ಬ್ರೇಕಿಂಗ್ ನ್ಯೂಸ್
09-06-26 08:58 pm ರಿಚರ್ಡ್ | Richard ಕರಾವಳಿ
ಮಂಗಳೂರು, ಜೂನ್ 9: ಕನಿಷ್ಠ ಒಂದು ಸಾಮಾನ್ಯ ಮನೆಯನ್ನು ಕಟ್ಟುವುದಿದ್ದರೂ ನಾಲ್ಕು ಮೂಲೆಯಲ್ಲಿ ಪಿಲ್ಲರ್, ಸುತ್ತ ಕಲ್ಲಿನ ಗೋಡೆಯನ್ನು ಕಟ್ಟುತ್ತಾರೆ. ಆದರೆ ಸಾವಿರಾರು ಜನರು ದಿನವೂ ಓಡಾಡುವ ಹೆದ್ದಾರಿಯನ್ನು ಮಣ್ಣು ತುಂಬಿಸಿ ಬೇಕಾಬಿಟ್ಟಿ ಮಾಡುತ್ತಾರೆ ಅಂದರೆ ಏನನ್ನಬೇಕು. ಕರಾವಳಿಯ ಬ್ಲಂಡರ್ ಹೆದ್ದಾರಿ ಎಂದೇ ಹೆಸರಾಗಿರುವ ಮಂಗಳೂರು- ಮೂಡುಬಿದ್ರೆ ನಡುವಿನ ಚತುಷ್ಪಥ ಕಾಮಗಾರಿ ಎಷ್ಟರ ಮಟ್ಟಿಗೆ ನಿರ್ಲಜ್ಜವಾಗಿದೆ ಅಂದ್ರೆ ತನ್ನ ಎಡವಟ್ಟುಗಳಿಂದಲೇ ಪ್ರತಿ ಮಳೆಗಾಲಕ್ಕೂ ದುರಂತಕ್ಕೆ ಆಹ್ವಾನ ನೀಡುತ್ತಿದೆ. ಎಡಪದವು ಬಳಿಯಲ್ಲಿ ಅತ್ಯಂತ ನಿರ್ಲಕ್ಷ್ಯದಿಂದ ಕಾಮಗಾರಿ ನಿರ್ವಹಿಸಿರುವುದು ಇಲ್ಲಿನ ಜನಪ್ರತಿನಿಧಿಗಳು, ಜಿಲ್ಲಾಡಳಿತವನ್ನು ಕಟಕಟೆಯಲ್ಲಿ ನಿಲ್ಲಿಸುವಷ್ಟರ ಮಟ್ಟಿಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
ಎಡಪದವು ಜಂಕ್ಷನ್ ಮೂಲಕ ಸಾಗುತ್ತಿದ್ದ ಹಿಂದಿನ ರಸ್ತೆಯ ಬದಲು ಹೆದ್ದಾರಿಯನ್ನು ನೇರವಾಗಿಸಲು ಹೋಗಿ ಗುಡ್ಡವನ್ನು ಅಗೆದು ಇಲಿ ಹಿಡಿಯುವ ಕೆಲಸ ಮಾಡಲಾಗಿದೆ. ಇದರಿಂದಾಗಿ ಇಲ್ಲಿ ಇನ್ನೊಂದು ಕೆತ್ತಿಕಲ್ ಮಾದರಿಯ ಅಪಾಯಕ್ಕೆ ಆಹ್ವಾನಿಸುವ ಕೆಲಸವಾಗಿದ್ದು, ಈ ಬಾರಿಯ ಮಳೆಗಾಲದಲ್ಲಿ ಯಾವಾಗ ಕುಸಿದು ಬೀಳುತ್ತೋ ಅನ್ನುವ ಆತಂಕ ಮೂಡಿಸಿದೆ. ಪ್ರಪಾತ ಇದ್ದ ಜಾಗಕ್ಕೆ ಮಣ್ಣು ತುಂಬಿಸಿ ರಸ್ತೆಯನ್ನು ಲಂಬವಾಗಿಸಿದ್ದಲ್ಲದೆ, ಅಲ್ಲಿ ಯಾವುದೇ ತಡೆಗೋಡೆಯನ್ನೇ ಮಾಡದೆ ಸಂಚಾರಕ್ಕೆ ಬಿಟ್ಟಿರುವುದು ದುರಂತಕ್ಕೆ ಆಹ್ವಾನ ನೀಡುವಂತಿದೆ. ಇದರ ಸೂಚನೆ ಎನ್ನುವಂತೆ ಒಂದೆರಡು ದಿನದ ಮಳೆಯಲ್ಲೇ ಎರಡೂ ಬದಿಗಳಲ್ಲಿ ಮಣ್ಣು ಕುಸಿಯತೊಡಗಿದ್ದು, ಇಡೀ ಹೆದ್ದಾರಿಯೇ ಕುಸಿಯುವ ಲಕ್ಷಣ ಕಾಣುತ್ತಿದೆ. ಹೆಚ್ಚು ಭಾರದ ಲಾರಿ ಅಥವಾ ಇನ್ನಿತರ ಘನ ವಾಹನಗಳು ಸಾಗುವ ಹೊತ್ತಿನಲ್ಲಿ ರಸ್ತೆ ಕುಸಿದು ಅನಾಹುತಗಳಾದರೆ ಅದರ ಹೊಣೆಯನ್ನು ಇಲ್ಲಿನ ಜನಪ್ರತಿನಿಧಿಗಳು, ಜಿಲ್ಲಾಡಳಿತವೇ ಹೊತ್ತುಕೊಳ್ಳಬೇಕು. ಯಾಕಂದ್ರೆ, ಇಷ್ಟೊಂದು ಬೇಕಾಬಿಟ್ಟಿಯಾಗಿ ಕಾಮಗಾರಿ ಆಗುತ್ತಿದ್ದರೂ, ಇಲ್ಲಿನ ಅಧಿಕಾರಿ ವರ್ಗ, ಶಾಸಕ- ಸಂಸದರು ತಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ಕುಳಿತಿದ್ದಾರೆ.





ಕಾರ್ಕಳದ ಸಾಣೂರಿನಿಂದ ತೊಡಗಿ ಮಂಗಳೂರಿನ ಬಿಕರ್ನಕಟ್ಟೆ ವರೆಗಿನ ಚತುಷ್ಪಥ ಹೆದ್ದಾರಿಯನ್ನು ದೀಪಕ್ ಬಿಲ್ಡ್ ಕಾನ್ ಅನ್ನುವ ಗುಜರಾತ್ ಮೂಲದ ಕಂಪನಿ ನಿರ್ವಹಿಸುತ್ತಿದ್ದು, ಆರು ವರ್ಷಗಳಿಂದ ಅತ್ಯಂತ ನಿರ್ಲಕ್ಷ್ಯ ರೀತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿದೆ. ವಾಮಂಜೂರು, ಕೈಕಂಬ ಬಳಿಯ ಸೂರಲ್ಪಾಡಿ, ಮಿಜಾರಿನಲ್ಲಿ ಒಂದಷ್ಟು ಕೆಲಸ ಆಗಿದ್ದು ಮೂಡುಬಿದ್ರೆ- ಮಂಗಳೂರು ನಡುವೆ ಹೆದ್ದಾರಿ ಕೆಲಸವೇ ಸರಿಯಾಗಿ ಆಗಿಲ್ಲ. ಆದರೂ ಸೂರಲ್ಪಾಡಿಯಲ್ಲಿ ತರಾತುರಿಯಲ್ಲಿ ಟೋಲ್ ಪ್ಲಾಜಾ ರೆಡಿ ಮಾಡಿದ್ದು, ಜನರಿಂದ ಟೋಲ್ ವಸೂಲಿಗೆ ಎಲ್ಲ ತಯಾರಿಯನ್ನೂ ನಡೆಸಿದೆ. ಕೈಕಂಬದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಫ್ಲೈ ಓವರ್ ಕಾಮಗಾರಿ ಮಾಡಲಾಗುತ್ತಿದ್ದು, ಇದರಿಂದಾಗಿ ಮೊನ್ನೆ ಮೊದಲ ಮಳೆಯಲ್ಲೇ ಅಲ್ಲಿನ ಅಂಗಡಿ ವ್ಯಾಪಾರಿಗಳು ನೀರಿನಲ್ಲಿ ಮುಳುಗುವ ಸ್ಥಿತಿಯಾಗಿತ್ತು.

ಕಳೆದ ಮಳೆಗಾಲದಲ್ಲಿ ಕೆತ್ತಿಕಲ್ ಗುಡ್ಡ ಕುಸಿಯುತ್ತ ಹೋಗಿದ್ದರಿಂದ ಹಲವು ದಿನಗಳ ಕಾಲ ಹೆದ್ದಾರಿ ಸಂಚಾರವೇ ಕಡಿತವಾಗಿತ್ತು. ಆ ಸಂದರ್ಭದಲ್ಲಿ ಈ ಭಾಗದ ಜನರು ಆತಂಕದಿಂದಲೇ ಸಂಚಾರ ಮಾಡುವ ಸ್ಥಿತಿಯಾಗಿತ್ತು. ವರ್ಷ ಕಳೆದರೂ ಅಲ್ಲಿನ ಸ್ಥಿತಿ ಬದಲಾಗಿಲ್ಲ ಎನ್ನುವುದು ಇಲ್ಲಿನ ಜನರ ಮನಸ್ಥಿತಿ ಮತ್ತು ಶಾಸಕ, ಸಂಸದರ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಅಲ್ಲಿ ಒಂದು ಬದಿಯ ರಸ್ತೆಯನ್ನು ಅರ್ಧಕ್ಕೆ ಬಿಟ್ಟು ಮತ್ತೊಂದು ರಸ್ತೆಯನ್ನು ‘ಓಬಿರಾಯನ ಕಾಲ’ದ ಮಾದರಿಯಲ್ಲಿ ನಿರ್ವಹಿಸಲಾಗಿದೆ. ಈಗೆಲ್ಲಾ ಆಧುನಿಕ ತಂತ್ರಜ್ಞಾನ, ಕುಸಿಯುವ ರಸ್ತೆಯನ್ನೂ ಎತ್ತರಿಸಿ ನಿಲ್ಲಿಸುವಷ್ಟು ಆವಿಷ್ಕಾರಗಳಿರುವಾಗ ಇಲ್ಲಿನ ರಸ್ತೆ ಅದೇ ರಾಗ, ಅದೇ ಹಾಡು ಎನ್ನುತ್ತ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ ವರ್ಷ ಕೆತ್ತಿಕಲ್ ಗುಡ್ಡವನ್ನು ಅಗೆದು ಮಣ್ಣು ಮಾರಿದ್ದವರ ವಿರುದ್ಧ ಕ್ರಮ ಕೈಗೊಳ್ತೀನಿ ಎಂದಿದ್ದ ಉಸ್ತುವಾರಿಯಷ್ಟೇ ಸಚಿವ ಖಾತೆಯನ್ನೇ ಕಳಕೊಂಡಿದ್ದಾರೆ.
ಗುರುಪುರದಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ನೂರು ಮೀಟರ್ ಅಂತರದಲ್ಲಿ ಮತ್ತೊಂದು ಬೃಹತ್ ಸೇತುವೆಯನ್ನು ರೆಡಿ ಮಾಡಿಟ್ಟು ಕುಂತಿದ್ದಾರೆ. ಮುಗ್ರೋಡಿ ಕನ್ ಸ್ಟ್ರಕ್ಷನ್ ಸಂಸ್ಥೆಯವರು ಉಪ ಗುತ್ತಿಗೆ ಪಡೆದು ತರಾತುರಿಯಲ್ಲಿ ಈ ಸೇತುವೆ ಮಾಡಿಟ್ಟಿದ್ದು ಒಟ್ಟು ಹೆದ್ದಾರಿಯನ್ನೇ ಅಡ್ಡದಾರಿಯತ್ತ ಸಾಗಿಸಿದ್ದಕ್ಕೆ ಸಾಕ್ಷಿಯಂತಿದೆ. ಆದರೆ ಈ ಹೆದ್ದಾರಿಯನ್ನು ಮುಂದೆ ಗುರುಪುರ ದಾಟಿಸಿ, ಕೈಕಂಬ ಗುಡ್ಡಕ್ಕೆ ಹತ್ತಿಸಬೇಕಿದ್ದರೆ, ಇನ್ನೆಷ್ಟು ವರ್ಷಗಳು ಬೇಕಾದೀತೋ.. ಅಲ್ಲಿನ ಕಾಮಗಾರಿ ನಡೆದರೂ ಮುಂದೆ ಮತ್ತೊಂದು ಅಪಾಯಕಾರಿ ರಸ್ತೆಯಾಗಿಯೇ ಎದುರು ನಿಲ್ಲಲಿದೆ. ಯಾಕಂದ್ರೆ, ಈ ಹೆದ್ದಾರಿಯನ್ನು ಇಷ್ಟುದ್ದಕ್ಕೆ ಮೈಲಾರ ಸುತ್ತುವಂತೆ ಮಾಡಿದ್ದು ಇನ್ಯಾರದ್ದೋ ಖಾಸಗಿ ಉದ್ಯಮಿಗಳ ಉಪಕಾರಕ್ಕೆ, ಜನಸಾಮಾನ್ಯರ ಉಪಕಾರಕ್ಕೆ ಅಲ್ಲ ಅಂತ ಇಲ್ಲಿನ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಹಿಂದೆ ಇದ್ದ ಸಂಸದರಿಗೆ ಸುಶಿಕ್ಷಿತ ಜಿಲ್ಲೆಗೆ ಹೊಂದಿಕೊಳ್ಳುಷ್ಟು ಜ್ಞಾನವಾಗಲೀ, ಹೊಸ ಚಿಂತನೆಗಳಾಗಲೀ ಇರಲಿಲ್ಲ. ಹಾಗಾಗಿ ಜನರೇ ಬದಲಾವಣೆಯ ಕೂಗು ಹಾಕಿದ್ದರಿಂದ ಸುಶಿಕ್ಷಿತ ಜಿಲ್ಲೆಗೆ ಹೊಸ ವಿದ್ಯಾವಂತ ಸಂಸದರ ಆಗಮನವಾಗಿತ್ತು. ಆದರೆ ಸಂಸದ ಬದಲಾದರೂ ಮಂಗಳೂರು-ಮೂಡುಬಿದ್ರೆ ಹೆದ್ದಾರಿಯ ದುರವಸ್ಥೆ ಮಾತ್ರ ಬದಲಾಗಿಲ್ಲ. ಅತಿಯಾಗಿ ಮಳೆ ಬೀಳುವ ಕರಾವಳಿ ಜಿಲ್ಲೆಗಳ ವಾಸ್ತವ ತಿಳಿಯದ ಉತ್ತರ ಭಾರತದ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದಲ್ಲಿ ಕುಳಿತು ಸಂಬಳ ಎಣಿಸುತ್ತಿದ್ದಾರೆ. ಗುತ್ತಿಗೆ ವಹಿಸಿಕೊಂಡ ಸಂಸ್ಥೆಯಲ್ಲೂ ನೆಲದ ವಾಸನೆ ತಿಳಿಯದ ಇಂಜಿನಿಯರುಗಳಿಂದಾಗಿ ತಾವಾಡಿದ್ದೇ ಆಟ ಅನ್ನುವ ಸ್ಥಿತಿಯಾಗಿದ್ದು ಹೆದ್ದಾರಿಯೂ ಬೇಕಾಬಿಟ್ಟಿ ರೀತಿಯಲ್ಲಿ ಮುಂದಕ್ಕೆ ಸಾಗುತ್ತಿದೆ.

ಆದರೆ ಜನರ ದುಡ್ಡಿನಲ್ಲಿ ಹೆದ್ದಾರಿ ಮಾಡುತ್ತಿದ್ದಾರೆ ಎನ್ನುವ ಕನಿಷ್ಠ ಕಾಳಜಿ ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಇದ್ದರೆ ಈಗಲೇ ಇಂಥ ದುರವಸ್ಥೆಗೆ ಉತ್ತರ ಕಂಡುಕೊಳ್ಳಬೇಕು. ಪ್ರತಿ ಮಳೆಗಾಲಕ್ಕೂ ನರಕದ ಕಾಮಗಾರಿಯಿಂದಾಗಿ ಆತಂಕ ತಂದೊಡ್ಡುವ ಅಧಿಕಾರಿಗಳನ್ನು ಇಲ್ಲಿಂದ ತೊಲಗಿಸಬೇಕು. ಹೆದ್ದಾರಿಗಳ ದುರವಸ್ಥೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯವೂ ಎದ್ದು ಕಾಣುತ್ತದೆ. ಜಿಲ್ಲೆಯ ಮಟ್ಟಿಗೆ ಫುಲ್ ಪವರ್ ಹೊಂದಿರುವ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ಮಂಗಳೂರಿಗೆ ಬಂದು ವರ್ಷವಾದರೂ, ಇನ್ನೂ ಮೈಚಳಿ ಬಿಟ್ಟುಕೊಂಡಿಲ್ಲ. ಕಚೇರಿಗೆ ಅಂಟಿಕೊಂಡು ಎಸಿ ರೂಮಲ್ಲಿ ಕುಳಿತು ಮೀಟಿಂಗ್ ಮಾಡುವುದು ಬಿಟ್ಟು ವಾಸ್ತವ ತಿಳಿಯಲು ರಸ್ತೆಗಿಳಿಯಬೇಕು. ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಪರಾಂಬರಿಸಬೇಕು.
ಎರಡು ವರ್ಷದ ಹಿಂದೆ ಕೇರಳದ ಮಲಪ್ಪುರಂನಲ್ಲಿ ಆಗಷ್ಟೇ ಸಂಚಾರಕ್ಕೆ ತೆರೆದುಕೊಂಡಿದ್ದ ಹೆದ್ದಾರಿ ಬಿರುಮಳೆಗೆ ಕುಸಿದು ಹೋಗಿದ್ದಲ್ಲದೆ, ಅದರ ಎಡೆಯಲ್ಲಿ ಹಲವಾರು ವಾಹನಗಳು ಸಿಕ್ಕಿಬಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಆಗ ಅಲ್ಲಿನ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಟ್ಟಾಗಿ ಕಾಮಗಾರಿ ನಿರ್ವಹಿಸಿದ್ದ ಕಂಪನಿಯನ್ನೇ ಹೊಣೆಗಾರನನ್ನಾಗಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ದೂರು ಕೊಟ್ಟು ಕಪ್ಪುಪಟ್ಟಿಗೆ ಸೇರಿಸುವಂತೆ ಮಾಡಿದ್ದರು. ಮಂಗಳೂರು- ಮೂಡುಬಿದ್ರೆ ಹೆದ್ದಾರಿಯ ದುರವಸ್ಥೆಗೆ ಕಂಪನಿ ಕಾರಣವೆಂದು ಹೇಳಿ ಕಪ್ಪು ಪಟ್ಟಿಗೆ ಸೇರಿಸುವ ಧೈರ್ಯವಂತೂ ಇಲ್ಲಿನ ಸಂಸದ, ಶಾಸಕರಿಗೆ ಇಲ್ಲ. ದುರಂತ ಆಗದಂತೆ ಎಚ್ಚರವನ್ನಾದ್ರೂ ವಹಿಸಿ ಅನ್ನುವುದು ಸಾರ್ವಜನಿಕರ ಪರವಾಗಿ ಕಳಕಳಿ.
Serious concerns are being raised over the ongoing four-lane highway project between Mangaluru and Moodbidri, with residents and commuters alleging that poor planning and substandard execution have turned the project into a recurring safety hazard during every monsoon season. The stretch near Edapadavu Junction has emerged as one of the most vulnerable sections of the highway, with visible signs of soil erosion and fears of possible road collapse during heavy rains.
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
08-06-26 09:11 pm
HK News Staffer
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
09-06-26 08:58 pm
ರಿಚರ್ಡ್ | Richard
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್...
08-06-26 04:55 pm
UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ...
07-06-26 03:38 pm
09-06-26 05:03 pm
HK News Staffer
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 98 ಲಕ್ಷ ರೂ. ದೋಚಿದ...
08-06-26 10:41 pm
ಹೃದಯಾಘಾತ ; ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದೆ ಕೊಕ್ಕ...
08-06-26 04:42 pm