ಆರೆಸ್ಸೆಸ್ ನಾಯಕರ ಮನೆಗಳಿಗೆ ಮಿಡ್ ನೈಟ್ ಪರಿಶೀಲನೆ ; ಡಿಜಿಪಿ ಮತ್ತು ಎಸ್ಪಿಗೆ ಹೈಕೋರ್ಟ್ ನೋಟಿಸ್, ವಿವರಣೆ ನೀಡಲು ತಾಕೀತು, ಬಿಸಿ ತುಪ್ಪವಾಯ್ತು ಪ್ರಕರಣ !  

20-06-25 02:59 pm       Mangalore Correspondent   ಕರಾವಳಿ

ಇತ್ತೀಚೆಗೆ ಪುತ್ತೂರು, ಸುಳ್ಯದಲ್ಲಿ ಆರೆಸ್ಸೆಸ್ ಮತ್ತು ಹಿಂದು ಸಂಘಟನೆ ನಾಯಕರ ಮನೆಗಳಿಗೆ ಪೊಲೀಸರು ಮಧ್ಯರಾತ್ರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು ಭಾರೀ ಆಕ್ಷೇಪಕ್ಕೆ ಕಾರಣವಾಗಿತ್ತು. ಆಬಳಿಕ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರೆ, ಇನ್ನು ಕೆಲವರು ಎಸ್ಪಿ ಡಾ.ಅರುಣ್ ವಿರುದ್ಧ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.

ಮಂಗಳೂರು, ಜೂನ್ 20 ; ಇತ್ತೀಚೆಗೆ ಪುತ್ತೂರು, ಸುಳ್ಯದಲ್ಲಿ ಆರೆಸ್ಸೆಸ್ ಮತ್ತು ಹಿಂದು ಸಂಘಟನೆ ನಾಯಕರ ಮನೆಗಳಿಗೆ ಪೊಲೀಸರು ಮಧ್ಯರಾತ್ರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು ಭಾರೀ ಆಕ್ಷೇಪಕ್ಕೆ ಕಾರಣವಾಗಿತ್ತು. ಆಬಳಿಕ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರೆ, ಇನ್ನು ಕೆಲವರು ಎಸ್ಪಿ ಡಾ.ಅರುಣ್ ವಿರುದ್ಧ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಉಪ್ಪಿನಂಗಡಿಯ ಆರೆಸ್ಸೆಸ್ ಮುಖಂಡ ಯು.ಜಿ.ರಾಧಾ ಭಟ್ ಅವರ ಮನೆಗೆ ಮಿಟ್ ನೈಟ್ ಪೊಲೀಸರು ಹೊಕ್ಕಿದ್ದ ವಿಚಾರದಲ್ಲಿ ಇದೀಗ ಹೈಕೋರ್ಟ್ ಎಸ್ಪಿ ಡಾ.ಅರುಣ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಮಧ್ಯರಾತ್ರಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಿಂದು ನಾಯಕರು ಮನೆಯಲ್ಲೇ ಇದ್ದಾರೆಯೇ ಎಂದು ಚೆಕ್ ಮಾಡಿ ಪೊಲೀಸರು ಫೋಟೋ ತೆಗೆದು ಜಿಪಿಎಸ್ ಲೊಕೇಶನ್ ಶೇರ್ ಮಾಡಿದ್ದರು. ಏಕಾಏಕಿ ನೋಟೀಸ್, ವಾರೆಂಟ್ ಇಲ್ಲದೆ ಪೊಲೀಸರು ಮನೆಗೆ ಹೊಕ್ಕಿದ್ದನ್ನು ಹಿಂದು ಸಂಘಟನೆ ಮತ್ತು ಬಿಜೆಪಿ ನಾಯಕರು ಆಕ್ಷೇಪಿಸಿದ್ದರು. ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿದ್ದರೂ ಈ ರೀತಿ ಪೊಲೀಸರು ವರ್ತಿಸಿದ್ದು ತಪ್ಪು ಎಂದು ಕಿಡಿಕಾರಿದ್ದರು. ಇದೇ ವಿಚಾರ ಮುಂದಿಟ್ಟು ಪೊಲೀಸರ ಈ ನಡೆಯಿಂದ, ತಮ್ಮ ಖಾಸಗಿತನಕ್ಕೆ ಧಕ್ಕೆಯಾಗಿದೆ, ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ, ಪೊಲೀಸರು ನನ್ನನ್ನು ಆರೋಪಿಯ ರೀತಿ ನಡೆಸಿಕೊಂಡಿದ್ದಾರೆ ಎಂದು ಹೇಳಿ ಯುಜಿ ರಾಧಾ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪುತ್ತೂರು ಮೂಲದ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಈ ಬಗ್ಗೆ ವಾದ ಮಂಡಿಸಿದ್ದು, ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿ ಮತ್ತು ದಕ್ಷಿಣ ಕನ್ನಡ ಎಸ್ಪಿಗೆ ನೋಟಿಸ್ ಜಾರಿ ಮಾಡಿದೆ. ಮಧ್ಯರಾತ್ರಿ ಪೊಲೀಸರು ಹಿರಿಯ ನಾಗರಿಕರ ಮನೆಗೆ ತೆರಳಿ ಪರಿಶೀಲನೆ ನಡೆಸುವ ಅಗತ್ಯ ಏನಿತ್ತು. ಈ ವ್ಯಕ್ತಿ ಅಂತಹದ್ದೇನಾದರೂ ಅಪರಾಧ ಮಾಡಿದ್ದಾರೆಯೇ, ಆ ಕುರಿತ ದಾಖಲೆಗಳಿದ್ದರೆ ತಂದು ಸಲ್ಲಿಸಿ ಎಂದು ಎಸ್ಪಿಗೆ ಕೋರ್ಟ್ ತಾಕೀತು ಮಾಡಿದ್ದಲ್ಲದೆ, ಈ ಬಗ್ಗೆ ಕಾನೂನು ಮೀರಿ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.

ಯುಜಿ ರಾಧಾ ಭಟ್ ಅವರು ಪೊಲೀಸರು ಈ ರೀತಿ ಮಾಡಿದ್ದರಿಂದ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದು, ಇದಕ್ಕಾಗಿ ಪೊಲೀಸರು ನನಗೆ 20 ಲಕ್ಷ ರೂ. ಮಾನನಷ್ಟ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದರಿಂದಾಗಿ ಎಸ್ಪಿಗೆ ಈ ಮಿಡ್ ನೈಟ್ ದಾಳಿ ಪ್ರಕರಣ ಬಿಸಿ ತುಪ್ಪವಾಗಿ ಕಾಡುವಂತಾಗಿದ್ದು, ರಾತ್ರಿ ವೇಳೆ ಪರಿಶೀಲನೆ ನಡೆಸಿದ್ದಕ್ಕೆ ಸೂಕ್ತ ದಾಖಲೆ ಸಲ್ಲಿಸಬೇಕು ಜೊತೆಗೆ ಮಾನನಷ್ಟ ಪರಿಹಾರದ ಬಗ್ಗೆ ವಿವರಣೆ ಕೊಡಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಸಂಘಟನೆ ನಾಯಕರನ್ನು ಗಡೀಪಾರಿಗೆ ಲಿಸ್ಟ್ ಮಾಡಿರುವುದು, ಮಧ್ಯರಾತ್ರಿ ಮನೆಗಳಿಗೆ ಪೊಲೀಸರು ಭೇಟಿ ಕೊಟ್ಟ ವಿಚಾರದಲ್ಲಿ ಗಿರೀಶ್ ಭಾರದ್ವಾಜ್ ಎಂಬ ಮತ್ತೊಬ್ಬ ವಕೀಲರು ಕೂಡ ಹೈಕೋರ್ಟಿನಲ್ಲಿ ಪಿಐಎಲ್ ಹಾಕಿದ್ದಾರೆ. ಇದಲ್ಲದೆ, ಯುಜಿ ರಾಧಾ ಭಟ್ ರಾತ್ರಿ ವೇಳೆ ಮನೆಯಲ್ಲಿದ್ದಾಗ ಪೊಲೀಸರು ಬಂದು ಬಾಗಿಲು ತಟ್ಟಿ ಅವರನ್ನು ಹೊರಕ್ಕೆ ಕರೆಯುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಯುಜಿ ರಾಧಾ ಭಟ್ ಅವರು ಉಪ್ಪಿನಂಗಡಿಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿದ್ದು, ಕೈಲಾರ್ ಮೆಡಿಕಲ್ಸ್ ಎನ್ನುವ ಶಾಪ್ ನಡೆಸುತ್ತಿದ್ದಾರೆ. ಅಲ್ಲದೆ, 600 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶ್ರೀರಾಮ ಹೈಸ್ಕೂಲ್ ನಡೆಸುತ್ತಿದ್ದಾರೆ. ಯಾವುದೇ ಅಪರಾಧ ಹಿನ್ನೆಲೆ, ಕೇಸುಗಳನ್ನು ಹೊಂದಿಲ್ಲದ ವ್ಯಕ್ತಿಯಾಗಿದ್ದಾರೆ. ಜೂನ್ 1ರಂದು ರಾತ್ರಿ 9.30ರ ವೇಳೆಗೆ ಇಬ್ಬರು ಪೊಲೀಸರು ಮೆಡಿಕಲ್ ಶಾಪ್ ಗೆ ಬಂದು ರಾಧಾ ಭಟ್ ಅವರನ್ನು ಜೊತೆಗೆ ನಿಲ್ಲಿಸಿ ಫೋಟೋ ತೆಗೆದಿದ್ದರು. ನೋಟೀಸ್ ಏನಾದ್ರೂ ಇದೆಯಾ ಎಂದು ಕೇಳಿದಾಗ, ಮೇಲಧಿಕಾರಿಗಳ ಸೂಚನೆ ಇದೆಯೆಂದಿದ್ದರು. ಮರುದಿನ ಜೂನ್ 2ರಂದು ಮಧ್ಯರಾತ್ರಿ 12.30ರ ವೇಳೆಗೆ ಉಪ್ಪಿನಂಗಡಿಯ ಮನೆಗೆ ಬಂದಿದ್ದ ಅದೇ ಪೊಲೀಸ್ ಸಿಬಂದಿ, ಮತ್ತೆ ಫೋಟೋ ತೆಗೆದು ಜಿಪಿಎಸ್ ಲೊಕೇಶನ್ ಸಂಗ್ರಹಿಸುತ್ತಿದ್ದೇವೆಂದು ಹೇಳಿದ್ದರು. ಇದರಿಂದ ಮನೆಯವರಿಗೆ ಮತ್ತು ನೆರೆಮನೆಯ ನಿವಾಸಿಗಳಿಗೆಲ್ಲ ಗಾಬರಿ, ಶಾಕ್ ಆಗುವಂತಾಗಿತ್ತು. ಇದು ಮೂಲಭೂತ ಹಕ್ಕಾದ ವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯೆಂದು ವಕೀಲರು ಹೈಕೋರ್ಟ್ ದೂರಿನಲ್ಲಿ ಆಕ್ಷೇಪಿಸಿದ್ದಾರೆ. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿ ಮತ್ತು ಐಜಿಪಿ ಕರ್ನಾಟಕ ಪೊಲೀಸ್, ದಕ್ಷಿಣ ಕನ್ನಡ ಎಸ್ಪಿ, ಉಪ್ಪಿನಂಗಡಿ ಠಾಣಾಧಿಕಾರಿ ಅವರನ್ನು ದೂರಿನಲ್ಲಿ ಪ್ರತಿವಾದಿಗಳಾಗಿ ಗುರುತಿಸಲಾಗಿದೆ.

Mangalore Midnight Raids on RSS Leaders Homes, Karnataka High Court Issues Notice to DGP and SP, Demands Explanation.