ಬ್ರೇಕಿಂಗ್ ನ್ಯೂಸ್
06-03-25 10:31 pm Mangalore Correspondent ಕರಾವಳಿ
ಮಂಗಳೂರು, ಮಾ.6 : ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ ಮತ್ತೆ ಧುತ್ತನೆ ಎದ್ದು ಕುಳಿತಿದೆ. ಹತ್ತಾರು ಪ್ರತಿಭಟನೆ, ಕೋರ್ಟ್ ಹೋರಾಟದ ಬಳಿಕ ಸತ್ತೇ ಹೋಯ್ತು ಎಂಬಂತಾಗಿದ್ದ ಪ್ರಕರಣ ಇಡೀ ರಾಜ್ಯದಲ್ಲಿ ಮಾತ್ರವಲ್ಲ, ದೇಶ- ವಿದೇಶದಲ್ಲು ಸಂಚಲನ ಎಬ್ಬಿಸಿದೆ. ಇದಕ್ಕೆ ಕಾರಣವಾಗಿದ್ದು ಒಬ್ಬ ಯೂಟ್ಯೂಬರ್ ಮಾಡಿದ ವಿಡಿಯೋ. ಹೌದು.. ಸಮೀರ್ ಎಂ.ಡಿ. ಎಂಬ ಬಳ್ಳಾರಿ ಮೂಲದ ಸಾಧಾರಣ ಯುವಕನೊಬ್ಬ ದಿನ ಬೆಳಗಾಗುವುದರಲ್ಲಿ ಸೌಜನ್ಯಾ ಪ್ರಕರಣದ ಬಗ್ಗೆ ವಿಡಿಯೋ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದಾನೆ.
14 ವರ್ಷಗಳ ಹಿಂದೆ ನಡೆದುಹೋದ ಸೌಜನ್ಯಾ ಎಂಬ ಪಿಯುಸಿ ಹುಡುಗಿಯ ಅತ್ಯಾಚಾರ ಮತ್ತು ಭೀಭತ್ಸ ಕೊಲೆ ಪ್ರಕರಣವನ್ನು ಇಂಚಿಂಚು ಎನ್ನುವಂತೆ 39 ನಿಮಿಷದ ವಿಡಿಯೋದಲ್ಲಿ ತೆರೆದಿಟ್ಟಿದ್ದಾನೆ. ಅಷ್ಟೇ ಅಲ್ಲ, ಹೊಸದಾಗಿ ಬಂದ ಎಐ ತಂತ್ರಜ್ಞಾನದಲ್ಲಿ ಅದಕ್ಕೆ ತಕ್ಕುದಾದ ರೀತಿಯಲ್ಲಿ ವಿಡಿಯೋ ಸೃಷ್ಟಿಸಿದ್ದಾನೆ. ಆಮೂಲಕ ಒಂದೇ ಒಂದು ವಿಡಿಯೋದಲ್ಲಿ ಕೋಟ್ಯಂತರ ಕನ್ನಡಿಗರ ಮನಸ್ಸನ್ನು ತಟ್ಟಿದ್ದು, ಇದ್ಯಾರು ‘ಹೊಸ ದೂತ’ ಇಳಿದು ಬಂದ ಎನ್ನುವ ಪ್ರಶ್ನೆಯನ್ನು ಜನ ಹುಬ್ಬೇರಿಸಿಕೊಂಡು ಕೇಳತೊಡಗಿದ್ದಾರೆ. ಇಷ್ಟಕ್ಕೂ ಆತ ಏನೂ ಹೊಸದು ಹೇಳಿಲ್ಲ. ಎಲ್ಲವೂ ಹಳೆಯ ಕತೆ, ಆಗಿಹೋದ ಕತೆಯನ್ನು ಹೊಸ ಸುರುಳಿಯ ರೀತಿ ಹೆಣೆದು ಕೊಟ್ಟಿದ್ದಾನೆ. ಅಷ್ಟಕ್ಕೇ ಸೌಜನ್ಯಾ ಕಿಚ್ಚನ್ನು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಬಡಿದೆಬ್ಬಿಸುವಂತೆ ಮಾಡಿದ್ದಾನೆ.
ಇಷ್ಟಕ್ಕೂ ಒಂದೇ ವಿಡಿಯೋದಲ್ಲಿ ಇಷ್ಟೊಂದು ಆಕರ್ಷಣೆ ಪಡೆದಿದ್ದು ಇದೇ ಮೊದಲು ಎನ್ನೋದು ಈತನ ಹೆಗ್ಗಳಿಕೆ. ವಿಡಿಯೋ ಅಪ್ಲೋಡ್ ಮಾಡಿದ ಆರೇ ದಿನದಲ್ಲಿ ಬರೋಬ್ಬರಿ ಒಂದೂವರೆ ಕೋಟಿ ಜನ ಈ ವಿಡಿಯೋ ನೋಡಿದ್ದಾರೆ. ಕೊನೆಯ ಎರಡು ದಿನದಲ್ಲಂತೂ 50 ಲಕ್ಷದಷ್ಟು ಜನ ನೋಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವಾರು ಯೂಟ್ಯೂಬರ್ ಗಳು ಅದೇ ವಿಡಿಯೋವನ್ನು ತಾವೂ ಹಾಕ್ಕೊಂಡು ಸೌಜನ್ಯಾ ಹೆಸರಿನಲ್ಲಿ ದುಡ್ಡು ಮಾಡೋಕೂ ಮುಂದಾಗಿದ್ದಾರೆ. ಅಂದ್ರೆ, ಇವರಿಗೆಲ್ಲ ಸೌಜನ್ಯಾಗೆ ನ್ಯಾಯ ಸಿಗಬೇಕು ಅನ್ನೋ ಕಾಳಜಿಗಿಂತ ವೀವ್ಸ್ ಸಿಗುತ್ತೆ, ಅದರಿಂದ ಕಾಸು ಸಿಗುತ್ತೆ ಅನ್ನೋದಷ್ಟೇ ಆಸಕ್ತಿ.
ಅರೆಸ್ಟ್ ಮಾಡಲು ಮುಂದಾದ ಪೊಲೀಸರು
ಇದರ ಬೆನ್ನಲ್ಲೇ ಸಮೀರ್ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಠಾಣೆ ಪೊಲೀಸರು ಸುಮೊಟೋ ಕೇಸು ದಾಖಲಿಸಿದ್ದು ನಿನ್ನೆ ರಾತ್ರಿ ಆತನ ಮನೆಗೆ ಬಂದು ಅರೆಸ್ಟ್ ಮಾಡುವುದಕ್ಕೂ ಮುಂದಾಗಿದ್ದಾರೆ. ಆದರೆ ಸೌಜನ್ಯಾ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ಅಲ್ಲಿಗೆ ತೆರಳಿದ್ದು, ಅರೆಸ್ಟ್ ಮಾಡುವುದಕ್ಕೆ ಅಡ್ಡಿಯಾಗಿದ್ದಾರೆ. ಯಾವ ಕಾರಣಕ್ಕೆ ಅರೆಸ್ಟ್ ಮಾಡಬೇಕು, ಆತ ಏನು ತಪ್ಪು ಮಾಡಿದ್ದಾನೆ, ಒಂದು ಆಗಿಹೋದ ಕೇಸಿನ ಇಂಚಿಂಚು ಹೇಳಿಕೊಂಡು ನ್ಯಾಯ ಕೇಳಿದ್ದು ತಪ್ಪಾಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಪೊಲೀಸರು ಆತ ಧರ್ಮದ ವಿಚಾರ ಮುಂದಿಟ್ಟು ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಯತ್ನ ಮಾಡಿದ್ದಾನೆಂದು ಕೇಸು ದಾಖಲಿಸಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ, ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ, ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ. ಸಮೀರ್ ಮಾಡಿದ ಯೂಟ್ಯೂಬ್ ವಿಡಿಯೋ ಬಗ್ಗೆ ಯಾಕೆ ನಮ್ಮ ಗಮನಕ್ಕೆ ತಂದಿಲ್ಲ. ಜಾಲತಾಣದಲ್ಲಿ ಪರ- ವಿರೋಧ ಹೇಳಿಕೆ ಬರುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಅಡ್ಡಿ ಬರಬಹುದು ಎಂಬ ಸುಳಿವನ್ನೂ ಗುಪ್ತಚರರಿಗೆ ನೀಡಿದ್ದಾರೆ. ಸಿದ್ದರಾಮಯ್ಯ ಸರಕಾರ ಪೊಲೀಸ್ ಮೂಲಕ ಬೆದರಿಸಲು ನೋಡಿದ್ದಕ್ಕೆ ಜಾಲತಾಣದಲ್ಲಿ ಟೀಕೆಯೂ ಕೇಳಿಬಂದಿದೆ.
ಸೌಜನ್ಯಾ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಸಮೀರ್ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದ್ದು, ಫೇಸ್ಬುಕ್, ಇನ್ ಸ್ಟಾ ಗ್ರಾಮ್ ಪೇಜ್ ಗಳಲ್ಲಿ ಅದೇ ಚರ್ಚೆಯ ವಸ್ತುವಾಗಿದೆ. ಇದರ ಬೆನ್ನಲ್ಲೇ ಸೌಜನ್ಯಾ ಹೋರಾಟದ ವಿರೋಧಿಗಳು ಹಿಂದು- ಮುಸ್ಲಿಂ ಎನ್ನುವ ಹೆಸರಲ್ಲಿ ಪೋಸ್ಟರ್ ಹಾಕಿ ಹೊಸ ರೀತಿಯ ಬಣ್ಣ ಹಚ್ಚುವ ಕೆಲಸವನ್ನೂ ಮಾಡಿದ್ದಾರೆ. ಕೆಲವು ನಾಯಕ ಮಣಿಗಳು ಸಮೀರ್ ಎಂಬ ಹುಡುಗನ ಧರ್ಮ ಮುಂದಿಟ್ಟು ನಿಂದನೆ ಮಾಡಿದ್ದಾರೆ. ಆತ ಹಿಂದುಗಳ ದೇವಸ್ಥಾನದ ಬಗ್ಗೆ ಪ್ರಶ್ನೆ ಮಾಡಿದ್ದಾನೆ ಎಂದೂ ಪೋಸ್ಟ್ ಹಾಕುತ್ತಿದ್ದಾರೆ. ಈ ರೀತಿಯ ವಿರೋಧಿ ಪೋಸ್ಟ್, ಬರಹ ಹಾಕಿದಷ್ಟೂ ವಿಚಾರ ಮತ್ತಷ್ಟು ಚರ್ಚೆಗೆ ಕಾರಣವಾಗುತ್ತಿದ್ದು, ಸೌಜನ್ಯಾ ಪ್ರಕರಣ ಹೆಸರಲ್ಲಿ ಸಮಾಜದಲ್ಲಿ ಮತ್ತಷ್ಟು ಕಿಡಿ ಹಬ್ಬುತ್ತಿದೆ.
ನಾನು ಹಿಂದು ದ್ವೇಷಿಯಲ್ಲ, ದೇವರ ಭಕ್ತ
ಹಿಂದು- ಮುಸ್ಲಿಂ ಎಂದು ಪೋಸ್ಟ್ ಹಾಕುತ್ತಿರುವ ಮಂದಿಗೆ ಸಮೀರ್ ಮನವಿಯನ್ನೂ ಮಾಡಿದ್ದಾನೆ. ನಾನು ಮುಸ್ಲಿಂ ಆಗಿರಬಹುದು. ಸೌಜನ್ಯಾ ಬಗ್ಗೆ ನ್ಯಾಯ ಕೇಳಿದ್ದೇನೆ, ಆದರೂ ಈ ರೀತಿಯಾಗುತ್ತೆ, ಇಷ್ಟೆಲ್ಲ ವೈರಲ್ ಆಗುತ್ತೆ ಎಂದುಕೊಂಡಿರಲಿಲ್ಲ. ಅಲ್ಲದೆ, ಇದರ ವಿರೋಧಿ ಹೋರಾಟಗಾರರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಮಾಮೂಲಿ ಎನ್ನುವಂತೆ ತನಿಖಾ ವರದಿಯನ್ನು ಮಾಡಿದ್ದೇನೆ. ಅಷ್ಟಕ್ಕೇ ಹಿಂದು- ಮುಸ್ಲಿಂ ಎಂಬ ಭೇದ ಸೃಷ್ಟಿಸಬೇಡಿ. ನಾನು ಯಾವತ್ತೂ ಹಿಂದು ದ್ವೇಷಿಯಲ್ಲ. ಮೊದಲಿಗೆ, ತುಮಕೂರಿನ ಸಿದ್ಧಗಂಗಾ ಮಠ, ಅಲ್ಲಿನ ಬೆಟ್ಟದ ಬಗ್ಗೆ ವಿಡಿಯೋ ಮಾಡಿದ್ದೆ. ಅಲ್ಲಿನ ದೇವರಿಗೆ ಕೈಮುಗಿದೇ ಶುರು ಮಾಡಿದ್ದೇನೆ ಎಂದು ಹೇಳಿದ್ದಾನೆ.
ಅಂದಹಾಗೆ, ಸಮೀರ್ 2024ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ದೂತ ಎನ್ನುವ ಹೆಸರಲ್ಲಿ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದ. ಈತನಕ ಕೇವಲ ಹನ್ನೊಂದು ವಿಡಿಯೋ ಹಾಕಿದ್ದರೂ, ಅದರಿಂದ ಪ್ರಸಿದ್ಧಿ ಹತ್ತಿರ ಸುಳಿದಿರಲಿಲ್ಲ. ಈ ಪರಿ ಸಬ್ ಸ್ಕ್ರೈಬನ್ನೂ ಪಡೆದುಕೊಂಡಿರಲಿಲ್ಲ. ಆದರೆ ಈಗ ಮಾಡಿರುವ ಒಂದು ವಿಡಿಯೋ ಆತನಿಗೆ ಪ್ರಚಾರ ನೀಡಿದ್ದಷ್ಟೇ ಅಲ್ಲ, ಸುದ್ದಿಯಾಗುವಂತೆಯೂ ಮಾಡಿದೆ. ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ಜನಾಕರ್ಷಣೆ ಪಡೆಯಲು ಅಥವಾ ದಿನ ಬೆಳಗಾಗುವುದರಲ್ಲಿ ಪ್ರಸಿದ್ಧಿ ಪಡೆಯಲು ಹಿಂದಿನಂತೆ ತಿಪ್ಪರಲಾಗ ಹೊಡೆಯಬೇಕಿಲ್ಲ. ಸ್ವಲ್ಪ ಬುದ್ಧಿವಂತಿಕೆ, ಚಾಣಾಕ್ಷ್ಯತನ ಇದ್ದರೆ ಸಾಕು ಎನ್ನುವುದನ್ನು ಇದು ತೋರಿಸಿಕೊಟ್ಟಿದೆ. ಸೌಜನ್ಯಾ ವಿಚಾರದಲ್ಲಿ ಏನೇ ಹಾಕಿದ್ರೂ ಅದು ಬೆಂಕಿಯಂತೆ ಹಬ್ಬುತ್ತಿದೆ. ಅದಕ್ಕೆ ಕಾರಣ ಸಾವಿರ ಇರಬಹುದು. ಆದರೆ, ಇದನ್ನೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ದುಡ್ಡು ಮಾಡೋರೂ ಇದ್ದಾರೆ. ಈಗ ಸಮೀರ್ ಮಾಡಿರುವ ವಿಡಿಯೋವನ್ನು ಉಳಿದವರೂ ಹಾಕ್ಕೊಂಡು ನೆಟ್ಟಗೆ ಎರಡಕ್ಷರ ಬರೆಯಲಾಗದವರೂ ದುಡ್ಡು ಎಣಿಸಲಾರಂಭಿಸಿದ್ದಾರೆ. ಯಾಕಂದ್ರೆ, ಯೂಟ್ಯೂಬಲ್ಲಿ ಲಕ್ಷಾಂತರ ವೀವ್ಸ್ ಆದಲ್ಲಿ ಅದರಿಂದ ಹಣವೂ ಎಗರಿ ಬೀಳುವುದಂತೆ. ಹಾಗಂತ, ಇಲ್ಲಿ ಬರುವ ಕಮೆಂಟ್ಸ್, ಜನಾಕ್ರೋಶ ಜನಸಾಮಾನ್ಯರ ನಾಡಿಮಿಡಿತ ಅಂತ ಲೆಕ್ಕ ಹಾಕಿದರೆ ಮೂರ್ಖತನವಾಗುತ್ತದೆ.
ಸೋಶಿಯಲ್ ಮೀಡಿಯಾನೇ ಪವರ್ ಫುಲ್
ಅಮೆರಿಕ, ಜರ್ಮನಿ, ಯುಕೆ, ಆಸ್ಟ್ರೇಲಿಯಾದಂತಹ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಮಾಧ್ಯಮ ಪ್ರಪಂಚ ನಡೆಯುವುದೇ ಸೋಶಿಯಲ್ ಮೀಡಿಯಾದಲ್ಲಿ. ಜನ ನಾಯಕರು ಏನು ಅಂದ್ರೂ, ಆಡಿಕೊಳ್ಳದಿದ್ದರೂ, ಏನೇ ಸೋಶಿಯಲ್ ಇಶ್ಯು ಇದ್ದರೂ ಅದು ಟಿವಿ, ಪತ್ರಿಕಾ ಮಾಧ್ಯಮಕ್ಕಿಂತಲೂ ಜನರಿಗೆ ಹೆಚ್ಚು ತಲುಪುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ. ಅದೇ ರೀತಿಯ ಜಮಾನಾ ಈಗ ಭಾರತಕ್ಕೂ ಕಾಲಿಡುತ್ತಿದೆ. ಅದಕ್ಕೆ ತಕ್ಕಂತೆ, ಎಐ ಟೆಕ್ನಾಲಜಿಯೂ ಸೇರಿಕೊಂಡಿದ್ದು, ಜನರ ಮನಸ್ಸಲ್ಲಿ ಹುಚ್ಚು ಎಬ್ಬಿಸುತ್ತಿದೆ. ಸಮೀರ್ ಒಂದು ವಿಡಿಯೋದಲ್ಲಿ ಜನರ ಮನಸ್ಸಲ್ಲಿ ಹೀರೋ ಆಗಿದ್ದಾನೆ. ಹಾಗಂತ, ಇದೆಲ್ಲ ಪರ್ಮನೆಂಟ್ ಅಂದ್ಕೊಳ್ಳಬೇಕಿಲ್ಲ. ಅದೇ ವ್ಯಕ್ತಿ ಮುಂದೆ ಏನಾದರೂ ಎಡವಟ್ಟು ಮಾಡಿಕೊಂಡರೆ, ಇದೇ ಜನ ಉಗಿಯುವುದಕ್ಕೂ ರೆಡಿ ಇದ್ದಾರೆ. ಇದೇ ಸೋಶಿಯಲ್ ಮೀಡಿಯಾ ಪವರ್..
ಇದೇನಿದ್ದರೂ, ಕನ್ನಡದ ಯೂಟ್ಯೂಬಲ್ಲಿ ಒಂದು ವಿಡಿಯೋದಿಂದ ಸಮೀರ್ ಸಂಚಲನ ಸೃಷ್ಟಿಸಿದ್ದು ಸತ್ಯ. ಹಾಗೆ ನೋಡಿದರೆ, ಡಾ ಬ್ರೋ ಎಂಬ ಹುಡುಗ ದೇಶ- ವಿದೇಶ ಸುತ್ತುತ್ತ ತನ್ನ ಅರೆಬರೆ ಕನ್ನಡದಲ್ಲಿ ಮಾಡಿರುವ ವಿಡಿಯೋಗಳೇ ದಿನ ಒಂದರಲ್ಲಿ ಮಿಲಿಯನ್ ವೀವ್ಸ್ ಪಡೆಯುತ್ತವೆ. ಅದಕ್ಕಾಗಿ ಆ ಹುಡುಗ ಅಷ್ಟೇ ಹೆಣಗಾಟವನ್ನೂ ಮಾಡುತ್ತಾನೆ. ಸಾಹಸಕಾರಿ, ರೋಮಾಂಚಕ, ಕುತೂಹಲದ ವಿಡಿಯೋಗಳಿದ್ದರೆ ಜನರನ್ನು ಆಕರ್ಷಿಸುವುದು ಸಹಜ. ಅದೇ ರೀತಿ ಸಮೀರ್ ಮಾಡಿರುವ ಈ ವಿಡಿಯೋ ಜನರನ್ನು ಸ್ವಲ್ಪ ಮಟ್ಟಿಗೆ ಆಕರ್ಷಿಸಿದೆ. ಇಂಥ ಹೊಸ ಟ್ರೆಂಡ್ ಭಾರತದಲ್ಲಿ ಈಗಷ್ಟೇ ಶುರುವಾಗಿದೆ ಅನ್ನುವುದನ್ನು ಜನ ಒಪ್ಪಬೇಕಷ್ಟೇ.
Sowjanya murder case, YouTuber dootha Sameer MD booked for offending religious sentiments of Dharmasthala. A video by Kannada content creator Sameer MD on February 27, 2025, has reignited public interest in the Sowjanya rape and murder case, shedding light once again on the tragic events that unfolded in Karnataka’s Ujire.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm