Mangalore, Netravati Bridge Repair, Traffic block: ನೇತ್ರಾವತಿ ಹಳೆ ಸೇತುವೆ ದುರಸ್ತಿ ಕಾಮಗಾರಿ, ಹೊಸ ಸೇತುವೆಯಲ್ಲಿ ಕೈಕೊಟ್ಟ ಪಿಕ್ ಅಪ್ ವಾಹನ, ತಾಸುಗಟ್ಟಲೆ ಹೆದ್ದಾರಿ ಬ್ಲಾಕ್, ವಾಹನಗಳನ್ನ ತಳ್ಳಿ ಸುಸ್ತಾದ ಟ್ರಾಫಿಕ್ ಪೊಲೀಸರು !

10-04-25 09:48 pm       Mangalore Correspondent   ಕರಾವಳಿ

ಉಳ್ಳಾಲದಿಂದ ಮಂಗಳೂರು ಸಂಪರ್ಕಿಸುವ ಹಳೆಯ ನೇತ್ರಾವತಿ ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಎಪ್ರಿಲ್ ತಿಂಗಳು ಪೂರ್ತಿಯಾಗಿ ಸಂಚಾರ ನಿಷೇಧಿಸಲಾಗಿದೆ. ಇದರಿಂದಾಗಿ ಹತ್ತು ದಿವಸಗಳಿಂದ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರಿಂದ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿದೆ.

ಉಳ್ಳಾಲ, ಎ.10 : ಉಳ್ಳಾಲದಿಂದ ಮಂಗಳೂರು ಸಂಪರ್ಕಿಸುವ ಹಳೆಯ ನೇತ್ರಾವತಿ ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಎಪ್ರಿಲ್ ತಿಂಗಳು ಪೂರ್ತಿಯಾಗಿ ಸಂಚಾರ ನಿಷೇಧಿಸಲಾಗಿದೆ. ಇದರಿಂದಾಗಿ ಹತ್ತು ದಿವಸಗಳಿಂದ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರಿಂದ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಬೆಳಗ್ಗೆ, ಸಂಜೆ ಎನ್ನದೆ ಇಡೀ ದಿನ ಟ್ರಾಫಿಕ್ ಸಮಸ್ಯೆಯಾಗಿದ್ದು, ಪೊಲೀಸರು ವಾಹನಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಇದರ ನಡುವೆ, ದಿನವೂ ಹೊಸ ಸೇತುವೆಯಲ್ಲಿ ಸಣ್ಣ ಪುಟ್ಟ ಅಪಘಾತಗಳಾಗುತ್ತಿದ್ದು, ಮತ್ತಷ್ಟು ಸಂಚಾರ ತೊಂದರೆಗೆ ಕಾರಣವಾಗುತ್ತಿದೆ. ಗುರುವಾರ ಬೆಳಗ್ಗೆ ನೂತನ ಸೇತುವೆಯಲ್ಲಿ ಕಾರುಗಳ ಮಧ್ಯೆ ನಡೆದ ಅಪಘಾತ ಮತ್ತು ಪಿಕ್ ಅಪ್ ವಾಹನವೊಂದು ಕೆಟ್ಟು ನಿಂತ ಪರಿಣಾಮ ತಾಸುಗಟ್ಟಲೆ  ಹೆದ್ದಾರಿ ಸಂಚಾರ ಸ್ತಗಿತಗೊಂಡಿದ್ದು ಸುಡುವ ಬಿಸಿಲಿಗೆ ವಾಹನ ಸವಾರರು ಕಾದು ಕಿರಿ ಕಿರಿ ಅನುಭವಿಸಿದರು.

ನೇತ್ರಾವತಿ ಹಳೆ ಸೇತುವೆಯ ನಾಲ್ಕು ಪಿಲ್ಲರ್ ಗಳು ಮತ್ತು ಪಿಲ್ಲರ್  ಮೇಲ್ಭಾಗದ ಕಾಂಕ್ರಿಟ್ ಬೀಮ್ ಗಳ ನಡುವಿನ‌ ಬೇರಿಂಗ್ ಗಳು ಹಳೆಯದಾಗಿ ಶಿಥಿಲಗೊಂಡಿದ್ದು ನೂತನ ಬೇರಿಂಗ್ ಅಳವಡಿಕೆ ಕೆಲಸ ಭರದಿಂದ‌ ಸಾಗುತ್ತಿದೆ. 1952ರಲ್ಲಿ ಸ್ಥಾಪನೆಯಾಗಿದ್ದ ಈ ಸೇತುವೆಯಲ್ಲಿ ಕಾಂಕ್ರೀಟ್ ಮತ್ತು ಕಬ್ಬಿಣದ ಪ್ಲೇಟ್ ಶಿಥಿಲವಾಗಿದ್ದು ರಿಪೇರಿ ಕಾಮಗಾರಿ ಅನಿವಾರ್ಯ ಎನಿಸಿದೆ. ಈಗಾಗಲೇ ಎರಡು‌ ಪಿಲ್ಲರ್ ಗಳ ಬೇರಿಂಗ್ ಅಳವಡಿಕೆ ಕಾಮಗಾರಿ ನಡೆದಿದ್ದು ಮತ್ತೆರಡು ಪಿಲ್ಲರ್ ಗಳ ಕಾಮಗಾರಿ ಪ್ರಗತಿಯಲ್ಲಿದೆ. ಸೇತುವೆಯ ಕೆಳಭಾಗದಲ್ಲಿ ಬೇರಿಂಗ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಕಂಪಿಸದಂತೆ ತಿಂಗಳ ಕಾಲ ವಾಹನ ಸಂಚಾರವನ್ನ ನಿಷೇಧಿಸಲಾಗಿದೆ. ಸೇತುವೆಯ ಮೇಲ್ಭಾಗದಲ್ಲೂ ದುರಸ್ತಿ ಕಾಮಗಾರಿ ಮತ್ತು ಪೈಂಟಿಂಗ್ ಕಾರ್ಯಗಳು ನಡೆಯುತ್ತಿವೆ. ಸುಮಾರು 20ಕ್ಕೂ ಅಧಿಕ ಹೊರ ರಾಜ್ಯದ ಕಾರ್ಮಿಕರು‌ ಸೇತುವೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಸೇತುವೆ ಮೇಲ್ಭಾಗದಲ್ಲಿ ಬೆರಳೆಣಿಕೆಯ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಇದನ್ನ ಕಂಡ ವಾಹನ ಪ್ರಯಾಣಿಕರು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆಯೆಂದು ತಪ್ಪು ಗ್ರಹಿಸಿದ್ದಾರೆ. ಬಹುತೇಕ ಕಾರ್ಮಿಕರು ಸೇತುವೆ ಕೆಳಭಾಗದಲ್ಲೇ ಪಿಲ್ಲರ್ ದುರಸ್ತಿ ಕಾಮಗಾರಿಯಲ್ಲಿ ತೊಡಗಿದ್ದಾರೆ. ಪಿಲ್ಲರ್ ಗಳ ಬಳಿ ತೆರಳಲು ಕಾರ್ಮಿಕರು‌ ಬೋಟ್ ಗಳನ್ನೇ ಅವಲಂಬಿಸಬೇಕಿದ್ದು ಕಾಮಗಾರಿ ಮುಗಿಸಲು ಇನ್ನೂ ಇಪ್ಪತ್ತು ದಿನಗಳ ಕಾಲಾವಕಾಶ ಬೇಕಿದೆ. ಸೇತುವೆಯ ಪಿಲ್ಲರ್ ಗಳ ಹಳೆಯ ಬೇರಿಂಗ್ ಗಳು ಶಿಥಿಲಾವಸ್ಥೆಯಲ್ಲಿದ್ದು ಅನಾಹುತಗಳಾದರೆ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ಎದುರಾಗಬಹುದು. ಸೇತುವೆಯ ದೀರ್ಘ ಭವಿಷ್ಯದ ದೃಷ್ಟಿಯಿಂದ‌ ನುರಿತ ಕಾರ್ಮಿಕರನ್ನು ಬಳಸಿ ಬೇರಿಂಗ್ ಅಳವಡಿಕೆ ಕಾಮಗಾರಿಯನ್ನ ಭರದಿಂದ ನಡೆಸಲಾಗುತ್ತಿದ್ದು ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕೆಂದು ಸೇತುವೆ ದುರಸ್ತಿ ಕಾಮಗಾರಿ ನಿರ್ವಹಣೆ ನಡೆಸುತ್ತಿರುವ ಉಡುಪಿ ಟೋಲ್ ವೇ ಪ್ರೇವೇಟ್ ಲಿ.ನ ಇಂಜಿನಿಯರ್ ಅಜಯ್ ವಿನಂತಿಸಿದ್ದಾರೆ. 

ಹತ್ತು ದಿನದಲ್ಲಿ ಲಘು ವಾಹನ ಸಂಚಾರ

ಇದೇ ವೇಳೆ, ಟ್ರಾಫಿಕ್ ಸಮಸ್ಯೆ ತೀವ್ರಗೊಂಡು ಸಾರ್ವಜನಿಕರು ಪರದಾಟ ನಡೆಸುತ್ತಿರುವುದರಿಂದ ಈ ಬಗ್ಗೆ ಸಂಸದ ಬ್ರಿಜೇಶ್ ಚೌಟ ಗಮನಕ್ಕೂ ತರಲಾಯಿತು. ಇದಕ್ಕೆ ಸ್ಪಂದಿಸಿದ ಸಂಸದ ಚೌಟ, ಈಗಾಗಲೇ ಕಾಮಗಾರಿ ನಡೆಯುವಲ್ಲಿಗೆ ಭೇಟಿ ಕೊಟ್ಟಿದ್ದೇನೆ, ತುರ್ತು ಕಾಮಗಾರಿ ನಿರ್ವಹಿಸಲು ಸೂಚಿಸಿದ್ದೇನೆ. ಎರಡು ಪಿಲ್ಲರ್ ಕಾಮಗಾರಿ ಮುಗಿದಿದ್ದು ಇನ್ನೆರಡು ಮುಗಿದ ಬೆನ್ನಲ್ಲೇ ಇನ್ನು ಹತ್ತು ದಿನದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಿದ್ದಾರೆ. ಈ ಹಿಂದೆಯೇ ಕಾಮಗಾರಿ ನಿರ್ವಹಿಸಲು ಅನುಮತಿ ಕೇಳಿದ್ದರು. ಶಾಲೆ- ಕಾಲೇಜು ಮಕ್ಕಳ ಪರೀಕ್ಷೆ ಇನ್ನಿತರ ಅಗತ್ಯ ಇದ್ದುದರಿಂದ ಎಪ್ರಿಲ್ ವರೆಗೆ ಕಾಯಬೇಕಾಗಿ ಬಂತು ಎಂದು ತಿಳಿಸಿದ್ದಾರೆ.

ವಾಹನಗಳನ್ನ ತಳ್ಳಿ ಸುಸ್ತಾದ ಪೊಲೀಸರು ! 

ಸೇತುವೆ ದುರಸ್ತಿ ಆಗುತ್ತಿರುವುದರಿಂದ ಹೆದ್ದಾರಿಯಲ್ಲಿ ನಿತ್ಯವೂ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಗುರುವಾರ ಬೆಳಗ್ಗೆ ನೇತ್ರಾವತಿ ಸೇತುವೆಯಲ್ಲಿ ಫಾರ್ಚುನರ್ ಕಾರಿನ ಹಿಂಬದಿಗೆ ಕಿಯಾ ಕಾರು ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಚಾರವು ತಾಸುಗಟ್ಟಲೆ ಸ್ತಬ್ಧಗೊಂಡಿತ್ತು. ಪಿಕ್ ಅಪ್ ವಾಹನವೊಂದು ಸೇತುವೆಯಲ್ಲಿ ಕೆಟ್ಟು ನಿಂತ ಪರಿಣಾಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ನೂತನ ಸೇತುವೆಯ ಅಗಲವೂ ಕಡಿಮೆ‌ ಇರುವ ಕಾರಣ ಇತ್ತ ತೊಕ್ಕೊಟ್ಟು ಭಾಗದಲ್ಲಿ ಮತ್ತು ಅತ್ತ ಪಂಪ್ವೆಲ್ ವರೆಗೂ ತಾಸುಗಟ್ಟಲೆ ವಾಹನಗಳು ಸಾಲುಗಟ್ಟಿದ್ದವು. ಸೇತುವೆಯಲ್ಲಿ ಗಸ್ತಿನಲ್ಲಿದ್ದ ಟ್ರಾಫಿಕ್ ಪೊಲೀಸರು ಮಾತ್ರ ಉರಿಯುವ ಸುಡು ಬಿಸಿಲಿಗೆ ಮೈಯೊಡ್ಡಿ ಕೆಟ್ಟು ನಿಂತಿದ್ದ ವಾಹನಗಳನ್ನ ತಳ್ಳಿ ಬದಿಗೆ ಹಾಕಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇಡೀ ದಿನ ಟ್ರಾಫಿಕ್ ಸಮಸ್ಯೆ ನೋಡಿಕೊಳ್ಳುವುದೇ ಪೊಲೀಸರಿಗೆ ತಲೆನೋವಾಗಿದೆ.

Mangalore Traffic Standstill, Old Netravati Bridge Repairs and Stuck Pickup Truck Create Major Highway Nightmare.