Kadaba illegal sand raid, Mangalore crime: ಕಡಬ ಮರಳು ದಂಧೆಗೆ ಕಡೆಗೂ ಪೊಲೀಸರ ದಾಳಿ ; ಬಿಜೆಪಿ ಮುಖಂಡನೇ ದಂಧೆಯ ಕಿಂಗ್ ಪಿನ್, ಸಂಸದರ ಆಪ್ತನ ಮೇಲೆ ಆರು ಎಫ್ಐಆರ್ ದಾಖಲು, ಪೊಲೀಸ್ ದಾಳಿ ವೇಳೆ ಓಡಿ ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲು 

12-05-24 04:34 pm       Mangalore Correspondent   ಕರಾವಳಿ

ಕಡಬ ವ್ಯಾಪ್ತಿಯ ಕುಮಾರಧಾರ ನದಿಯಲ್ಲಿ ಮರಳು ದಂಧೆ ನಡೆಸುತ್ತಿದ್ದ ಬಿಜೆಪಿ ಮುಖಂಡರ ನೇತೃತ್ವದ ಬೃಹತ್ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. 

ಪುತ್ತೂರು, ಮೇ 12: ಕಡಬ ವ್ಯಾಪ್ತಿಯ ಕುಮಾರಧಾರ ನದಿಯಲ್ಲಿ ಮರಳು ದಂಧೆ ನಡೆಸುತ್ತಿದ್ದ ಬಿಜೆಪಿ ಮುಖಂಡರ ನೇತೃತ್ವದ ಬೃಹತ್ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. 

ಸಂಸದ ನಳಿನ್ ಕುಮಾರ್ ಆಪ್ತರಾಗಿರುವ ಬಿಜೆಪಿ ಪ್ರಮುಖರೇ ಈ ಜಾಲದ ಹಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಡಬದ ಕುದ್ಮಾರಿನಲ್ಲಿ ಮರಳು ದಂಧೆ ಕಳೆದ ಹಲವು ಸಮಯದಿಂದ ಎಗ್ಗಿಲ್ಲದೆ ನಡೆಯುತಿತ್ತು. ಈ ಬಗ್ಗೆ ಹಲವು ಬಾರಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ, ಪ್ರಭಾವಿ ಬಿಜೆಪಿ ಮುಖಂಡ ದಿನೇಶ್ ಮೆದು ಈ ಮರಳು ಮಾಫಿಯಾದ ಕಿಂಗ್ ಪಿನ್ ಎನ್ನಲಾಗುತ್ತಿದ್ದು ದಾಳಿಯ ಬಳಿಕ ಆತನ ವಿರುದ್ದ ಪೊಲೀಸರು ಹಲವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ಚೆನ್ನಪ್ಪ ಗೌಡ ಎಂಬಾತನೂ ಅಕ್ರಮ ಮರಳುಗಾರಿಕೆಗೆ ಸಹಕಾರ ನೀಡಿದ್ದು ಆತನ ವಿರುದ್ದವೂ ಪ್ರಕರಣಗಳು ದಾಖಲಾಗಿವೆ. ಇವರಿಬ್ಬರ ವಿರುದ್ದ ಒಟ್ಟು 6 ಪ್ರಕರಣ ದಾಖಲಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಂಗ್ ತಿಳಿಸಿದ್ದಾರೆ.

ಕಡಬ ತಾಲೂಕಿನ ಕುದ್ಮಾರಿನಲ್ಲಿ ಶಾಂತಿಮೊಗೇರು ಸೇತುವೆ ಬಳಿ ಈ ಅಕ್ರಮ ಮರಳು ಅಡ್ಡೆ ಕಾರ್ಯಾಚರಿಸುತಿತ್ತು. ಸ್ಥಳೀಯ ನಿವಾಸಿ ಚೆನ್ನಪ್ಪ ಗೌಡ ಎಂಬಾತನ ಜಮೀನು ಪಕ್ಕದಲ್ಲಿದ್ದು ಮರಳು ಸಾಗಾಟಕ್ಕೆ ಅವಕಾಶ ನೀಡುತ್ತಿದ್ದ. ಅಲ್ಲದೇ ಈ ಮರಳು ದಂಧೆಯಲ್ಲೂ ಆತನೇ ಪ್ರಮುಖ ಪಾತ್ರಧಾರಿ ಎನ್ನುವುದು ಸ್ಥಳೀಯರ ಆರೋಪ. 

ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜಾಣ ಮೌನ ಮತ್ತು ವಸೂಲಿಬಾಜಿಯಿಂದಾಗಿ ಕಳೆದ ಹಲವು ವರ್ಷಗಳಿಂದ ಇವರ ಮರಳು ದಂಧೆ ರಾಜಾರೋಷವಾಗಿ ನಡೆಯುತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈಗ ಚುನಾವಣೆ ಕಾರಣಕ್ಕೆ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿದ್ದು , ಹೊಸತಾಗಿ ಬಂದ ಅಧಿಕಾರಿಗಳು ಮರಳು ಅಡ್ಡೆಯ ಮೇಲೆ ದಾಳಿ ಮಾಡುವ ದೈರ್ಯ ತೋರಿದ್ದಾರೆ. 

ಬುಧವಾರ ತಡರಾತ್ರಿ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಹಲವು ಟಿಪ್ಪರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ದಾಳಿಯ ವೇಳೆ ಮರಳು ಒಯ್ಯಲು 10ಕ್ಕೂ ಹೆಚ್ಚು ಟಿಪ್ಪರ್ ಗಳು ಅಲ್ಲಿ ಬಂದಿದ್ದವು. ಮರಳು ತುಂಬಿಸಿಟ್ಟಿದ್ದ 5 ರಿಂದ 6 ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮರಳು ಅಡ್ಡೆಗೆ ದಾಳಿಯಾಗುತ್ತಲೇ ತನ್ನನ್ನು ಪೊಲೀಸರು ಬಂಧಿಸಲು ಬರುತ್ತಾರೆಂಬ ಮಾಹಿತಿ ಪಡೆದ ಬಿಜೆಪಿ ಮುಖಂಡ ದಿನೇಶ್ ಮೆದು ತನ್ನ ಮನೆಯ ಮಹಡಿಯಲ್ಲಿ ಅಡಗಿ ಕುಳಿತಿದ್ದರು. ಮನೆಯ ಬಳಿ ಪೊಲೀಸರು ಬರುತ್ತಲೇ ಹೊರಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಕೈಗೆ ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಗೊಂಡು ದಿನೇಶ್ ಮೆದು ಆಸ್ಪತ್ರೆ ಸೇರಿರುವುದರಿಂದ ಪೊಲೀಸರು ಆತನನ್ನು ಬಂಧಿಸಿಲ್ಲ ಎಂದು ಹೇಳಲಾಗುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡರೆ ಪೊಲೀಸರು ಬಂಧಿಸುವ ಸಾಧ್ಯತೆಯಿದೆ. ಹೀಗಾಗಿ ಮೆದು ಅವರು ಆಸ್ಪತ್ರೆಯಿಂದಲೇ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
 
ನದಿಗೆ ನೇರವಾಗಿ ಜೆಸಿಬಿಯನ್ನೇ ಇಳಿಸಿ ಮರಳು ತೆಗೆಯುತ್ತಿದ್ದುದರಿಂದ ಕುಮಾರಧಾರ ನದಿ ಮತ್ತು ಪರಿಸರದಲ್ಲಿ ನೀರಿನ ಮೂಲಗಳಿಗೆ ತೊಂದರೆ ಉಂಟಾಗಿದೆ. ಇದಲ್ಲದೆ,‌ ಶಾಂತಿಮೊಗರು ಕಿಂಡಿ ಅಣೆಕಟ್ಟಿನ ಮೇಲ್ಬಾಗದಲ್ಲಿ ಹಾಗೂ ಅಣೆಕಟ್ಟಿನ ಕೆಳಭಾಗದಲ್ಲಿ ಮರಳು ಅಡ್ಡೆ ಕಾರ್ಯಾಚರಿಸುತ್ತಿದೆ. ಮೇಲ್ಭಾಗದವರು ಅಣೆಕಟ್ಟಿನಲ್ಲಿ ನೀರು ನಿಂತರೆ ಮರಳು ತೆಗೆಯಲು ಅಡ್ಡಿಯಾಗುತ್ತದೆ ಎಂದು ಆಣೆಕಟ್ಟಿಗೆ ಕನ್ನ ಕೊರೆದು ನೀರು ಸೋರಿ ಹೋಗುವಂತೆ ಮಾಡುತ್ತಿದ್ದಾರೆ. ಕೆಳಗಿನ ಭಾಗದವರು ಮಣ್ಣನ್ನು ಮರಳಿನಿಂದ ಬೇರ್ಪಡಿಸಲು ನೀರಿಗಾಗಿ ಆಣೆಕಟ್ಟಿಗೆ ತೂತು ಕೊರೆಯುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇದರಿಂದ ಅಣೆಕಟ್ಟಿನ ನೀರು ಸಂಪೂರ್ಣವಾಗಿ ಬರಿದಾಗಿದ್ದು ಕೃಷಿಕರು ನೀರಿಲ್ಲದೇ ಪರದಾಡುವಂತಾಗಿದೆ.

Mangalore BJP leader arrested in Kadaba for illegal sand mining, police raid seize machinery. Directed has been identified as Dinesh. He was a close friend of MP Naveen Kumar kateel. Massive raid operation was conducted under the supervision of SP Dakshina Kannada.