Puttur news, Ramchandra officer: ವರ್ಗಾವಣೆ ಆದೇಶಕ್ಕೆ ತಡೆ ತಂದು ಮತ್ತೆ ಕುರ್ಚಿಗಂಟಿದ ಅಧಿಕಾರಿಗೆ ಸಸ್ಪೆಂಡ್ ಶಿಕ್ಷೆ ; ತರಕಾರಿ ವ್ಯಾಪಾರಸ್ಥರ ದೂರಿಗೆ ಸ್ಪಂದಿಸಿದ ಎಪಿಎಂಸಿ ನಿರ್ದೇಶಕರು 

04-05-24 08:45 pm       Mangalore Correspondent   ಕರಾವಳಿ

ಎಪಿಎಂಸಿ ಸಹಾಯಕ ಕಾರ್ಯದರ್ಶಿಯೊಬ್ಬರು ತನ್ನ ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದು ಮತ್ತೆ ಅಲ್ಲಿಯೇ ಕೆಲಸಕ್ಕೆ ಹಾಜರಾದ ದಿನವೇ ಅಮಾನತುಗೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು, ಮೇ.4: ಎಪಿಎಂಸಿ ಸಹಾಯಕ ಕಾರ್ಯದರ್ಶಿಯೊಬ್ಬರು ತನ್ನ ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದು ಮತ್ತೆ ಅಲ್ಲಿಯೇ ಕೆಲಸಕ್ಕೆ ಹಾಜರಾದ ದಿನವೇ ಅಮಾನತುಗೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಎಪಿಎಂಸಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಎಂ.ಗಂಗಾಧರ ಸ್ವಾಮಿ ಆದೇಶ ಹೊರಡಿಸಿದ್ದಾರೆ. 

ರಾಮಚಂದ್ರ ಅವರು ತರಕಾರಿ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ತರಕಾರಿ ವಾಹನಗಳ ಒಳಪ್ರವೇಶವನ್ನು ನಿರಾಕರಿಸುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪರವಾನಗಿ ನೀಡದೆ ಇರುವುದರಿಂದ ವ್ಯಾಪಾರದಲ್ಲಿ ನಷ್ಟ ಆಗಿದೆ ಎಂದು ಪುತ್ತೂರು ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಸ್ಥರು ಜನವರಿ 4ರಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

ದೂರಿನ ತನಿಖೆಗಾಗಿ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಈ ಮಧ್ಯೆ ರಾಮಚಂದ್ರ ಅವರನ್ನು ಜ.16ರಿಂದ ಎರಡು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಆದೇಶ ಮಾಡಿದ್ದರು. ಆನಂತರ, ಅವರನ್ನು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖಾಲಿಯಿದ್ದ ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ವರ್ಗಾಯಿಸಿ ಕೃಷಿ ಮಾರಾಟ ಇಲಾಖೆ ಆದೇಶ ಮಾಡಿತ್ತು. ಆದರೆ, ರಾಮಚಂದ್ರ ಅವರು ರಾಯಚೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗದೆ ವರ್ಗಾವಣೆ ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯಕ್ಕೆ (ಕೆಎಟಿಗೆ) ದೂರು ಸಲ್ಲಿಸಿದ್ದರು. ತನ್ನ ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ಪಡೆಯುತ್ತಲೇ ಗುರುವಾರ ಬೆಳಗ್ಗೆ ಅವರು ಪುತ್ತೂರಿನಲ್ಲೇ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕರ್ತವ್ಯಕ್ಕೆ ಹಾಜರಾದ ಕೆಲ ಹೊತ್ತಿನಲ್ಲೇ ಮಧ್ಯಾಹ್ನ 12 ಗಂಟೆ ವೇಳೆಗೆ ಕರ್ನಾಟಕ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರು ಅಮಾನತು ಮಾಡಿದ್ದಾರೆ. ಕರ್ತವ್ಯ ಲೋಪದ ಆರೋಪದಲ್ಲಿ ಇಲಾಖಾ ತನಿಖೆ ನಡೆಯುತ್ತಿರುವಾಗಲೇ ಅದೇ ಜಾಗಕ್ಕೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಕ್ಕೆ ಪ್ರತಿಯಾಗಿ ಸಸ್ಪೆಂಡ್ ಮಾಡಿದ್ದಾರೆ.

Vegetable vendor complaint, apmc officer suspended in puttur. The suspended officer is Ramachandra.