ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಇಲ್ಲ , ಶಿಕ್ಷಕರ ನೇಮಕಾತಿ ಇಲ್ಲ ; ಹಿಜಬ್ ಮೂಲಕ ಮಕ್ಕಳ ಮನಸ್ಸಿನಲ್ಲಿ ಭೇದಭಾವ, ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಕಿಡಿ

16-05-26 09:19 pm       HK News Staffer   ಕರಾವಳಿ

ಶಾಲಾ-ಕಾಲೇಜುಗಳಲ್ಲಿ ಹಿಜಬ್ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಮಕ್ಕಳ ಮನಸ್ಸಿನಲ್ಲಿ ದ್ವೇಷ ಹಾಗೂ ಭೇದಭಾವ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್‌ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಉಡುಪಿ, ಮೇ 16: ಶಾಲಾ-ಕಾಲೇಜುಗಳಲ್ಲಿ ಹಿಜಬ್ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಮಕ್ಕಳ ಮನಸ್ಸಿನಲ್ಲಿ ದ್ವೇಷ ಹಾಗೂ ಭೇದಭಾವ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್‌  ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಉಡುಪಿಯಲ್ಲಿ ಮಾತನಾಡಿದ ಅವರು, “ಸರ್ಕಾರದ ಓಲೈಕೆ ರಾಜಕಾರಣ ಪರಮಾವಧಿಗೆ ತಲುಪಿದೆ. ಶಿಶುಪಾಲನ ಪಾಪದ ಕೊಡ ತುಂಬಿದಾಗ ಏನಾಯ್ತು ಅನ್ನೋದನ್ನ ಪುರಾಣಗಳಲ್ಲಿ ಕೇಳಿದ್ದೇವೆ. ಅದೇ ರೀತಿ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣಕ್ಕೂ 2028ರಲ್ಲಿ ಜನ ತಕ್ಕ ಉತ್ತರ ಕೊಡುತ್ತಾರೆ” ಎಂದು ಕಿಡಿಕಾರಿದರು.

ಟಿಪ್ಪು ಜಯಂತಿ, ವಕ್ಫ್ ಆಸ್ತಿ ವಿಚಾರ, ಅಲ್ಪಸಂಖ್ಯಾತರ ಯೋಜನೆಗಳಿಗೆ ಅನುದಾನ ಹಾಗೂ ಈಗ ಹಿಜಬ್ ವಿಚಾರವನ್ನು ಉಲ್ಲೇಖಿಸಿದ ಅವರು, “ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಇಲ್ಲ, ಶಿಕ್ಷಕರ ನೇಮಕಾತಿ ಇಲ್ಲ, ವಿದ್ಯಾರ್ಥಿಗಳಿಗೆ ಸೈಕಲ್ ಮತ್ತು ಸಾಕ್ಸ್ ನೀಡಲು ಸಾಧ್ಯವಾಗದ ಸರ್ಕಾರ ಈಗ ಹಿಜಬ್ ವಿಚಾರವನ್ನು ಮುಂದಿಟ್ಟುಕೊಂಡಿದೆ” ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನಿಸಿದ ಸುನೀಲ್ ಕುಮಾರ್, “ಮುಖ್ಯಮಂತ್ರಿಗಳಿಗೆ ಶಿಕ್ಷಣ ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗಿಂತ ಹಿಜಬ್ ವಿಚಾರವೇ ಪ್ರಮುಖವಾಗಿದೆ. ಶಿಕ್ಷಕರ ನೇಮಕಾತಿ, ಪಠ್ಯಪುಸ್ತಕ ವಿತರಣೆ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಸರ್ಕಾರದ ಆದ್ಯತೆ ಆಗಬೇಕಿತ್ತು. ಆದರೆ ಸರ್ಕಾರಕ್ಕೆ ಶಿಕ್ಷಣ ಇಲಾಖೆಯ ಬಗ್ಗೆ ಆಸಕ್ತಿಯೇ ಇಲ್ಲ” ಎಂದು ಆರೋಪಿಸಿದರು.

ಇದೇ ವೇಳೆ ರಾಜ್ಯ ಶಿಕ್ಷಣ ನೀತಿ ಜಾರಿಗೆ ವಿಳಂಬವಾಗುತ್ತಿರುವ ವಿಚಾರವನ್ನೂ ಪ್ರಸ್ತಾಪಿಸಿದ ಅವರು, “2023ರಲ್ಲೇ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರ್ತೇವೆ ಎಂದು ಸರ್ಕಾರ ಘೋಷಿಸಿತ್ತು. ಎನ್‌ಇಪಿ ರದ್ದು ಮಾಡಿ ಎಸ್‌ಇಪಿ ತರುತ್ತೇವೆ ಎಂದರು. ಆದರೆ ಮೂರು ವರ್ಷವಾದರೂ ಯಾವುದೇ ನೀತಿ ಜಾರಿಯಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಜಬ್ ವಿಚಾರದ ಕುರಿತು ಮತ್ತೊಮ್ಮೆ ತೀವ್ರ ಪ್ರತಿಕ್ರಿಯೆ ನೀಡಿದ ಅವರು, “ಶಾಲೆಗಳು ಸಮಾನತೆಯ ಕೇಂದ್ರವಾಗಿರಬೇಕು. ಆದರೆ ಹಿಜಬ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಮಕ್ಕಳ ಮನಸ್ಸಿನಲ್ಲಿ ವಿಭಜನೆ ಉಂಟುಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದ ನೀತಿ ‘ಒಡೆದು ಆಳುವ’ ರಾಜಕಾರಣವಾಗಿದೆ. ಜಿಲ್ಲೆ, ಜಾತಿ, ಪ್ರಾಂತ್ಯದ ಬಳಿಕ ಈಗ ಶಾಲಾ ಮಕ್ಕಳನ್ನೇ ವಿಭಜಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಮಾತನಾಡಿದ ಸುನೀಲ್ ಕುಮಾರ್, “ರಾಜ್ಯ ಸರ್ಕಾರವೇ ಮೊದಲು ಇಂಧನದ ಮೇಲೆ ಮೂರುರಿಂದ ಐದು ರೂಪಾಯಿ ತೆರಿಗೆ ಹೆಚ್ಚಿಸಿತ್ತು. ಆಗ ಯಾವ ಯುದ್ಧ ಇತ್ತು? ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ ಇರುವ ಕಾರಣ ಬೆಲೆ ಏರಿಕೆ ಆಗುತ್ತಿದೆ. ಪರಿಸ್ಥಿತಿ ಸುಧಾರಿಸಿದರೆ ಬೆಲೆ ಕೂಡ ಕಡಿಮೆಯಾಗುತ್ತದೆ” ಎಂದು ಹೇಳಿದರು.

ಇದೇ ವೇಳೆ ವ್ಯಂಗ್ಯವಾಗಿ ಮಾತನಾಡಿದ ಅವರು, “ಸಿದ್ದರಾಮಯ್ಯ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಅಂತರಾಷ್ಟ್ರೀಯ ಸಂಪರ್ಕಗಳು ಹೆಚ್ಚು ಇದ್ದರೆ ಟ್ರಂಪ್ ಜೊತೆ ಮಾತನಾಡಿ ಯುದ್ಧ ನಿಲ್ಲಿಸಲಿ” ಎಂದು ಟೀಕಿಸಿದರು.