Jail Attack, Suhas Shetty, Mangalore, Chotte Naushad: ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಗೆ ಜೈಲಿನಲ್ಲೇ ಪ್ರತೀಕಾರಕ್ಕೆ ಸಂಚು ; ರೌಡಿ ಚೊಟ್ಟೆ ನೌಶಾದ್ ಮೇಲೆ ಸಹ ಕೈದಿಗಳಿಂದಲೇ ಅಟ್ಯಾಕ್, ಪೊಲೀಸರ ನಿಗಾದಿಂದ ಅಪಾಯದಿಂದ ಪಾರು 

19-05-25 10:14 pm       Mangalore Correspondent   ಕರಾವಳಿ

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, ಇತ್ತೀಚೆಗಷ್ಟೆ ಬಂಧಿತನಾಗಿದ್ದ ನಟೋರಿಯಸ್ ರೌಡಿ ಫರಂಗಿಪೇಟೆ ನಿವಾಸಿ ಚೊಟ್ಟೆ ನೌಶಾದ್ ಮೇಲೆ ಮಂಗಳೂರು ಜೈಲಿನಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ. 

ಮಂಗಳೂರು, ಮೇ 19 : ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, ಇತ್ತೀಚೆಗಷ್ಟೆ ಬಂಧಿತನಾಗಿದ್ದ ನಟೋರಿಯಸ್ ರೌಡಿ ಫರಂಗಿಪೇಟೆ ನಿವಾಸಿ ಚೊಟ್ಟೆ ನೌಶಾದ್ ಮೇಲೆ ಮಂಗಳೂರು ಜೈಲಿನಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ. 

ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಜೈಲಿನಲ್ಲೇ ಪ್ರತೀಕಾರ ತೀರಿಸಲಾಗುತ್ತದೆ ಎಂಬ ಮಾಹಿತಿ ಇದ್ದುದರಿಂದ ಪೊಲೀಸರು ನಿಗಾ ಇಟ್ಟಿದ್ದರು. ಇಂದು ಸಂಜೆ ಏಳು ಗಂಟೆ ಸುಮಾರಿಗೆ ಸೆಲ್ ಒಳಗಡೆಯೇ ಹಲ್ಲೆ ನಡೆಸಿದ್ದು ಪೊಲೀಸರು ಮೊದಲೇ ನಿಗಾ ಇಟ್ಟಿದ್ದರಿಂದ ಆರೋಪಿ ಅಪಾಯದಿಂದ ಪಾರಾಗಿದ್ದಾನೆ. ಹಲ್ಲೆ ಸಂದರ್ಭದಲ್ಲಿ ಜೈಲು ಒಳಗಿನಿಂದ ಬೊಬ್ಬೆ ಕೇಳಿದ್ದು ಪಕ್ಕದ ಕಟ್ಟಡದ ಮೇಲಿದ್ದವರು ಇದರ ವಿಡಿಯೋ ಮಾಡಿದ್ದು ವೈರಲ್ ಆಗಿದೆ. 

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಈವರೆಗೆ 11 ಮಂದಿಯನ್ನು ಬಂಧಿಸಿದ್ದು ಕೊನೆಗೆ ಬಂಧನ ಆಗಿದ್ದ ನೌಶಾದ್ ಪೊಲೀಸರ ಕಸ್ಟಡಿಯಲ್ಲಿದ್ದ. ಸೋಮವಾರ (ಇಂದು) ಕೋರ್ಟಿಗೆ ಹಾಜರುಪಡಿಸಿ ಜೈಲಿಗೆ ಹಾಕಲಾಗಿತ್ತು. ಅಷ್ಟರಲ್ಲಿಯೇ ಆತನ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ. 

ಜೈಲಿನಲ್ಲಿ ಪ್ರತೀಕಾರ ತೀರಿಸಲು ಸಂಚು ನಡೆದಿದೆ ಎನ್ನುವ ಬಗ್ಗೆ ಗುಪ್ತಚರ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಹೀಗಾಗಿ ಪ್ರಕರಣ ಸಂಬಂಧಪಟ್ಟ ಎಲ್ಲ ಆರೋಪಿಗಳನ್ನೂ ಮೈಸೂರು, ಬೆಳಗಾವಿ, ಧಾರವಾಡ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ. ಮಾಹಿತಿ ಪ್ರಕಾರ, ಸಂಜೆಯ ವೇಳೆ ಕೈದಿಗಳನ್ನು ಸೆಲ್ ನಿಂದ ಹೊರಬಿಟ್ಟು ದೈನಂದಿನ ಅಗತ್ಯ ಕೆಲಸಕ್ಕೆ ಸಮಯ ನೀಡುತ್ತಾರೆ. ಈ ವೇಳೆ, ಜೈಲು ಅಧಿಕಾರಿಗಳ ಅನುಮತಿ ಪಡೆದು ಮತ್ತೊಂದು ಸೆಲ್ ನಲ್ಲಿದ್ದ ತನ್ನ ಸಹವರ್ತಿಯನ್ನು ಕಂಡು ನೌಶಾದ್ ಮಾತನಾಡಿಸಲು ಮುಂದಾಗಿದ್ದ. ಇದೇ ವೇಳೆ, ಬೇರೊಬ್ಬ ಕೈದಿ ನೌಶಾದ್ ಮೇಲೆರಗಿದ್ದು ಕಲ್ಲು ಮತ್ತು ತನ್ನ ಕೈಲಿದ್ದ ತಗಡಿನಾಕಾರದ ಆಯುಧ ಬಳಸಿ ಹಲ್ಲೆ ನಡೆಸಿದ್ದಾನೆ. ಕೂಡಲೇ ಜೈಲು ಸಿಬಂದಿ ಕೈದಿಯನ್ನು ಹಿಡಿದಿಟ್ಟು ರಕ್ಷಣೆ ಮಾಡಿದ್ದಾರೆ. 

ನೌಶಾದ್ ನನ್ನು ಕೋರ್ಟ್ ಪ್ರಕ್ರಿಯೆ ಮುಗಿದ ಕೂಡಲೇ ಮೈಸೂರು ಜೈಲಿಗೆ ಶಿಫ್ಟ್ ಮಾಡಲು ತಯಾರಿ ಆಗಿತ್ತು.‌ ಘಟನೆ ಸಂಬಂಧಿಸಿ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಹೆಚ್ಚುವರಿ ಭದ್ರತೆ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ.

An attempted retaliatory attack on one of the accused in the Suhas Shetty murder case inside the Mangaluru jail was foiled, thanks to timely intelligence inputs received by the police. However, with police custody of accused Chotte Naushad ending Monday, May 19, he was brought back to Mangaluru to be produced before the court. After court formalities, police were preparing to shift him to Mysuru jail.