ಭಾರತೀಯ ನೌಕಾಪಡೆ ರಕ್ಷಣೆ, ಆತಂಕದಿಂದ ಪಾರಾಗಿದ್ದೇವೆ ; ಹೊರ್ಮುಜ್ ಸಂಧಿಯಲ್ಲಿ ಸಿಕ್ಕಿಬಿದ್ದಿರುವ ಎಲ್ಪಿಜಿ ಹಡಗಿನ ನಾವಿಕನ ಮಾತು

25-03-26 05:23 pm       HK News Staffer   ಕರಾವಳಿ

ಅಮೆರಿಕ- ಇರಾನ್ ಸಂಘರ್ಷದ ಪರಿಣಾಮ ಹೊರ್ಮುಜ್ ಜಲಸಂಧಿಯಲ್ಲಿ ಬಾಕಿಯಾಗಿದ್ದ ಮಂಗಳೂರು ಮೂಲದ ನಾವಿಕನಿರುವ ಎಲ್ ಪಿಜಿ ಹೊತ್ತ ಹಡಗು ಸೇಫ್ ಆಗಿದ್ದು, ಸದ್ಯಕ್ಕೆ ಭಾರತೀಯ ನೌಕಾಪಡೆಯ ಎಸ್ಕಾರ್ಟ್ ನಲ್ಲಿದೆ. ಕೆಲವೇ ದಿನಗಳಲ್ಲಿ ತಾಯ್ನಾಡು ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Photo credits : Indian Express

ಮಂಗಳೂರು, ಮಾರ್ಚ್ 25: ಅಮೆರಿಕ- ಇರಾನ್ ಸಂಘರ್ಷದ ಪರಿಣಾಮ ಹೊರ್ಮುಜ್ ಜಲಸಂಧಿಯಲ್ಲಿ ಬಾಕಿಯಾಗಿದ್ದ ಮಂಗಳೂರು ಮೂಲದ ನಾವಿಕನಿರುವ ಎಲ್ ಪಿಜಿ ಹೊತ್ತ ಹಡಗು ಸೇಫ್ ಆಗಿದ್ದು, ಸದ್ಯಕ್ಕೆ ಭಾರತೀಯ ನೌಕಾಪಡೆಯ ಎಸ್ಕಾರ್ಟ್ ನಲ್ಲಿದೆ. ಕೆಲವೇ ದಿನಗಳಲ್ಲಿ ತಾಯ್ನಾಡು ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

20 ದಿನಗಳಿಂದ ಹೊರ್ಮುಜ್ ಜಲಸಂಧಿಯಲ್ಲಿ ಎಲ್ ಪಿಜಿ ಹೊತ್ತ ಹಡಗು ಬಾಕಿಯಾಗಿದ್ದು ಅದರಲ್ಲಿರುವ ಸಿಬಂದಿ ಆತಂಕಕ್ಕೀಡಾಗಿದ್ದರು. ತಾವಿರುವ ಹಡಗಿನ ಮೇಲಿನಿಂದಲೇ ಮಿಸೈಲ್ ತೂರಾಟ ಆಗುತ್ತಿದ್ದು, ಜೀವ ಭಯ ಉಂಟಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಭಾರತದ ನೌಕಾಪಡೆ ಅಲ್ಲಿಗೆ ತೆರಳಿದ್ದು ಅಲ್ಲಿರುವ ತೈಲ ಹಡಗುಗಳಿಗೆ ರಕ್ಷಣೆ ಒದಗಿಸಿದೆ.

ಈಗ ಒಮಾನ್ ತೀರದ ಸಮುದ್ರದಲ್ಲಿ ನಿಲ್ಲಿಸಲಾಗಿದ್ದು ಅಪಾಯಕಾರಿ ಜಾಗದಿಂದ ತೆರವು ಮಾಡಲಾಗಿದೆ. ನಾವೀಗ ಎಲ್ಲರೂ ಸೇಫ್ ಆಗಿದ್ದೇವೆ, ಭಾರತೀಯ ನೌಕಾಪಡೆ ರಕ್ಷಣೆ ಒದಗಿಸಿದೆ. ನಮ್ಮ ಜೀವ ಪಾರು ಮಾಡಿದ ಕ್ಷಣ ಇದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ತಾಯ್ನಾಡು ತಲುಪುವ ನಿರೀಕ್ಷೆಯಿದೆ ಎಂದು ಅದರಲ್ಲಿರುವ ಮಂಗಳೂರಿನ ನಾವಿಕರೊಬ್ಬರು ತಿಳಿಸಿದ್ದಾರೆ. ಅಲ್ಲೀಗ ಇನ್ನೂ 20 ಭಾರತ ಮೂಲದ ಹಡಗುಗಳಿದ್ದು, ಗ್ರೀನ್ ಸಿಗ್ನಲ್ ಬರುವುದಕ್ಕಾಗಿ ಕಾಯುತ್ತಿವೆ ಎಂದವರು ಹೇಳಿದ್ದಾರೆ.

ಇದಕ್ಕೂ ಮುನ್ನ ಅವರಿದ್ದ ಜಾಗಕ್ಕಿಂತ 200 ಮೀಟರ್ ದೂರದಲ್ಲಿ ಮಿಸೈಲ್ ಸ್ಫೋಟ ಆಗಿದ್ದ ಅನುಭವ ಹೇಳಿಕೊಂಡಿದ್ದರು. ಮಧ್ಯ ಪ್ರಾಚ್ಯದ ಬಂದರು ಒಂದರಲ್ಲಿ ತೈಲ ಲೋಡಿಂಗ್ ಆಗುತ್ತಿದ್ದಾಗಲೇ 200 ಮೀಟರ್ ದೂರದಲ್ಲಿ ಡ್ರೋಣ್, ಮಿಸೈಲ್ ಸ್ಫೋಟ ಆಗಿತ್ತು. ನಾವು ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದೆವು. ಆದರೆ ನಾವು ಲೋಡಿಂಗನ್ನು ನಿಲ್ಲಿಸಿರಲಿಲ್ಲ. ನಂತರದ ಎರಡು ದಿನಗಳಲ್ಲಿ ಹೊರ್ಮುಜ್ ತಲುಪಿದ್ದು ಅಲ್ಲಿ ಹಡಗು ನಿಲ್ಲಿಸಲು ಸೂಚಿಸಿದ್ದರು ಎಂದು ಮಾಧ್ಯಮಕ್ಕೆ ತಿಳಿಸಿದ್ದರು. ಭದ್ರತಾ ಕಾರಣದಿಂದ ತಮ್ಮ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.