Ullal Accident, Mangalore: ಉಳ್ಳಾಲ ನಗರಸಭೆ ನಿರ್ಲಕ್ಷ್ಯ ;  ಹೊಂಡ ರಸ್ತೆಗೆ ಮತ್ತೆ ರಕ್ತತರ್ಪಣ,  ಗುಂಡಿ ತಪ್ಪಿಸಲು ಹೋದ ಸ್ಕೂಟರ್ ಪಲ್ಟಿ, ನಿವೃತ್ತ ಪೊಲೀಸ್ ಸಿಬಂದಿ ಗಂಭೀರ 

13-06-25 09:36 pm       Mangalore Correspondent   ಕರಾವಳಿ

ಇತ್ತೀಚೆಗೆ ಪಾದಚಾರಿ ಮಹಿಳೆಯೋರ್ವರನ್ನ ಬಲಿ ತೆಗೆದುಕೊಂಡಿದ್ದ ಪಂಡಿತ್ ಹೌಸ್ ನ ಹದಗೆಟ್ಟ ಹೊಂಡ ಗುಂಡಿ ರಸ್ತೆಗೆ ಶುಕ್ರವಾರ ಮತ್ತೆ ರಕ್ತ ತರ್ಪಣವಾಗಿದೆ. ರಸ್ತೆ ಗುಂಡಿಗಳನ್ನ ತಪ್ಪಿಸಲು ಹೋದ ಸ್ಕೂಟರ್ ಡಿವೈಡರ್  ಮೇಲೇರಿದ್ದು, ರಸ್ತೆಗೆಸೆಯಲ್ಪಟ್ಟ ವೃದ್ಧ ಸವಾರನ ಕಾಲಿನ ಪಾದದ ಚರ್ಮವೇ ಜಾರಿ ಜರ್ಝರಿತಗೊಂಡು ಆಸ್ಪತ್ರೆ ಸೇರಿದ್ದಾರೆ.

ಉಳ್ಳಾಲ, ಜೂ.13 : ಇತ್ತೀಚೆಗೆ ಪಾದಚಾರಿ ಮಹಿಳೆಯೋರ್ವರನ್ನ ಬಲಿ ತೆಗೆದುಕೊಂಡಿದ್ದ ಪಂಡಿತ್ ಹೌಸ್ ನ ಹದಗೆಟ್ಟ ಹೊಂಡ ಗುಂಡಿ ರಸ್ತೆಗೆ ಶುಕ್ರವಾರ ಮತ್ತೆ ರಕ್ತ ತರ್ಪಣವಾಗಿದೆ. ರಸ್ತೆ ಗುಂಡಿಗಳನ್ನ ತಪ್ಪಿಸಲು ಹೋದ ಸ್ಕೂಟರ್ ಡಿವೈಡರ್  ಮೇಲೇರಿದ್ದು, ರಸ್ತೆಗೆಸೆಯಲ್ಪಟ್ಟ ವೃದ್ಧ ಸವಾರನ ಕಾಲಿನ ಪಾದದ ಚರ್ಮವೇ ಜಾರಿ ಜರ್ಝರಿತಗೊಂಡು ಆಸ್ಪತ್ರೆ ಸೇರಿದ್ದಾರೆ.

ಶುಕ್ರವಾರ ಬೆಳಗ್ಗೆ ಪಂಡಿತ್ ಹೌಸ್ ಜಂಕ್ಷನ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಕುತ್ತಾರು ನಿವಾಸಿ ಮಾಜಿ ಕೆಎಸ್ಆರ್ ಪಿ ಸಿಬ್ಬಂದಿ ಬಿ.ಆರ್ ಬಡಿಗೇರ್ (68) ಎಂಬವರು ರಸ್ತೆಗೆಸೆಯಲ್ಪಟ್ಟಿದ್ದು ಅವರ ಎಡ ಕಾಲಿನ ಪಾದದ ಚರ್ಮ ಜಾರಿ ಹೋಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ತೊಕ್ಕೊಟ್ಟು - ಕೊಣಾಜೆ ಮಂಗಳೂರು ವಿವಿ ನಡುವಿನ‌ ಪಂಡಿತ್ ಹೌಸ್ ಪ್ರದೇಶದ ಲೋಕೋಪಯೋಗಿ ರಸ್ತೆಯಲ್ಲಿ ಉಳ್ಳಾಲ ನಗರಸಭೆ ನಡೆಸಿದ್ದ ಪೈಪ್ ಲೈನ್ ಕಾಮಗಾರಿಯಿಂದ ಬೃಹತ್ ಹೊಂಡಗಳು ಬಿದ್ದಿದ್ದು ಇಲ್ಲಿ ನಿತ್ಯವೂ ಅಪಘಾತಗಳು ನಡೆಯುತ್ತಲೇ ಇವೆ. ಕಳೆದ ಮೇ ತಿಂಗಳಲ್ಲಿ ಇದೇ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಸ್ಥಳೀಯ ನಿವಾಸಿ ಪೂರ್ಣಿಮಾ(59) ಎಂಬವರ ಮೇಲೆ ರಸ್ತೆ ಗುಂಡಿಯನ್ನ ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹರಿದು ಮಹಿಳೆ ದಾರುಣ ಸಾವನ್ನಪ್ಪಿದ್ದರು.

ಹದಗೆಟ್ಟ ರಸ್ತೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತಗಳಿಂದ‌ ರೋಸಿ ಹೋದ ಸ್ಥಳೀಯ ನಿವಾಸಿ ಬಿಜೆಪಿ ಮಂಗಳೂರು ಮಂಡಲದ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಅವರು ಕಳೆದ ಕೆಲ ದಿನಗಳ ಹಿಂದಷ್ಟೆ ಉಳ್ಳಾಲ ನಗರಸಭೆಯ ಕಿರಿಯ ಅಭಿಯಂತರ ತುಳಸೀದಾಸ್ ಅವರನ್ನ ಪಂಡಿತ್ ಹೌಸ್ ಪ್ರದೇಶಕ್ಕೆ ಕರೆಸಿ ತ್ವರಿತವಾಗಿ ಮುಖ್ಯ ರಸ್ತೆಯನ್ನ ಕಾಂಕ್ರಿಟೀಕರಣಗೊಳಿಸಿ ದುರಸ್ತಿ ಮಾಡಿಸಿ ಕೊಡುವಂತೆ ಆಗ್ರಹಿಸಿದ್ದರು. ಸ್ಥಳೀಯರ ಆಗ್ರಹಕ್ಕೆ ಮಣಿದ ನಗರಸಭೆ ಆಡಳಿತವು ಹೊಂಡ ಗುಂಡಿಗಳಿಗೆ ಜಲ್ಲಿ ಹುಡಿ ಹಾಕಿ ಕಣ್ಣುಕಟ್ಟಿನ ತೇಪೆ ಕಾಮಗಾರಿ ನಡೆಸಿತ್ತು. ಇದೀಗ ರಸ್ತೆ ಮತ್ತೆ ಹೊಂಡಮಯವಾಗಿದ್ದು ವಾಹನ ಸವಾರರು ಪ್ರಾಣ ಸಂಕಟದಿಂದಲೇ ಸಂಚರಿಸಬೇಕಿದೆ. ಶುಕ್ರವಾರ ಹದಗೆಟ್ಟ ಈ ರಸ್ತೆಯಲ್ಲಿ ಕಾರಿನ ಚಕ್ರ ಕೆಸರಲ್ಲಿ ಸಿಲುಕಿದ್ದು ಚಾಲಕ ಕಾರನ್ನು ಅಲ್ಲಿಯೇ ಬಿಟ್ಟೋಗಿದ್ದಾನೆ.

ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ನಿವೃತ್ತ ಪೊಲೀಸ್ ಸಿಬಂದಿ ಬಿ.ಆರ್ ಬಡಿಗೇರ್ ಅವರು ಅಪಘಾತಕ್ಕೆ ಕಾರಣರಾದ ಲೋಕೋಪಯೋಗಿ ಇಲಾಖಾಧಿಕಾರಿಗಳು ಅಥವಾ ಪೈಪ್ ಲೈನ್ ಅಗೆದು ರಸ್ತೆಯನ್ನ ಹಾಳುಗೆಡವಿದ ಉಳ್ಳಾಲ ನಗರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುವರೇ ಎಂದು ಕಾದು ನೋಡಬೇಕಿದೆ.

The badly damaged road near Pandith House in Ullal, which had already claimed the life of a pedestrian woman last month, turned into a scene of tragedy once again on Friday morning. In an attempt to avoid a large pothole, a scooter rider lost control and was thrown onto the road, resulting in severe injuries.