MLA Vedavyas Kamath, Congress, Mangalore: ದೇವಸ್ಥಾನಕ್ಕೆ ಕಲ್ಲು ಹೊಡೆದವರು, ನೀನು ಸಾಬರಿಗೆ ಹುಟ್ಟಿದ್ದಾ ಎಂದು ಹೇಳುವುದು ಒಬ್ಬ ಶಾಸಕನ ಕೆಲಸವೇ..? ಶಾಸಕನಾಗಿ ರೌಡಿ ತರ ವರ್ತಿಸಬಾರದು, ಇವರು ಹಿಂದುಗಳನ್ನೇ ವಿಭಜಿಸುತ್ತಿದ್ದಾರೆ ; ಹರೀಶ್ ಕುಮಾರ್

03-03-25 06:29 pm       Mangalore Correspondent   ಕರಾವಳಿ

ಶಕ್ತಿನಗರದ ಶ್ರೀಕೃಷ್ಣ ಮಂದಿರದ ಬ್ರಹ್ಮಕಲಶಕ್ಕೆ ಹೋಗಿ ಶಾಸಕ ವೇದವ್ಯಾಸ ಕಾಮತ್, ಇಲ್ಲಿ ದೇವಸ್ಥಾನಕ್ಕೆ ಕಲ್ಲು ಹೊಡೆದವರನ್ನು ಯಾಕೆ ಕರೆದಿದ್ದೀರಿ ಅಂತ ಹೇಳಿ ಹಿಂದುಗಳನ್ನೇ ಎತ್ತಿಕಟ್ಟುವ ಯತ್ನ ಮಾಡಿದ್ದಾರೆ. ಶಾಸಕರನ್ನು ಪ್ರಶ್ನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಸೇರಿ ಹಲ್ಲೆ ನಡೆಸಿ ಗೂಂಡಾಗಿರಿ ತೋರಿಸಿದ್ದಾರೆ.

ಮಂಗಳೂರು, ಮಾ.3: ಶಕ್ತಿನಗರದ ಶ್ರೀಕೃಷ್ಣ ಮಂದಿರದ ಬ್ರಹ್ಮಕಲಶಕ್ಕೆ ಹೋಗಿ ಶಾಸಕ ವೇದವ್ಯಾಸ ಕಾಮತ್, ಇಲ್ಲಿ ದೇವಸ್ಥಾನಕ್ಕೆ ಕಲ್ಲು ಹೊಡೆದವರನ್ನು ಯಾಕೆ ಕರೆದಿದ್ದೀರಿ ಅಂತ ಹೇಳಿ ಹಿಂದುಗಳನ್ನೇ ಎತ್ತಿಕಟ್ಟುವ ಯತ್ನ ಮಾಡಿದ್ದಾರೆ. ಶಾಸಕರನ್ನು ಪ್ರಶ್ನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಸೇರಿ ಹಲ್ಲೆ ನಡೆಸಿ ಗೂಂಡಾಗಿರಿ ತೋರಿಸಿದ್ದಾರೆ. ಪ್ರಶ್ನಿಸಿದ ಯಶವಂತ ಪ್ರಭು ಎಂಬ ನಮ್ಮ ಕಾರ್ಯಕರ್ತರನ್ನು ನೀನು ಸಾಬರಿಗೆ ಹುಟ್ಟಿದ್ದಾ ಎಂದು ಶಾಸಕರು ಕೇಳಿದ್ದಾರೆ. ಒಬ್ಬ ಶಾಸಕನಾದ ವ್ಯಕ್ತಿ ಹೇಳುವ ಮಾತೇ ಇದು..? ಇವರ ನಕಲಿ ಹಿಂದುತ್ವ ಬೆಲೆ ಕಳಕೊಂಡಿದೆ ಅಂತ ಶಾಸಕರು ಹತಾಶರಾಗಿದ್ದಾರೆಯೇ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಶಕ್ತಿನಗರದ ಕೃಷ್ಣ ಮಂದಿರದ ಕಾರ್ಯಕ್ರಮಕ್ಕೆ ಮೊದಲಿಗೆ ಐವಾನ್ ಡಿಸೋಜ ಹೋಗಿ ಬಂದಿದ್ದರು. ರಾತ್ರಿ 8 ಗಂಟೆ ವೇಳೆಗೆ ಶಾಸಕ ವೇದವ್ಯಾಸ ಕಾಮತ್ ಬಂದಾಗ, ಸಹಜವಾಗಿಯೇ ಸ್ಥಳೀಯರೆಲ್ಲ ಜೊತೆಗೆ ಸ್ವಾಗತಿಸಿದ್ದಾರೆ. ಆದರೆ ಈ ಶಾಸಕರು, ಅಲ್ಲಿದ್ದ ಕಾಂಗ್ರೆಸಿಗರನ್ನು ನೋಡಿ ನೀವು ದೇವಸ್ಥಾನಕ್ಕೆ ಕಲ್ಲು ಹೊಡೆದವರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಆನಂತರ, ವೇದಿಕೆಯಲ್ಲೂ ಇಂತಹದ್ದೇ ಪ್ರಶ್ನೆಯನ್ನು ಮುಂದಿಟ್ಟು ಭಾಷಣ ಮಾಡಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಜಿಲ್ಲಾ ಕಾಂಗ್ರೆಸ್ ಸದಸ್ಯರೂ ಆದ ಯಶವಂತ ಪ್ರಭು ಮತ್ತು ಇತರರು ಶಾಸಕರನ್ನು ಹಿಂತಿರುಗುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೇ ಶಾಸಕರ ಜೊತೆಗಿದ್ದ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.

ಗ್ಯಾರಂಟಿ ಯೋಜನೆಯ ಬಳಿಕ ಜನಸಾಮಾನ್ಯರ ಭಾವನೆ ಬದಲಾಗಿದ್ದು, ಹಿಂದುತ್ವ ಹೊಟ್ಟೆ ತುಂಬಿಸುವುದಿಲ್ಲ, ಅಕ್ಕಿಯಿಂದ ಹೊಟ್ಟೆ ತುಂಬುತ್ತದೆ ಎನ್ನುವುದು ಅರಿವಿಗೆ ಬರುತ್ತಿದೆ. ಇದರಿಂದಾಗಿ ರಾಮಮಂದಿರ, ಗೋಮಾಂಸ, ಗೋಹತ್ಯೆ ಎಲ್ಲ ಇವರ ನಕಲಿ ಹಿಂದುತ್ವ ಅಸ್ತಿತ್ವ ಕಳಕೊಂಡಿದೆ. ಇದರಿಂದಾಗಿ ಶಾಸಕರು ಈ ರೀತಿ ವರ್ತಿಸಿದ್ದಾರೆ. ಘಟನೆ ಬಳಿಕ ಯಶವಂತ ಪ್ರಭು ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿಗೂ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ತನ್ನ ಪಟಾಲಂ ಕರೆದುಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದಾರೆ. ಹಾಗಂತ, ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ಹಾಕ್ಕೊಂಡು ಕುಳಿತಿದ್ದಾರೆ, ಸುಮ್ಮನಿರುವುದು ದೌರ್ಬಲ್ಯ ಅಂತ ತಿಳ್ಕೊಳ್ಳುವುದು ಬೇಡ.

ಶಾಸಕರು ಮತ್ತು ಇತರ ಕಾರ್ಯಕರ್ತರ ಮೇಲೆ ಕೇಸು ದಾಖಲಾದ ಬೆನ್ನಲ್ಲೇ ಘಟನೆ ಸಂದರ್ಭದಲ್ಲಿ ಇಲ್ಲದ ಮಣಿ ಎಂಬ ಪರಿಶಿಷ್ಟ ಸಮುದಾಯದ ಯುವಕನನ್ನು ಕರೆತಂದು ಅಟ್ರಾಸಿಟಿ ಕೇಸು ಹಾಕಿಸಿದ್ದಾರೆ. ಎಸ್ಟಿ ಸಮುದಾಯದ ನಮ್ಮ ವಾರ್ಡ್ ಮೆಂಬರ್ ದಯಾನಂದ ನಾಯ್ಕ್ ಮೇಲೆಯೂ ಹಲ್ಲೆಯಾಗಿದೆ. ಹಾಗಂತ, ಸುಳ್ಳು ದೂರು ನೀಡಿಲ್ಲ. ಆದರೆ ಒಬ್ಬ ಶಾಸಕನಾಗಿ ರೌಡಿ ತರ ವರ್ತಿಸಬಾರದು. ಈ ದೇಶದಲ್ಲಿ ಹುಟ್ಟಿದವರೆಲ್ಲರಿಗೂ ಬದುಕುವ ಹಕ್ಕಿದೆ. ಇಲ್ಲಿರುವವರೆಲ್ಲ ಹಿಂದುಗಳೇ ಆಗಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಮಾತನಾಡಿ, ಬುದ್ಧಿವಂತರ ಜಿಲ್ಲೆಯಲ್ಲಿ ಇಂತಹ ಶಾಸಕರು ಇದ್ದಾರೆಯೇ ಎಂದು ಹೇಳಲು ನಾಚಿಕೆ ಆಗುತ್ತಿದೆ. ದೇವಸ್ಥಾನಕ್ಕೆ ಹೋಗಿ ಜಾತಿ, ಮತ ಮುಂದಿಟ್ಟು ಹಿಂದುಗಳನ್ನು ವಿಭಜಿಸುವ ಹೇಳಿಕೆ ನೀಡುತ್ತಿದ್ದಾರೆ. ಅಲ್ಲಿ ಮಂದಿರ ಕಟ್ಟಲು ಎಲ್ಲ ಜಾತಿಯ, ಎಲ್ಲ ಪಕ್ಷದವರು ಜೊತೆಗೂಡಿದ್ದಾರೆ. ಜವಾಬ್ದಾರಿಯುತ ಶಾಸಕನಾಗಿ ಎಲ್ಲಿ ಹೇಗೆ ಮಾತನಾಡಬೇಕು ಎನ್ನುವ ಜ್ಞಾನ ಇಲ್ಲವೇ, ಇಷ್ಟರ ಮೇಲೂ ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪುಂಡರ ಹಲ್ಲೆ, ಬ್ರಹ್ಮಕಲಶಕ್ಕೆ ಅಡ್ಡಿ ಅಂತ ಹಾಕಿದ್ದಾರೆ ಎಂದು ಹೇಳಿದರು.

ಪ್ರಕಾಶ್ ಸಾಲ್ಯಾನ್ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ಮತ್ತು ಪ್ರತಿ ದೂರು ನೀಡಿರುವ ಮಣಿಯವರು ಕದ್ರಿ ದೇವಸ್ಥಾನಕ್ಕೆ ಬಂದು ಸತ್ಯಪ್ರಮಾಣ ಮಾಡಲಿ. ತಾವು ಮಾಡಿದ್ದು ಸರಿ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಸುದ್ದಿಗೋಷ್ಟಿಯಲ್ಲಿ ಶುಭೋದಯ ಆಳ್ವ, ವಿಶ್ವಾಸಕುಮಾರ್ ದಾಸ್, ಲಾರೆನ್ಸ್ ಡಿಸೋಜ, ಶಾಲೆಟ್ ಪಿಂಟೋ, ವರಾ ವಾರ್ಡ್ ಮೆಂಬರ್ ದಯಾನಂದ ನಾಯ್ಕ್ ಮತ್ತಿತರರಿದ್ದರು.

District Congress President Harish Kumar has condemned the remarks made by MLA Vedavyas Kamath during a religious event at Shakthinagar on March 2 and alleged an assault on a Congress worker. The religious event was held following the renovation of the Bhajana Mandir at Shakthinagar, with participation from people of all political affiliations. Kumar emphasized that everyone had contributed collectively to the temple's renovation.