Mangalore Diganth Missing Case, shocking details: ಪರೀಕ್ಷೆ ಭಯದಲ್ಲಿ ಮನೆ ಬಿಟ್ಟಿದ್ದ ದಿಗಂತ್ ; ಮೈಸೂರು, ಬೆಂಗಳೂರು ಸುತ್ತಿ ಆರಂಗೇಟ್ರಂ ಹಾಡಿದ ಹುಡುಗನ ಮಾತು ಕೇಳಿ ಹುಸ್ಸಪ್ಪಾ ಎಂದ ಪೊಲೀಸರು !

08-03-25 11:05 pm       Mangalore Correspondent   ಕರಾವಳಿ

ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಪೊಲೀಸರ ಪಾಲಿಗೆ ಭಾರೀ ಸವಾಲಾಗಿ ಪರಿಣಮಿಸಿತ್ತು. ಪೋಷಕರು ಹೈಕೋರ್ಟಿನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದು ಮತ್ತು ಮಾ.12ರಂದು ಕೋರ್ಟಿಗೆ ಮಾಹಿತಿ ನೀಡಲೇಬೇಕಾದ ಅನಿವಾರ್ಯತೆ ಪೊಲೀಸರ ಮೇಲಿತ್ತು....

ಮಂಗಳೂರು, ಮಾ.8 : ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಪೊಲೀಸರ ಪಾಲಿಗೆ ಭಾರೀ ಸವಾಲಾಗಿ ಪರಿಣಮಿಸಿತ್ತು. ಪೋಷಕರು ಹೈಕೋರ್ಟಿನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದು ಮತ್ತು ಮಾ.12ರಂದು ಕೋರ್ಟಿಗೆ ಮಾಹಿತಿ ನೀಡಲೇಬೇಕಾದ ಅನಿವಾರ್ಯತೆ ಪೊಲೀಸರ ಮೇಲಿತ್ತು. ಹೀಗಾಗಿ ಕೊನೆಕ್ಷಣದ ಪ್ರಯತ್ನ ಎನ್ನುವಂತೆ ಪೊಲೀಸರು ಶನಿವಾರ ಬೆಳಗ್ಗೆ ಫರಂಗಿಪೇಟೆ, ವಳಚ್ಚಿಲ್ ಆಸುಪಾಸಿನಲ್ಲಿ ಪೊಲೀಸ್ ಶ್ವಾನವನ್ನೂ ಕರೆಸ್ಕೊಂಡು ಶೋಧ ನಡೆಸಿದ್ದರು.

ಇದೇ ವೇಳೆ, ಮನೆಯವರು ಇದ್ದ ಬದ್ದ ದೇವರಿಗೆಲ್ಲಾ ಹರಕೆ ಹೇಳಿಕೊಂಡು ಮಗ ಜೀವಂತವಾಗಿ ಬರಲೆಂದು ಪ್ರಾರ್ಥನೆ ಮಾಡಿಕೊಂಡಿದ್ದರು. ಪೊಲೀಸರು ಆರಂಭದಲ್ಲಿ ಶ್ವಾನ ತಂದು ಶೋಧ ಕಾರ್ಯ ನಡೆಸಬೇಕಾಗಿತ್ತು. ಕೊನೆಗಾದರೂ ಬಂದರಲ್ಲಾ ಎಂದೂ ಮನಸ್ಸನ್ನು ಸಂತೈಸಿಕೊಂಡಿದ್ದರು. ಇದರ ಬೆನ್ನಲ್ಲೇ ದಿಢೀರ್ ಎನ್ನುವಂತೆ ಶನಿವಾರ ಸಂಜೆಯ ಹೊತ್ತಲ್ಲಿ ದಿಗಂತದಲ್ಲಿ ಸೂರ್ಯ ಕಂತುವ ಮೊದಲೇ ದಿಗಂತ್ ಉಡುಪಿಯಲ್ಲಿ ಪ್ರತ್ಯಕ್ಷನಾಗಿದ್ದ ಸುದ್ದಿ ಬಂದಿತ್ತು. ಮನೆಯವರು ದೇವರು ಕಣ್ಣು ಬಿಟ್ಟ ಎಂದು ಮತ್ತೆ ದಿಗಂತದತ್ತ ದೃಷ್ಟಿ ನೆಟ್ಟಿದ್ದರು. ಸಂಜೆ ವೇಳೆಗೆ, ಹುಡುಗನನ್ನು ಫರಂಗಿಪೇಟೆಯ ಮನೆಗೆ ಕರೆತರುತ್ತಾರೆಂದು ಸಂಬಂಧಿಕರು, ಆಸುಪಾಸಿನ ಜನರು ಕೂಡ ದಿಗಂತ್ ಮನೆಯಲ್ಲಿ ಸೇರಿದ್ದರು.

ಆದರೆ ಪೊಲೀಸರು ಹತ್ತು ದಿನಗಳಿಂದ ನಾಪತ್ತೆಯಾಗಿ ಬಸವಳಿದಿದ್ದ ಹುಡುಗನಿಗೆ ಚೆನ್ನಾಗಿ ಊಟ, ತಿಂಡಿ ಕೊಟ್ಟು ವಿಚಾರಣೆ ನಡೆಸಿದ್ದಾರೆ. ಯಾಕಪ್ಪಾ.. ಎಲ್ಲಿಗೆಲ್ಲ ಹೋಗಿ ಬಂದಿದ್ದೀಯಾ.. ನಿಜ ಹೇಳು...ಅಷ್ಟರಲ್ಲಿಯೇ ಹುಡುಗ ನಿಜ ವೃತ್ತಾಂತ ಹೇಳಿಬಿಟ್ಟಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ಹುಡುಗ ಫೆ.25ರಂದು ನಾಪತ್ತೆಯಾದ ದಿನವೇ ಮೈಸೂರಿಗೆ ತೆರಳಿದ್ದಾನೆ. ಆನಂತರ, ಅಲ್ಲಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಒಂದೆರಡು ದಿನ ತಿರುಗಾಡಿದ್ದಾನೆ, ಕೈಯಲ್ಲಿ ಕಾಸು ಮುಗಿದಾಗ ಬೆಂಗಳೂರು ಹೊರವಲಯದ ರೆಸಾರ್ಟ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ಅಲ್ಲಿ ಮೂರು ದಿನಗಳ ಕಾಲ ಕೆಲಸ ಮಾಡಿದ್ದು, ಕೈಗೆ ಕಾಸು ಬರುತ್ತಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆನಂತರ, ಬಸ್ಸಿನಲ್ಲಿ ಶಿವಮೊಗ್ಗ ಬಂದಿದ್ದು, ಅಲ್ಲಿಂದ ಮತ್ತೆ ಮೈಸೂರಿಗೆ ತೆರಳಿದ್ದಾನೆ. ಶುಕ್ರವಾರ ರಾತ್ರಿ ಮತ್ತೆ ಮೈಸೂರಿನಿಂದ ಮುರ್ಡೇಶ್ವರ ತೆರಳುವ ರೈಲು ಸಿಕ್ಕಿದ್ದು, ಅದಕ್ಕೆ ಹತ್ತಿದ್ದಾನೆ. ರೈಲು ಉಡುಪಿ ತಲುಪಿದಾಗ ಅಲ್ಲಿ ಇಳಿದಿದ್ದು, ಇನ್ನೇನು ಮಾಡುವುದೆಂದು ಯೋಚನೆ ಮಾಡುತ್ತಿರುವಾಗಲೇ ಎದುರಿಗೆ ಡಿಮಾರ್ಟ್ ಕಾಣಸಿಕ್ಕಿದೆ. ಮಧ್ಯಾಹ್ನ ವೇಳೆಗೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದು, ಸುಮಾರು ಹೊತ್ತು ಅತ್ತಿತ್ತ ಹೋಗುತ್ತ ಸಂಶಯಾಸ್ಪದವಾಗಿ ಕಂಡಿದ್ದರಿಂದ ಅಲ್ಲಿನ ಸಿಬಂದಿ ವಿಚಾರಿಸಿದ್ದಾರೆ. ಮಾಧ್ಯಮದಲ್ಲಿ ದಿಗಂತ್ ನಾಪತ್ತೆ ಸುದ್ದಿ ನೋಡಿದ್ದ ಸಿಬಂದಿ, ನೀನು ದಿಗಂತ್ ಅಲ್ವಾ ಎಂದು ಗುರುತು ಹಿಡಿದಿದ್ದಾರೆ. ಅಷ್ಟರಲ್ಲಿ ಮತ್ತೆ ಎಸ್ಕೇಪ್ ಆಗಲು ಟ್ರೈ ಮಾಡಿದ್ದಾನೆ. ಆತನನ್ನು ಹಿಡಿದಿಟ್ಟು ಮನೆಯವರ ನಂಬರ್ ಪಡೆದು ಮ್ಯಾನೇಜರ್ ಫೋನ್ ಮಾಡಿದ್ದಾರೆ. ತಾಯಿ ಜೊತೆಗೆ ಮಾತನಾಡಿದ್ದ ದಿಗಂತ್, ತನ್ನ ತಪ್ಪನ್ನು ಮರೆಮಾಚಲು ನನ್ನನ್ನು ಯಾರೋ ಎತ್ತಾಕ್ಕೊಂಡು ಹೋಗಿದ್ದರು ಅಮ್ಮಾ ಎಂದು ಹೇಳಿ ಯಾಮಾರಿಸಿದ್ದಾನೆ.

ಶನಿವಾರ ಬೆಳಗ್ಗೆ ತನ್ನ ಮನೆಯ ಮುಂದಿನ ರೈಲು ಹಳಿಯಲ್ಲಿಯೇ ಮುರ್ಡೇಶ್ವರ ರೈಲು ಪಾಸಾಗಿತ್ತು. ಈ ವೇಳೆ, ತನ್ನ ಮನೆಯ ಪರಿಸರದಲ್ಲಿ ಪೊಲೀಸರು ಹುಡುಕಾಟ ನಡೆಸಿರುವುದನ್ನೂ ಹುಡುಗ ಕಂಡಿದ್ದಾನೆ. ವಿಚಾರಣೆ ವೇಳೆ ಅದನ್ನೂ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.

ಎಲ್ಲ ಕೇಳಿಕೊಂಡ ಪೊಲೀಸರು ಯಾಕಪ್ಪಾ ಹೀಗೆ ಮಾಡಿದೆ, ನಿಂಗೇನಾಗಿತ್ತು ಮನೇಲಿ ತೊಂದರೆ ಎಂದು ಕೇಳಿದ್ದಾರೆ. ನಂಗೆ ಎಕ್ಸಾಂನಲ್ಲಿ ಕಡಿಮೆ ಮಾರ್ಕ್ ಬಂದಿತ್ತು. ಇದಕ್ಕಾಗಿ ಮನೆಯಲ್ಲಿ ಬೈದಿದ್ದರು. ಮೊನ್ನೆ ಪಿಯುಸಿ ಫೈನಲ್ ಎಕ್ಸಾಮ್ ಶುರುವಾಗಿತ್ತು. ಇದಕ್ಕಾಗಿಯೇ ಮನೆ ಬಿಟ್ಟು ಹೋದೆ, ಬೇರೇನೂ ತೊಂದರೆ ಆಗಿಲ್ಲ ಎಂದು ಹೇಳಿದ್ದಾನೆ. 12 ದಿನಗಳಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಾಡುತ್ತ, ಹುಡುಗ ಎಲ್ಲಿ ಹೋಗಿರಬಹುದು ಎಂದು ಸ್ಥಳೀಯರು ಹೇಳತೊಡಗಿದ್ದ ಅಂತೆ ಕಂತೆಗಳ ಬೆನ್ನುಹತ್ತಿದ್ದ ಪೊಲೀಸರಿಗೆ ದಿಗಂತ್ ಮಾತು ಕೇಳುತ್ತಲೇ ಹುಸ್ಸಪ್ಪಾ ಎನ್ನುವಂತಾಗಿತ್ತು.

In a shocking revelation, the investigation into the mysterious disappearance of Diganth, a student from Mangalore, has unveiled a series of events that led him to escape his home to avoid Pre-University (PUC) exams. Local authorities have confirmed that Diganth, initially reported missing, traveled from Mangalore to Mysuru and subsequently to Bangalore and Shivamogga, evading detection along the way.