Dharmasthala Case, SIT Helpline Number, Mangalore: ನದಿ ಪಕ್ಕದ ಐದು ಕಡೆ ಅಗೆದರೂ ಸಿಗದ ಸಾಕ್ಷ್ಯ, ಮಳೆಗಾಲದಲ್ಲಿ ಅವಶೇಷ ಕೊಚ್ಚಿ ಹೋಗಿತ್ತಾ ಎಂಬ ಶಂಕೆ ; ದೂರು ಆಲಿಸಲು ಮಂಗಳೂರಿನಲ್ಲಿ ಎಸ್ಐಟಿ ಕಚೇರಿ, ಸಹಾಯವಾಣಿ ಆರಂಭ

30-07-25 11:05 pm       Mangalore Correspondent   ಕರಾವಳಿ

ಧರ್ಮಸ್ಥಳ ಸ್ನಾನಘಟ್ಟದ ಬಳಿ ಹೆಣ ಹೂತ ಪ್ರಕರಣ ಸಂಬಂಧಿಸಿ ಪೊಲೀಸರು ಬುಧವಾರ ನಾಲ್ಕು ಸಮಾಧಿ ಸ್ಥಳಗಳಲ್ಲಿ ಕಾರ್ಮಿಕರ ಮೂಲಕ ಅಗೆಸಿದ್ದು, ಶವ ಹೂತಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಇವೆಲ್ಲವೂ ನೇತ್ರಾವತಿ ನದಿಯ ಬಳಿಯಲ್ಲೇ ಇರುವ ಕಾಡು ಪ್ರದೇಶಗಳಾಗಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವಂತಹ ಜಾಗಗಳು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂಗಳೂರು, ಜುಲೈ 30 : ಧರ್ಮಸ್ಥಳ ಸ್ನಾನಘಟ್ಟದ ಬಳಿ ಹೆಣ ಹೂತ ಪ್ರಕರಣ ಸಂಬಂಧಿಸಿ ಪೊಲೀಸರು ಬುಧವಾರ ನಾಲ್ಕು ಸಮಾಧಿ ಸ್ಥಳಗಳಲ್ಲಿ ಕಾರ್ಮಿಕರ ಮೂಲಕ ಅಗೆಸಿದ್ದು, ಶವ ಹೂತಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಇವೆಲ್ಲವೂ ನೇತ್ರಾವತಿ ನದಿಯ ಬಳಿಯಲ್ಲೇ ಇರುವ ಕಾಡು ಪ್ರದೇಶಗಳಾಗಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವಂತಹ ಜಾಗಗಳು ಎಂದು ಸ್ಥಳೀಯರು ತಿಳಿಸಿದ್ದಾರೆ.

ಧರ್ಮಸ್ಥಳ ಪಂಚಾಯತ್ ನೇಮಿಸಿರುವ 20 ರಷ್ಟು ಪೌರ ಕಾರ್ಮಿಕರು ಅಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಂಗಳವಾರ ಒಂದು ಕಡೆಯಲ್ಲಿ ಎಂಟು ಅಡಿ ಆಳಕ್ಕೆ, 15 ಅಡಿ ಉದ್ದಕ್ಕೆ ಅಗೆಯಲಾಗಿತ್ತು. ಆದರೆ ದೂರುದಾರ ವ್ಯಕ್ತಿ ತಾನು 2ರಿಂದ 3 ಅಡಿಯಷ್ಟೇ ಅಗೆದು ಶವಗಳನ್ನು ಹೂತಿದ್ದೆ ಎಂದು ಹೇಳಿರುವುದರಿಂದ ಬುಧವಾರ ಹೆಚ್ಚು ಆಳದ ವರೆಗೆ ಅಗೆದಿಲ್ಲ. 5 ಅಡಿಯಷ್ಟು ಆಳ ಮತ್ತು ಅಷ್ಟೇ ಉದ್ದ ಅಗಲದಲ್ಲಿ ಅಗೆಯಲಾಗಿದೆ.

ಮಳೆಗಾಲದಲ್ಲಿ ಹೆಚ್ಚು ಮಳೆಯಾದರೆ ನೀರು ನಿಲ್ಲುವುದು ಮತ್ತು ನದಿಯಲ್ಲಿ ನೆರೆ ಬಂದರೆ ಮಣ್ಣು ಕೊಚ್ಚಿ ಹೋಗುವ ಸಾಧ್ಯತೆ ಇರುವುದರಿಂದ ಇಲ್ಲಿನ ಹೆಣಗಳ ಅವಶೇಷಗಳು ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಯೂ ಇದೆ. ಇದಲ್ಲದೆ, ಕಾಡು ಪ್ರದೇಶ ಆಗಿರುವುದರಿಂದ ಹಂದಿ, ತೋಳದಂತಹ ಪ್ರಾಣಿಗಳು ಹೆಣಗಳನ್ನು ಅಗೆದು ತಿಂದು ಹಾಕಿರುವ ಸಾಧ್ಯತೆಯೂ ಇದೆ ಎನ್ನುವ ಮಾತು ಅಲ್ಲಿ ಸೇರಿದ್ದವರಿಂದ ವ್ಯಕ್ತವಾಗುತ್ತಿತ್ತು.

ಸೋಮವಾರ 13 ಕಡೆ ಹೆಣ ಹೂತ ಜಾಗವೆಂದು ಮಾರ್ಕ್ ಹಾಕಲಾಗಿತ್ತು. ಅದರ ಪ್ರಕಾರ, ಅವುಗಳಿಗೆ ನಂಬರ್ ಕೊಡಲಾಗಿದ್ದು ಅದೇ ಪ್ರಕಾರದಲ್ಲಿ ಸಮಾಧಿ ಅಗೆತ ಮಾಡಲಾಗಿದೆ. 9, 10, 11, 12 ನಂಬರಿನ ಮಾರ್ಕಿಂಗ್ ಉಜಿರೆ- ಧರ್ಮಸ್ಥಳ ರಸ್ತೆ ಬದಿಯಲ್ಲೇ ಇದ್ದು, ಅಲ್ಲಿ ಅಗೆಯುವ ಸಂದರ್ಭದಲ್ಲಿ ರಸ್ತೆ ಬಂದ್ ಮಾಡುತ್ತಾರೆಯೇ, ಸಾರ್ವಜನಿಕರನ್ನು ನಿರ್ಬಂಧಿಸಲು ಏನು ಮಾಡುತ್ತಾರೆಂಬ ಕುತೂಹಲ ಇದೆ. ನದಿ ಪಕ್ಕದ ಕೆಲವು ಜಾಗಗಳಲ್ಲಿ ಹಲವಾರು ಹೆಣಗಳನ್ನು ಹೂತಿದ್ದೇನೆ ಎಂದು ದೂರುದಾರ ಹೇಳಿಕೆ ನೀಡಿದ್ದಾನೆಂಬ ಮಾಹಿತಿ ಇದೆ. ನದಿ ಪಕ್ಕದಲ್ಲಿ ಇಷ್ಟು ವರ್ಷಗಳ ಕಾಲ ಹೆಣಗಳ ಅವಶೇಷ ಉಳಿದಿರುತ್ತವೆಯೇ ಎನ್ನುವ ಪ್ರಶ್ನೆ ಇದೆ.

ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬುಧವಾರ ಸಂಜೆ ವೇಳೆಗೆ ಧರ್ಮಸ್ಥಳಕ್ಕೆ ಬಂದಿದ್ದು, ಬೆಳ್ತಂಗಡಿಯಲ್ಲೇ ಉಶಳಿಕೊಂಡಿದ್ದಾರೆ. ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ರಾತ್ರಿ ವೇಳೆ ತನಿಖೆಯ ವಿಚಾರದಲ್ಲಿ ಅಧಿಕಾರಿಗಳ ಜೊತೆಗೆ ಮೀಟಿಂಗ್ ನಡೆಸಿದ್ದಾರೆ. 

ಮಂಗಳೂರಿನಲ್ಲಿ ಕಚೇರಿ, ಸಹಾಯವಾಣಿ 

ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ ಕಚೇರಿಯನ್ನು ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆಯ ನಿರೀಕ್ಷಣಾ ಮಂದಿರದಲ್ಲಿ ಸ್ಥಾಪಿಸಲಾಗಿದೆ. ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡವನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕಚೇರಿಯನ್ನು ಸಂಪರ್ಕಿಸಬಹುದು. ಸಹಾಯವಾಣಿ ದೂರವಾಣಿ ಸಂಖ್ಯೆ 0824-2005301, 8277986369 ಮತ್ತು ಇಮೇಲ್ - sitdps@ksp.gov.in ಎಂದು ಪ್ರಕಟನೆ ತಿಳಿಸಿದೆ.

In a significant development in the ongoing investigation related to the alleged burial of human remains near the bathing ghat in Dharmasthala, police dug at four suspected grave sites on Wednesday with the help of workers, but found no signs of human remains.