ಬ್ರೇಕಿಂಗ್ ನ್ಯೂಸ್
16-05-25 10:27 pm Mangalore Correspondent ಕರಾವಳಿ
ಮಂಗಳೂರು, ಮೇ 16 : ನಗರದ ಪಡೀಲಿನಲ್ಲಿ ಹೊಸತಾಗಿ ನಿರ್ಮಾಣಗೊಂಡ ಜಿಲ್ಲಾಧಿಕಾರಿ ಕಚೇರಿ ‘’ಪ್ರಜಾ ಸೌಧ’’ವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 2016ರಲ್ಲಿ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಪಡೀಲಿನಲ್ಲಿ 6.9 ಎಕ್ರೆ ಅರಣ್ಯ ಭೂಮಿಯನ್ನು ಕೊಡಿಸಿ, ಜಿಲ್ಲಾಧಿಕಾರಿ ಕಚೇರಿಗೆ ಸಿದ್ದರಾಮಯ್ಯ ಅವರಿಂದಲೇ ಶಿಲಾನ್ಯಾಸ ಮಾಡಿಸಿದ್ದರು. ಕಾಕತಾಳೀಯ ಅಂದ್ರೆ, ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಆದರೆ ಕಟ್ಟಡ ಕೆಲಸ ಎಂಟು ವರ್ಷ ವಿಳಂಬಗೊಂಡಿದ್ದ ವಿಚಾರ ಸಿಎಂ ಆದಿಯಾಗಿ ಸಚಿವ-ಶಾಸಕರ ಮಧ್ಯೆ ಟಾಕ್ ವಾರ್ ನಡೆಸುವುದಕ್ಕೂ ವೇದಿಕೆಯಾಯ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದ್ದು ನಿಂತ ಬಗೆಯನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಸ್ತಾಪಿಸಿದರು. ಸಚಿವ ಕೃಷ್ಣ ಭೈರೇಗೌಡ ಪ್ರಾಸ್ತಾವಿಕ ಮಾತಾಡುತ್ತ, ಎರಡು ವರ್ಷಗಳ ಹಿಂದೆ ನಾವು ಅಧಿಕಾರಕ್ಕೆ ಬಂದ ಬಳಿಕ ಇದೇ ಜಾಗಕ್ಕೆ ಭೇಟಿ ನೀಡಿದ್ದೆ. ಇಲ್ಲೊಂದು ಪಾಳು ಬಿದ್ದ ರೀತಿಯ ಕೆಲಸ ಅರ್ಧಕ್ಕೆ ನಿಂತ ಕಟ್ಟಡ ಇತ್ತು. ಸುತ್ತ ಕಾಡು ಬೆಳೆದು ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಕೆಳಗಿನ ಮಹಡಿಯಲ್ಲಿ ನೀರು ನಿಂತಿತ್ತು. ನನಗೂ ಇದನ್ನು ನೋಡಿ ಸಿಟ್ಟು ಬಂದಿತ್ತು. 2020ರ ನಂತರ ಕೆಲಸ ಮಾಡದೇ ಹಾಗೇ ಬಿಟ್ಟಿದ್ದರು. ಜಿಲ್ಲಾಧಿಕಾರಿ ಬಳಿ ಕೇಳಿದಾಗ, ಏನಿಲ್ಲಾಂದ್ರೂ ಇನ್ನೂ 20-25 ಕೋಟಿ ಹಣ ಬೇಕು ಎಂದಿದ್ದರು.





ನಾವು ಸಿಎಂ ಸಿದ್ದರಾಮಯ್ಯ ಬಳಿ ಹೋಗಿ ಹಣಕ್ಕಾಗಿ ಪ್ರಸ್ತಾಪ ಇಟ್ಟಾಗ, ಹಣಕಾಸು ಸೆಕ್ರಟರಿ ಅತೀಕ್ ಅಹ್ಮದ್ ಬಳಿ ಕರೆದು ಏನಾದ್ರೂ ಮಾಡಿ ಅಂತ ಸೂಚಿಸಿದ್ದರು. ಆಮೇಲೆ 20 ಕೋಟಿ ರಾಜ್ಯ ಸರ್ಕಾರದಿಂದ ಮತ್ತು 5 ಕೋಟಿ ಕಂದಾಯ ಇಲಾಖೆಯಿಂದ ಅನುದಾನ ಕೊಡಿಸಿ ಈಗ ಒಟ್ಟು 75 ಕೋಟಿ ವೆಚ್ಚದಲ್ಲಿ ಇಡೀ ರಾಜ್ಯದಲ್ಲೇ ಅತಿ ದೊಡ್ಡ ಮತ್ತು ಅತಿ ಸುಂದರ ಡೀಸಿ ಕಚೇರಿಯನ್ನು ಮಾಡಿದ್ದೇವೆ. 32 ಇಲಾಖೆಗಳು ಇಲ್ಲಿಯೇ ಮುಂದೆ ಕಾರ್ಯ ನಿರ್ವಹಿಸಲಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ, ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಡೀಸಿ ಕಚೇರಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದನ್ನು ಸೂಚ್ಯವಾಗಿ ಹೇಳಿದರು. ಇವರ ಮಾತಿಗೆ ಜನರ ಕರತಾಡನವೂ ಕೇಳಿಬಂತು.
ಮೋದಿಗೂ ಕ್ರೆಡಿಟ್ ಸಲ್ಲಬೇಕೆಂದ ಕಾಮತ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದವ್ಯಾಸ ಕಾಮತ್ ತನ್ನ ಸರದಿ ಬಂದಾಗ, ಜಿಲ್ಲಾಧಿಕಾರಿ ಕಚೇರಿಯನ್ನು ಸ್ಮಾರ್ಟ್ ಸಿಟಿ ದುಡ್ಡಿನಲ್ಲಿ ಪೂರ್ತಿ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ. ಮೋದಿ ಇಂಥ ಯೋಜನೆ ಮಾಡದೇ ಇರುತ್ತಿದ್ದರೆ ಜಿಲ್ಲಾಧಿಕಾರಿ ಕಚೇರಿ ಆಗುತ್ತಿರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ- ರಾಜ್ಯ ಸರ್ಕಾರದ ಪಾಲಿದ್ದರೂ ಇಂಥ ಯೋಜನೆ ಮಾಡಿದ್ದು ಮೋದಿ. ಇದರ 25 ಕೋಟಿ ನೆರವಿನಲ್ಲಿ ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಹಾಗಾಗಿ, ಕೇಂದ್ರಕ್ಕೂ ಇದರ ಕ್ರೆಡಿಟ್ ಸಲ್ಲುತ್ತದೆ. ಕೇವಲ ರಾಜ್ಯ ಸರ್ಕಾರದ ಹಣದಿಂದಷ್ಟೇ ಆಗಿದ್ದಲ್ಲ ಎನ್ನುತ್ತ ಕ್ರೆಡಿಟ್ ಪಡೆಯುವುದಕ್ಕಾಗಿ ಕೃಷ್ಣ ಭೈರೇಗೌಡ ಹೆಸರೆತ್ತದೆ ಟಾಂಗ್ ನೀಡಿದರು.




ಸ್ಮಾರ್ಟ್ ಸಿಟಿಯಲ್ಲಿ ನೀವ್ಯಾಕೆ ಮಾಡಿಲ್ಲ..?
ಆನಂತರ, ಭಾಷಣಕ್ಕೆ ನಿಂತ ಸಿಎಂ ಸಿದ್ದರಾಮಯ್ಯ, ಶಾಸಕ ವೇದವ್ಯಾಸ ಕಾಮತ್ ಉದ್ದೇಶಿಸಿಯೇ ಮಾತು ಆರಂಭಿಸಿದರು. ಏಯ್ ಕಾಮತ್, ಸ್ಮಾರ್ಟ್ ಸಿಟಿ ದುಡ್ಡು ಅಂದ್ರೆ ಏನ್ರೀ.. ಅದರಲ್ಲಿ ಅರ್ಧ ಪಾಲು ರಾಜ್ಯದ್ದೂ ಇದೆ. ಸ್ಮಾರ್ಟ್ ಸಿಟಿಯಿಂದ ಮಾಡಿದ್ದು ಅನ್ನೋದಾದ್ರೆ ಅದಕ್ಕೂ ಹಿಂದೆ ನಾಲ್ಕು ವರ್ಷ ನಿಮ್ದೇ ಸರ್ಕಾರ ಇತ್ತಲ್ವಾ.. ಯಾಕೆ ನೀವು ಮಾಡಿಲ್ಲ ಎಂದು ಗುದ್ದು ನೀಡಿದರು. ರಾಜಕೀಯ ಮಾಡೋಣ, ಹಾಗಂತ ವಿಷಯ ಇರೋದನ್ನು ತಿರುಚಲು ಹೋಗಬಾರದು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡೋದು ಬೇಡ ಎಂದು ಸಲಹೆ ನೀಡಿದರು.
ಪ್ರಜೆಗಳೇ ಮಾಲೀಕರು, ನಾವು ಟ್ರಸ್ಟಿಗಳು
ಶಾಸನ ರಚನೆಗೆ ಅಂತ ಇರೋದು ವಿಧಾನಸೌಧ. ಅದರ ಹೆಸರನ್ನು ಜನರ ಕೆಲಸಕ್ಕಾಗಿ ಇರುವ ಜಿಲ್ಲಾಧಿಕಾರಿ ಕಚೇರಿಗೆ ಇಡುವುದಲ್ಲ. ಇದು ಜನರಿಗೋಸ್ಕರ ಇರುವ ಕಚೇರಿ. ಹಾಗಾಗಿ ಪ್ರಜಾಸೌಧ ಅಂತ ಹೆಸರನ್ನು ಸೂಚಿಸಿದ್ದೇನೆ. ಯಾವುದೇ ಅಧಿಕಾರಿ ಇರಲಿ, ಇಲ್ಲಿಗೆ ಬರುವ ಜನರ ವಿಶ್ವಾಸ ಉಳಿಸುವ ಕೆಲಸ ಮಾಡಬೇಕು. ಯಾಕಂದ್ರೆ, ಜನರೇ ನಮ್ಮ ಮಾಲೀಕರು. ನಾವು ಟ್ರಸ್ಟಿಗಳು ಅಷ್ಟೇ. ಅಂದ್ರೆ, ನಾವೆಲ್ಲ ಅವರ ಪರವಾಗಿ ಅಧಿಕಾರ ಚಲಾಯಿಸುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯ, ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿ ಪರಿವರ್ತನೆ ತರುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು ಎಂದರು.
ಜನರ ಕಲ್ಯಾಣಕ್ಕಾಗಿ ಕಳೆದ ಬಾರಿ ಹಲವು ಭಾಗ್ಯಗಳನ್ನು ಕೊಟ್ಟಿದ್ದೆವು. ಈ ಬಾರಿ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದು, 50 ಸಾವಿರ ಕೋಟಿ ವ್ಯಯಿಸಿದ್ದೇವೆ. ಹಾಗಂತ, ಅಭಿವೃದ್ಧಿ ಕೆಲಸ ಬಾಕಿ ಉಳಿಸಿಲ್ಲ. ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಹೇಳೋರಿಗೆ ಕೇಳುತ್ತೇನೆ. ಎರಡು ವರ್ಷಗಳ ಹಿಂದೆ ನಮ್ಮ ಕ್ಯಾಪಿಟಲ್ ಎಕ್ಸ್ ಪೆಂಡಿಚರ್ 51 ಸಾವಿರ ಕೋಟಿ ಇತ್ತು. ಈಗ 81 ಸಾವಿರ ಕೋಟಿ ಆಗಿದೆ. ಅಂದ್ರೆ ನಮ್ಮಲ್ಲಿ ಅಭಿವೃದ್ಧಿ ಆಗುತ್ತಿದೆಯೋ ಇಲ್ಲವೋ ಹೇಳಿ ಎಂದು ಪ್ರಶ್ನೆ ಮಾಡಿದರು. ಕರ್ನಾಟಕ ರಾಜ್ಯದಿಂದ ವರ್ಷಕ್ಕೆ ನಾಲ್ಕೂವರೆ ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ನೀಡುತ್ತೇವೆ. ತಿರುಗಿ ಬರೋದು 65 ಸಾವಿರ ಕೋಟಿ ಮಾತ್ರ. ಉಳಿದದ್ದು ಎಲ್ಲಿ ಹೋಯ್ತು ಕಾಮತ್ ಅಂತ ಮತ್ತೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಪ್ರಶ್ನಿಸಿದರು.
ತುಳು ಭಾಷೆಗೆ ಆದ್ಯತೆ, ಕನ್ನಡಿಗರೇ ಆಗಿರಿ
ತುಳು ಭಾಷೆಯನ್ನು ದ್ವಿತೀಯ ರಾಜ್ಯಭಾಷೆಯಾಗಿಸುವ ಬಗ್ಗೆ ಈ ಭಾಗದ ಎಲ್ಲರೂ ಕೇಳಿಕೊಂಡಿದ್ದಾರೆ. ಅದನ್ನು ಆದ್ಯತೆಯಲ್ಲಿ ಮಾಡುತ್ತೇವೆ. ಆದರೆ ನಾವೆಲ್ಲ ಕನ್ನಡಿಗರು ಅನ್ನುವುದನ್ನು ಮರೆಯಬಾರದು. ಇಲ್ಲಿನ ಜನ ತುಳು ಮಾತನಾಡಿದರೂ, ಅವರೆಲ್ಲ ಕನ್ನಡಿಗರು ಎಂದು ಹೇಳಿದ ಸಿದ್ದರಾಮಯ್ಯ, ಅಶೋಕ್ ರೈಯವರ ಪ್ರಯತ್ನದಿಂದಾಗಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೇವೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಆದ್ಯತೆ ಕೊಟ್ಟಿದ್ದೇವೆ. ಆದರೆ ಅಭಿವೃದ್ಧಿ ಆಗಬೇಕಿದ್ದರೆ ಕೋಮುಗಲಭೆಗಳು ನಡೆಯಬಾರದು. ಎಲ್ಲರೂ ಒಂದೇ ದೃಷ್ಟಿಯಿಂದ ಮುಂದೆ ಸಾಗಿದರೆ ಅಭಿವೃದ್ಧಿ ತನ್ನಿಂತಾನೇ ಆಗುತ್ತದೆ ಎಂದು ಹೇಳಿದರು.
ಅರ್ಧಕ್ಕೆ ನಿಂತಿದ್ದ ಜಿಲ್ಲಾಧಿಕಾರಿ ಕಚೇರಿಯ ಕಾಮಗಾರಿಯನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುತುವರ್ಜಿ ವಹಿಸಿ ಮಾಡಿಸಿದ್ದರು. ಹಣದ ವಿಚಾರ ಬಂದಾಗ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮೂಲಕ ಸ್ಮಾರ್ಟ್ ಸಿಟಿಯ ಹಣವನ್ನು ಬಳಸಿಕೊಂಡಿದ್ದರು. ಕೊನೆಗೆ, ಕಾಮಗಾರಿ ಶೀಘ್ರಗೊಳಿಸಲು ಹಿಂದೆ ಇದ್ದ ಇಂಜಿನಿಯರ್, ಗುತ್ತಿಗೆದಾರರನ್ನು ಬದಲಿಸಿ ಮುಗ್ರೋಡಿ ಕನ್ ಸ್ಟ್ರಕ್ಷನ್ಸ್ ಸಂಸ್ಥೆಗೆ ವಹಿಸಿದ್ದರು. ಆನಂತರ, ಕಾಮಗಾರಿಗೂ ಚುರುಕು ಸಿಕ್ಕಿತ್ತು. ಅಂದವಾಗಿಯೂ ಮೂಡಿಬಂದಿತ್ತು. ಹಿಂದೆ ಇದ್ದ ಸರ್ಕಾರಿ ಗುತ್ತಿಗೆದಾರರು ಕಾಮಗಾರಿ ಪೂರ್ತಿಗೊಳಿಸುವುದು ಬಿಟ್ಟು ಹಣ ಹೊಂದಿಸಿಕೊಳ್ಳುದಕ್ಕೇ ಹೆಚ್ಚು ಆಸಕ್ತಿ ವಹಿಸಿದ್ದರು.
ರಮಾನಾಥ ರೈ ಹೆಸರಿಗೆ ಚಪ್ಪಾಳೆ, ಸಿಳ್ಳೆ
ಜಿಲ್ಲಾಧಿಕಾರಿ ಕಚೇರಿ ಆಗಬೇಕೆಂದು ಒತ್ತು ಕೊಟ್ಟು 40 ಕೋಟಿ ವೆಚ್ಚದಲ್ಲಿ ಶಿಲಾನ್ಯಾಸ ಮಾಡಿಸಿದ್ದು ರಮಾನಾಥ ರೈ ಎಂದು ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದಾಗ, ಭಾರೀ ಚಪ್ಪಾಳೆ ಮತ್ತು ಸಿಳ್ಳೆ ಕೇಳಿಬಂತು. ಆನಂತರ ಸಿಎಂ ಸಿದ್ದರಾಮಯ್ಯ ಅವರೂ ರಮಾನಾಥ ರೈ ಹೆಸರೆತ್ತಿದಾಗ ಜನರು ಚಪ್ಪಾಳೆ ಹಾಕಿದ್ದು ಮಾಜಿಯಾದರೂ ಕರಾವಳಿಯ ಜನಪ್ರಿಯ ನಾಯಕ ಎನ್ನುವುದನ್ನು ಸೂಚಿಸಿದಂತಿತ್ತು. ಕಾರ್ಯಕ್ರಮದ ಉದ್ದಕ್ಕೂ ರಮಾನಾಥ ರೈ ಪರ ಹೆಚ್ಚು ಕರತಾಡನ ಕೇಳಿಬಂತು. ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಹೆಸರು ಹೆಚ್ಚು ಉಲ್ಲೇಖಿಸಿದ್ದರಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬಿಜೆಪಿ ಶಾಸಕರಿಗೂ ಮೈಲೇಜ್ ಸಿಕ್ಕಂತಾಗಿತ್ತು.
CM Siddaramaiah Inaugurates New DC Office 'Prajasaudha' in Padil; Credit War Erupts Among Leaders Chief Minister Siddaramaiah inaugurated the newly constructed District Commissioner’s office, ‘Prajasaudha’, in Padil, Mangaluru. Interestingly, it was Siddaramaiah himself who had laid the foundation stone for the building during his earlier term as CM in 2016, after then Forest Minister Ramanath Rai facilitated the allocation of 6.9 acres of forest land for the project.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm