುತ್ತಿದ್ದು, ಬಿಜೆಪಿ- ಕಾಂಗ್ರೆಸ್ ನೇರ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಈ ಬಾರಿ ನಾಮಪತ್ರ ಪರಿಶೀಲನೆಯ ಬಳಿಕ ಒಟ್ಟು ಒಂಬತ್ತು ಮಂದಿ ಕಣದಲ್ಲಿದ್ದಾರೆ. ಅದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಪ್ರೀತ್ ಕುಮಾರ್ ಪೂಜಾರಿ ಒಬ್ಬರು.

ಅಸೆಂಬ್ಲಿ ಅಥವಾ ಲೋಕಸಭೆಯ ಪ್ರತಿ ಚುನಾವಣೆಗಳಲ್ಲೂ ಸ್ಪರ್ಧಾ ಕಣಕ್ಕಿಳಿಯುವುದನ್ನೇ ರೂಢಿ ಮಾಡಿಕೊಂಡಿರುವ ಸುಪ್ರೀತ್ ಪೂಜಾರಿ ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಎರಡು ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಪಕ್ಷೇತರ ಸ್ಪರ್ಧೆ, ಉಡುಪಿ ಕ್ಷೇತ್ರದಲ್ಲಿ ಜನಹಿತ ಪಾರ್ಟಿ ಹೆಸರಲ್ಲಿ ಕಣಕ್ಕಿಳಿದಿದ್ದಾರೆ.

ಪ್ರತಿ ಬಾರಿ ಜೆಡಿಯು ಪಕ್ಷದಿಂದ ಸ್ಪರ್ಧಿಸುತ್ತಿದ್ದ ಅವರಿಗೆ ಈ ಬಾರಿ ಆ ಪಕ್ಷದಿಂದ ಟಿಕೆಟ್ ಸಿಕ್ಕಿಲ್ಲ. ಬಿಹಾರದಲ್ಲಿ ಅಧಿಕಾರದಲ್ಲಿರುವ ಜೆಡಿಯು ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟದಲ್ಲಿದೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲು ಅವಕಾಶ ಇಲ್ವಂತೆ. ಹೀಗಾಗಿ ಸುಪ್ರೀತ್ ಪೂಜಾರಿ ಮಂಗಳೂರಿನಲ್ಲಿ ಪಕ್ಷೇತರ, ಉಡುಪಿಯಲ್ಲಿ ಜನಹಿತ ಪಾರ್ಟಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಮಂಗಳೂರಿನ ಕಾವೂರು ನಿವಾಸಿಯಾಗಿರುವ ಸುಪ್ರೀತ್ ತನ್ನದೇ ಆದ ಏಡ್ ಏಜನ್ಸಿಯನ್ನು ಇಟ್ಟುಕೊಂಡಿದ್ದು, ಪ್ರತಿ ಚುನಾವಣೆಯಲ್ಲಿ ಠೇವಣಿ ದುಡ್ಡನ್ನು ತಾನೇ ಕಟ್ಟಿ ಸ್ಪರ್ಧಿಸಿ ಸುದ್ದಿಯಾಗುತ್ತಿದ್ದಾರೆ. ಚುನಾವಣೆ ಸ್ಪರ್ಧೆ ಅನ್ನೋದು ಅವರಿಗೆ ಹವ್ಯಾಸ ಆಗಿಬಿಟ್ಟಿದೆ.

ಉದ್ಯೋಗಕ್ಕಾಗಿ ನನ್ನ ಹೋರಾಟ

ಈ ಬಗ್ಗೆ ಅವರಲ್ಲಿ ಯಾಕಾಗಿ ಸ್ಪರ್ಧೆ ಎಂದು ಕೇಳಿದಾಗ, 2008ರಿಂದ ಚುನಾವಣೆ ಸ್ಪರ್ಧೆಯಲ್ಲಿ ತೊಡಗಿದ್ದೇನೆ. ಪ್ರತಿ ಬಾರಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಇದೆ. ಬಿಜೆಪಿ, ಕಾಂಗ್ರೆಸಿನಲ್ಲಿ ಸ್ಪರ್ಧಿಸಲು ಅವಕಾಶ ಸಿಗಲ್ಲ. ಅಲ್ಲಿ ಹಣ ಇಲ್ಲದವರು, ಸಾಮಾನ್ಯರು ಕೇವಲ ಕಾರ್ಯಕರ್ತ ಅಷ್ಟೇ ಆಗಿರಬೇಕು. ಜೆಡಿಯು ಪಕ್ಷದಿಂದ ನಾನು ಸ್ಪರ್ಧೆ ಮಾಡುತ್ತಿದ್ದೆ. ಈ ಬಾರಿ ಪಕ್ಷೇತರ ಸ್ಪರ್ಧಿಸುತ್ತಿದ್ದೇನೆ. ಮಂಗಳೂರಿನಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಅಲ್ಲಿಂದ ಪದವಿ ಪಡೆದು ಬರುವವರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ನೀಡುವ ಫ್ಯಾಕ್ಟರಿಯಾಗಲೀ, ಕಂಪನಿಯಾಗಲೀ ಇಲ್ಲಿಗೆ ಬರುತ್ತಿಲ್ಲ. ಜನಪ್ರತಿನಿಧಿಯಾದವರು ಉದ್ಯೋಗದ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ. ಈ ಹೋರಾಟ ಮುಂದಿಟ್ಟು ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ಯಾವಾಗ ಆದ್ರೂ ಒಮ್ಮೆಗೆ ನಾನು ಗೆಲ್ಲುವ ಅವಕಾಶ ಬರಬಹುದು ಎಂದು ಹೇಳುತ್ತಾರೆ.

Supreeth Kumar Poojary files nomination at both Mangalore and Udupi as independent candidate for the coming loksabha elections 2024.