ತೈಲ ಬೆಲೆ ಏರಿಕೆ ; ಕತ್ತೆ ಮೇಲೆ ಸಾಮಗ್ರಿ, ಕೈಗಾಡಿ ಎಳೆದು ಮೆರವಣಿಗೆ ; ಬಂಟ್ವಾಳ ಕಾಂಗ್ರೆಸ್ ವಿಶಿಷ್ಟ ಪ್ರತಿಭಟನೆ

01-03-21 05:45 pm       Mangalore Correspondent   ಕರಾವಳಿ

ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ವಿಪರೀತವಾಗಿ ಏರುತ್ತಿರುವುದನ್ನು ಅಣಕಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.  

ಬಂಟ್ವಾಳ, ಮಾ.1: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ವಿಪರೀತವಾಗಿ ಏರುತ್ತಿರುವುದನ್ನು ಅಣಕಿಸಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.  

ತೈಲ ಬೆಲೆ ಏರಿಕೆ ಆಗಿರುವುದರಿಂದ ವಾಹನಗಳ ಉಪಯೋಗ ಸಾಧ್ಯವಾಗದ ಸ್ಥಿತಿ ತಲುಪಿದ್ದು ಹೀಗಾಗಿ ಹಳೆಯ ಕಾಲದ ರೀತಿ ಕತ್ತೆಯಲ್ಲಿ ವಸ್ತುಗಳನ್ನು ತುಂಬಿಕೊಂಡು ಮೆರವಣಿಗೆ ನಡೆಸಲಾಯಿತು. ಇದೇ ವೇಳೆ, ಕೈಗಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಹೇರಿಕೊಂಡು ಸ್ವತಃ ರಮಾನಾಥ ರೈ ಸೇರಿದಂತೆ ಕಾರ್ಯಕರ್ತರು ರಸ್ತೆಯುದ್ದಕ್ಕೂ ಎಳೆದುಕೊಂಡು ಮೆರವಣಿಗೆ ನಡೆಸಿದರು. ಈ ಮೂಲಕ ಜನರ ಗಮನ ಸೆಳೆಯಲಾಯಿತು. 

ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆ ನಡೆಸಿ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ನೀತಿಯನ್ನು ಖಂಡಿಸಿದರು. 

ಈ ವೇಳೆ ರಮಾನಾಥ ರೈ ಮಾತನಾಡಿ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಹೀಗೆ ದಿನಬಳಕೆಯ ವಸ್ತುಗಳ ಮೇಲೆ ವಿಪರೀತ ತೆರಿಗೆ ವಿಧಿಸಿದ್ದು ಸಾಮಾನ್ಯ ಜನರ ಮೇಲೆ ಬರೆ ಹಾಕುತ್ತಿದ್ದಾರೆ. ಜನ ಸಾಮಾನ್ಯರು ಕೊರೊನಾ ಸಂದರ್ಭದಲ್ಲಿ ತೊಂದರೆ ಅನುಭವಿಸಿದರು. ಈಗ ತೈಲ ಬೆಲೆ ಹೆಸರಲ್ಲಿ ಜನರನ್ನು ಪೀಡಿಸುತ್ತಿದ್ದಾರೆ. ಇದೇ ವೇಳೆ ಬಹುರಾಷ್ಟ್ರೀಯ ಕಂಪನಿಗಳಿಗೆ ನೆರವಿನ ಪ್ಯಾಕೇಜ್ ನೀಡುತ್ತಾರೆ. ಬಡ ಜನರ ಮೇಲೆ ಹೊರೆ ಹೊರಿಸಿ ಕಾರ್ಪೊರೇಟ್ ಕಂಪನಿಗಳ ಹೊಟ್ಟೆ ತುಂಬಿಸುವ ಕೆಲಸ ಯಾಕೆ ? ಇವರು ಹಿಂದೆ ಯುಪಿಎ ಸರಕಾರ ಇದ್ದಾಗ ತೈಲ ಬೆಲೆ ಏರಿಕೆಯನ್ನೇ ಮುಂದಿಟ್ಟು ಹೋರಾಟ ಮಾಡಿ ಅಧಿಕಾರಕ್ಕೇರಿದರು. ಈಗ ಯಾಕೆ ಬಿಜೆಪಿಯವರಿಗೆ ತೈಲ ಬೆಲೆ ಇಳಿಸಲು ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.  

ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸೇರಿ ಹಲವರು ಪಾಲ್ಗೊಂಡಿದ್ದರು.

Raise in petrol diesel price bantwal Congress leaders protest by making Donkeys pull bikes. Former Minister Ramanth Rai also participated in the protest