ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿಗೆ ; 25 ಗುತ್ತಿಗೆದಾರರಿಗೆ ಪರವಾನಗಿ, ರಾಯಲ್ಟಿ 90 ರೂ.ಗೆ ಕಡಿತ, ಕಲ್ಲಿನ ದರವೂ ಇಳಿಯಲಿದೆ ; ಯುಟಿ ಖಾದರ್ 

16-09-25 05:12 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಕೆಂಪು ಕಲ್ಲು ತೆಗೆಯುವ ಕುರಿತಾಗಿ ಪ್ರತ್ಯೇಕ ನೀತಿ ರೂಪಿಸಲಾಗಿದ್ದು ಇದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಕಾನೂನು ಜಾರಿಗೆ ಬರಲಿದೆ. ಅಲ್ಲದೆ, ಇದೇ ವೇಳೆ 25 ಮಂದಿಗೆ ಕಲ್ಲು ತೆಗೆಯಲು ಪರವಾನಿಗೆಯನ್ನೂ ನೀಡಲಾಗಿದೆ ಎಂದು ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ಹೇಳಿದ್ದಾರೆ.‌

ಮಂಗಳೂರು, ಸೆ.16 : ಕರಾವಳಿಯಲ್ಲಿ ಕೆಂಪು ಕಲ್ಲು ತೆಗೆಯುವ ಕುರಿತಾಗಿ ಪ್ರತ್ಯೇಕ ನೀತಿ ರೂಪಿಸಲಾಗಿದ್ದು ಇದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಕಾನೂನು ಜಾರಿಗೆ ಬರಲಿದೆ. ಅಲ್ಲದೆ, ಇದೇ ವೇಳೆ 25 ಮಂದಿಗೆ ಕಲ್ಲು ತೆಗೆಯಲು ಪರವಾನಿಗೆಯನ್ನೂ ನೀಡಲಾಗಿದೆ ಎಂದು ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ಹೇಳಿದ್ದಾರೆ.‌

ಸುದ್ದಿಗೋಷ್ಟಿ ನಡೆಸಿದ ಅವರು, ಕೆಂಪು ಕಲ್ಲು ತೆಗೆಯುವ ವಿಚಾರಕ್ಕೆ ಸಂಬಂಧಿಸಿ ಉಸ್ತುವಾರಿ ಸಚಿವರ ಜೊತೆಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅದರಲ್ಲಿ ಕಲ್ಲು ವ್ಯಾಪಾರಸ್ಥರು, ಈ ಭಾಗದ ಶಾಸಕರು, ಅಧಿಕಾರಿಗಳು ಇದ್ದರು. ಕೆಂಪು ಕಲ್ಲು ತೆಗೆಯುವ ವಿಚಾರದಲ್ಲಿ ಮುಂದಕ್ಕೆ ಸಮಸ್ಯೆ ಆಗದಂತೆ ಮತ್ತು ಯಾವುದೇ ತೊಂದರೆ ಇಲ್ಲದೆ ಕೆಲಸ ಮಾಡುವಂತಾಗಲು ಕಾನೂ‌ನು ರೂಪಿಸಿದ್ದೇವೆ. ಸದ್ಯಕ್ಕೆ ಪರವಾನಗಿ ಕೇಳಿದ್ದ 50 ಮಂದಿಯಲ್ಲಿ 25 ಮಂದಿಗೆ ಪರವಾನಿಗೆ ಕೊಟ್ಟಿದ್ದೇವೆ. ಇಲ್ಲಿಗೆ ಸಮಸ್ಯೆ ಬಹುತೇಕ ಬಗೆಹರಿದಿದೆ ಎಂದು ಬಿಜೆಪಿಯವರಿಗೂ ಗೊತ್ತಿದೆ. 

280 ಇದ್ದ ಸರ್ಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ಹಣವನ್ನು ಬಹುತೇಕ 90 ರೂ.ಗೆ ಇಳಿಸಲಾಗಿದೆ. ಕೇರಳದಲ್ಲಿ ಕಡಿಮೆ ಇರುವುದರಿಂದ ಕಲ್ಲಿನ ವ್ಯಾಪಾರಿಗಳಿಗೆ ಸಮಸ್ಯೆಯಾಗಿತ್ತು. ಖಾಸಗಿ ಜಾಗದಲ್ಲಿ ಕಲ್ಲು ತೆಗೆಯಬೇಕಿದ್ದರೆ, ಇಂತಿಷ್ಟೇ ಆಳ ಹೋಗಬೇಕು, ಕೃಷಿ ಇಲಾಖೆ ಅನುಮತಿ ಬೇಕು ಎಂಬ ಮಾನದಂಡವನ್ನು ತೆಗೆದುಹಾಕಿದ್ದು ಕಂದಾಯ ಇಲಾಖೆಯ ಪರವಾನಗಿ ಪಡೆದರೆ ಮಾತ್ರ ಸಾಕು. ಆದರೆ ಕಲ್ಲು ತೆಗೆದ ಬಳಿಕ ಆ ಜಾಗವನ್ನು ಮುಚ್ಚಬೇಕು. ಮನೆ ಕಟ್ಟುವ ಉದ್ದೇಶಕ್ಕೆ ಮಾತ್ರ ಕಲ್ಲು ತೆಗೆಯಲು ಅವಕಾಶ ನೀಡಲಾಗಿದೆ.  ಕೆಂಪು ಕಲ್ಲು ತೆಗೆಯೋರನ್ನು ಸಭೆಯಲ್ಲಿ ಇರಿಸಿಕೊಂಡೇ ಹೊಸ ನಿಯಮ ಮಾಡಲಾಗಿದೆ ಎಂದು ಖಾದರ್ ಹೇಳಿದರು. 

ಬಿಜೆಪಿಯವರು ಈ ಬಗ್ಗೆ ಪ್ರತಿಭಟನೆಗಿಳಿದ ವಿಚಾರದಲ್ಲಿ, ಬಿಜೆಪಿ ಶಾಸಕರಿಗೂ ಈ ವಿಷಯ ಗೊತ್ತಿದೆ. ಪ್ರತಿಭಟನೆ ಮಾಡಲು ಅವರಿಗೂ ಹಕ್ಕಿದೆ. ಅದಕ್ಕೆ ನಾವು ಆಕ್ಷೇಪ ಮಾಡಲ್ಲ. ಆಡಳಿತ ಮತ್ತು ವಿಪಕ್ಷಗಳ ವಿಚಾರಕ್ಕೆ ನಾನು ಹೋಗಲ್ಲ. ಕಲ್ಲು ತೆಗೆಯಲು ಹೊಸ ನಿಯಮ ಜಾರಿಗೆ ಬಂದ ಬಳಿಕ ಕಲ್ಲಿನ ದರವೂ ಕಡಿಮೆಯಾಗಲಿದೆ ಎಂದರು. ಸಚಿವ ಸಂಪುಟದಲ್ಲಿ ನಿರ್ಣಯ ಆಗಿದ್ದರೆ ಈ ವಿಚಾರ ಯಾಕೆ ಹೊರಗೆ ಬಂದಿಲ್ಲ ಎಂಬ ಪ್ರಶ್ನೆಗೆ, ಆಡಳಿತ ಪಕ್ಷದವರು ಹೇಳಬೇಕಿತ್ತು. ಯಾಕೆ ಸುದ್ದಿಯಾಗಿಲ್ಲ ಎಂದು ಗೊತ್ತಿಲ್ಲ ಎಂದರು. 

ಮರಳಿನ ವಿಚಾರದಲ್ಲಿ ನಾನು ಹಿಂದೆ ಉಸ್ತುವಾರಿ ಆಗಿದ್ದಾಗ ಸ್ಯಾಂಡ್ ಬಜಾರ್ ಏಪ್ ಅಂತ ಜಾರಿಗೆ ತಂದಿದ್ದೆ. ಅದನ್ನು ಮತ್ತೆ ಜಾರಿಗೆ ತರಲು ಅಧಿಕಾರಿಗಳಿಗೆ  
ಹೇಳಿದ್ದು ಉಸ್ತುವಾರಿಗೂ ಸಲಹೆ ನೀಡಿದ್ದೇನೆ. ಸಿಆರ್ ಝೆಡ್ ವ್ಯಾಪ್ತಿಯ ಮರಳು ತೆಗೆಯಲು ಕೇಂದ್ರ ಸರ್ಕಾರದ ನಿಯಮ ಇದೆ, ನಾನ್ ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳು ಇದೆ. ನಮ್ಮಲ್ಲಿ ಎಂ ಸ್ಯಾಂಡ್ ತಯಾರಿಸುವ ಫ್ಯಾಕ್ಟರಿ ಇಲ್ಲದ ಕಾರಣ ಮತ್ತು ಎಂ ಸ್ಯಾಂಡ್ ನಮ್ಮಲ್ಲಿ ಕಟ್ಟಡ ನಿರ್ಮಾಣಕ್ಕೆ ಪೂರಕ ಆಗಿಲ್ಲದ ಕಾರಣ ಮರಳನ್ನೇ ಬಳಸಬೇಕಿದೆ. ಸದ್ಯಕ್ಕೆ ವಿವಿಧ ಕಡೆಗಳಲ್ಲಿ ಸೀಜ್ ಆಗಿರುವ ಹೊಯ್ಗೆ ಇದೆ‌. ಸೀಜ್ ಆಗಿರುವ ಮರಳನ್ನು ಸಾರ್ವಜನಿಕ ಕೆಲಸಗಳಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ಸರ್ಕಾರದ ಕೆಲಸಕ್ಕೆ ಅಗತ್ಯ ಇದ್ದವರು ಗಣಿ ಇಲಾಖೆ ಜಿಲ್ಲಾ ಡಿಡಿಗೆ ಅರ್ಜಿ ಸಲ್ಲಿಸಬೇಕು. ಅವರ ಮೂಲಕ ಬೇಕಾದಷ್ಟು ಮರಳು ಪಡೆಯಬಹುದು ಎಂದರು.

A separate policy has been framed for laterite stone quarrying in the coastal region, and the State Cabinet has approved it, said Legislative Assembly Speaker U.T. Khader. Speaking to the media, he said the new law will soon come into effect, and as part of this, 25 contractors have already been granted licenses.