ಧರ್ಮಸ್ಥಳ ಸುದ್ದಿ ಪ್ರಸಾರ ನಿರ್ಬಂಧಕ್ಕೆ ಸುಪ್ರೀಂ ನಿರಾಕರಣೆ ; ನಾವು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ, ಮಾಧ್ಯಮ ನಿರ್ಬಂಧ ಸರಿಯಲ್ಲ, ಕೆಳಗಿನ ಕೋರ್ಟಿನಲ್ಲಿ ಎರಡು ವಾರದೊಳಗೆ ನಿರ್ಧರಿಸಲು ಸೂಚನೆ

08-08-25 08:26 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದಲ್ಲಿ ಮಾಧ್ಯಮಗಳು ಮಾನಹಾನಿಕರ ಸುದ್ದಿ ಪ್ರಸಾರ ಮಾಡುತ್ತಿವೆ, ಅದನ್ನು ನಿರ್ಬಂಧಿಸಬೇಕೆಂಬ ಕೋರಿದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ರೀತಿಯ ನಿರ್ಬಂಧ ಆದೇಶಗಳು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ ಮತ್ತು ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ನಿರಾಕರಿಸುತ್ತದೆ ಎಂದು ಹೇಳಿದೆ.

ಬೆಂಗಳೂರು, ಆ.8 : ಧರ್ಮಸ್ಥಳ ಪ್ರಕರಣದಲ್ಲಿ ಮಾಧ್ಯಮಗಳು ಮಾನಹಾನಿಕರ ಸುದ್ದಿ ಪ್ರಸಾರ ಮಾಡುತ್ತಿವೆ, ಅದನ್ನು ನಿರ್ಬಂಧಿಸಬೇಕೆಂಬ ಕೋರಿದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ರೀತಿಯ ನಿರ್ಬಂಧ ಆದೇಶಗಳು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ ಮತ್ತು ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ನಿರಾಕರಿಸುತ್ತದೆ ಎಂದು ಹೇಳಿದೆ.

ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ನ್ಯಾಯಪೀಠವು ಕೆಳ ಹಂತದ ವಿಚಾರಣಾ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಿ. ಮಾಧ್ಯಮ ನಿರ್ಬಂಧ ಅಪರೂಪದ ಪ್ರಕರಣಗಳಲ್ಲಿ ಮಾತ್ರ ನೀಡಲಾಗುತ್ತದೆ. ಗ್ಯಾಗ್ ಆರ್ಡರ್ ಗಳು ಅಭಿಪ್ರಾಯ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ನಾವು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ಸ್ವಚ್ಛತಾ ಕಾರ್ಮಿಕನ ಹೇಳಿಕೆಯನ್ನು ಪ್ರಸಾರ ಮಾಡಬಾರದೆಂದು ನಾವು ಹೇಳಿದರೆ, ಯಾವುದನ್ನೂ ಪ್ರಸಾರ ಮಾಡಲಾಗದು ಎಂದರ್ಥ ತಾನೇ ಎಂದು ಹೇಳಿತು. ಹರ್ಷೇಂದ್ರ ಕುಮಾರ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಹಾಜರಾಗಿದ್ದರು. ಮಾನಹಾನಿಕರ ವರದಿ ಪ್ರಸಾರ ಆಗುವುದನ್ನು ತಡೆಯಲು ಮತ್ತು ಕ್ಷೇತ್ರದ ಬಗ್ಗೆ ಅಪಪ್ರಚಾರ ತಡೆಯಲು ಮಧ್ಯಂತರ ನಿರ್ಬಂಧ ನೀಡುವಂತೆ ಕೇಳಿಕೊಂಡರು.

ವಿಚಾರಣಾ ನ್ಯಾಯಾಲಯದಲ್ಲೇ ಈ ಬಗ್ಗೆ ವಾದ ಮಂಡಿಸಿ, ಅಲ್ಲಿಯೇ ಸ್ವತಂತ್ರ ನೆಲೆಯಲ್ಲಿ ನಿರ್ಧಾರ ಮಾಡಲಿ. ಅದಕ್ಕೂ ಮುನ್ನ ಮೇಲಿನ ಕೋರ್ಟಿನಿಂದ ನಿರ್ಬಂಧ ತರುವುದು ಸರಿಯಲ್ಲ. ಜಡ್ಜ್ ಒಬ್ಬ ಲಂಚ ತೆಗೆದುಕೊಳ್ತಾನೆ ಅಂದ್ರೆ, ಆತ ಕಲಿತ ಸಂಸ್ಥೆ ಏನು ಮಾಡಕ್ಕಾಗುತ್ತದೆ. ಸಂಸ್ಥೆಗೇನು ಪರಿಣಾಮ ಆಗುತ್ತದೆ ಎಂದು ವಕೀಲರ ಸಾಕ್ಷ್ಯ ಮತ್ತು ವಾದಕ್ಕೆ ಉತ್ತರಿಸಿದ ನ್ಯಾಯಪೀಠವು, ನಿಮ್ಮಲ್ಲಿ ಯಾವುದೇ ಸಾಕ್ಷ್ಯಗಳು ಇದ್ದರೂ ಅದನ್ನು ಕೆಳಗಿನ ಕೋರ್ಟಿಗೆ ಸಲ್ಲಿಸಿ, ಮೀಮ್ಸ್ ಏನಿದ್ದರೂ ಅದಕ್ಕೊಂದಿಷ್ಟು ಲಿಮಿಟ್ ಅಂತ ಇರಬೇಕೆನ್ನುವುದನ್ನು ಒಪ್ಪುತ್ತೇವೆ. ಕೋರ್ಟಿನಿಂದ ಅದನ್ನೆಲ್ಲ ತೆಗೆದುಹಾಕಲು ಹೇಳಬಹುದು. ಆದರೆ ಇಲ್ಲಿಂದ ಆರ್ಡರ್ ಮಾಡುವುದು ಸರಿ ಕಾಣುವುದಿಲ್ಲ. ಕೆಳಗಿನ ಕೋರ್ಟಿನಲ್ಲೇ ಸಲ್ಲಿಸಿ, ಅವರಿಗೆ ನಿರ್ಣಯ ಮಾಡೋಕೆ ಕಾಲಾವಕಾಶ ಕೊಡಿ ಎಂದು ಹೇಳಿತು.

ನ್ಯೂಸ್ ಚಾನೆಲ್ಗಳು, ಸೋಶಿಯಲ್ ಮೀಡಿಯಾಗಳಲ್ಲಿ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತದೆ. ಕ್ಷೇತ್ರದ ಬಗ್ಗೆ ಮೀಮ್ಸ್ ಮಾಡಿ ಅಪಪ್ರಚಾರ ನಡೆಸಲಾಗುತ್ತದೆ. ಇದಕ್ಕಾಗಿ ಇಂಜಕ್ಷನ್ ಆರ್ಡರ್ ಕೊಡಿ ಎಂದು ರೋಹ್ಟಗಿ ಕೇಳಿಕೊಂಡರು. ಒಂದು ದೇವಸ್ಥಾನದ ಆಡಳಿತ ಪರವಾಗಿ ನಾವು ಇಂತಹ ಆರ್ಡರ್ ನೀಡುವುದಕ್ಕೆ ಬಯಸುವುದಿಲ್ಲ. ವಿಚಾರಣಾ ನ್ಯಾಯಾಲಯಕ್ಕೆ ಈ ಬಗ್ಗೆ ಎರಡು ವಾರದಲ್ಲಿ ತುರ್ತಾಗಿ ವಿಚಾರಣೆ ಮಾಡಿ ತೀರ್ಪು ನೀಡುವಂತೆ ಸೂಚಿಸುತ್ತೇವೆ ಎಂದು ಕೋರ್ಟ್ ಹೇಳಿತು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾಧ್ಯಮಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ತೆಗೆದುಹಾಕಿತ್ತು. ಇದನ್ನು ಪ್ರಶ್ನಿಸಿ ದೇವಸ್ಥಾನ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

The Supreme Court has refused to impose a ban on media coverage in the Dharmasthala case, stating that such restrictions curb freedom of the press and contradict the principles of a free country.