Kadri, Mangalore, Smart City: ‘ಸ್ಮಾರ್ಟ್ ಸಿಟಿ’ ದುಡ್ಡಿಗಿಲ್ಲ ಗ್ಯಾರಂಟಿ ; ಕದ್ರಿ ಪಾರ್ಕ್ ಆವರಣದಲ್ಲಿ ಕಾಂಕ್ರೀಟನ್ನೇ ಒಡೆದುಬಿಟ್ಟ ಅಧಿಕಾರಿಗಳು, ಕಂಪೌಂಡ್ ಕೆಡವಿ ಸರ್ಕಿಟ್ ಹೌಸ್ ಭದ್ರತೆಗೂ ಧಕ್ಕೆ! 

19-09-25 07:53 pm       Mangalore Correspondent   ಕರಾವಳಿ

ನಗರದ ಕದ್ರಿ ಪಾರ್ಕ್ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸೌಂದರ್ಯೀಕರಣ ಕಾಮಗಾರಿ ನಡೆದು ಎರಡು ವರ್ಷ ಕಳೆಯಿತು. ಇನ್ನೂ ಅಲ್ಲಿನ ಶಾಪ್ ಗಳನ್ನು ವ್ಯಾಪಾರಸ್ಥರಿಗೆ ಕೊಟ್ಟಿಲ್ಲ.

ಮಂಗಳೂರು, ಸೆ.19: ನಗರದ ಕದ್ರಿ ಪಾರ್ಕ್ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸೌಂದರ್ಯೀಕರಣ ಕಾಮಗಾರಿ ನಡೆದು ಎರಡು ವರ್ಷ ಕಳೆಯಿತು. ಇನ್ನೂ ಅಲ್ಲಿನ ಶಾಪ್ ಗಳನ್ನು ವ್ಯಾಪಾರಸ್ಥರಿಗೆ ಕೊಟ್ಟಿಲ್ಲ. ಅವು ಹಾಳಾಗಿ ಹೋದರೂ ಚಿಂತಿಲ್ಲ, ಸಾರ್ವಜನಿಕರ ಉಪಯೋಗಕ್ಕೆ ಕೊಡೋದಿಲ್ಲ ಎಂದು ಅಧಿಕಾರಸ್ಥರು ನಿರ್ಧಾರ ಮಾಡಿದಂತಿದ್ದಾರೆ.

ಈ ನಡುವೆ, ಮಂಗಳೂರು ಆಕಾಶವಾಣಿ ಕಚೇರಿ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿಯಿಂದ ಮಾಡಿರುವ ಫುಟ್ ಪಾತ್, ಹಾಕಿರುವ ಕಾಂಕ್ರೀಟ್ ಮತ್ತು ಗ್ರಾನೈಟ್ ಸ್ಲಾಬ್ ಗಳನ್ನು ಒಡೆದು ಹಾಕಲಾಗಿದೆ. ಅಲ್ಲಿಂದ ನಡುವೆ ರಸ್ತೆ ಮಾಡುವುದಕ್ಕಾಗಿ ಕಾಂಕ್ರೀಟ್ ಫುಟ್ ಪಾತ್, ಆವರಣ ಗೋಡೆ ಎಲ್ಲವನ್ನೂ ಒಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ತಿಳಿದುಬಂದಿದೆ. ಕದ್ರಿ ಸರ್ಕಿಟ್ ಹೌಸ್ ಸಂಕೀರ್ಣದ ಒಳಗಡೆಯಲ್ಲಿ ಅರಣ್ಯ ಇಲಾಖೆಯ ಕಚೇರಿಗಾಗಿ ಹೊಸತಾಗಿ ಬಂಗಲೆ ಕಟ್ಟಲಾಗಿದೆ. ಹೊಸ ಅರಣ್ಯ ಭವನಕ್ಕೆ ತೆರಳಲು ರಸ್ತೆ ಮಾಡುವುದಕ್ಕಾಗಿ ಇದೀಗ ಅಲ್ಲಿನ ಆವರಣ ಗೋಡೆ, ಕಾಂಕ್ರೀಟ್ ಮತ್ತು ಗ್ರಾನೈಟ್ ಸ್ಲಾಬ್ ಗಳನ್ನು ಒಡೆಯಲು ಮುಂದಾಗಿದ್ದಾರೆ.

 

ಅಲ್ಲಿ ಹಾಕಿರುವ ಕಾಂಕ್ರೀಟ್ ಬೆಂಚುಗಳು, ಗ್ರಾನೈಟ್ ಮುಚ್ಚಿದ್ದ ಸಂಕೀರ್ಣವನ್ನು ಒಡೆದು ತೆಗೆಯಲಾಗಿದ್ದು ಆಮೂಲಕ ಸಾರ್ವಜನಿಕರ ದುಡ್ಡನ್ನು ಹಾಳು ಮಾಡುತ್ತಿದ್ದಾರೆ. ಅರಣ್ಯ ಭವನದ ಕಚೇರಿಗಾಗಿ ಎರಡು ವರ್ಷಗಳ ಹಿಂದೆಯೇ ಅಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಅಲ್ಲಿಗೆ ತೆರಳಲು ಒಳಗಿನಿಂದ ರಸ್ತೆ ಮಾರ್ಗ ಇದ್ದರೂ, ಈಗ ಮುಂಭಾಗದಿಂದಲೇ ರಸ್ತೆ ಮಾಡಲು ಮುಂದಾಗಿದ್ದಾರೆ. ಆಕಾಶವಾಣಿ ಮುಂದಿನಿಂದಲೇ ಎಂಟ್ರಿ ಕೊಡಬೇಕು ಎಂದಿದ್ದರೆ ಸ್ಮಾರ್ಟ್ ಸಿಟಿಯ ಕಾಮಗಾರಿ ಸಂದರ್ಭದಲ್ಲೇ ಮಾಡಬಹುದಿತ್ತು. ಆಗಲೇ ಮಾಡುತ್ತಿದ್ದರೆ, ಈಗ ಕಾಂಕ್ರೀಟ್ ಗೋಡೆ, ಸ್ಲಾಬ್ ಗಳನ್ನು ಒಡೆಯುವ ಸ್ಥಿತಿ ಬರುತ್ತಿರಲಿಲ್ಲ.

ಭ್ರಷ್ಟ ಅಧಿಕಾರಿ ವರ್ಗಕ್ಕೆ ಕಾಂಕ್ರೀಟ್ ಒಡೆಯುವುದು, ಕಂಪೌಂಡ್ ಗೋಡೆ, ಅಲ್ಲಿನ ಸೌಂದರ್ಯಕ್ಕೆ ಅಳವಡಿಸಿರುವ ಜೋಡಣೆಗಳನ್ನು ಒಡೆಯುವುದು, ಅದರಿಂದ ಸಾರ್ವಜನಿಕರ ದುಡ್ಡು ಪೋಲಾಗುತ್ತದೆ ಎನ್ನುವ ಕಿಂಚಿತ್ ಕಾಳಜಿ ಇದ್ದಂತಿಲ್ಲ. ಅಧಿಕಾರಿ ವರ್ಗದವರು ತಾವು ಹೇಳಿದ್ದೇ ನಡೆಯಬೇಕು ಎನ್ನುವ ಅಹಂನಲ್ಲಿದ್ದಾರೆ. ಇದಕ್ಕಾಗಿ ಸರ್ಕಿಟ್ ಹೌಸ್ ಆವರಣದ ಕಂಪೌಂಡ್ ಗೋಡೆ, ಹೊರಗಿನ ಕಾಂಕ್ರೀಟ್, ಫುಟ್ ಪಾತ್ ಎಲ್ಲವನ್ನೂ ಕಡಿದು ಹಾಕಿ ರಸ್ತೆ ಮಾಡಲು ಹೊರಟಿದ್ದಾರೆ. ಇದರಿಂದ ಸರ್ಕಿಟ್ ಹೌಸ್ ಆವರಣದ ಗೋಡೆಯನ್ನು ಒಡೆದು ಭದ್ರತೆಗೂ ಸವಾಲೊಡ್ಡಲಿದ್ದಾರೆ.

ಸಾಮಾನ್ಯವಾಗಿ ಗಣ್ಯರು, ವಿಶೇಷ ಅತಿಥಿಗಳು ಬಂದರೆ ಇದೇ ಕದ್ರಿ ಸರ್ಕಿಟ್ ಹೌಸ್ ನಲ್ಲಿ ಉಳಿದುಕೊಳ್ಳುತ್ತಾರೆ. ಕಳೆದ ಬಾರಿ ರಾಷ್ಟ್ರಪತಿ, ರಾಜ್ಯಪಾಲರು ಇದೇ ಬಂಗಲೆಯಲ್ಲಿ ಉಳಿದುಕೊಂಡಿದ್ದರು. ಗಣ್ಯರು ಬಂದ ಸಂದರ್ಭದಲ್ಲಿ ಆವರಣಕ್ಕೆ ಯಾರೂ ಹೋಗದಂತೆ ಮತ್ತು ಒಳಗಡೆ ಹೋಗುವ ಜನರನ್ನು ತಪಾಸಣೆ ಮಾಡಲು ವಿಶೇಷ ಭದ್ರತೆ ಏರ್ಪಡಿಸಲಾಗುತ್ತದೆ. ಸುತ್ತ ಭದ್ರತೆ ಇರುವುದರಿಂದ ಪ್ರಮುಖ ಗೇಟ್ ನಲ್ಲಿ ಮಾತ್ರ ತಪಾಸಣೆ ಕೈಗೊಳ್ಳುವುದು ನಡೆದಿತ್ತು. ಆದರೆ ಈಗ ಸರ್ಕಿಟ್ ಹೌಸ್ ಆವರಣದೊಳಗಡೆ ಅರಣ್ಯ ಇಲಾಖೆಯ ಕಚೇರಿ ಮಾಡುತ್ತಿದ್ದು, ಭದ್ರವಾಗಿದ್ದ ಆವರಣ ಗೋಡೆಯನ್ನೇ ಒಡೆದು ಹಾಕುತ್ತಿದ್ದಾರೆ. 

ಆಮೂಲಕ ಒಂದೆಡೆ ಸ್ಮಾರ್ಟ್ ಸಿಟಿಯ ದುಡ್ಡು ಪೋಲು, ಮತ್ತೊಂದೆಡೆ ಆವರಣ ಗೋಡೆ ಒಡೆದು ಭದ್ರತೆಗೂ ಧಕ್ಕೆ ತರುತ್ತಿದ್ದಾರೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಜಿಎಂ ಅರುಣಪ್ರಭರಲ್ಲಿ ಕೇಳಿದಾಗ, ಅರಣ್ಯ ಇಲಾಖೆಯ ಕಚೇರಿ ಮಾಡುತ್ತಿದ್ದಾರೆ, ಹೊಸತಾಗಿ ಕಚೇರಿ ಆಗಿರುವುದರಿಂದ ಎದುರು ಭಾಗದಿಂದಲೇ ರಸ್ತೆ ಮಾಡಲು ಕಾಂಕ್ರೀಟ್ ಒಡೆಯುತ್ತಿದ್ದಾರೆ. ನಾವು ಪಾಲಿಕೆಯವರಿಗೆ ಬಿಟ್ಟುಕೊಟ್ಟಿದ್ದೇವೆ ಎಂದು ಇದೆಲ್ಲ ಮಾಮೂಲಿ ಎನ್ನುವಂತೆ ಹೇಳುತ್ತಿದ್ದಾರೆ. ಕಾಂಕ್ರೀಟ್ ಒಡೆಯೋದು, ರಸ್ತೆ ಮಾಡೋದು ಎಲ್ಲ ಕಾಮನ್ ಎನ್ನುವಂತಿದ್ದಾರೆ. ಪಾಲಿಕೆ ಮತ್ತು ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿ ಕೊಡು ಕೊಳ್ಳುವಿಕೆಯ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯೂ ಇದೆ.

ಮಂಗಳೂರಿನಲ್ಲಿ ಕಾಂಕ್ರೀಟ್ ರಸ್ತೆ ಅಗೆದು ಪೈಪ್ ಲೈನ್ ಹುಡುಕುವುದು, ಮತ್ತೆ ನೀರು ಲೀಕೇಜ್ ಆದರೆ ಕಾಂಕ್ರೀಟ್ ರಸ್ತೆಯನ್ನು ಉದ್ದಕ್ಕೂ ಅಗೆದು ತಿಂಗಳ ಕಾಲ ಹಾಗೇ ತೆರೆದಿಡುವುದು ಕಾಮನ್. ಜಡ್ಡುಗಟ್ಟಿದ ಅಧಿಕಾರಿ ವರ್ಗ, ಎಲ್ಲದರಲ್ಲೂ ಭ್ರಷ್ಟಾಚಾರವನ್ನೇ ಲೆಕ್ಕ ಹಾಕುವವರು ಇದ್ದರೆ ಸಾರ್ವಜನಿಕರ ದುಡ್ಡು ಎಂಬ ಕಾಮನ್ ಸೆನ್ಸ್ ಎಲ್ಲಿ ಬರಬೇಕು ಹೇಳಿ.

It has been over two years since beautification works were carried out under the Smart City project in front of Kadri Park. Yet, the shops constructed under this initiative remain unallocated to vendors, and authorities appear indifferent even as the structures begin to deteriorate. Despite being unusable by the public, there's no plan to hand them over either.