Live Video: ಚಾಲಕನ ಅವಾಂತರ ; ಯುವತಿ ಮೇಲೆ ಹರಿದೇ ಹೋಯ್ತು ಕಾರು...! 

07-08-20 03:36 pm       Mangalore Reporter   ಕರಾವಳಿ

ಸ್ಕೂಟರ್ ಡಿಕ್ಕಿಯಾಗಿ ಅದರಲ್ಲಿದ್ದ ಸವಾರೆ ಯುವತಿ ಕಾರಿನ ಮೇಲೆ ಬಾನೆಟಿಗೆ ಬಿದ್ದರೂ ಚಾಲಕ ನಿಲ್ಲಿಸದೆ ಮುಂದಕ್ಕೊಯ್ದಿದ್ದರಿಂದ ಯುವತಿಯ ಮೇಲಿಂದಲೇ ಕಾರು ಹರಿದ ಘಟನೆ ಮಂಗಳೂರಿನ ಕದ್ರಿ ಕಂಬ್ಳದಲ್ಲಿ ನಡೆದಿದೆ. 

ಮಂಗಳೂರು, ಆಗಸ್ಟ್ 7: ಕಾರು ಚಾಲಕನ ಅಚಾತುರ್ಯ, ನಿರ್ಲಕ್ಷ್ಯ ಎಂಥಾ ದುರ್ಘಟನೆಗೆ ಕಾರಣವಾಗುತ್ತೆ ಈ ಘಟನೆ ಸಾಕ್ಷಿ. ಸ್ಕೂಟರ್ ಡಿಕ್ಕಿಯಾಗಿ ಅದರಲ್ಲಿದ್ದ ಸವಾರೆ ಯುವತಿ ಕಾರಿನ ಮೇಲೆ ಬಾನೆಟಿಗೆ ಬಿದ್ದರೂ ಚಾಲಕ ನಿಲ್ಲಿಸದೆ ಮುಂದಕ್ಕೊಯ್ದಿದ್ದರಿಂದ ಯುವತಿಯ ಮೇಲಿಂದಲೇ ಕಾರು ಹರಿದ ಘಟನೆ ಮಂಗಳೂರಿನ ಕದ್ರಿ ಕಂಬ್ಳದಲ್ಲಿ ನಡೆದಿದೆ. 

ಇಂದು ಬೆಳಗ್ಗೆ ಘಟನೆ ನಡೆದಿದ್ದು ಕಾರಿನಡಿಗೆ ಬಿದ್ದ ಯುವತಿಯನ್ನು ವಾಣಿಶ್ರೀ (22) ಎಂದು ಗುರುತಿಸಲಾಗಿದೆ. ಬಿಜೈ ಕಡೆಯಿಂದ ಬರುತ್ತಿದ್ದ ಸ್ಕೂಟರಿಗೆ ಕದ್ರಿ ಕಡೆಯಿಂದ ಆಗಮಿಸುತ್ತಿದ್ದ ಕಾರು ಕದ್ರಿ ಕಂಬಳ ಸರ್ಕಲ್ ಬಳಿ ಡಿಕ್ಕಿಯಾಗಿದೆ. ಕಾರನ್ನು ಚಲಾಯಿಸುತ್ತಿದ್ದ ವೃದ್ಧ ವ್ಯಕ್ತಿ ಕಾರನ್ನು ನಿಲ್ಲಿಸಲಾಗದೆ ತಡಬಡಾಯಿಸಿದ್ದಾನೆ. ಕಾರಿನ ಮುಂಭಾಗದ ಬಾನೆಟ್ಟಿಗೆ ಬಿದ್ದ ಯುವತಿ ಬಳಿಕ ಉರುಳಿಕೊಂಡು ಮುಂದೆ ರಸ್ತೆಗೆ ಬಿದ್ದಿದ್ದಾಳೆ. ಆದರೆ, ಕಾರು ನೇರವಾಗಿ ಮುಂದಕ್ಕೆ ಬಂದಿದ್ದು ನೆಲಕ್ಕೆ ಬಿದ್ದ ಯುವತಿಯನ್ನು ತಳ್ಳಿಕೊಂಡೇ ಬಂದಿದೆ. ಯುವತಿಯ ದೇಹ ಕಾರಿನ ಮುಂಭಾಗದ ಎರಡು ಚಕ್ರದ ಮಧ್ಯೆ ಸಿಕ್ಕಿದ್ದು ಕೂಡಲೇ ಅಲ್ಲಿದ್ದ ಜನ ಕಾರಿಗೆ ಬಡಿದು ನಿಲ್ಲಿಸಿದ್ದಾರೆ. 2- 3 ಮೀಟರ್ ಉದ್ದಕ್ಕೆ ಎಳೆದೊಯ್ದ ಕಾರು ಚಾಲಕ ಬಳಿಕ ಯುವಕರ ಬೊಬ್ಬೆ ಕೇಳಿ ನಿಲ್ಲಿಸಿದ್ದಾನೆ. ಈ ಘಟನೆಯ ಪೂರ್ತಿ ದೃಶ್ಯ ಅಲ್ಲಿನ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಾರು ಚಾಲಕನ ಅವಾಂತರವನ್ನು ಹಿಡಿದಿಟ್ಟಿದೆ. 

ಕಾರಿನ ಅಡಿಭಾಗದಲ್ಲಿ ಸಿಕ್ಕಿಕೊಂಡಿದ್ದ ಯುವತಿಯನ್ನು ಬಳಿಕ ಸ್ಥಳೀಯರು ಮತ್ತು ಒಬ್ಬ ಪೊಲೀಸ್ ಸಿಬಂದಿ ಸೇರಿ ಕಾರನ್ನು ಹಿಡಿದು ಎತ್ತುವ ಮೂಲಕ ಹೊರಕ್ಕೆಳೆದಿದ್ದಾರೆ. 

Live Video:

ಇಡೀ ಘಟನೆ ಕಾರು ಚಾಲಕನ ಅಚಾತುರ್ಯವನ್ನು ಹಿಡಿದಿಟ್ಟಿದೆ. ಮುಂಭಾಗದಲ್ಲಿ ಯಾವ ವಾಹನ ಬರುತ್ತಿದೆ ಎಂದು ಕಾಣದೆ ಕಾರು ಚಲಾಯಿಸುವ ವೃದ್ಧ ಚಾಲಕರಿಂದಾಗುವ ಅನಾಹುತಕ್ಕೆ ಕನ್ನಡಿ ಹಿಡಿದಿದೆ.