Ex IPS Kempaiah, Professor Umeshchandra, Mangalore: ಕುರುಬ ಸಮುದಾಯ ಎಸ್ಟಿ ಸೇರಿಸಲು ಹುನ್ನಾರ, ನಕಲಿ ಸರ್ಟಿಫಿಕೇಟಲ್ಲಿ ಪಾಸಾಗಿದ್ದ ಕೆಂಪಯ್ಯನೇ ರೂವಾರಿ, ಸಿದ್ದರಾಮಯ್ಯ ಪಕ್ಷಪಾತ ಧೋರಣೆ ; ಪ್ರಾಧ್ಯಾಪಕ ಉಮೇಶ್ಚಂದ್ರ ಆರೋಪ

16-09-25 07:02 pm       Mangalore Correspondent   ಕರಾವಳಿ

ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದಾಗಲೂ ಸ್ವಜನ ಪಕ್ಷಪಾತ ಮಾತ್ರ ಮಾಡಿದ್ದಾರೆ. ಈ ಸಲ ಕುರುಬ ಸಮುದಾಯವನ್ನು ಅಕ್ರಮವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹುನ್ನಾರ ನಡೆಸಿದ್ದಾರೆ. ಇದರ ಹಿಂದಿರುವುದು ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ. ಈ ವ್ಯಕ್ತಿ ನಕಲಿ ಸರ್ಟಿಫಿಕೇಟ್ ಮಾಡಿರುವುದು ಸುಪ್ರೀಂ ಕೋರ್ಟಿನಲ್ಲಿ ಸಾಬೀತಾಗಿದೆ.

ಮಂಗಳೂರು, ಸೆ.16 : ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದಾಗಲೂ ಸ್ವಜನ ಪಕ್ಷಪಾತ ಮಾತ್ರ ಮಾಡಿದ್ದಾರೆ. ಈ ಸಲ ಕುರುಬ ಸಮುದಾಯವನ್ನು ಅಕ್ರಮವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹುನ್ನಾರ ನಡೆಸಿದ್ದಾರೆ. ಇದರ ಹಿಂದಿರುವುದು ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ. ಈ ವ್ಯಕ್ತಿ ನಕಲಿ ಸರ್ಟಿಫಿಕೇಟ್ ಮಾಡಿರುವುದು ಸುಪ್ರೀಂ ಕೋರ್ಟಿನಲ್ಲಿ ಸಾಬೀತಾಗಿದೆ. ಈಗ ಎಸ್.ಟಿ ಸಮುದಾಯಗಳಿಗೆ ಮಣ್ಣೆರಚಿ ಮೀಸಲಾತಿ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಉಮೇಶ್ಚಂದ್ರ ಆರೋಪಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ರಾಜ್ಯ ಸರಕಾರದ ವಿರುದ್ಧವೇ ಆರೋಪಗಳನ್ನು ಮಾಡಿದ ಅವರು, ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವ ಹುನ್ನಾರದೊಂದಿಗೆ ಮುಖ್ಯಮಂತ್ರಿ ಸಭೆ ಏರ್ಪಡಿಸಿದ್ದಾರೆ. ಈಗಾಗಲೇ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದ್ದು ಅದರ ಮೇಲೆ ಸಭೆ ನಡೆಸುತ್ತಿದ್ದಾರೆ. ಇದರ ನಡುವೆ, ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಮಹಿಳಾ ಲೇಖಕಿಯರನ್ನು ಎತ್ತಿಕಟ್ಟಿ ಧರ್ಮಸ್ಥಳ ವಿಚಾರದಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆಸಿದ್ದು, ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆಯನ್ನೂ ನಡೆಸಿದ್ದಾರೆ.

ಕೇಳಿದವರಿಗೆಲ್ಲ ಎಸ್.ಟಿ ಸರ್ಟಿಫಿಕೇಟ್ ನೀಡಲು ಅದು ಸಿನಿಮಾ ಟಿಕೆಟ್ ಅಲ್ಲ. ಆದರೆ ಸಿದ್ದರಾಮಯ್ಯ ಮತ್ತು ಅವರ ಸಹವರ್ತಿಗಳು ಈ ಪ್ರಯತ್ನ ಮುಂದುವರಿಸಿದ್ದಾರೆ. ಈಗಾಗಲೇ 40ರಿಂದ 50 ಸಾವಿರದಷ್ಟು ಕುರುಬ ಸಮುದಾಯದವರು ಎಸ್.ಟಿ ಎಂದು ಸುಳ್ಳು ಪ್ರಮಾಣ ಪತ್ರ ಪಡೆದಿದ್ದಾರೆ. ಆದರೆ ಹಕ್ಕನ್ನು ದಕ್ಕಿಸಿಕೊಳ್ಳಲಾಗದೆ ಸೋತಿದ್ದಾರೆ. ಕೆಂಪಯ್ಯ, ನಟರಾಜ್ ಹುಳಿಯಾರ್, ಎಸ್.ಜಿ ಸಿದ್ದರಾಮಯ್ಯ, ಬಿಕೆ ರವಿ ಈ ಹುನ್ನಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಹಲವಾರು ಮಂದಿ ನಕಲಿ ಸರ್ಟಿಫಿಕೇಟ್ ಮಾಡಿ ಸರ್ಕಾರಿ ಸೌಲಭ್ಯ ಪಡೆದಿರುವುದು ಪತ್ತೆಯಾಗಿದೆ. ವಕೀಲೆ ಪ್ರಮೀಳಾ ನೇಸರ್ಗಿಯವರು ಎರಡು ಲಕ್ಷ ಜನ ನಕಲಿ ಸರ್ಟಿಫಿಕೇಟ್ ಪಡೆದಿದ್ದಾರೆ ಎಂದು ಹೇಳಿದ್ದರು.

ಕೆಂಪಯ್ಯ ನಕಲಿ ಸರ್ಟಿಫಿಕೇಟಿನಲ್ಲೇ ತೇರ್ಗಡೆಯಾಗಿ, ಕೆಲಸ ಗಿಟ್ಟಿಸಿಕೊಂಡಿದ್ದಲ್ಲದೆ ಆನಂತರ ಕೇಸು ದಾಖಲಾದಾಗ ತಲೆಮರೆಸಿಕೊಂಡು ಆಬಳಿಕ ಗೃಹ ಸಚಿವರ ಪಿಎ ಕೂಡ ಆಗಿದ್ದರು. ಅದೇ ಸಂದರ್ಭದಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿತ್ತು. ಆನಂತರ, ಗೌರಿ ಹತ್ಯೆ ಆರೋಪಿಗಳಿಗೆ ಜಾಮೀನು ಕೂಡ ಸಿಗುವಂತಾಗಿತ್ತು. ಇದೆಲ್ಲ ಒಂದಕ್ಕೊಂದು ಸಂಬಂಧ ಇದೆಯೆಂದು ಯಾಕೆ ಮಾಧ್ಯಮಗಳು ತೋರಿಸುತ್ತಿಲ್ಲ. ದರ್ಶನ್, ಗಾಯತ್ರಿ ಅಂತ ಸಿನಿಮಾ ನಟರ ಬಗ್ಗೆ ತೋರಿಸುತ್ತೀರಿ, ಜ್ವಲಂತ ಸಮಸ್ಯೆಗಳ ಬಗ್ಗೆ ಯಾಕೆ ತೋರಿಸಲ್ಲ ಎಂದು ಪ್ರಶ್ನಿಸಿದರು.

ವಿಸಿಯವರು ಅಡ್ಮಿಶನ್ಗೆ ಬಿಡಲಿಲ್ಲ

ನೀವು ಯುನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ವಿಭಾಗವೇ ಮುಚ್ಚುವ ಸ್ಥಿತಿಯಾಗಿದೆ, ಅದರ ಬಗ್ಗೆ ಮಾತನಾಡುತ್ತಿಲ್ಲ, ಅಲ್ಲಿನ ಅಕ್ರಮದ ಬಗ್ಗೆ ಮಾತಾಡುತ್ತಿಲ್ಲ ಯಾಕೆಂದು ಪ್ರಶ್ನೆ ಮಾಡಿದಾಗ, ಹಿಂದಿನ ಕುಲಪತಿಯವರು ಕಳೆದ ವರ್ಷ ಪತ್ರಿಕೋದ್ಯಮ ವಿಭಾಗದಲ್ಲಿ ಏಳು ಮಂದಿ ಇದ್ದರೂ ಅಡ್ಮಿಶನ್ ಮಾಡಲು ಬಿಡಲಿಲ್ಲ. ಈ ಬಾರಿ ಹೇಗಾದರೂ ಮಾಡಿ ಅಡ್ಮಿಶನ್ ಮಾಡಿಸುತ್ತೇನೆ, ಈ ಸಲ ವಿಸಿಯವರ ಪರ್ಮಿಶನ್ ಕೇಳಿದ್ದೇನೆ, ಮೂರು ಮಂದಿ ವಿದ್ಯಾರ್ಥಿಗಳನ್ನು ಈಗ ಕರೆತಂದಿದ್ದೇನೆ ಎಂದರು. ಬೇರೆ ಕಡೆ ಪತ್ರಿಕೋದ್ಯಮಕ್ಕೆ ವಿದ್ಯಾರ್ಥಿಗಳಿರುವಾಗ ನಿಮ್ಮಲ್ಲಿ ಯಾಕೆ ಬರುತ್ತಿಲ್ಲ ಎಂದಾಗ, ನಮ್ಮಲ್ಲಿ ವಿದ್ಯಾರ್ಥಿಗಳು ಕಡಿಮೆ ಇದ್ದಾರೆಂದು ಸ್ಟುಡಿಯೋ ಮಾಡಲು ಬಿಟ್ಟಿಲ್ಲ. ಅಲ್ಲದೆ, ಕಳೆದ ಬಾರಿ ನಮ್ಮ ವಿಭಾಗಕ್ಕೆ ಮಾತ್ರ 33 ಸಾವಿರ ಶುಲ್ಕ ಮಾಡಿದ್ದಾರೆ ಎಂದರು.

Professor Umeshchandra, faculty member in the Department of Mass Communication and Journalism at Mangalore University, has made serious allegations against the Karnataka state government, accusing it of attempting to illegitimately include the Kuruba community in the Scheduled Tribes (ST) list.