Karnataka congress, Mangalore, KPCC: ಹತ್ಯೆಗಳಿಗೆ ಕಾರಣ ಪತ್ತೆಹಚ್ಚುವ ಕೆಲಸ, ಆಡಳಿತ ವೈಫಲ್ಯವನ್ನೂ ಪಟ್ಟಿ ಮಾಡಿದ್ದೇವೆ ; ಮಂಗಳೂರು ಏಳು ಗಂಟೆಗೆ ಬಂದ್ ಆದ್ರೆ ಯಾರು ಬರ್ತಾರೆ... ಕೆಪಿಸಿಸಿ ನಿಯೋಗದ ನಾಸಿರ್ ಹುಸೇನ್, ಜಯಪ್ರಕಾಶ್ ಹೆಗ್ಡೆ ಹೇಳಿಕೆ   

06-06-25 04:39 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ದ್ವೇಷದ ಹತ್ಯೆಗಳ ಸತ್ಯಾಸತ್ಯತೆ ತಿಳಿದುಕೊಳ್ಳಲು ರಾಜ್ಯಸಭೆ ಸದಸ್ಯ ಸೈಯದ್ ನಾಸಿರ್ ಹುಸೇನ್, ಜಯಪ್ರಕಾಶ್ ಹೆಗ್ಡೆ ನೇತೃತ್ವದ ಕೆಪಿಸಿಸಿ ನಿಯೋಗ ಮಂಗಳೂರಿಗೆ ಭೇಟಿ ನೀಡಿದ್ದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಮಾಧ್ಯಮ ಗೋಷ್ಠಿ ನಡೆಸಿದೆ. 

ಮಂಗಳೂರು, ಜೂನ್ 6 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ದ್ವೇಷದ ಹತ್ಯೆಗಳ ಸತ್ಯಾಸತ್ಯತೆ ತಿಳಿದುಕೊಳ್ಳಲು ರಾಜ್ಯಸಭೆ ಸದಸ್ಯ ಸೈಯದ್ ನಾಸಿರ್ ಹುಸೇನ್, ಜಯಪ್ರಕಾಶ್ ಹೆಗ್ಡೆ ನೇತೃತ್ವದ ಕೆಪಿಸಿಸಿ ನಿಯೋಗ ಮಂಗಳೂರಿಗೆ ಭೇಟಿ ನೀಡಿದ್ದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಮಾಧ್ಯಮ ಗೋಷ್ಠಿ ನಡೆಸಿದೆ. 

ಈ ಭಾಗದಲ್ಲಿ ಶಾಂತಿ, ಸೌಹಾರ್ದತೆ, ಪ್ರಗತಿಗಾಗಿ ನಮ್ಮ ನಿಯೋಗ ಕೆಲಸ ಮಾಡುತ್ತಿದೆ‌.‌ ಇಲ್ಲಿಗೆ ಬಂದ ತಕ್ಷಣ ಪಾರ್ಟಿ ಲೀಡರ್, ನಾಗರಿಕರು, ಅಧಿಕಾರಿಗಳು, ಜನಸಾಮಾನ್ಯರನ್ನು ಭೇಟಿ ಮಾಡಿದ್ದೇವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲಾ ಧರ್ಮದ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದ್ದೇವೆ. ಎಲ್ಲಾ ಕಡೆಯಿಂದಲೂ ಅಭಿಪ್ರಾಯ ಪಡೆದಿದ್ದೇವೆ. ಹತ್ಯೆಗಳಿಗೆ ಕಾರಣ ಪತ್ತೆ ಹಚ್ಚುವ ಕೆಲಸ ಮಾಡಿದ್ದೇವೆ. ಮುಂದಿ‌ನ ವಾರದಲ್ಲಿ ಈ ಬಗ್ಗೆ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸೈಯದ್ ನಾಸೀರ್ ಹುಸೇನ್ ಹೇಳಿದರು. 

ಇಲ್ಲಿನ ವಾತಾವರಣ ಸುಧಾರಿಸಲು ಕ್ರಮ ಕೈಗೊಳ್ಳುತ್ತೇವೆ‌. ಕಾಲೇಜುಗಳಲ್ಲಿ ಅಡ್ಮಿಷನ್ ಗೆ ನೋಂದಣಿ ಮಾಡಿಕೊಂಡವರು ರದ್ದು ಮಾಡುತ್ತಿದ್ದಾರೆ. ಏಳು ಗಂಟೆ ಬಳಿಕ ಅಂಗಡಿಗಳೆಲ್ಲಾ ಬಂದ್ ಆಗ್ತಿದೆ.‌ ಕೊಲೆ ಮಾಡಿದವರು ಯಾವುದೇ ಜಾತಿಯವನು‌ ಆಗಿದ್ರು ಅಂಥವರಿಗೆ ಜಾಗವಿಲ್ಲ. ಹಿಂಸೆಗೆ‌ ಇಲ್ಲಿ ಅವಕಾಶ ಮಾಡಿಕೊಡಲ್ಲ.‌ ಆಡಳಿತಾತ್ಮಕವಾಗಿ ಏನೆಲ್ಲಾ ವೈಫಲ್ಯ ಆಗಿದೆ ಎಂಬ ಬಗ್ಗೆಯೂ ತಿಳಿದುಕೊಂಡಿದ್ದೇವೆ ಎಂದು ನಾಸಿರ್ ಹುಸೇನ್ ಹೇಳಿದರು. 

ಮಂಗಳೂರು ಏಳು ಗಂಟೆಗೆ ಬಂದ್ ಆದ್ರೆ ಯಾರು ಬರ್ತಾರೆ.. 

ನಿಯೋಗದ ಸದಸ್ಯ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜನಪ್ರತಿನಿಧಿಗಳು ಅಭಿವೃದ್ಧಿ ಚರ್ಚೆ ಮಾಡಬೇಕು, ಅದು ಬಿಟ್ಟು ಗೊಂದಲ ಮೂಡಿಸ್ತಿದಾರೆ. ವಿದ್ಯಾರ್ಥಿಗಳು ಇಲ್ಲಿಗೆ ಬರಲು ಹೆದರುತ್ತಿದ್ದಾರೆ, ಬಂಡವಾಳ ಹೂಡಿಕೆಗೂ ಹೆದರ್ತಿದ್ದಾರೆ. ಜನಪ್ರತಿನಿಧಿಗಳು ಎಲ್ಲರಿಗೂ ಆದರ್ಶವಾಗಿ ಕೆಲಸ ಮಾಡಬೇಕು. ತಪ್ಪನ್ನು ತಪ್ಪು ಅಂತ ಹೇಳಬೇಕು, ಅದು ಬಿಟ್ಟು ವೈಭವೀಕರಿಸಬಾರದು. ಮಂಗಳೂರು ಏಳು ಗಂಟೆ ಹೊತ್ತಿಗೆ ಬಂದ್ ಆದ್ರೆ ಯಾರು ಬರ್ತಾರೆ. ಜನಪ್ರತಿನಿಧಿಗಳು ಸಮಸ್ಯೆ ಇದ್ದರೆ ವಿಧಾನಸೌಧದಲ್ಲಿ ಚರ್ಚೆ ಮಾಡಿ. ಅದು ಬಿಟ್ಟು ಹೊರಗೆ ಚರ್ಚೆ ಮಾಡಿದ್ರೆ ಸಮಸ್ಯೆ ಆಗುತ್ತದೆ ಎಂದು ಹೇಳಿದರು. ‌

ಕೆಪಿಸಿಸಿ ಉಪಾಧ್ಯಕ್ಷ ವಿ.ಆ‌ರ್.ಸುದರ್ಶನ್ ಮಾತನಾಡಿ, ನಾವು ಎಲ್ಲರ ಜೊತೆಗೆ ಸಮಾಲೋಚನೆ ಮಾಡಿದ್ದೇವೆ. ರಾಜ್ಯದ ಪ್ರಗತಿಗೆ ದ.ಕ ಜಿಲ್ಲೆಯ ಕೊಡುಗೆ ಬಹಳ ದೊಡ್ಡದಿದೆ. ಇತ್ತೀಚಿನ ಘಟನೆಗಳಿಗೆ ಕೋಮು ಬಣ್ಣ ಕೊಡುವ ಕೆಲಸಗಳು ಆಗ್ತಿದೆ.‌ ಯಾರೋ ದುಷ್ಕರ್ಮಿಗಳು 2% ಜನರು ದುಷ್ಕೃತ್ಯ ಎಸಗುತ್ತಿದ್ದಾರೆ. ಉಳಿದ 8% ಜನರು ಅದರ ಲಾಭವನ್ನು ಪಡೀತಿದಾರೆ. ಆದರೆ 90% ಜನರು ಯಾವುದರಲ್ಲೂ ಇಲ್ಲದವರಾಗಿದ್ದಾರೆ. 

ಹೀಗಾಗಿ ನಾವು ಇಲ್ಲಿನ ಅಧಿಕಾರಿಗಳ ಆದಿಯಾಗಿ ಎಲ್ಲರ ಜತೆ ಸಮಾಲೋಚನೆ ಮಾಡಿದ್ದೇವೆ. ನಾವು ಇನ್ನೂ ವರದಿ ಫೈನಲ್ ಮಾಡಿಲ್ಲ, ಉಡುಪಿ-ಉತ್ತರ ಕನ್ನಡ ಜಿಲ್ಲೆಗಳಿಗೂ ಹೋಗ್ತಾ ಇದೀವಿ. ಅದಕ್ಕೂ ಮುನ್ನ ಸಿಎಂ, ಡಿಸಿಎಂ, ಕಾನೂನು ಸಚಿವರು, ಗೃಹ ಸಚಿವರ ಭೇಟಿಯಾಗ್ತೀವಿ. ಸೋಮವಾರ ಅಥವಾ ಮಂಗಳವಾರ ಮಧ್ಯಂತರ ವರದಿ‌ ಸಲ್ಲಿಕೆ ಮಾಡ್ತೀವಿ. ಜಿಲ್ಲೆಯ ಸ್ಥಿತಿಗತಿ ಹಾಗೂ ಇತರೆ ವಿಷಯಗಳ ಬಗ್ಗೆ ವರದಿ ಸಲ್ಲಿಸ್ತೀವಿ. ಇನ್ನೊಂದಷ್ಟು ಮಾಹಿತಿ ಮತ್ತು ವಿಚಾರಗಳನ್ನು ಸಂಗ್ರಹ ಮಾಡಲಿದ್ದೇವೆ. ನಾವು ಪೂರ್ಣ ವರದಿ ತಯಾರಿಸಿ ಸರ್ಕಾರಕ್ಕೆ ವರದಿ ಕೊಡ್ತೇವೆ ಎಂದು ಹೇಳಿದರು.

A delegation from the Karnataka Pradesh Congress Committee (KPCC), led by Rajya Sabha MP and AICC General Secretary Syed Naseer Hussain and former MP Jayaprakash Hegde, visited Mangaluru on Thursday to investigate recent incidents of communal violence and killings in Dakshina Kannada district.