Dcc Bank, Mangalore, Dr Udaya Kumar: ಸಹಕಾರ ಚಳವಳಿ ರೂಪು ಪಡೆಯದೇ ಇರುತ್ತಿದ್ದರೆ ನಮ್ಮ ಜಿಲ್ಲೆ ಇಷ್ಟೊಂದು ಅಭಿವೃದ್ಧಿ ಆಗುತ್ತಿರಲಿಲ್ಲ ; ಮೊಳಹಳ್ಳಿ ಶಿವರಾಯರ ಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಉದಯ ಇರ್ವತ್ತೂರು

04-08-25 10:58 pm       Mangalore Correspondent   ಕರಾವಳಿ

ಶಿಕ್ಷಣ, ಸಹಕಾರ, ಸ್ಥಳೀಯ ಆಡಳಿತಗಳ ಬಗ್ಗೆ ಮೊಳಹಳ್ಳಿ ಶಿವರಾಯರು ಸ್ಪಷ್ಟ ಕಲ್ಪನೆ ಹೊಂದಿದ್ದರು. ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆ, ಮದ್ಯ ವ್ಯಸನ ವಿರುದ್ಧ ಜಾಗೃತಿ ಮೂಡಿಸಲು ಈ ಜಿಲ್ಲೆಗೆ ಮೂರು ಬಾರಿ ಬಂದಿದ್ದರು. ಆದರೆ ಅದಕ್ಕೂ ಮೊದಲೇ ಶಿವರಾಯರು ಈ ವಿಚಾರದಲ್ಲಿ ನಮ್ಮ ಪುತ್ತೂರಿನಲ್ಲಿ ಜಾಗೃತಿ ಮೂಡಿಸಿದ್ದರು.

ಮಂಗಳೂರು, ಆ.4 : ಶಿಕ್ಷಣ, ಸಹಕಾರ, ಸ್ಥಳೀಯ ಆಡಳಿತಗಳ ಬಗ್ಗೆ ಮೊಳಹಳ್ಳಿ ಶಿವರಾಯರು ಸ್ಪಷ್ಟ ಕಲ್ಪನೆ ಹೊಂದಿದ್ದರು. ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆ, ಮದ್ಯ ವ್ಯಸನ ವಿರುದ್ಧ ಜಾಗೃತಿ ಮೂಡಿಸಲು ಈ ಜಿಲ್ಲೆಗೆ ಮೂರು ಬಾರಿ ಬಂದಿದ್ದರು. ಆದರೆ ಅದಕ್ಕೂ ಮೊದಲೇ ಶಿವರಾಯರು ಈ ವಿಚಾರದಲ್ಲಿ ನಮ್ಮ ಪುತ್ತೂರಿನಲ್ಲಿ ಜಾಗೃತಿ ಮೂಡಿಸಿದ್ದರು. ಪುತ್ತೂರಿಗೆ ಶಿವರಾಮ ಕಾರಂತರನ್ನು ಕರೆಸಿದ್ದೂ ಶಿವರಾಯರೇ ಆಗಿದ್ದರು. ಸಹಕಾರ ಚಳವಳಿ ರೂಪು ಪಡೆಯದೇ ಇರುತ್ತಿದ್ದರೆ ನಮ್ಮ ಜಿಲ್ಲೆ ಇಷ್ಟೊಂದು ಅಭಿವೃದ್ಧಿ ಆಗುತ್ತಿರಲಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಹೇಳಿದ್ದಾರೆ.

ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ 145ನೇ ಜನ್ಮದಿನದ ಪ್ರಯುಕ್ತ ಎಸ್ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಪುತ್ತೂರಿನಲ್ಲಿ ಶಿಕ್ಷಣ ಮುಗಿಸಿದ ಶಿವರಾಯರು, ಮಡಿಕೇರಿಯಲ್ಲಿ ಕಾನೂನು ವೃತ್ತಿ ಆರಂಭಿಸಿದ್ದರು. ನಿಜವಾದ ನ್ಯಾಯವಾದಿಯಾಗಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದರಿತು ಆ ವೃತ್ತಿಯನ್ನೇ ತೊರೆದು ಸಾರ್ವಜನಿಕ ಜೀವನಕ್ಕೆ ಇಳಿದಿದ್ದರು. ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಆಹಾರ ಧಾನ್ಯ ಕೊರತೆ ಎದುರಾದಾಗ ಸಹಕಾರಿ ಸಂಸ್ಥೆ, ಕಾಲೇಜುಗಳ ಮೂಲಕ ಜನರಿಗೆ ಧಾನ್ಯ ಪೂರೈಕೆ ಮಾಡಿದ್ದರು.

ಸಹಕಾರ ಚಳವಳಿಯನ್ನು ತಳಮಟ್ಟದಲ್ಲಿ ಆರಂಭಿಸಬೇಕೆಂದು ವಿದ್ಯಾರ್ಥಿ ದಿಸೆಯಲ್ಲೇ ಸಹಕಾರಿ ಸಂಘ ಸ್ಥಾಪಿಸಿದ್ದರು. ಪುತ್ತೂರಿನಲ್ಲಿ ವಿವೇಕಾನಂದ ಕಾಲೇಜನ್ನು ಸ್ಥಾಪಿಸಿದ್ದೂ ಶಿವರಾಯರು. ಹಾಗಂತ, ಶಿವರಾಯರು ಕೇವಲ ಸಹಕಾರಿ ಚಳವಳಿಗೆ ಮಾತ್ರ ಸೀಮಿತರಾಗಲಿಲ್ಲ. ಸಮಾಜದ ಸಮಗ್ರ ಅಭಿವೃದ್ಧಿಯ ಚಿಂತನೆ ಅವರಲ್ಲಿತ್ತು. ಶಿಕ್ಷಣ, ಸಹಕಾರ, ಸ್ಥಳೀಯ ಆಡಳಿತಗಳ ಮೂಲಕ ಸಮಾಜ ಕಟ್ಟುವ ಪರಿಕಲ್ಪನೆ ಅವರಲ್ಲಿತ್ತು ಎಂದು ಉದಯ ಕುಮಾರ್ ಸ್ಮರಿಸಿದರು.

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಮಾತನಾಡಿ, ಮೊಳಹಳ್ಳಿ ಶಿವರಾಯರು 1911ರಲ್ಲಿ ಡಿಸಿಸಿ ಬ್ಯಾಂಕನ್ನು ಸ್ಥಾಪಿಸಿದರೂ ಮೊದಲು ಅವರೇ ಅಧ್ಯಕ್ಷರಾಗಲಿಲ್ಲ. ಆಮೇಲೆ ಅಧ್ಯಕ್ಷರಾಗಿ 25 ವರ್ಷ ಕಾಲ ಸೇವೆ ಮಾಡಿದ್ದರು. ಅಂಥ ವ್ಯಕ್ತಿಯಿಂದಾಗಿ ಈ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಮೊದಲ ಬಾರಿಗೆ ಸಹಕಾರ ಚಳವಳಿ ಸ್ಥಾಪನೆಗೊಂಡಿತ್ತು. ಡಿಸಿಸಿ ಬ್ಯಾಂಕು ಈಗ ದೊಡ್ಡ ಹೆಮ್ಮರವಾಗಿ ಬೆಳೆದಿದ್ದು, ನೂರು ಶೇಕಡಾ ಸಾಲ ಮರುಪಾವತಿ ಆಗಿರುವ ಬ್ಯಾಂಕ್ ಇದ್ದರೆ ಅದು ಎಸ್ಸಿಡಿಸಿಸಿ ಬ್ಯಾಂಕ್ ಮಾತ್ರ ಎಂದು ಹೇಳಿಕೊಂಡರು.

ಇದೇ ವೇಳೆ, ಕರಾವಳಿಯ ಸಹಕಾರಿ ಪತ್ರಿಕೆ ಎನ್ನುವ ಮಾಸಿಕದ ಬಿಡುಗಡೆ ಮಾಡಲಾಯಿತು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಕ್ಯಾಂಪ್ಕೋ ಅಧ್ಯಕ್ಷ ಕಿರಣ್ ಕೊಡ್ಗಿ, ದೇವಿಪ್ರಸಾದ್ ಶೆಟ್ಟಿ ಸೇರಿದಂತೆ ಸಹಕಾರ ವಲಯದ ಪ್ರಮುಖರು ಉಪಸ್ಥಿತರಿದ್ದರು.

Retired principal Dr. Uday Kumar Irvattur paid rich tribute to the visionary Molahalli Shivaraya, stating that Dakshina Kannada’s remarkable progress would not have been possible without the foundation laid by the cooperative movement he pioneered.