ಸಿಸಿಬಿಯ ಆರೋಪಿತ ಅಧಿಕಾರಿಗೆ ಸಿಎಂ ಪದಕ ! ಪ್ರದಾನ ಅನುಮಾನ

05-02-21 05:18 pm       Mangalore Correspondent   ಕರಾವಳಿ

ಮಂಗಳೂರಿನ ಸಿಸಿಬಿ ಅಧಿಕಾರಿಯಾಗಿದ್ದ ಕಬ್ಬಾಳರಾಜ್ ವಿರುದ್ಧ ಈಗಾಗ್ಲೇ ಆಂತರಿಕ ತನಿಖೆ ಆರಂಭಗೊಂಡಿದ್ದು, ಇವರಿಗೆ ಪದಕ ಪ್ರದಾನ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

ಮಂಗಳೂರು, ಫೆ.5: ಸಿಸಿಬಿಯಲ್ಲಿ ಈ ಹಿಂದೆ ಎಸ್ಐ ಆಗಿದ್ದ ಕಬ್ಬಾಳರಾಜ್ ಅವರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಲಾಗಿದ್ದು, ಈಗ ಕಬ್ಬಾಳರಾಜ್ ಪದಕ ಪಡೆಯುವ ವಿಚಾರವೇ ವಿವಾದಕ್ಕೆ ಕಾರಣವಾಗಿದೆ.

ಪ್ರಕರಣ ಒಂದರಲ್ಲಿ ಜಪ್ತಿ ಮಾಡಿದ್ದ ಕಾರು ಮಾರಾಟ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳ ತಂಡ ಆರೋಪಕ್ಕೆ ಗುರಿಯಾಗಿರುವ ಸಂದರ್ಭದಲ್ಲೇ ಅಧಿಕಾರಿ ಒಬ್ಬರಿಗೆ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿದ್ದು ಎಷ್ಟು ಸರಿ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ, ಹಿಂದಿನ ಕಮಿಷನರ್ ವಿಕಾಸ್ ಕುಮಾರ್ ಅಧಿಕಾರದಲ್ಲಿದ್ದ ಅವಧಿಯಲ್ಲೇ ತನ್ನ ಆಪ್ತನಾಗಿದ್ದ ಕಬ್ಬಾಳರಾಜ್ ಅವರನ್ನು ಸಿಎಂ ಪದಕಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯ ಹತ್ತು ಮಂದಿ ಪೊಲೀಸರಿಗೆ ಸಿಎಂ ಪದಕಕ್ಕೆ ಹೆಸರು ಘೋಷಣೆ ಮಾಡಲಾಗಿದ್ದು ಫೆ.8ರಂದು ಬೆಂಗಳೂರಿನಲ್ಲಿ ಸಿಎಂ ಪದಕ ಪ್ರದಾನ ನಡೆಯಲಿದೆ. ಆದರೆ, ಮಂಗಳೂರಿನ ಸಿಸಿಬಿ ಅಧಿಕಾರಿಯಾಗಿದ್ದ ಕಬ್ಬಾಳರಾಜ್ ವಿರುದ್ಧ ಈಗಾಗ್ಲೇ ಆಂತರಿಕ ತನಿಖೆ ಆರಂಭಗೊಂಡಿದ್ದು, ಇವರಿಗೆ ಪದಕ ಪ್ರದಾನ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಪದಕದ ನಿಯಮ ಪ್ರಕಾರ, ಪದಕ ಪಡೆಯುವ ಪೊಲೀಸರು ಯಾವುದೇ ರೀತಿಯ ಹಗರಣ, ಪ್ರಕರಣದಲ್ಲಿ ಅಥವಾ ಇಲಾಖಾ ತನಿಖೆಗೆ ಒಳಪಟ್ಟಿರಬಾರದು ಎಂಬ ನಿಯಮವಿದೆ. ಈ ನಿಯಮದ ಪ್ರಕಾರ, ಕಬ್ಬಾಳರಾಜ್ ಸಿಎಂ ಪದಕ ಪಡೆಯುವ ವಿಚಾರಕ್ಕೆ ಕುತ್ತು ಬಂದಂತಾಗಿದೆ. 

The Chief Ministers Gold Medal for former CCB Sub Inspector kabbal Raj may hold as his name has been highlighted in an illicit case.