Satish Kumapla, Mangalore, U T Khader: ಮೂಡಾ ಅಧ್ಯಕ್ಷರಿಂದ‌ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ವೈಯಕ್ತಿಕ ತೇಜೋವಧೆ ; ಸುಹಾಸ್ ಶೆಟ್ಟಿ ಹಂತಕರ ಪರ ವಹಿಸಿದ ಸ್ಪೀಕರ್ ಖಾದರ್ ಅವರೇ ಸ್ಪಷ್ಟನೆ ನೀಡಲಿ, ಸದಾಶಿವ ಉಳ್ಳಾಲ್ ಬ್ಯಾಟಿಂಗ್ ನಡೆಸೋದ್ಯಾಕೆ? 

08-05-25 09:06 pm       Mangalore Correspondent   ಕರಾವಳಿ

ಸುಹಾಸ್ ಶೆಟ್ಟಿ ಹಂತಕರ ಪರ ವಹಿಸಿ ಮಾತನಾಡಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸತೀಶ್ ಕುಂಪಲ ಅವರು ಬಿಜೆಪಿ ಜಿಲ್ಲಾಧ್ಯಕ್ಷರ ನೆಲೆಯಲ್ಲಿ ಆಗ್ರಹಿಸಿದ್ದಾರೆ. ಖಾದರ್ ಪರ ಬ್ಯಾಟಿಂಗ್ ನಡೆಸಿ ಸತೀಶ್ ಕುಂಪಲ ವಿರುದ್ಧ ವೈಯಕ್ತಿಕ ತೇಜೋವಧೆ ನಡೆಸಿ ಸ್ಪಷ್ಟನೆ ನೀಡುವ ನೈತಿಕತೆ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರಿಗೆ ಇಲ್ಲ.

ಉಳ್ಳಾಲ್, ಮೇ 8 : ಸುಹಾಸ್ ಶೆಟ್ಟಿ ಹಂತಕರ ಪರ ವಹಿಸಿ ಮಾತನಾಡಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸತೀಶ್ ಕುಂಪಲ ಅವರು ಬಿಜೆಪಿ ಜಿಲ್ಲಾಧ್ಯಕ್ಷರ ನೆಲೆಯಲ್ಲಿ ಆಗ್ರಹಿಸಿದ್ದಾರೆ. ಖಾದರ್ ಪರ ಬ್ಯಾಟಿಂಗ್ ನಡೆಸಿ ಸತೀಶ್ ಕುಂಪಲ ವಿರುದ್ಧ ವೈಯಕ್ತಿಕ ತೇಜೋವಧೆ ನಡೆಸಿ ಸ್ಪಷ್ಟನೆ ನೀಡುವ ನೈತಿಕತೆ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರಿಗೆ ಇಲ್ಲ. ಸದಾಶಿವ ಉಳ್ಳಾಲ್ ಅವರು ಯಾರದ್ದೋ ಆಶೀರ್ವಾದದಿಂದ ಮೂಡಾ ಅಧ್ಯಕ್ಷ ಸ್ಥಾನ ಗಿಟ್ಟಿಸಿದ್ದಾರೆ. ಅವರು ಈ ಹಿಂದೆ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ನಡೆದಿರುವ ವಿಚಾರಗಳು ನಮಗೂ ತಿಳಿದಿವೆ. ಆದರೆ ವೈಯಕ್ತಿಕ ವಿಚಾರಗಳನ್ನ ಮುಂದಿಟ್ಟು ಕೀಳು ಮಟ್ಟದ ರಾಜಕಾರಣ ಮಾಡುವ ಸಂಸ್ಕೃತಿ ನಮ್ಮದಲ್ಲವೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಹೇಳಿದರು.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಬುಧವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಜ್ಪೆಯಲ್ಲಿ ನಡೆದಿದ್ದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಂತಕರ ಪರ ವಹಿಸಿ ಮಾತನಾಡಿದ್ದ ಸ್ಪೀಕರ್ ಖಾದರ್ ಪರವಾಗಿ ಬ್ಯಾಟಿಂಗ್ ನಡೆಸಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಖಾದರ್ ನಡೆಯನ್ನ ಖಂಡಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ವಿರುದ್ಧ ತೀರಾ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿ ತೇಜೋವಧೆ ನಡೆಸಿದ್ದಾರೆ. ಯು.ಟಿ.ಖಾದರ್ ಅವರ ಮೇಲಿರುವ ಆರೋಪವನ್ನ ದಿಕ್ಕು ತಪ್ಪಿಸುವ ಭರದಲ್ಲಿ ಸದಾಶಿವ ಉಳ್ಳಾಲ್ ಅವರು ಕುಂಪಲ ಅವರ ವಿರುದ್ಧ ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಸತೀಶ್ ಕುಂಪಲ ಅವರ ಯೋಗ್ಯತೆ ಪ್ರಶ್ನಿಸುವ ಸದಾಶಿವ ಉಳ್ಳಾಲ್ ಅವರೇ ನಿಮಗೆ ತಾಕತ್ತಿದ್ದರೆ ಮೂಡಾದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನ ನಿಲ್ಲಿಸಿ ತೋರಿಸಿ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಮಾತನಾಡಲು ನಮಗೂ ತಿಳಿದಿದೆ. ಆದರೆ ಅಂತಹ ಕೀಳು ಮಟ್ಟದ ರಾಜಕಾರಣಕ್ಕೆ ನಾವು ಇಳಿಯಲ್ಲ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೂ ಫಾಝಿಲ್ ಮನೆಯವರಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪೀಕರ್ ಖಾದರ್ ಅವರೇ ಕ್ಲೀನ್ ಚಿಟ್ ನೀಡಿದ್ದರು. ಹಿಂದೂ ಸಂಘಟನೆಯ ಕಾರ್ಯಕರ್ತನೋರ್ವ ಕೊಲೆಯಾದ ಮರು ದಿವಸವೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಸ್ಪೀಕರ್ ಅವರು ಈ ರೀತಿಯ ಹೇಳಿಕೆ ನೀಡುವ ಔಚಿತ್ಯ ಏನಿತ್ತು..? ಖಾದರ್ ಅವರು ಬರೀ ಕಾಂಗ್ರೆಸಿಗರಿಗೆ ಸೀಮಿತರಾಗಿಲ್ಲ, ಅವರು ರಾಜ್ಯದ ಎಲ್ಲಾ ಜನರಿಗೂ ಸ್ಪೀಕರ್ ಆಗಿದ್ದಾರೆ. ಖಾದರ್ ಅವರ ನಡೆಯನ್ನ ಸಹಜವಾಗಿಯೇ ಸತೀಶ್ ಕುಂಪಲ ಅವರು ಪ್ರಶ್ನಿಸಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಕುಂಪಲ ಅವರು ಬಜ್ಪೆಯಲ್ಲಿ ದಾರುಣವಾಗಿ ಕೊಲೆಯಾದ ಸಂತ್ರಸ್ತನ ಪರವಾಗಿ ಮಾತನಾಡಿದ್ದಾರೆ. ಸ್ಪೀಕರ್ ಖಾದರ್ ಅವರು ಹಂತಕರ ಪರ ಮಾತನಾಡಿದ್ದಾರೆ. ಈ ಬಗ್ಗೆ ಖಾದರ್ ಅವರೇ ನೇರವಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಲಿ. ಖಾದರ್ ಪರವಾಗಿ ಸದಾಶಿವ ಉಳ್ಳಾಲ್ ಅವರು ಬ್ಯಾಟಿಂಗ್ ನಡೆಸೋ ನೈತಿಕತೆ ಇದೆಯೇ ಎಂದು ಮೋಹನ್‌ ರಾಜ್ ಪ್ರಶ್ನಿಸಿದರು.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸದಾಶಿವ ಉಳ್ಳಾಲ್ ಅವರು ಬರೀ ಯು.ಟಿ.ಖಾದರ್ ಪರ ಬ್ಯಾಟಿಂಗ್ ಮಾಡಿದರೇ ಹೊರತು ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆಯಾದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಬಗ್ಗೆ ಅನುಕಂಪದ ಮಾತುಗಳನ್ನಾಡಿಲ್ಲ. ಕೊಲೆಯಾದ ಸುಹಾಸ್ ರೌಡಿಶೀಟರೇ ಆಗಿರಲಿ, ಆತನನ್ನ ಕೊಲ್ಲಬೇಕೆಂಬ ಕಾನೂನು ಇದೆಯೇ. ಹಾಗಿದ್ದರೆ ಎಲ್ಲಾ ರೌಡಿ ಶೀಟರ್ ಗಳನ್ನ ನೀವು ಕೊಲ್ತೀರಾ ಎಂದು ಪ್ರಶ್ನಿಸಿದರು.

ಬಜ್ಪೆ ಪೊಲೀಸರ ಮೇಲೆಯೇ ಶಂಕೆ 

ಸುಹಾಸ್ ಶೆಟ್ಟಿ ಕೊಲೆಯಾದ ಎರಡು ದಿವಸಗಳ ಬಳಿಕ ಬಜ್ಪೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನ ದಸ್ತಗಿರಿ ಮಾಡಿದ್ದಾರೆಂದು ಪೊಲೀಸ್ ಕಮೀಷನರ್ ಹೇಳಿಕೊಂಡರು. ಎಂಟು ಮಂದಿ ಆರೋಪಿಗಳನ್ನ‌ ಎಲ್ಲಿ, ಹೇಗೆ ದಸ್ತಗಿರಿ ಮಾಡಿರುವ ಬಗ್ಗೆ ಕಮೀಷನರ್ ಮಾಹಿತಿ ಕೊಟ್ಟಿಲ್ಲ. ಎಂಟು ಮಂದಿ ನಟೋರಿಯಸ್ ಗಳು ಎರಡೇ ದಿವಸಗಳಲ್ಲಿ ಎಲ್ಲಿ ಸಿಕ್ಕಿದ್ರು. ಕೊಲೆಗೆ ವಿದೇಶಿ ಫಂಡಿಂಗ್ ಆಗಿರುವ ಬಗ್ಗೆಯೂ ದಟ್ಟ ಗುಮಾನಿ ಇದೆ. ಜಿಲ್ಲೆಯ ಶಾಸಕರು ರಾಜ್ಯಪಾಲರನ್ನ ಭೇಟಿ ಮಾಡಿ ಸುಹಾಸ್ ಶೆಟ್ಟಿ ಕೊಲೆ‌ ಪ್ರಕರಣವನ್ನ‌ ಎನ್ ಐಎ ಗೆ ನೀಡುವಂತೆ ಮನವಿ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಬಜ್ಪೆ ಪೊಲೀಸರ ಮೇಲೆಯೇ ಸಹಜವಾಗಿಯೇ ಸಾಕಷ್ಟು ಸಂಶಯ ಮೂಡಿದೆ. ಪ್ರಕರಣದ ತನಿಖೆಯನ್ನ ಎನ್ ಐಎ ಗೆ ಹಸ್ತಾಂತರಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯವೆಂದು ಮೋಹನರಾಜ್ ಆಗ್ರಹಿಸಿದ್ದಾರೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಗಳೂರು ಮಂಡಲ ಉಪಾಧ್ಯಕ್ಷರಾದ ಸುರೇಶ್‌ ಆಳ್ವ ಸಾಂತ್ಯಗುತ್ತು, ಮಂಡಲ ಕಾರ್ಯದರ್ಶಿ ರಾಜೇಶ್ ಜಾಲಹಿತ್ಲು, ಪ್ರಮುಖರಾದ ಜೀವನ್‌ ಕುಮಾರ್‌ ತೊಕ್ಕೊಟ್ಟು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Political tensions have escalated following a sharp personal attack by Mangalore MUDA President against the BJP District President. The remarks, which surfaced in the wake of the Suhas Shetty murder case, have sparked outrage among BJP leaders.