ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್; ವೈದ್ಯರ ಕೊರತೆ ಬಗ್ಗೆ ಲೆಕ್ಕ ಇಟ್ಟಿಲ್ವಾ..? ಕರೆಕ್ಟ್ ಟೈಮಿಗೆ ಕೆಲ್ಸಕ್ಕೆ ಬರ್ತೀರಾ..? ನೀವು ಕೆಲಸ ಮಾಡಿದ್ರೆ ನಮ್ಗೆ ಹೆಸ್ರು ಬರ್ತದೆ !

08-06-26 04:55 pm       HK News Staffer   ಕರಾವಳಿ

ಆರೋಗ್ಯ ಸಚಿವ ಯು.ಟಿ ಖಾದತ್ ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಮೊದಲ ಸಭೆಯಲ್ಲೇ ವೈದ್ಯಾಧಿಕಾರಿಗಳಿಗೆ ಕ್ಲಾಸ್ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯ ವೈದ್ಯರ ಕೊರತೆ ಇರುವ ಬಗ್ಗೆ ಲೆಕ್ಕ ಇಟ್ಟುಕೊಳ್ಳದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.

ಮಂಗಳೂರು, ಜೂನ್ 8: ಆರೋಗ್ಯ ಸಚಿವ ಯು.ಟಿ ಖಾದತ್ ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಮೊದಲ ಸಭೆಯಲ್ಲೇ ವೈದ್ಯಾಧಿಕಾರಿಗಳಿಗೆ ಕ್ಲಾಸ್ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯ ವೈದ್ಯರ ಕೊರತೆ ಇರುವ ಬಗ್ಗೆ ಲೆಕ್ಕ ಇಟ್ಟುಕೊಳ್ಳದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.  

ಸಭೆಯ ಮಧ್ಯೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ವರದಿ ಕೇಳಿದ್ದಲ್ಲದೆ, ವೈದ್ಯರ ಕೊರತೆ ಇರುವ ಆರೋಗ್ಯ ಕೇಂದ್ರಗಳೆಷ್ಟು ಇವೆ, ತುರ್ತಾಗಿ ಎಷ್ಟು ವೈದ್ಯರ ಅಗತ್ಯ ಇದೆಯೆಂದು ಸಚಿವರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಸರಿಯಾಗಿ ಮಾಹಿತಿ ಹೊಂದಿರದ ಡಿಎಚ್ಒ ಎಚ್.ಆರ್ ತಿಮ್ಮಯ್ಯಗೆ ತರಾಟೆ ಮಾಡಿದ್ದು ನೀವು ಡಾಕ್ಟರ್ ಅಲ್ವಾ? ಡಾಕ್ಟರ್ ನವ್ರಿಗೆ ಲೆಕ್ಕ ಬರಲ್ವಾ? ಎಷ್ಟು ವೈದ್ಯರ ಹುದ್ದೆ ಖಾಲಿ ಇದೆಯೆಂದು ಲೆಕ್ಕ ಇಟ್ಕೊಂಡಿಲ್ವೇನ್ರಿ ಎಂದು ಪ್ರಶ್ನೆ ಮಾಡಿದ್ದಾರೆ. 

ಎಂಬಿಬಿಎಸ್ ಮುಗಿಸಿ ವೈದ್ಯರ ಹುದ್ದೆಗೆ ಬರುವ ಅಕಾಂಕ್ಷಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಅವರಿಗೆ ಧೈರ್ಯ ತುಂಬಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಬೇಕಾಬಿಟ್ಟಿಯಾಗಿ ಮಾತನಾಡಿದರೆ ಯಾರೂ ಸರ್ಕಾರಿ ಸೇವೆಗೆ ಬರಲ್ಲ. ನಿಮ್ಮ ಹದಿನೈದು ವರ್ಷದ ಸೇವೆಯ ದರ್ಪವನ್ನು ಅವರೊಂದಿಗೆ ತೋರಿಸಬಾರದು ಎಂದು ಹೇಳಿದರು. ಅಲ್ಲದೆ, ಇಲಾಖೆಯಲ್ಲಿ ಎಲ್ಲ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರ್ತೀರಾ ಎಂದು ಕೇಳಿದರು. ಎಲ್ಲರೂ ಅಧಿಕಾರಿಗಳು ಗಮನವಿಟ್ಟು ಕೇಳಿ, ನೀವು ಕೆಲಸ ಮಾಡಿದ್ರೆ ನಮಗೆ ಒಳ್ಳೆಯ ಹೆಸರು ಬರುತ್ತದೆ.‌ ನೀವು ಮಾಡಿದ ಕರ್ಮಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಸಚಿವ ಖಾದರ್ ಗರಂ ಆದರು. 

ಜಿಲ್ಲೆಯ ಎಲ್ಲಾ ಆರೋಗ್ಯ ಇಲಾಖೆ ತಂಡದ ಜೊತೆ ಸಭೆ ನಡೆಸಲಾಗಿದೆ. ಇದರಲ್ಲಿ ಹಲವು ವಿಚಾರಗಳು ಚರ್ಚೆಯಾಗಿದ್ದು ಕೆಲವು ಸಮಸ್ಯೆಗಳು ನಮ್ಮ ಅರಿವಿಗೆ ಬಂದಿದೆ. ಸರ್ಕಾರಿ ವೈದ್ಯರ ಕೊರತೆ ಬಗ್ಗೆ ಗಮನಕ್ಕೆ ಬಂದಿದ್ದು, ಅಗತ್ಯ ರೂಪುರೇಷೆ ತಯಾರಿಸಲಾಗುವುದು. ವೈದ್ಯರನ್ನ ಸರ್ಕಾರಿ ಸೇವೆಯತ್ತ ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಆಯುಷ್ಮಾನ್ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ ನವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚುವರಿ ದುಡ್ಡು ಪಡೆಯಬಾರದು. ಇದರಲ್ಲಿ ಸರ್ಕಾರದ ಆರೋಗ್ಯ ಮಿತ್ರನ ಕರ್ತವ್ಯ ಪ್ರಮುಖವಾಗಿದೆ. ಒಂದು ವೇಳೆ ಆರೋಗ್ಯ ಮಿತ್ರ ವಿಫಲನಾದರೆ ಕಠಿಣ ಕ್ರಮ ಕೈಗೊಳ್ತೀವಿ. ಎಪಿಎಲ್ ಕಾರ್ಡ್ ದಾರರಿಗೆ 30-70 ಶೇ. ರಿಯಾಯ್ತಿಯಲ್ಲಿ ಯೋಜನೆ ಪಡೆಯಲು ಅವಕಾಶ ಇತ್ತು. ಇದರ ಬಗ್ಗೆ ‌ಮತ್ತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ತೇನೆ ಎಂದು ಪ್ರಶ್ನೆಗೆ ಉತ್ತರಿಸಿದರು. 

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡ ವೈದ್ಯರ ಖಾಯಮಾತಿ ವಿಚಾರದಲ್ಲಿ ಚರ್ಚೆ ಮಾಡಲಾಗುವುದು. ಮೂರು ವರ್ಷ ಸೇವೆ ಮಾಡಿದ್ರೆ ಖಾಯಂ ಮಾಡುವ ಪದ್ದತಿ ಹಿಂದೆ ಇತ್ತು. ಇದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಹಳ್ಳಿ, ಗುಡ್ಡಗಾಡು ಭಾಗದಲ್ಲಿ ಕೆಲಸ ಮಾಡುವ ವೈದ್ಯರ ವೇತನ ಹೆಚ್ಚಳ ಬಗ್ಗೆಯೂ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುವುದಾಗಿ ಖಾದರ್ ತಿಳಿಸಿದರು. ಸರ್ಕಾರದ ಯೋಜನೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ವಹಿಸುವುದಲ್ಲದೆ, ಅವರ ಅನುಮತಿ ರದ್ದು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.