Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾತ ; ರಾಯಲ್ ಎನ್ ಫೀಲ್ಡ್ ಅತಿ ವೇಗಕ್ಕೆ ಡಿವೈಡರ್ ಡಿಕ್ಕಿ, ಕಾಸರಗೋಡಿನ ಇಬ್ಬರು ವಿದ್ಯಾರ್ಥಿಗಳು ಬಲಿ, ನಸುಕಿನ ಖಾಲಿ ರಸ್ತೆ ಸವಾರಿಗೆ ಹಾರಿ ಹೋಯ್ತು ಯುವಕರ ಜೀವ !    

08-04-25 08:58 pm       Mangalore Correspondent   ಕರಾವಳಿ

ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಅತಿ ವೇಗದಲ್ಲಿ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಯ ಕೆಪಿಟಿ ಬಳಿಯ ಎಸ್ ಕೆಎಸ್ ಜಂಕ್ಷನ್ ಬಳಿಯಲ್ಲಿ ಡಿವೈಡರಿಗೆ ಡಿಕ್ಕಿ ಹೊಡೆದಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಸುಕಿನ ಮೂರು ಗಂಟೆ ವೇಳೆಗೆ ನಡೆದಿದೆ.

ಮಂಗಳೂರು, ಎ.8 : ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಅತಿ ವೇಗದಲ್ಲಿ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಯ ಕೆಪಿಟಿ ಬಳಿಯ ಎಸ್ ಕೆಎಸ್ ಜಂಕ್ಷನ್ ಬಳಿಯಲ್ಲಿ ಡಿವೈಡರಿಗೆ ಡಿಕ್ಕಿ ಹೊಡೆದಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಸುಕಿನ ಮೂರು ಗಂಟೆ ವೇಳೆಗೆ ನಡೆದಿದೆ.

ಮಂಗಳೂರಿನ ಶ್ರೀನಿವಾಸ ಕಾಲೇಜಿನ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಸಂಕೀರ್ತನ್ (23) ಮತ್ತು ಎಜೆ ಡೆಂಟಲ್ ಕಾಲೇಜಿನ ವಿದ್ಯಾರ್ಥಿ ಧನುರ್ವೇಶ್ (19) ಮೃತಪಟ್ಟವರು. ಇಬ್ಬರು ಕೂಡ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದವರು. ಇವರು ಮಂಗಳೂರಿನಲ್ಲಿ ಕಾಲೇಜು ಕಲಿಯುತ್ತಿದ್ದು, ಕುಂಟಿಕಾನ ಬಳಿಯಲ್ಲಿ ರೂಮ್ ಮಾಡಿಕೊಂಡಿದ್ದರು. ನಸುಕಿನ ಮೂರು ಗಂಟೆ ಸುಮಾರಿಗೆ ಹಸಿವಾಗುತ್ತೆ ಎಂದು ಪಂಪ್ವೆಲ್ ನಲ್ಲಿ ಹೊಟೇಲಿಗೆ ಚಹಾ ಕುಡಿಯಲು ಐದು ಮಂದಿ ಯುವಕರು ಅಲ್ಲಿಂದ ಹೊರಟಿದ್ದರು. ಎನ್ ಫೀಲ್ಡ್ ಬೈಕಿನಲ್ಲಿ ಕಾಸರಗೋಡು ನಿವಾಸಿ ಸಿಬಿ ಸ್ಯಾಮ್ ಬೈಕಿನಲ್ಲಿ ಮೂರನೇ ಸವಾರನಾಗಿ ಕುಳಿತುಕೊಂಡಿದ್ದ. ಇವರಲ್ಲಿ ಯಾರು ಕೂಡ ಹೆಲ್ಮೆಟ್ ಹಾಕಿರಲಿಲ್ಲ.

ಇವರ ಜೊತೆಗಿದ್ದ ಇನ್ನಿಬ್ಬರು ಯುವಕರು ಮತ್ತೊಂದು ಬೈಕಿನಲ್ಲಿ ಹಿಂದಿನಿಂದ ಹೊರಟಿದ್ದರು. ಸಂಕೀರ್ತನ್ ರಾಯಲ್ ಎನ್ ಫೀಲ್ಡ್ -350 ಸಿಸಿಯ ಬೈಕನ್ನು ಮುಂದಿನಿಂದ ಎರ್ರಾಬಿರ್ರಿಯಾಗಿ ಓಡಿಸಿದ್ದು ಖಾಲಿ ರಸ್ತೆಯಲ್ಲಿ ಕ್ಷಣಾರ್ಧದಲ್ಲಿ ಕುಂಟಿಕಾನದಿಂದ ಹಾರಿಕೊಂಡು ಸಾಗಿತ್ತು. ಅಷ್ಟೇ ವೇಗದಲ್ಲಿ ಡಿವೈಡರ್ ಡಿಕ್ಕಿಯಾಗಿದ್ದು ಸಂಕೀರ್ತನ್ ರಸ್ತೆಗೆ ಬಿದ್ದು ತಲೆಗೆ ಪೆಟ್ಟು ಬಿದ್ದರೆ, ಮಧ್ಯದಲ್ಲಿದ್ದ ಧನುರ್ವೇಶ್ ವಿದ್ಯುತ್ ಕಂಬಕ್ಕೆ ಬಡಿದು ತಲೆಗೆ ತೀವ್ರ ಏಟಿಗೊಳಗಾಗಿದ್ದ. ಹಿಂಬದಿಯಲ್ಲಿದ್ದ ಸ್ಯಾಮ್ ಬೈಕ್ ಬೀಳುತ್ತಲೇ ಹೊರಕ್ಕೆ ಎಸೆಯಲ್ಪಟ್ಟಿದ್ದು ಹೆಚ್ಚು ಗಾಯಗಳಿಲ್ಲದೆ ಪಾರಾಗಿದ್ದಾನೆ.

ಕುಂಟಿಕಾನ ಕಡೆಯಿಂದ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬೈಕ್ ಒಂದು ನಿಮಿಷದ ಬಳಿಕ ಅಲ್ಲಿ ತಲುಪಿದಾಗ, ಇಬ್ಬರು ಯುವಕರು ರಕ್ತದ ಮಡುವಲ್ಲಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ಯುವುದಕ್ಕೂ ವಾಹನ ಸಿಗಲಿಲ್ಲ. ಆನಂತರ ಕೆಲ ಹೊತ್ತಲ್ಲಿ ಪೊಲೀಸರ ವಾಹನ ಬಂದಿದ್ದು, ಇಬ್ಬರನ್ನು ಆಸ್ಪತ್ರೆಗೆ ತಲುಪಿಸಿದಾಗ ಅದಾಗಲೇ ಮೃತರಾಗಿದ್ದರು. ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಗೆ ಹದಿಹರೆಯದ ಯುವಕರು ಜೀವ ತೆತ್ತಿದ್ದರು. ಈ ಸಂದರ್ಭದಲ್ಲಿ ಹುಡುಗರು ಕುಡಿದು ಬೈಕ್ ಚಲಾಯಿಸಿದ್ದರೇ ಎನ್ನುವ ಬಗ್ಗೆ ವೈದ್ಯಕೀಯ ರಿಪೋರ್ಟ್ ಬರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Two students from Kerala lost their lives and another sustained serious injuries in a tragic road accident near KPT on National Highway 66 in the early hours of Tuesday around 2:50 AM. The deceased have been identified as Sanketh and Dhanurved C., while the injured student has been identified as Shiby Syam.