U T khader, Mangalore Police: ಒಂದೇ ಕಡೆ ಐಪಿಎಸ್ ಓದಿದ್ರೂ, ಒಬ್ಬೊಬ್ರು ಒಂದೊಂದು ರೀತಿ ಪೊಲೀಸಿಂಗ್ ಮಾಡ್ತಾರೇಕೆ..? ನೀವು ಅಡ್ವಕೇಟ್, ಜಡ್ಜ್ ಆಗಬೇಡಿ ಎಂದಿದ್ದೆ, ಹಿಂದಿನವರು ಅಸಹಾಯಕತೆ ತೋರಿದ್ರು, ತನಿಖೆಗೆ ಗೃಹ ಸಚಿವರಿಗೆ ಬರೆಯುತ್ತೇನೆ ; ಸ್ಪೀಕರ್ ಖಾದರ್

12-06-25 05:15 pm       Mangalore Correspondent   ಕರಾವಳಿ

ಪೊಲೀಸ್ ಅಧಿಕಾರಿಗಳೆಲ್ಲ ಒಂದೇ ರೀತಿಯ ಐಪಿಎಸ್ ಓದಿಕೊಂಡು ಬಂದಿರುತ್ತಾರೆ. ಆದರೆ ಒಬ್ಬೊಬ್ಬರು ಬಂದಾಗ ಒಂದೊಂದು ರೀತಿಯಲ್ಲಿ ಯಾಕೆ ಅಧಿಕಾರ ಚಲಾಯಿಸುತ್ತಾರೆಂದು ತಿಳಿಯಲ್ಲ. ಈ ಹಿಂದೆ ಇದ್ದ ಕಮಿಷನರ್ ಮತ್ತು ಎಸ್ಪಿಯನ್ನು ಕರೆದು ನೀವು ಪೊಲೀಸ್ ಕೆಲಸ ಮಾಡಿ, ಅಡ್ವಕೇಟ್, ಜಡ್ಜ್ ಆಗಬೇಡಿ ಎಂದಿದ್ದೆ. ಆದರೆ ಪೊಲೀಸಿಂಗ್ ಮಾಡುವಲ್ಲಿ ವಿಫಲವಾದ್ರು.

ಮಂಗಳೂರು, ಜೂನ್ 12 : ಪೊಲೀಸ್ ಅಧಿಕಾರಿಗಳೆಲ್ಲ ಒಂದೇ ರೀತಿಯ ಐಪಿಎಸ್ ಓದಿಕೊಂಡು ಬಂದಿರುತ್ತಾರೆ. ಆದರೆ ಒಬ್ಬೊಬ್ಬರು ಬಂದಾಗ ಒಂದೊಂದು ರೀತಿಯಲ್ಲಿ ಯಾಕೆ ಅಧಿಕಾರ ಚಲಾಯಿಸುತ್ತಾರೆಂದು ತಿಳಿಯಲ್ಲ. ಈ ಹಿಂದೆ ಇದ್ದ ಕಮಿಷನರ್ ಮತ್ತು ಎಸ್ಪಿಯನ್ನು ಕರೆದು ನೀವು ಪೊಲೀಸ್ ಕೆಲಸ ಮಾಡಿ, ಅಡ್ವಕೇಟ್, ಜಡ್ಜ್ ಆಗಬೇಡಿ ಎಂದಿದ್ದೆ. ಆದರೆ ಪೊಲೀಸಿಂಗ್ ಮಾಡುವಲ್ಲಿ ವಿಫಲವಾದ್ರು. ಪದೇ ಪದೇ ಕೋಮು ದ್ವೇಷದ ವಾತಾವರಣ ಕೆಡುತ್ತ ಹೋದರೂ ನಿಗ್ರಹಿಸುವ ಕೆಲಸ ಮಾಡಲಿಲ್ಲ. ಇದರ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದು ಪ್ರತ್ಯೇಕ ತಂಡದಿಂದ ತನಿಖೆ ಮಾಡಿಸಲು ಆಗ್ರಹಿಸುತ್ತೇನೆ ಎಂದು ವಿಧಾಸನಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಟಿ ನಡೆಸಿದ ಅವರು, ಈಗ ಬಂದಿರುವ ಪೊಲೀಸ್ ಕಮಿಷನರ್ ಮತ್ತು ಎಸ್ಪಿ ದಕ್ಷ ರೀತಿಯಲ್ಲಿ ಕೆಲಸ ನಿರ್ವಹಿಸಿ, ಕೋಮು ಪ್ರಚೋದನೆ, ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದನ್ನು ನಿಯಂತ್ರಣ ಹಾಕಿದ್ದಾರೆ. ಇವರು ಅದೇ ಕಾನೂನಿನಡಿ ನಿಗ್ರಹಿಸಿದ್ದು ಹೇಗೆ. ಹಿಂದಿನವರು ಕಾನೂನು ಲೋಪದ ಬಗ್ಗೆ ಹೇಳಿ ಅಸಹಾಯಕತೆ ತೋರಿದ್ದರು. ಈ ಬಗ್ಗೆ ಏಕಪ್ರಕಾರದ ನೀತಿಯನ್ನು ಮಾಡಲು ಸಾಧ್ಯವಿಲ್ಲವೇ.. ಹಿಂದೆ ಇದ್ದವರು ದ್ವೇಷ ಭಾಷಣ ಆಗುತ್ತಿರುವಾಗ ಕಠಿಣ ಕ್ರಮ ತೆಗೆದುಕೊಂಡಿಲ್ಲ ಏಕೆ. ಸುಹಾಸ್ ಶೆಟ್ಟಿ ಕೊಲೆಯಾದ ಬಳಿಕ ಮತ್ತೇನಾದರೂ ಆಗುತ್ತೆ ಎನ್ನುವ ಭಾವನೆ ಬಂದಿತ್ತು. ಇದು ಪೊಲೀಸರ ಗಮನಕ್ಕೂ ಬಂದಿತ್ತು. ಆದರೆ ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಉನ್ನತ ಅಧಿಕಾರಿ ಮೂಲಕ ತನಿಖೆ ನಡೆಸಬೇಕಾಗಿದೆ. ಗೃಹ ಸಚಿವರ ಜೊತೆಗೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

ಯಾವುದೇ ಧರ್ಮವು ಮನುಷ್ಯನ ಮನಸ್ಸಿಗೆ ಔಷಧಿಯಾಗಬೇಕೇ ವಿನಾ ಕತ್ತಿಯಾಗಬಾರದು. ಸಮ ಸಮಾಜ ನಿರ್ಮಾಣಕ್ಕೆ ಎಲ್ಲರ ಪಾತ್ರವೂ ಇದೆ. ಯಾರಿಗೆ ಯಾರನ್ನೂ ಕೊಲ್ಲುವ ಅಧಿಕಾರ ಇರುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಇದೆ, ಅತಿ ಹೆಚ್ಚು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿವೆ. ಅತಿ ಹೆಚ್ಚು ಯುವಜನರು ವಿದ್ಯಾವಂತರಾಗಿ ಹೊರಬರುತ್ತಿದ್ದಾರೆ. ದೇವರು ನಮಗೆ ಎಲ್ಲ ರೀತಿಯ ಸಂಪನ್ಮೂಲವನ್ನೂ ಕೊಟ್ಟಿದ್ದಾರೆ. ಆದರೆ ಯಾಕೆ ಪದೇ ಪದೇ ಗೊಂದಲ ಎಬ್ಬಿಸುವ ಕೆಲಸ ಆಗುತ್ತಿದೆ ಎನ್ನುವುದು ಅರ್ಥವಾಗಲ್ಲ ಎಂದರು.

ಅಬ್ದುಲ್ ರಹಿಮಾನ್ ಅವರನ್ನು ಮರಳು ತರುವಂತೆ ಮನೆಗೆ ಕರೆಸಿ, ಕೊಂದಿದ್ದು ಅಕ್ಷಮ್ಯ. ಈ ರೀತಿಯ ಕೆಲಸವನ್ನು ಯಾರು ಕೂಡ ಒಪ್ಪಲಾರರು. ಈ ಕೃತ್ಯಗೈದ ಆರೋಪಿಗಳಿಗೆ ಯಾವ ಸಮಾಜವೂ ಬೆಂಬಲ ಕೊಡಬಾರದು. ವಕೀಲರು ಕೂಡ ಅವರ ಪರ ನಿಲ್ಲಬಾರದು. ಇಂಥ ಕೆಲಸ ಮಾಡಿರುವುದು ನಮ್ಮ ಜಿಲ್ಲೆಗೊಂದು ಕಪ್ಪು ಚುಕ್ಕೆ ಎಂದು ಹೇಳಿದರು.

Speaker UT Khader has strongly criticized the inconsistent approach to policing among IPS officers, despite their uniform training. Speaking at a press conference in Mangaluru, he questioned why different officers implement the same laws in widely varying ways, particularly when dealing with communal tensions.